ETV Bharat / state

ಬರದಲ್ಲೂ ಜಲಕ್ರಾಂತಿ: 'ಆಧುನಿಕ ಭಗೀರಥ' ಶಿವಾಜಿ ಕಾಗಣಿಕರ್​ ಪರಿಶ್ರಮಕ್ಕೆ ಭರಪೂರ ನೀರು - Belagavi Water Revolution

author img

By ETV Bharat Karnataka Team

Published : Mar 22, 2024, 11:27 AM IST

Updated : Mar 22, 2024, 4:15 PM IST

ಪರಿಸರವಾದಿ ಶಿವಾಜಿ ಕಾಗಣಿಕರ್​ ಅವರು ಹಿರಿಯ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ತಮ್ಮೂರಲ್ಲಿ ಕೈಗೊಂಡ ಜಲಕ್ರಾಂತಿಯನ್ನು ಬೆಳಗಾವಿಯಲ್ಲಿ ಮಾಡಿ ಯಶಸ್ವಿಯಾಗಿದ್ದಾರೆ.

ಆಧುನಿಕ ಭಗೀರಥ ಶಿವಾಜಿ ಕಾಗಣಿಕರ್
ಆಧುನಿಕ ಭಗೀರಥ ಶಿವಾಜಿ ಕಾಗಣಿಕರ್

ಬರದಲ್ಲೂ ಜಲಕ್ರಾಂತಿ

ಬೆಳಗಾವಿ: ಈಗಂತೂ ಎಲ್ಲೆಡೆ ಕುಡಿಯುವ ನೀರಿಗಾಗಿ ಹಾಹಾಕಾರವಿದೆ. ಇದಕ್ಕೆ ಕಾರಣ ಬರಗಾಲ. ಆದರೆ, ಈ ನಾಲ್ಕು ಊರುಗಳಲ್ಲಿ ಮಾತ್ರ ಕೆರೆ, ಬಾವಿಗಳಲ್ಲಿ ನೀರು ತುಂಬಿ ತುಳುಕುತ್ತಿದ್ದು ಜನತೆ ಹರ್ಷಗೊಂಡಿದ್ದಾರೆ. ಇದಕ್ಕೆಲ್ಲ ಕಾರಣ ಓರ್ವ ಜಲ ಮನುಷ್ಯ!.

ಕೆರೆ ನೀರಲ್ಲಿ ಜಾನುವಾರು, ಮೈ ತೊಳೆಯುತ್ತಿರುವ ಜನ. ಬಿಸಿಲ ತಾಪಕ್ಕೆ ಕೆರೆಯಲ್ಲಿ ಈಜಿ ತಂಪಾಗುತ್ತಿರುವ ಎಮ್ಮೆ. ಈ ದೃಶ್ಯಗಳು ಕಂಡುಬಂದಿದ್ದು ಬೆಳಗಾವಿ ತಾಲೂಕಿನ ಬಂಬರಗಾ ಗ್ರಾಮದ ಕೆರೆಯಲ್ಲಿ. ಇದೊಂದೇ ಅಲ್ಲ. ಇಲ್ಲಿನ ಕಟ್ಟಣಭಾವಿ, ನಿಂಗ್ಯಾನಟ್ಟಿ, ಗುರಾಮಟ್ಟಿ ಗ್ರಾಮಗಳ ಕೆರೆ, ಬಾವಿಗಳೂ ಮೈದುಂಬಿವೆ. ಇಂಥ ಭೀಕರ ಬರಗಾಲದಲ್ಲೂ ಇಷ್ಟೊಂದು ನೀರು ಮತ್ತು ಇಲ್ಲಿನ ಪರಿಸರ ಹಚ್ಚ ಹಸಿರಾಗಿ ಕಂಗೊಳಿಸಲು ಕಾರಣ ಪರಿಸರವಾದಿ ಶಿವಾಜಿ ಕಾಗಣಿಕರ್​ ಕೈಗೊಂಡ ನಿರ್ಧಾರ.

ಬರದಲ್ಲೂ ಜಲಕ್ರಾಂತಿ
ಬರದಲ್ಲೂ ಜಲಕ್ರಾಂತಿ

ಶಿವಾಜಿ ಛತ್ರಪ್ಪ ಕಾಗಣಿಕರ್ ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದವರು. 1972ರಲ್ಲಿ ಮನೆ ಬಿಟ್ಟ ಇವರು‌ ಒಬ್ಬ ಅಪ್ಪಟ ಗಾಂಧಿವಾದಿ, ಪರಿಸರವಾದಿ, ಶಿಕ್ಷಕ ಹಾಗೂ ಹೋರಾಟಗಾರ. ಇವರ ಜಲ ಕ್ರಾಂತಿಯಿಂದ ಹಲವು ಗ್ರಾಮಗಳು ಹಚ್ಚ ಹಸಿರಾಗಿವೆ. 75 ವರ್ಷದ ಶಿವಾಜಿ ಕಾಗಣಿಕರ್​ ಒಂದು ಊರಿನಿಂದ ಮತ್ತೊಂದು ಊರಿಗೆ, ಆ ಹೊಲದಿಂದ ಮತ್ತೊಂದು ಹೊಲಕ್ಕೆ ಸಂಚರಿಸುತ್ತ ತಾವು ನೆಟ್ಟ ಗಿಡಗಳನ್ನು ವೀಕ್ಷಿಸುತ್ತಾರೆ.

1984ರಲ್ಲಿ ಮೊದಲ ಬಾರಿ ಹಂದಿಗನೂರ ಪ್ರೌಢಶಾಲೆ ಆವರಣದಲ್ಲಿ ಗಿಡ ನೆಡುವ ಮೂಲಕ ಆರಂಭವಾದ ಇವರ ಪರಿಸರ ಕಾಯಕ ನಂತರ ಎಲ್ಲ ಕಡೆ ಮುಂದುವರೆಯಿತು. ಇದೇ ವೇಳೆ ಅರಣ್ಯ ಇಲಾಖೆಯಿಂದ 5 ಸಾವಿರ ಸಸಿ ತರಿಸಿ ವಿದ್ಯಾರ್ಥಿಗಳಿಗೆ ವಿತರಿಸಿದ್ದರು. ಹೀಗೆ ಸುತ್ತಲಿನ ಶಾಲೆಗಳ ವಿದ್ಯಾರ್ಥಿಗಳಿಗೂ ಸಸಿಗಳ‌ನ್ನು ವಿತರಿಸಿ ಜಾಗೃತಿ ಮೂಡಿಸಿದ್ದರು.

ಬರದಲ್ಲೂ ಜಲಕ್ರಾಂತಿ
ಬರದಲ್ಲೂ ಜಲಕ್ರಾಂತಿ

ಈ ಮೊದಲು ಇಲ್ಲಿನ ಜನ ಜಲ ಸಂಕಷ್ಟ ಅನುಭವಿಸುತ್ತಿದ್ದರು. ಇದಕ್ಕೆ ಕಡಿವಾಣ ಹಾಕಲು ಶಿವಾಜಿ ಮುಂದಾದರು. ಹಿರಿಯ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ತಮ್ಮ ಹುಟ್ಟೂರು ಮಹಾರಾಷ್ಟ್ರದ ರಾಳೇಗಾಂವ ಸಿದ್ಧಿಯಲ್ಲಿ ಕೈಗೊಂಡ ಜಲಕ್ರಾಂತಿಯನ್ನು ಕಣ್ಣಾರೆ ಕಂಡಿರುವ ಶಿವಾಜಿ, ಇಲ್ಲಿಯೂ ಅದನ್ನು ಸಾಕಾರಗೊಳಿಸಿದ್ದಾರೆ. ಜಲಾನಯನ ಪ್ರದೇಶಾಭಿವೃದ್ಧಿ ಯೋಜನೆಯಡಿ ಜರ್ಮನ್ ದೇಶದ ರೂಡಾಲ್ಫ್ ಅವರು ನೀಡಿದ ಒಟ್ಟು 30 ಲಕ್ಷ ರೂ. ಅನುದಾನದಲ್ಲಿ ಜನಜಾಗರಣ ಸಂಸ್ಥೆ ಮತ್ತು ಗ್ರೀನ್ ಸೇವಿಯರ್ಸ್ ಮೂಲಕ ಗ್ರಾಮಸ್ಥರ ಸಹಕಾರದೊಂದಿಗೆ ಮರ ಬೆಳೆಸುವ ಜತೆಗೆ ಕಟ್ಟಣಬಾವಿಯಲ್ಲಿ 2, ನಿಂಗ್ಯಾನಟ್ಟಿ 3, ಇದ್ದಿಲಹೊಂಡ ಹಾಗೂ ಗುರಾಮಟ್ಟಿ ಗ್ರಾಮದಲ್ಲಿ ತಲಾ ಒಂದು ಕೆರೆ ನಿರ್ಮಿಸಿದ್ದಾರೆ.

ಕೆರೆ, ಬಾವಿ, ಹಳ್ಳಗಳ ಪುನಶ್ಚೇತನ ಮಾಡಿದ್ದಾರೆ. ಕಾಲುವೆಯಿಂದ ಹಳ್ಳಕ್ಕೆ ನೀರು ಹೋಗುವಂತೆ, ಹಳ್ಳದಿಂದ ನದಿಗೆ ನೀರು ಹೋಗುವಂತೆ ಮಾಡಲಾಗಿದೆ. ಗುಡ್ಡದಿಂದ ಇಳಿಜಾರು ಪ್ರದೇಶದಲ್ಲಿ ಹರಿದು ಹೋಗುತ್ತಿದ್ದ ನೀರನ್ನು ಸಂಗ್ರಹಿಸಲು ಸಮಾನಾಂತರ ಚರಂಡಿಗಳನ್ನು ನಿರ್ಮಿಸಲಾಗಿದೆ. ಚರಂಡಿಗಳ ಬದುವಿನಲ್ಲಿ ಗಿಡಗಳನ್ನು ನೆಡಲಾಗಿದೆ. ಇದರಿಂದ ಈ ಭಾಗದಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿದೆ. ಇಲ್ಲಿವರೆಗೆ 2 ಲಕ್ಷಕ್ಕೂ ಹೆಚ್ಚು ಗಿಡಗಳನ್ನು ಶಿವಾಜಿ ನೆಟ್ಟಿದ್ದಾರೆ ಎಂಬುದು ಗಮನಾರ್ಹ.

ಆಧುನಿಕ ಭಗೀರಥ ಶಿವಾಜಿ ಕಾಗಣಿಕರ್
ಆಧುನಿಕ ಭಗೀರಥ ಶಿವಾಜಿ ಕಾಗಣಿಕರ್

ಭೂಮಿಯ ನೀರಿನ ಸೆಲೆಗಳು, ಮನುಷ್ಯನ ರಕ್ತನಾಳಗಳಿದ್ದಂತೆ: ಶಿವಾಜಿ ಕಾಗಣಿಕರ್ ಅವರು ಜಲಕ್ರಾಂತಿ ಬಗ್ಗೆ ವಿವರಿಸುತ್ತಾ, ಗುಡ್ಡದ ಮೇಲೆ ಹತ್ತು ಅಡಿಗಳಿಗೆ ಒಂದರಂತೆ ಸಮಾನಂತರವಾಗಿ ಚರಂಡಿಗಳನ್ನು ನಿರ್ಮಿಸಿದೆವು. ಮಳೆ ನೀರು ಆ ಚರಂಡಿಗಳಲ್ಲೇ ಇಂಗುವಂತೆ ಮೂರು ವರ್ಷ ಮಾಡಿದ ನಂತರ, ಒಂದು ಕೆರೆ ನಿರ್ಮಿಸಿದೆವು. ಚರಂಡಿಗಳಲ್ಲಿ ಇಂಗಿದ ನೀರು ಕೆರೆ ಸೇರಿತು. ಮನುಷ್ಯನ ದೇಹದಲ್ಲಿ ಯಾವ ರೀತಿ ರಕ್ತನಾಳಗಳಿವೆಯೋ ಅದೇ ರೀತಿ ಭೂಮಿಯಲ್ಲೂ ನೀರಿನ ಸೆಲೆಗಳಿವೆ. ಹಾಗಾಗಿ, ಆ ಸೆಲೆಗಳ ಮೂಲಕ ಕೆರೆ, ಬಾವಿಗೆ ನೀರು ಹರಿದು ಬಂತು. ಆ ಬಳಿಕ ಈ ನಾಲ್ಕು ಗ್ರಾಮಗಳಲ್ಲಿ ಜನರು ಕೊರೆಸಿದ ಬಾವಿ, ಕೊಳವೆ ಭಾವಿಗಳಲ್ಲಿ ಅಪಾರ ಪ್ರಮಾಣದಲ್ಲಿ ನೀರು ಸಿಕ್ಕಿದ್ದು, ನೀರಿನ ಸಮಸ್ಯೆ ಬಗೆಹರಿಯಿತು ಎಂದರು.

ಈ ಮೊದಲು ಈ ಊರುಗಳಲ್ಲಿ ನೀರಿನ ಸಮಸ್ಯೆ ವ್ಯಾಪಕವಾಗಿದ್ದರಿಂದ ಜಾನುವಾರುಗಳನ್ನು ಸಾಕುವುದು ತೀರಾ ಕಡಿಮೆಯಾಗಿತ್ತು. ಯಾವಾಗ ನೀರಿನ ಲಭ್ಯತೆ ಹೆಚ್ಚಾಯಿತೋ ರೈತರು ಹೆಚ್ಚು ಜಾನುವಾರುಗಳನ್ನು ಸಾಕಣಿಕೆ ಶುರು ಮಾಡಿದರು. ಸೆಗಣಿ ಗೊಬ್ಬರದಿಂದ ಗೋಬರ್ ಗ್ಯಾಸ್ ಘಟಕಗಳು ಆರಂಭವಾದವು. ಗಿಡ-ಮರಗಳನ್ನು ಬೆಳೆಸಲು ಮುಂದಾದರು. ಇದರಿಂದ ರೈತರ ಬದುಕಿನಲ್ಲಿ ಸುಧಾರಣೆಯಾಗುವ ಜತೆಗೆ ಉತ್ತಮ ಪರಿಸರವೂ ನಿರ್ಮಾಣವಾಯಿತು ಎನ್ನುತ್ತಾರೆ ಶಿವಾಜಿ ಕಾಗಣಿಕರ್.

ಬರದಲ್ಲೂ ಜಲಕ್ರಾಂತಿ
ಬರದಲ್ಲೂ ಜಲಕ್ರಾಂತಿ

ಇಂದು ನಾವೆಲ್ಲ ಬಹಳ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ವಾಯು, ಜಲ ಮಾಲಿನ್ಯದ ಜೊತೆಗೆ ಭೂಮಿಯೂ ಮಲೀನವಾಗಿದೆ. ಪರಿಸರ ಮಾಲಿನ್ಯ ತಡೆಗಟ್ಟಲು ದೇಶದ ಯುವಕರು ಮನಸ್ಸು ಮಾಡಬೇಕಿದೆ. ತಮ್ಮ ಜವಾಬ್ದಾರಿ ಮರೆತು ರಾಜಕಾರಣಿಗಳ ಹಿಂದೆ ಓಡಾಡಿ ತಮ್ಮ ಭವಿಷ್ಯವನ್ನು ಇಂದಿನ ಯುವಕರು ಹಾಳು ಮಾಡಿಕೊಳ್ಳುತ್ತಿದ್ದಾರೆ. ಈ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಮುನ್ನ ಎಚ್ಚೆತ್ತುಕೊಂಡು ಪರಿಸರ ಉಳಿಸಲು ಕಾರ್ಯೋನ್ಮುಖರಾಗಬೇಕು ಎಂದು ಶಿವಾಜಿ ಕಿವಿಮಾತು ಹೇಳಿದರು.

ಜಲ ಅಧ್ಯಯನಕ್ಕೆ ಬರ್ತಾರೆ ಹೊರ ರಾಜ್ಯದವರು: ಶಿವಾಜಿ ಕಾಗಣಿಕರ್​ ಅವರ ಈ ಜಲ ಪ್ರಯೋಗವನ್ನು ಕಣ್ತುಂಬಿಕೊಳ್ಳಲು ಮೇಘಾಲಯ, ರಾಜಸ್ಥಾನ, ಪಶ್ಚಿಮ ಬಂಗಾಲ, ಅಸ್ಸಾಂ, ಹಿಮಾಚಲ ಪ್ರದೇಶ, ಆಂಧ್ರಪ್ರದೇಶ ಸೇರಿ ಬೇರೆ ರಾಜ್ಯಗಳ ತರಬೇತಿ‌ನಿರತ ಆರ್.ಎಫ್‌.ಒಗಳು, ವಿದ್ಯಾರ್ಥಿಗಳು ಭೇಟಿ ನೀಡಿದ್ದರು. ಅವರಿಗೆಲ್ಲ ಶಿವಾಜಿ ಅವರು ನೀರು ಮತ್ತು ಗಿಡಮರಗಳನ್ನು ಬೆಳೆಸಲು ತಾವು ಕೈಗೊಂಡ ಕ್ರಮಗಳ ಕುರಿತು ಪಾಠ ಮಾಡಿದ್ದಾರೆ.

ಈ ಬಗ್ಗೆ ಬಿಜೆಪಿ ಮುಖಂಡ ಶಂಕರಗೌಡ ಪಾಟೀಲ ಮಾತನಾಡಿ, ಕಾಗಣಿಕರ್ ಅವರ ಕಾರ್ಯ ನಮಗೆಲ್ಲರಿಗೂ ಮಾದರಿ. ಬೆಳಗಾವಿಯಲ್ಲಿ ಈ ನೀರಿನ ಮನುಷ್ಯ ಇರೋದು ನಮಗೆ ಹೆಮ್ಮೆ. ಉತ್ತರ ಭಾರತದ ಅನೇಕ ರಾಜ್ಯಗಳ ಜನರು ಇಲ್ಲಿಗೆ ಆಗಮಿಸಿ, ನೀರು ಉಳಿಸಿರುವ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಅವರಿಂದ ಮಾರ್ಗದರ್ಶನ ಕೂಡ ಪಡೆದಿದ್ದಾರೆ. ಧಾರವಾಡದ ವಾಲ್ಮಿ ಸಂಸ್ಥೆ ಅಧಿಕಾರಿಗಳೂ ಇಲ್ಲಿಗೆ ಆಗಮಿಸಿ ಅಧ್ಯಯ‌‌ನ ಮಾಡಿದ್ದಾರೆ ಎಂದರು.

ಆಧುನಿಕ ಭಗೀರಥ ಶಿವಾಜಿ ಕಾಗಣಿಕರ್
ಆಧುನಿಕ ಭಗೀರಥ ಶಿವಾಜಿ ಕಾಗಣಿಕರ್

ಹಿರಿಯ ನ್ಯಾಯವಾದಿ ಎನ್.ಆರ್‌.ಲಾತೂರ್ ಮಾತನಾಡಿ, ಬರಗಾಲದ ಸಂದರ್ಭದಲ್ಲಿ ಕೆರೆ, ಬಾವಿ ತುಂಬುವಂತೆ ಮಾಡಿರುವ ಶಿವಾಜಿ ಕಾಗಣಿಕರ್ ಅವರು ನಿಜವಾಗಲೂ ಆಧುನಿಕ ಭಗೀರಥ. ಸರ್ಕಾರ ಇವರ ಕಾರ್ಯವನ್ನು ಬೇರೆ ಕಡೆಯೂ ಅಳವಡಿಸಿ ರಾಜ್ಯದಲ್ಲಿರುವ ಬರಗಾಲ ಪರಿಸ್ಥಿತಿಯನ್ನು ಹೊಗಲಾಡಿಸಬೇಕು ಎಂದು ಹೇಳಿದರು.

ಬಂಬರಗಾ ಗ್ರಾಮಸ್ಥ ಗಜಾನನ ಮಾಸೇನಟ್ಟಿ ಪ್ರತಿಕ್ರಿಯಿಸಿ, ನೀರಿಗಾಗಿ ಊರೂರು ಅಲೆದಾಡುವ ಸ್ಥಿತಿಯಿತ್ತು. ಶಿವಾಜಿ ಕಾಗಣಿಕರ್​ ನಮಗೆ ನೀರು ಕೊಟ್ಟು ಬದುಕಿಸಿದ್ದಾರೆ. ಲಕ್ಷಾಂತರ ಗಿಡ-ಮರಗಳನ್ನು ಹಚ್ಚಿ, ಬೆಳೆಸಿದ ಪರಿಣಾಮ ಕೆರೆ, ಬಾವಿ ನೀರಿನಿಂದ ತುಂಬಿ ತುಳುಕುತ್ತಿವೆ. ಶಿವಾಜಿ ಅವರಿಗೆ ನಾವು ಅದೆಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆಯೇ ಎಂದರು.

ಇದನ್ನೂ ಓದಿ: ಒಂದೇ ಬಾವಿ ಆಶ್ರಯಿಸಿದ 7 ಗ್ರಾಮಗಳ ಜನರು: ಯಮಕನಮರಡಿ ಕ್ಷೇತ್ರದಲ್ಲಿ ನೀರಿಗಾಗಿ ಹಾಹಾಕಾರ

Last Updated : Mar 22, 2024, 4:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.