ETV Bharat / state

ನಿಗಮ‌ ಮಂಡಳಿಗಳಲ್ಲಿ ಮುಂದೆ ಬೇರೆಯವರಿಗೆ ಅವಕಾಶ ಸಿಗುತ್ತದೆ: ಡಿ ಕೆ ಶಿವಕುಮಾರ್​

author img

By ETV Bharat Karnataka Team

Published : Jan 27, 2024, 5:36 PM IST

ನಿಗಮ ಮಂಡಳಿಗಳಲ್ಲಿ ಮುಂದಿನ ಹಂತದಲ್ಲಿ ಜಿಲ್ಲಾಧ್ಯಕ್ಷರು, ತಾಲೂಕು ಅಧ್ಯಕ್ಷರು, ಬ್ಲಾಕ್ ಅಧ್ಯಕ್ಷರು ಮತ್ತು ಕಾರ್ಯಕರ್ತರಿಗೆ ಅವಕಾಶ ಸಿಗುತ್ತದೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್​ ಹೇಳಿದರು.

dcm-dk-shivakumar-reaction-on-corporation-board-appointment
ನಿಗಮ‌ ಮಂಡಳಿಯಲ್ಲಿ ಮುಂದೆ ಬೇರೆಯವರಿಗೆ ಅವಕಾಶ ಸಿಗುತ್ತದೆ: ಡಿ ಕೆ ಶಿವಕುಮಾರ್​

ನಿಗಮ‌ ಮಂಡಳಿಗಳಲ್ಲಿ ಮುಂದೆ ಬೇರೆಯವರಿಗೆ ಅವಕಾಶ ಸಿಗುತ್ತದೆ: ಡಿ ಕೆ ಶಿವಕುಮಾರ್​

ಬೆಂಗಳೂರು: "ಕಾಂಗ್ರೆಸ್ ಪಕ್ಷದ ಸೇವೆ ಮಾಡಬೇಕು ಅಂದುಕೊಂಡವರು ಏನು ಕೊಟ್ಟರು ಸೇವೆ ಮಾಡಬೇಕು" ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು. ನಗರದಲ್ಲಿ ನಿಗಮ ಮಂಡಳಿ ನೇಮಕ ಸಂಬಂಧ ಅಸಮಾಧಾನ ವ್ಯಕ್ತವಾಗಿರುವ ಬಗ್ಗೆ ಪ್ರತಿಕ್ರಿಯಿಸಿ, "ಯಾರು ಏನು ಗಾಬರಿ ಪಡಬೇಕಾದ ಅವಶ್ಯಕತೆ ಇಲ್ಲ. ನೂರಾರು ಜನ ಕಾರ್ಯಕರ್ತರನ್ನು ಕೂಡ ನೇಮಕ ಮಾಡುವ ವ್ಯವಸ್ಥೆ ಮಾಡುತ್ತೇವೆ. ಈಗ 39 ಮಾಡಿದ್ದೇವೆ, ಮತ್ತೆ 39 ಮಂದಿಯನ್ನು ಮುಂದಿನ ಹಂತದಲ್ಲಿ ಮಾಡುತ್ತೇವೆ. ಜಿಲ್ಲಾಧ್ಯಕ್ಷರು, ತಾಲೂಕು ಅಧ್ಯಕ್ಷರು, ಬ್ಲಾಕ್ ಅಧ್ಯಕ್ಷರು ಹೀಗೆ ಕಾರ್ಯಕರ್ತರನ್ನ ನೇಮಕ ಮಾಡಬೇಕಿದೆ" ಎಂದರು.

"ನಾವು ಸುದೀರ್ಘವಾಗಿ ಚರ್ಚೆ ಮಾಡಿ ತೀರ್ಮಾನ ಮಾಡಿದ್ದೇವೆ. ಎಲ್ಲರಿಗೂ ಮಂತ್ರಿಯಾಗಬೇಕು ಅನ್ನೋ ಆಸೆ ಇರುತ್ತದೆ. ಕಾಂಗ್ರೆಸ್ ಪಕ್ಷದಲ್ಲಿ ನಾವು ಕೆಲವರನ್ನ ಗುರುತಿಸಿದ್ದೇವೆ. ಕೆಲವು ರೊಟೇಶನ್ ಆಗುತ್ತೆ. ನಿಗಮ‌ ಮಂಡಳಿ ಹುದ್ದೆ ಎರಡು ವರ್ಷ ಮಾತ್ರ ಅಂತ ನಾವು ಈಗಾಗಲೇ ಹೇಳಿದ್ದೇವೆ. ಎರಡು ವರ್ಷದ ನಂತರ ಬೇರೆಯವರಿಗೆ ಅವಕಾಶ ಮಾಡಿಕೊಡುತ್ತೇವೆ ಅಂತ ಹೇಳಿದ್ದೇವೆ" ಎಂದು ತಿಳಿಸಿದರು.

ಇನ್ನು ಬೇಕಾದಷ್ಟು ಹುದ್ದೆಗಳನ್ನು ಸೃಷ್ಟಿಸಿದ್ದೇವೆ: ನಿಗಮ ಮಂಡಳಿ ನೇಮಕ ಸಂಬಂಧ ಸಲಹೆ ಪಡೆದಿಲ್ಲ‌ ಎಂಬ ಕೆಲ ಸಚಿವರ ಅಸಮಾಧಾನ ವಿಚಾರವಾಗಿ ಪ್ರತಿಕ್ರಿಯಿಸಿ, "ಮುಖ್ಯಮಂತ್ರಿಗಳು ಈಗಾಗಲೇ ಸಚಿವರ ಅಭಿಪ್ರಾಯಕ್ಕೆ ಉತ್ತರ ಕೊಟ್ಟಿದ್ದಾರೆ. ಒಂದು ಪ್ರಕ್ರಿಯೆ ಇದೆ. ಎಲ್ಲ ಸಚಿವರು ನಮಗೆ ಲೆಟರ್ ಕೊಟ್ಟಿದ್ದಾರೆ. ಯಾರ್‍ಯಾರು ಬೇಕು ಅಂತ ಲಿಖಿತವಾಗಿ ಉತ್ತರ ಕೊಟ್ಟಿದ್ದಾರೆ. ನಾವು ಸೆಲೆಕ್ಷನ್ ಸಂದರ್ಭದಲ್ಲಿ ಕೆಲವು ಮಾತ್ರ ಕೊಟ್ಟಿದ್ದೇವೆ. ನಾವು ಎಲ್ಲರಿಗೂ ಅವಕಾಶ ಮಾಡಿಕೊಟ್ಟಿದ್ದೇವೆ ಅಂತ ನಾನು ಹೇಳಲ್ಲ. ಎಲ್ಲ ಕ್ಷೇತ್ರದಲ್ಲೂ ಇಬ್ಬರು ಮೂರು ಜನ ಆಕಾಂಕ್ಷಿಗಳಿದ್ದರು. ಕೆಲವರನ್ನ ಮಾಡಿದ್ದೇವೆ ಇನ್ನು ಕೆಲವರನ್ನು ಮಾಡುತ್ತೇವೆ. ಇನ್ನೂ ಬೇಕಾದಷ್ಟು ಹುದ್ದೆಗಳನ್ನು ಸೃಷ್ಟಿಸಿದ್ದೇವೆ. ಒಂದೊಂದು ವಿಧಾನಸಭಾ ಕ್ಷೇತ್ರದಲ್ಲಿ ನೂರು ಜನ ಕಾರ್ಯಕರ್ತರನ್ನ ನೇಮಿಸಲು ವ್ಯವಸ್ಥೆ ಮಾಡುತ್ತೇವೆ. ಆಸ್ಪತ್ರೆ ಸಮಿತಿ, ಆಶ್ರಯ ಸಮಿತಿ ಹೀಗೆ ಹಲವು ಕಡೆ ನೇಮಿಸುವ ಅವಕಾಶವಿದೆ ಅದನ್ನು ಮಾಡುತ್ತಿದ್ದೇವೆ" ಎಂದರು.

ನೇಮಿಸಲು ಅವಕಾಶ ಇಲ್ಲದ ಅಧ್ಯಕ್ಷ ಸ್ಥಾನಕ್ಕೆ ಶಾಸಕ ವಿಜಯಾನಂದ ಕಾಶಪ್ಪನವರ್ ನೇಮಕ ವಿಚಾರವಾಗಿ ಮಾತನಾಡಿ, "ವಿಜಯಾನಂದ ಕಾಶಪ್ಪನವರ್ ವಿಚಾರವನ್ನು ಸರಿಪಡಿಸುತ್ತೇವೆ. ಹಿಂದೆ ಕೃಷ್ಣ ಅವರ ಕಾಲದಲ್ಲಿ ಮಾಡಿದ್ವಿ. ಈ ರೀತಿ ಸಣ್ಣ ಪುಟ್ಟ ಸಮಸ್ಯೆಗಳಿದ್ದರೆ ಅದನ್ನು ಬಗೆಹರಿಸುತ್ತೇವೆ" ಎಂದು ಹೇಳಿದರು.

ಇದನ್ನೂ ಓದಿ: ಪಕ್ಷದ ತತ್ವ, ಸಿದ್ಧಾಂತ, ಗ್ಯಾರಂಟಿ ಯೋಜನೆಗಳ ಬಗ್ಗೆ ಗೌರವ ಇರುವವರು ಇರುತ್ತಾರೆ: ಸಚಿವ ಹೆಚ್.​ಕೆ.ಪಾಟೀಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.