ETV Bharat / state

ಬೆಂಗಳೂರಿಗೆ ಜಲಕ್ಷಾಮ; ಹಲವೆಡೆ ಹನಿ ನೀರಿಗೂ ಹಾಹಾಕಾರ

author img

By ETV Bharat Karnataka Team

Published : Mar 1, 2024, 4:50 PM IST

Updated : Mar 1, 2024, 5:19 PM IST

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಹಲವು ಬಡಾವಣೆಗಳಲ್ಲಿ ನೀರಿನ ಬವಣೆಯ ಚಿತ್ರಣ ಹೇಗಿದೆ ಎಂಬುದರ ಕಂಪ್ಲೀಟ್‌ ವರದಿ ಇಲ್ಲಿದೆ.

ಸಿಲಿಕಾನ್ ಸಿಟಿ
ಸಿಲಿಕಾನ್ ಸಿಟಿ

ಸಿಲಿಕಾನ್ ಸಿಟಿಯಲ್ಲಿ ನೀರಿಗಾಗಿ ಹಾಹಾಕಾರ

ಬೆಂಗಳೂರು: ರಾಜ್ಯ ರಾಜಧಾನಿಗೆ ಜಲಕ್ಷಾಮ ಎದುರಾಗಿದೆ. ಒಂದೆಡೆ ಸರಿಯಾಗಿ ನೀರು ಪೂರೈಕೆ ಆಗುತ್ತಿಲ್ಲ, ಮತ್ತೊಂದೆಡೆ ಅಂತರ್ಜಲ ಮಟ್ಟ ಕುಸಿದು ಬೋರ್​ವೆಲ್​ಗಳು ಬತ್ತಿಹೋಗುತ್ತಿವೆ. ಮಹದೇವಪುರ, ಕೆ.ಆರ್.ಪುರ, ಯಶವಂತಪುರ, ಯಲಹಂಕ, ದಾಸರಹಳ್ಳಿ, ಬ್ಯಾಟರಾಯನಪುರ ವಿಧಾನಸಭಾ ವ್ಯಾಪ್ತಿಯ 110 ಹಳ್ಳಿಗಳು ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆಯಾಗಿ ಸರಿಸುಮಾರು 16 ವರ್ಷಗಳೇ ಕಳೆದಿವೆ. ಹೀಗಿದ್ದರೂ ಇಲ್ಲಿ ವಾಸಿಸುವ ನಿವಾಸಿಗಳಿಗೆ ಸಮರ್ಪಕ ಕುಡಿಯುವ ನೀರು ಸಿಗುತ್ತಿಲ್ಲ.

ಮಹದೇವಪುರ ವರದಿ: ಪಾಲಿಕೆಗೆ ಶೇ.50ರಷ್ಟು ಆದಾಯ ತಂದುಕೊಡುವ ಮಹದೇವಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನೀರನ ಬವಣೆ ತೀವ್ರವಾಗಿದೆ. ಐಟಿಬಿಟಿ ಕ್ಷೇತ್ರ ಎಂದೇ ಕರೆಸಿಕೊಳ್ಳುವ ಮಹದೇವಪುರದ ಪ್ರತಿ ವಾರ್ಡ್‌ನಲ್ಲೂ ನೀರಿನ ಅಭಾವದಿಂದಾಗಿ ಜನ ಹೈರಾಣಾಗಿದ್ದಾರೆ. ಈ ಕ್ಷೇತ್ರಕ್ಕೊಳಪಡುವ ವರ್ತೂರು, ಹಗದೂರು ಮತ್ತಿತರ ವಾರ್ಡ್‍ಗಳಲ್ಲಿ ಬೋರ್​ಗಳು ಬತ್ತಿ ಹೋಗಿವೆ.

ಇಲ್ಲಿನ ಜನರು ನಿತ್ಯ ಟ್ಯಾಂಕರ್ ನೀರನ್ನೇ ಅವಲಂಬಿಸಬೇಕಿದೆ. ಪ್ರತಿ ಮನೆಗೂ ಟ್ಯಾಂಕರ್ ನೀರೇ ಗತಿ ಎಂಬಂತಾಗಿದೆ. ತಿಂಗಳಲ್ಲಿ 4ರಿಂದ 5 ಸಾವಿರ ರೂಪಾಯಿ ನೀರಿಗೆ ಕೊಡಬೇಕಿದೆ. ಒಂದು ವೇಳೆ ಟ್ಯಾಂಕರ್ ನೀರು ಬುಕ್ ಮಾಡಿದರೆ ಅದು ಬರಲು ಒಂದು ವಾರ ಬೇಕು ಎಂದು ಜನರು ಸ್ಥಳೀಯ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕೆ.ಆರ್.ಪುರ ವರದಿ: ಕೆ.ಆರ್.ಪುರದಲ್ಲೂ ಇದೇ ಪರಿಸ್ಥಿತಿ. ಕ್ಷೇತ್ರದ ದೇವಸಂದ್ರ ವಾರ್ಡ್‍ನ ಕತೆ ಚಿಂತಾಜನಕವೆನ್ನಬಹುದು. ಈ ವಾರ್ಡ್‍ನ ಜನರು ಪ್ರತಿನಿತ್ಯ ಕುಡಿಯುವ ನೀರಿಗೆ ನರಕಯಾತನೆ ಅನುಭವಿಸುತ್ತಿದ್ದಾರೆ. ಈ ಮೊದಲು ವಾರಕ್ಕೆರಡು ದಿನ ನೀರು ಬಿಡುತ್ತಿದ್ದ ಬಿಬಿಎಂಪಿ, ಈಗ ವಾರಕ್ಕೆ ಒಂದು ಬಾರಿ, ಅದೂ ಅರ್ಧ ಗಂಟೆ ಮಾತ್ರ ನೀರು ಸರಬರಾಜು ಮಾಡುತ್ತಿದೆ.

ವಾರಕ್ಕೊಮ್ಮೆ ನೀರು ಬಿಡುವುದರಿಂದ ಕೂಲಿ ಕೆಲಸ ಮಾಡುವ ಮಹಿಳೆಯರು ಕೆಲಸಕ್ಕೆ ರಜೆ ಹಾಕಿ ನೀರು ತುಂಬಿಸಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಇಲ್ಲದಿದ್ದರೆ ವಾರಪೂರ್ತಿ ಕುಡಿಯಲು ನೀರೇ ಇಲ್ಲದೆ ಪರದಾಡಬೇಕು. ಕ್ಯಾನ್ ವಾಟರ್​ಗೆ ಪ್ರತಿದಿನ 100 ರೂಪಾಯಿ ಖರ್ಚು ಮಾಡುತ್ತಿದ್ದಾರೆ. ಬಟ್ಟೆ ಒಗೆಯಲು, ಸ್ನಾನಕ್ಕೆ, ಪಾತ್ರೆ ತೊಳೆಯಲು ಟ್ಯಾಂಕರ್ ನೀರು ಹಾಕಿಸಿಕೊಳ್ಳಬೇಕು. ಇದಕ್ಕೆ ತಿಂಗಳಿಗೆ ಮೂರರಿಂದ ನಾಲ್ಕು ಸಾವಿರ ರೂ. ತೆರಬೇಕು ಎಂಬುದು ಇಲ್ಲಿನ ಜನರ ಅಳಲು.

ಸಿಲಿಕಾನ್ ಸಿಟಿಯಲ್ಲಿ ಹನಿ ನೀರಿಗಾಗಿ ಪರದಾಟ
ಸಿಲಿಕಾನ್ ಸಿಟಿಯಲ್ಲಿ ಹನಿ ನೀರಿಗಾಗಿ ಪರದಾಟ

ಯಶವಂತಪುರ ವರದಿ: ಮಾಜಿ ಸಚಿವ ಎಸ್.ಟಿ.ಸೋಮಶೇಖರ್ ಪ್ರತಿನಿಧಿಸುವ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಂತೂ ಜನ ನೀರಿಗಾಗಿ ಪರದಾಡುವಂತಾಗಿದೆ. ಕ್ಷೇತ್ರದ ಹೇರೋಹಳ್ಳಿ ವಾರ್ಡ್​ನ ವಿಘ್ನೇಶ್ವರ ನಗರ, ಮಹದೇಶ್ವರ ನಗರ, ದೊಡ್ಡಬಿದರಕಲ್ಲು ವಾರ್ಡ್, ಉಲ್ಲಾಳು ವಾರ್ಡ್, ಕೆಂಗೇರಿ ಮತ್ತಿತರ ಕಡೆಗಳಲ್ಲೂ ಜನರಿಗೆ ನೀರು ಸಿಗುತ್ತಿಲ್ಲ. ಈ ಕ್ಷೇತ್ರದಲ್ಲಿ ಇದುವರೆಗೂ ನೀರಿನ ಸಮಸ್ಯೆ ಬಗೆಹರಿದಿಲ್ಲ. ಹೀಗಾಗಿ ಬಾಡಿಗೆ ಮನೆಗಳಿಗೆ ಬರಲು ಜನ ಹಿಂದೇಟು ಹಾಕುತ್ತಿದ್ದಾರೆ. ನೀರಿನ ಅಭಾವ ತೀವ್ರಗೊಂಡಾಗ ಸ್ಥಳೀಯ ಪ್ರತಿನಿಧಿಗಳು ಟ್ಯಾಂಕರ್ ಮೂಲಕ ಸ್ವಲ್ಪ ಪ್ರಮಾಣದ ನೀರು ನೀಡಿ, ಮತ್ತೆ ಆ ಕಡೆ ಮುಖ ಕೂಡ ಹಾಕುವುದಿಲ್ಲ ಎಂದು ಜನ ಹೇಳಿದ್ದಾರೆ.

ಲಕ್ಕಸಂದ್ರ ವರದಿ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಮನೆ ಇರುವ ವಾರ್ಡ್​ ಲಕ್ಕಸಂದ್ರ. 8 ಬಾರಿ ಶಾಸಕರಾಗಿ, 5 ಬಾರಿ ಮಂತ್ರಿಯಾಗಿ ರೆಡ್ಡಿ ಸೇವೆ ಸಲ್ಲಿಸುತ್ತಿದ್ದಾರೆ. ಹೀಗಿದ್ದರೂ ಈ ಪ್ರದೇಶದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ತಪ್ಪಿಲ್ಲ. ಇದು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಲಕ್ಕಸಂದ್ರ ವಾರ್ಡ್. ಇಲ್ಲಿನ ನಿವಾಸಿಗಳು ಈಗಲೂ ನೀರಿಗಾಗಿ ಸಂಕಷ್ಟ ಎದುರಿಸುತ್ತಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ ನೀರಿಗಾಗಿ ನಿಂತಿರುವುದು
ಸಿಲಿಕಾನ್ ಸಿಟಿಯಲ್ಲಿ ನೀರಿಗಾಗಿ ನಿಂತಿರುವುದು

ಕಳೆದೊಂದು ವರ್ಷದಿಂದ ಕಾವೇರಿ ನೀರಿಗಾಗಿ ಇಲ್ಲಿನ ಜನ ಜಪ ಮಾಡುತ್ತಿದ್ದಾರೆ. ವಾರಕ್ಕೊಮ್ಮೆ ಬರುವ ಕಾವೇರಿ ಸಣ್ಣ ಪ್ರಮಾಣದಲ್ಲಿ ಬರುತ್ತಿದೆ. ಅದೂ ಒಂದು ಗಂಟೆ ಮಾತ್ರ. ಬಿಟ್ಟ ನೀರು ಒಂದು ಬಿಂದಿಗೆಯನ್ನೂ ತುಂಬಲ್ಲ ಎನ್ನುವುದು ಜನಾಕ್ರೋಶ. ಇನ್ನು ಬೋರ್ವೆಲ್ ಕೊರೆದು ವರ್ಷವಾದರೂ ನೀರು ಮಾತ್ರ ಬರುತ್ತಿಲ್ಲ. ಜನಪ್ರತಿನಿಧಿಗಳನ್ನು ಕೇಳಿದರೆ ಭರವಸೆ ಮಾತ್ರ ಕೊಡುತ್ತಾರೆ ಎಂದು ಜನರು ಹೇಳುತ್ತಾರೆ.

ಆರ್.ಆರ್.ನಗರ ವರದಿ: ಡಿಸಿಎಂ ಡಿ.ಕೆ.ಶಿವಕುಮಾರ್ ಜನಸ್ಪಂದನ ನಡೆಸಿದ್ದ ಆರ್.ಆರ್.ನಗರ ವಿಧಾನಸಭಾಕ್ಷೇತ್ರ ವ್ಯಾಪ್ತಿಯ ನರಸಿಂಹ ಸ್ವಾಮಿ ಬಡಾವಣೆಯಲ್ಲಿ ಹನಿ ನೀರಿಗೂ ರಾಜಕೀಯದ ಬಣ್ಣ ಬೆರೆತಿದ್ದು, ನೀರಿಲ್ಲದೇ ಜನ ಕಂಗಾಲಾಗಿದ್ದಾರೆ. ಖಾಲಿ ಬಿಂದಿಗೆಗಳನ್ನು ಇಟ್ಟುಕೊಂಡು ತಲೆಮೇಲೆ ಕೈ ಹೊತ್ತು ಕುಳಿತುಕೊಳ್ಳುವ ಹಾಗಾಗಿದೆ. ಇಲ್ಲಿ ವಾರಕ್ಕೊಮ್ಮೆ ರಾತ್ರಿ ವೇಳೆ ಬರುವ ನೀರನ್ನು ಕಾದು ಕುಳಿತು ಶೇಖರಿಸಿಡುವ ಸ್ಥಿತಿ ಇದೆ. ಹೆಚ್ಚಾಗಿ ಗಾರ್ಮೆಂಟ್ಸ್ ಕೆಲಸಕ್ಕೆ ಹೋಗುವವರೇ ಇಲ್ಲಿರುವುದರಿಂದ ಯಾವಾಗ ದಿನ ನೀರು ಬರುತ್ತೆ ಎಂದು ಕೆಲಸಕ್ಕೆ ರಜೆ ಹಾಕಿ ನೀರಿಗಾಗಿ ಕಾದು ಕುಳಿತುಕೊಳ್ಳುವಂತಾಗಿದೆ.

ನೀರಿಗಾಗಿ ಪರದಾಡುತ್ತಿರುವ ಜನರು
ನೀರಿಗಾಗಿ ಪರದಾಡುತ್ತಿರುವ ಜನರು

ಟ್ಯಾಂಕರ್ ಮಾಫಿಯಾ: ನಗರದಲ್ಲಿ ಎದುರಾಗಿರುವ ನೀರಿನ ಹಾಹಾಕಾರವನ್ನೇ ಬಂಡವಾಳ ಮಾಡಿಕೊಂಡಿರುವ ನೀರಿನ ಟ್ಯಾಂಕರ್ ಮಾಫಿಯಾದವರು ಟ್ಯಾಂಕರ್ ನೀರಿಗೆ ಮನಬಂದಂತೆ ಬೆಲೆ ನಿಗದಿಪಡಿಸುತ್ತಿರುವುದು ಕೆಲವೆಡೆ ಕಂಡುಬರುತ್ತಿದೆ. 600 ರೂ. ಇದ್ದ ಒಂದು ಟ್ಯಾಂಕರ್ ನೀರಿಗೆ 1000 ದಿಂದ 1500 ರೂ.ಗಳನ್ನು ವಸೂಲಿ ಮಾಡುತ್ತಿದ್ದಾರೆ ಎಂದು ದೂರು ಕೇಳಿಬಂದಿದೆ.

ಈ ಟ್ಯಾಂಕರ್ ಮಾಫಿಯಾಗೆ ಕಡಿವಾಣ ಹಾಕಲು ಸರ್ಕಾರ ಮನಸ್ಸು ಮಾಡಿದ್ದರೂ ಈಗಲೂ ಕೆಲವು ಪ್ರದೇಶಗಳಲ್ಲಿ ಮನಸೋಇಚ್ಛೆ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಬಿಬಿಎಂಪಿ ಮುಖ್ಯ ಆಯುಕ್ತರು ನಿಗದಿತ ದರಕ್ಕಿಂತ ಹೆಚ್ಚು ದರ ವಸೂಲಿ ಮಾಡುವ ನೀರಿನ ಬೋರ್ವೆಲ್ ಪರವಾನಗಿ ರದ್ದುಪಡಿಸುವ ಎಚ್ಚರಿಕೆ ನೀಡಿದ್ದರೂ ಟ್ಯಾಂಕರ್ ಮಾಫಿಯಾಗೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ.

ಜನಪ್ರತಿನಿಧಿಗಳಿಗೆ ತಪರಾಕಿ: ನೀರಿನ ಸಮಸ್ಯೆ ಇರುವುದು ಕೇವಲ ಮಹದೇವಪುರ, ಯಶವಂತಪುರ, ಆರ್.ಆರ್.ನಗರ, ಚಿಕ್ಕಪೇಟೆ ಮತ್ತು ಕೆ.ಆರ್.ಪುರದಲ್ಲಿ ಮಾತ್ರವಲ್ಲ, ನಗರದ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲೂ ಅಭಾವ ತೀವ್ರವಾಗಿದೆ ಹೈಟೆಕ್ ಸಿಟಿಯಲ್ಲಿ ಇಂತಹ ಸ್ಥಿತಿ ನಿರ್ಮಾಣವಾಗಿದ್ದರೂ ಜನಪ್ರತಿನಿಧಿಗಳು ಮಾತ್ರ ಕ್ಯಾರೆನ್ನದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣ.

ಚುನಾವಣೆ ಸಂದರ್ಭದಲ್ಲಿ ಮಾತ್ರ ಮನೆ ಬಾಗಿಲಿಗೆ ಕೈ ಮುಗಿದುಕೊಂಡು ಬರುವ ರಾಜಕಾರಣಿಗಳು ಚುನಾವಣೆ ಮುಗಿದ ಮೇಲೆ ಈ ಕಡೆ ಬರುವುದಿಲ್ಲ ಎಂದು ನೀರು ಸಿಗದ ಬಡಪಾಯಿ ಜನರು ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಕುಡಿಯುವುದಕ್ಕೆ ಎಂದು ಬಾಟಲಿ ನೀರು ಬಳಸುತ್ತಿದ್ದೇವೆ. 25 ಲೀಟರ್ ಕ್ಯಾನ್ ನೀರಿಗೆ 50 ರಿಂದ 60 ರೂಪಾಯಿ ಕೊಡಬೇಕು. ಮಾರ್ಚ್, ಏಪ್ರಿಲ್‍ನಲ್ಲಿ ಉದ್ಭವಿಸುವ ನೀರಿನ ಸಮಸ್ಯೆಯನ್ನು ಈಗಲೇ ಎದುರಿಸುವುದು ಹೇಗೆ? ಎಂದು ಜನ ಭಯಭೀತರಾಗಿದ್ದಾರೆ.

ಜಲಮಂಡಳಿ ಕ್ರಮವೇನು?: ನಗರದಲ್ಲಿ ಅಕಾಲಿಕ ಮಳೆಯಿಂದ ಅಂತರ್ಜಲ ಮಟ್ಟ ಕುಸಿತ ಸೇರಿದಂತೆ ಅನೇಕ ಕಾರಣಗಳಿಂದ ನೀರಿನ ಸಮಸ್ಯೆ ಎದುರಾಗಿದ್ದು, ಈ ಹಿನ್ನೆಲೆಯಲ್ಲಿ ನಗರದ ಬಹುತೇಕ ಪ್ರದೇಶಗಳಿಗೆ ಜಲಮಂಡಳಿಯು ಕುಡಿಯುವ ನೀರನ್ನು ಸರಬರಾಜು ಮಾಡಲು ಮುಂದಾಗಿದೆ. ಬೊಮ್ಮನಹಳ್ಳಿ, ಮಹದೇವಪುರ, ದಾಸರಹಳ್ಳಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಕೊಳವೆ ಬಾವಿಗಳು ಈಗಾಗಲೇ ಬತ್ತಿ ಹೋಗಿದ್ದು, ನೀರಿನ ಕೊರತೆ ಎದುರಾಗಿದೆ. ಈ ಪ್ರದೇಶಗಳಿಗೆ ಜಲಮಂಡಳಿಯ ಅಧಿಕಾರಿಗಳು ನೀರಿನ ವ್ಯವಸ್ಥೆ ಮಾಡಲು ಮುಂದಾಗಿದ್ದಾರೆ. ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ 110 ಹಳ್ಳಿಗಳಲ್ಲಿ 51 ಗ್ರಾಮಗಳಿಗೂ ಸಹ ನೀರಿನ ಸರಬರಾಜು ಮಾಡಲು ಜಲಮಂಡಳಿ ಮುಂದಾಗಿದೆ.

"ಕೆಆರ್​ಎಸ್ ಮತ್ತು ಕಬಿನಿ ಅಣೆಕಟ್ಟುಗಳಲ್ಲಿ ಜನರಿಗೆ ಕುಡಿಯುವ ನೀರನ್ನು ಅಗತ್ಯಕ್ಕೆ ತಕ್ಕಂತೆ ಪೂರೈಸುವಷ್ಟು ನೀರಿದೆ. ಹೀಗಾಗಿ ಜಲಮಂಡಳಿಯು ತನ್ನ ವ್ಯಾಪ್ತಿಗೆ ಒಳಪಡುವ ಎಲ್ಲ ನಿವಾಸಿಗಳಿಗೆ, ವಿಶೇಷವಾಗಿ ಬಿಬಿಎಂಪಿ ಮಿತಿಯಲ್ಲಿರುವ 51 ಹಳ್ಳಿಗಳಿಗೆ ಕಾವೇರಿ ನೀರಿನ ಪೂರೈಕೆ ಮಾಡುತ್ತಿದೆ. ಸಮಸ್ಯೆಗಳಿದ್ದೆಡೆ ಟ್ಯಾಂಕರ್ ಸಹ ಬಳಸಲು ಮುಂದಾಗಿದ್ದೇವೆ. ಇದರಿಂದ 6,000 ಲೀಟರ್ ನೀರು ಪೂರೈಕೆ ಮಾಡಬಹುದಾಗಿದ್ದು, ಇದರ ಹೊರತಾಗಿ ಬೇಸಿಗೆಯ ತಿಂಗಳುಗಳಲ್ಲಿ ನಿವಾಸಿಗಳಿಗೆ ಅನಾನುಕೂಲವಾಗದಂತೆ ನೋಡಿಕೊಳ್ಳಲು ಬೋರ್ವೆಲ್ ಸೇವೆ ಮತ್ತು ದುರಸ್ತಿಗಾಗಿ ತಂಡವನ್ನು ರಚಿಸಲಾಗಿದೆ" ಎಂದು ಬಿಡಬ್ಲ್ಯೂಎಸ್‍ಎಸ್‍ಬಿ ಅಧಿಕಾರಿಗಳು ತಿಳಿಸಿದ್ದಾರೆ.

"ಕಳೆದ ಋತುವಿನಲ್ಲಿ ಬೆಂಗಳೂರು ಶೇ.50ರಷ್ಟು ಮಳೆ ಕೊರತೆ ಎದುರಿಸಿದೆ. ಕಳೆದ ವರ್ಷ ಸರಾಸರಿಗಿಂತ ಕಡಿಮೆ ಮಳೆಯಾಗಿರುವುದು ಅಂತರ್ಜಲ ಕುಸಿತಕ್ಕೆ ಕಾರಣ. ಅಲ್ಲದೆ, ಬಯಲು ಜಾಗಗಳು ಕಾಂಕ್ರಿಟೀಕರಣಗೊಳ್ಳುತ್ತಿರುವುದರಿಂದ ಬೋರ್ವೆಲ್​ನ ಅಂತರ್ಜಲ ಪ್ರಮಾಣವನ್ನು ಹೆಚ್ಚಿಸಲು ಬಾವಿಗಳು ಮತ್ತು ಸಣ್ಣ ಕೊಳಗಳನ್ನು ನಿರ್ಮಿಸಬೇಕಾಗುತ್ತದೆ" ಎಂದಿದ್ದಾರೆ.

ಜಲಕ್ಷಾಮದ ಕುರಿತು ಜಲತಜ್ಞ ವಿಶ್ವನಾಥ ಶ್ರೀಕಂಠಯ್ಯ ಮಾತನಾಡಿ, ''ಮಂಡಳಿಯು ತೃತೀಯ ಹಂತದ ನೀರು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಿದೆ. ಮಳೆ ನೀರಿನ ಚರಂಡಿಗಳು, ಕಣಿವೆಗಳು ಮತ್ತು ಕೆರೆಗಳ ಬಳಿಯಿರುವ ಬೋರ್ವೆಲ್ ರೀಚಾರ್ಜ್ ಮಾಡಲು ಸಹ ಸಂಸ್ಥೆಗೆ ಅವಕಾಶವಿದೆ. ವೃಷಭಾವತಿ ಕಣಿವೆಯು ಕೊಳಚೆ ನೀರು ಸಂಸ್ಕರಣಾ ಘಟಕವನ್ನು ಹೊಂದಿದ್ದು, ಇದು 150 ಎಂಎಲ್​ಡಿ ಕೊಳಚೆ ನೀರನ್ನು ಸಂಸ್ಕರಿಸುತ್ತದೆ. ಅದೇ ರೀತಿ ಜಕ್ಕೂರು ಕೆರೆಯಲ್ಲಿ ತೃತೀಯ ನೀರಿನ ಶುದ್ಧೀಕರಣ ಘಟಕವಿದೆ. ಸುತ್ತಮುತ್ತಲಿನ ಪ್ರದೇಶಗಳ ಕೊಳವೆಬಾವಿಗಳನ್ನು ಬಳಸಿಕೊಂಡು ಸದ್ಯಕ್ಕೆ ಬೇಕಾದ ಪ್ರದೇಶಗಳಿಗೆ ನೀರು ಸರಬರಾಜು ಮಾಡಬಹುದು'' ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮಳೆ ಕೊರತೆ: ಬೆಂಗಳೂರಿನ ಹಲವೆಡೆ ಕುಡಿಯುವ ನೀರು ಪೂರೈಕೆ ಸಮಸ್ಯೆ

Last Updated :Mar 1, 2024, 5:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.