ETV Bharat / state

ಮೈಸೂರಿಗೆ ಬಂದಿದ್ದ ಪ್ರಧಾನಿ ಮೋದಿ ಆತಿಥ್ಯದ ಬಾಕಿ ಬಿಲ್ ಸೌಹಾರ್ದಯುತ ಇತ್ಯರ್ಥ: ಸಚಿವ ಈಶ್ವರ ಖಂಡ್ರೆ - Eshwar Khandre

author img

By ETV Bharat Karnataka Team

Published : May 25, 2024, 5:03 PM IST

ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದ ಹುಲಿ ಯೋಜನೆ 50 ಕಾರ್ಯಕ್ರಮದ ಬಾಕಿ ಬಿಲ್ ಅನ್ನು ಎನ್​ಟಿಸಿಎ ಬಿಡುಗಡೆ ಮಾಡಿಲ್ಲ. ಇದನ್ನು ಸೌಹಾರ್ದಯುತವಾಗಿ ಪರಿಹರಿಸುತ್ತೇವೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಮಾಹಿತಿ ನೀಡಿದರು.

ಪ್ರಧಾನಿ ಮೋದಿ ಮತ್ತು ಸಚಿವ ಈಶ್ವರ ಖಂಡ್ರೆ
ಪ್ರಧಾನಿ ಮೋದಿ ಮತ್ತು ಸಚಿವ ಈಶ್ವರ ಖಂಡ್ರೆ (ETV Bharat)

ಬೆಂಗಳೂರು: ಕಳೆದ ವರ್ಷ ಏಪ್ರಿಲ್​​ನಲ್ಲಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್​​ಟಿಸಿಎ) ವತಿಯಿಂದ ರಾಜ್ಯದಲ್ಲಿ ಆಯೋಜಿಸಲಾಗಿದ್ದ ಹುಲಿ ಯೋಜನೆ 50 ಕಾರ್ಯಕ್ರಮಕ್ಕೆ ಮೈಸೂರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಆತಿಥ್ಯದ ಬಾಕಿ ಬಿಲ್ ​ಅನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿಂದು ಮಾತನಾಡಿದ ಅವರು, 2023ರ ಏಪ್ರಿಲ್​ನಲ್ಲಿ ಈ ಕಾರ್ಯಕ್ರಮ ನಡೆದಾಗ ವಿಧಾನಸಭಾ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿತ್ತು. ಹೀಗಾಗಿ ರಾಜ್ಯ ಸರ್ಕಾರ ಭಾಗಿ ಆಗಿರಲಿಲ್ಲ. ರಾಜ್ಯ ಲಾಂಛನದ ಬಳಕೆಯೂ ಆಗಿರಲಿಲ್ಲ. ಇದು ಸಂಪೂರ್ಣ ಎನ್​​ಟಿಸಿಎ ಕಾರ್ಯಕ್ರಮವಾಗಿತ್ತು ಎಂದರು.

ದೇಶದ ಪ್ರಧಾನಿಯವರು ರಾಜ್ಯಕ್ಕೆ ಬಂದಿದ್ದ ಹಿನ್ನೆಲೆಯಲ್ಲಿ ಆತಿಥ್ಯ ನಿರ್ವಹಣೆಗಾಗಿ ಸ್ಥಳೀಯವಾಗಿ ರಚಿಸಲಾಗಿದ್ದ ಸಮಿತಿಯಲ್ಲಿ ನಮ್ಮ ಅರಣ್ಯ ಇಲಾಖೆಯ ಅಧಿಕಾರಿಗಳು ಇದ್ದರು. ವಾಸ್ತವವಾಗಿ ಈ ಕಾರ್ಯಕ್ರಮಕ್ಕೆ ಆಗುವ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ಎನ್​​ಟಿಸಿಎ ಹೇಳಿತ್ತು ಎಂದು ವಿವರಿಸಿದರು.

ಕಾರ್ಯಕ್ರಮಕ್ಕೆ ಆಗಿರುವ ವೆಚ್ಚ 6 ಕೋಟಿ 33 ಲಕ್ಷ ರೂ. ಈ ಪೈಕಿ 3 ಕೋಟಿ ರೂಪಾಯಿ ಬಂದಿದ್ದು, ಇನ್ನೂ 3 ಕೋಟಿ 33 ಲಕ್ಷ ರೂ. ಬಾಕಿ ಬರಬೇಕಿದೆ. ಇದರಲ್ಲಿ ರಾಡಿಸನ್ ಬ್ಲೂ ಆತಿಥ್ಯ ವೆಚ್ಚ ಸುಮಾರು 80 ಲಕ್ಷ ರೂ. ಸೇರಿದೆ ಎಂದು ತಿಳಿಸಿದರು.

ಈ ಬಗ್ಗೆ ನಮ್ಮ ಇಲಾಖೆಯ ಅಧಿಕಾರಿಗಳು ಹಲವು ಬಾರಿ ಪತ್ರ ಬರೆದಿದ್ದರೂ, ಫೋನ್ ಮಾಡಿದ್ದರೂ ಎನ್​​ಟಿಸಿಎ (ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ) ಈ ಬಾಕಿ ಹಣ ನೀಡಿಲ್ಲ. ಈಗ ವಿಷಯ ತಮ್ಮ ಗಮನಕ್ಕೆ ಬಂದಿದ್ದು, ಸೌಹಾರ್ದಯುತವಾಗಿ ಪರಿಹರಿಸಲು ಪ್ರಯತ್ನಿಸುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: ಬಂಡೀಪುರ ಕಾಡಲ್ಲಿ ಒಂದೂವರೆ ತಾಸು ಪ್ರಧಾನಿ ಸಫಾರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.