ETV Bharat / state

ಭಾರತ್ ಜೋಡೋದಲ್ಲಿ ಭಾಗವಹಿಸಿದ್ದ ಡಾ.ಸುಶ್ರುತ್ ಗೌಡ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆ - Sushruth Gowda Joins BJP

author img

By ETV Bharat Karnataka Team

Published : Apr 24, 2024, 3:23 PM IST

Updated : Apr 24, 2024, 4:12 PM IST

ಖ್ಯಾತ ನರರೋಗ ತಜ್ಞ ಡಾ.ಸುಶ್ರುತ್ ಗೌಡ ಕಾಂಗ್ರೆಸ್ ಪಕ್ಷ ತೊರೆದು, ಬಿಜೆಪಿ ಸೇರಿದ್ದಾರೆ.

sushruth gowda
ಡಾ.ಸುಶ್ರುತ್ ಗೌಡ ಬಿಜೆಪಿ ಸೇರ್ಪಡೆ

ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಡಾ.ಸುಶ್ರುತ್ ಗೌಡ

ಬೆಂಗಳೂರು: ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಅಂತಾರಾಷ್ಟ್ರೀಯ ನರರೋಗ ತಜ್ಞ ಡಾ.ಸುಶ್ರುತ್ ಗೌಡ ಅವರು ಕಾಂಗ್ರೆಸ್ ತೊರೆದು, ಬಿಜೆಪಿ ಸೇರ್ಪಡೆಯಾದರು. ಪಕ್ಷದ ತತ್ವ ಸಿದ್ಧಾಂತ ಒಪ್ಪಿ ಯಾವುದೇ ಷರತ್ತಿಲ್ಲದೆ, ಬಿಜೆಪಿ ಸೇರಿದ್ದೇನೆ. ಮೈಸೂರು ಅರಸು ಮನೆತನದ ಯದುವೀರ್ ಒಡೆಯರ್ ಗೆಲುವಿಗೆ ಶ್ರಮಿಸುವುದಾಗಿ ಅವರು ಪ್ರಕಟಿಸಿದರು.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಚುನಾವಣಾ ಕಾರ್ಯಾಲಯ ರಿಜಾಯ್ಸ್ ಹೋಟೆಲ್​​ನಲ್ಲಿ ತಮ್ಮ ಬೆಂಬಲಿಗರೊಂದಿಗೆ ಡಾ.ಸುಶ್ರುತ್ ಗೌಡ ಬಿಜೆಪಿಗೆ ಸೇರಿದರು. ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಡಾ. ರಾಧಾ ಮೋಹನ್ ದಾಸ್ ಅಗರ್​​ವಾಲ್ ಪಕ್ಷದ ಶಾಲು ಹೊದಿಸಿ, ಧ್ವಜ ನೀಡಿ ಸ್ವಾಗತ ಕೋರಿದರು. ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ರಾಧಾ ಮೋಹನ್ ದಾಸ್ ಅಗರ್​​ವಾಲ್, ಬಿಜೆಪಿ ವತಿಯಿಂದ ಡಾ. ಸುಶ್ರುತ್ ಗೌಡ ಅವರನ್ನು ಸ್ವಾಗತ ಮಾಡುತ್ತೇನೆ. ಅವರು ತುಂಬಾ ದಿನದಿಂದ ನಮ್ಮ‌ ಸಂಪರ್ಕದಲ್ಲಿದ್ದರು. ಭಾರತ್ ಜೋಡೋ ಯಾತ್ರೆಯಲ್ಲಿ ಭಾಗಿಯಾಗಿದ್ದರು. ಕಾಂಗ್ರೆಸ್ ನಿಮ್ಮ ಆಲೋಚನೆಗೆ ಪೂರಕವಾಗಿಲ್ಲ ಅಂತ ಮನವರಿಕೆ ಮಾಡಿದೆವು. ಸಿದ್ಧಾಂತವನ್ನು ಒಪ್ಪಿ ಬಂದಿದ್ದಾರೆ ಎಂದು​​ ಅಗರ್​​ವಾಲ್ ಹೇಳಿದರು.

ಸುಶ್ರುತ್ ಅವರು ಅಂತಾರಾಷ್ಟ್ರೀಯ ಮಟ್ಟದ ನ್ಯೂರಾಲಜಿ ವೈದ್ಯರಲ್ಲಿ ಒಬ್ಬರು. ನಾನು ಇವರ ಸಾಧನೆ ಬಗ್ಗೆ ನೋಡಿದ್ದೇನೆ. ಇಂತಹ ಕೀರ್ತಿವಂತರ ಸಾಧನೆ ದೊಡ್ಡದಿದೆ. ಯಾವುದೇ ಫಲಾಪೇಕ್ಷೆ ಇಲ್ಲದೆ,‌ ಸಾಮಾನ್ಯ ಕಾರ್ಯಕರ್ತರ ರೀತಿ ಪಕ್ಷಕ್ಕೆ ಬಂದಿದ್ದಾರೆ. ಪಕ್ಷ ಸಂಘಟನೆಗೆ ಮುಂದೆ ಕೆಲಸ ಮಾಡಲಿದ್ದಾರೆ. ಅವರನ್ನು ಪಕ್ಷವು ಗೌರವಯುತವಾಗಿ ನಡೆಸಿಕೊಳ್ಳಲಿದೆ. ಅವರು ಮೈಸೂರು ಭಾಗದಲ್ಲಿ ಬಿಜೆಪಿ ಬಲಪಡಿಸುವ ವಿಶ್ವಾಸ ಇದೆ ಎಂದರು.

ಡಾ.ಸುಶ್ರುತ್ ಗೌಡ ಮಾತನಾಡಿ, ನಾನು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಲು ಕಾರಣ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಬಹಳಷ್ಟು ಜನರಿಗೆ ಉಚಿತ ಆರೋಗ್ಯ ಸೇವೆ ನೀಡಿದೆ. ಭಾರತ್ ಜೋಡೋದಲ್ಲಿ ಎರಡೂವರೆ ಸಾವಿರ ಕಿ.ಮೀ ಪಾದಯಾತ್ರೆ ಮಾಡಿದೆ. ಗ್ರಾಮೀಣ ಪ್ರದೇಶದಲ್ಲಿ ವಾತಾವರಣ ಹೇಗಿದೆ ಅಂತ ನೋಡಲು ಭಾರತ ಜೋಡೋ ಸೇರಿದ್ದೆ. ಕಾಂಗ್ರೆಸ್ ಸದಸ್ಯತ್ವ ಪಡೆಯದೇ ಇದ್ದರೂ ಜೋಡೋ ಯಾತ್ರೆಯಲ್ಲಿ ಭಾಗವಹಿಸಿದೆ. ದೇಶದ ಜನರಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಸರಿಯಾಗಿ ಸೌಕರ್ಯ ಸಿಗುತ್ತಿಲ್ಲ. ಅದನ್ನು ಪೂರೈಸಲು ನಿರ್ಧಾರ ಮಾಡಿದೆ ಎಂದರು.

ಅದಕ್ಕಾಗಿ ಕಾಂಗ್ರೆಸ್ ಪಕ್ಷ ಸೇರ್ಪಡೆ ಆದೆ. ನನ್ನನ್ನು ಪ್ರಧಾನ ಕಾರ್ಯದರ್ಶಿಯಾಗಿ ಕೂಡ ಮಾಡಿದರು. ಆದರೆ, ಅಲ್ಲಿ ನಾನು ಸಾಧನೆ ಮಾಡಲು ಸಾಧ್ಯವಿಲ್ಲ ಅಂತ ಗೊತ್ತಾಯ್ತು. ಹಾಗಾಗಿ, ಮೋದಿ ಅವರ ಸಾಧನೆ ನೋಡಿದೆ, ಅವರ ವಿಷನ್ ಇಷ್ಟ ಆಯ್ತು. ಬಿಜೆಪಿಯಲ್ಲಿ ವಿಷನ್ ಇದೆ ಅಂತ ಅನಿಸಿತು. ಮೋದಿ ಕೈ ಬಲಪಡಿಸಲು, ಮನಪೂರ್ವಕವಾಗಿ ಬಿಜೆಪಿ ಪಕ್ಷದ ತತ್ವ ಸಿದ್ಧಾಂತ ಒಪ್ಪಿ ಬಂದಿದ್ದೇನೆ ಎಂದು ಸುಶ್ರುತ್ ಗೌಡ ತಿಳಿಸಿದರು.

ಇದನ್ನೂ ಓದಿ: 'ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​​​ ಗೆಲ್ಲಲಿದೆ': ಮಾಜಿ ಸಚಿವ ವಿನಯ್​​​ ಕುಲಕರ್ಣಿ

Last Updated : Apr 24, 2024, 4:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.