ETV Bharat / state

ಬಿಬಿಎಂಪಿ ಬಜೆಟ್‌: ಪೂರ್ವಭಾವಿ ಸಭೆ ನಡೆಸಿದ ಡಿಸಿಎಂ ಡಿ.ಕೆ.ಶಿವಕುಮಾರ್‌

author img

By ETV Bharat Karnataka Team

Published : Jan 30, 2024, 9:12 AM IST

2024-25ನೇ ಸಾಲಿನ ಬಿಬಿಎಂಪಿ ಆಯವ್ಯಯದ ಸಿದ್ಧತೆಗೆ ಸಲಹೆ, ಸೂಚನೆಗಳನ್ನು ಪಡೆಯುವ ಮತ್ತು ಕೆಲವು ಅಭಿವೃದ್ಧಿ ಕೆಲಸಗಳ ವಿಚಾರವಾಗಿ ವಿಕಾಸಸೌಧದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪೂರ್ವಭಾವಿ ಸಭೆ ನಡೆಸಿದರು.

preliminary meeting
ಪೂರ್ವಭಾವಿ ಸಭೆಯ ಚಿತ್ರಣ

ಬೆಂಗಳೂರು: ಬೆಂಗಳೂರಿನ ಯೋಜನೆಗಳಿಗೆ ಸಂಬಂಧಿಸಿದಂತೆ ಬಜೆಟ್ ಮಂಡಿಸಬೇಕಿದೆ. ನಗರದ ಕೆಲವು ಭಾಗಗಳು ಮಾತ್ರ ಯೋಜಿತವಾಗಿ ನಿರ್ಮಾಣವಾಗಿವೆ. ಉಳಿದಂತೆ ಯಾವ ಪ್ರದೇಶವೂ ಯೋಜಿತವಾಗಿ ಬೆಳೆದಿಲ್ಲ. ಹೀಗಾಗಿ ಹೊಸ ರೂಪ ನೀಡಲು ನಾವು ಮುಂದಾಗಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಬಿಬಿಎಂಪಿ ಆಯವ್ಯಯದ ಸಿದ್ಧತೆಗೆ ಸಲಹೆ, ಸೂಚನೆಗಳನ್ನು ಪಡೆಯುವ ಹಾಗು ಕುಡಿಯುವ ನೀರಿನ ಪೂರೈಕೆ ಸಲುವಾಗಿ ವಿಕಾಸಸೌಧದಲ್ಲಿ ಸೋಮವಾರ ಪೂರ್ವಭಾವಿ ಸಭೆ ನಡೆಯಿತು. ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಸಚಿವರು, ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು ಹಾಗೂ ರಾಜ್ಯಸಭಾ ಸದಸ್ಯರು ಪಾಲ್ಗೊಂಡಿದ್ದರು.

preliminary meeting
ಪೂರ್ವಭಾವಿ ಸಭೆ

ಸಂಚಾರ ದಟ್ಟಣೆ, ಕುಡಿಯುವ ನೀರು, ಘನತ್ಯಾಜ್ಯ ವಿಲೇವಾರಿ ವಿಚಾರವಾಗಿ ನಗರದಲ್ಲಿ ಸಮಸ್ಯೆ ಉದ್ಭವಿಸಿದೆ. 2013ರಿಂದ ಕುಡಿಯುವ ನೀರಿನ ದರ ಹೆಚ್ಚಳವಾಗಿಲ್ಲ. ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿಯಲ್ಲಿ ಸರಿಯಾದ ಪ್ರಮಾಣದಲ್ಲಿ ತೆರಿಗೆ ಪಾವತಿಯಾಗುತ್ತಿಲ್ಲ. ನಾನು ಸಣ್ಣ ಸಮೀಕ್ಷೆ ಮಾಡಿದಾಗ ಶೇ.50ಕ್ಕಿಂತ ಹೆಚ್ಚು ಮಂದಿ ಸರಿಯಾಗಿ ತೆರಿಗೆ ಪಾವತಿ ಮಾಡುತ್ತಿಲ್ಲ ಎಂಬ ವಿಚಾರ ಗೊತ್ತಾಗಿದೆ. ಹೀಗಾಗಿ ಬೆಂಗಳೂರಿನಲ್ಲಿರುವ ಆಸ್ತಿಗಳ ದಾಖಲೆಗಳನ್ನು ಸ್ಕ್ಯಾನ್​ ಮಾಡಿಸಲಾಗುತ್ತಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

2020ರಲ್ಲಿ ಆಸ್ತಿ ತೆರಿಗೆ ಮಸೂದೆ ತಿದ್ದುಪಡಿ ಮಾಡಿದಾಗ ದಂಡದ ಪ್ರಮಾಣ ಹೆಚ್ಚಾಗಿದೆ. ಈ ಬಗ್ಗೆ ಯಾರೊಬ್ಬರೂ ಗಮನ ಹರಿಸಿಲ್ಲ. ಇದನ್ನು ಪಾವತಿಸುವುದು ಜನರಿಗೆ ಅಸಾಧ್ಯ. ಹೀಗಾಗಿ ಕಾನೂನಿನಲ್ಲಿ ಮತ್ತೆ ತಿದ್ದುಪಡಿ ಮಾಡಲು ತೀರ್ಮಾನಿಸಲಾಗಿದೆ. ಎಲ್ಲವನ್ನೂ ಒಂದೇ ಬಾರಿಗೆ ಬಗೆಹರಿಸಲು ಆಗುವುದಿಲ್ಲ. ಒಂದೊಂದಾಗಿ ಬಗೆಹರಿಸಲು ಪ್ರಯತ್ನಿಸುತ್ತಿದ್ದೇವೆ. ಇದಕ್ಕೆ ಬಿಡಿಎ, ಜಲಮಂಡಳಿ, ಬೆಸ್ಕಾಂ ಎಲ್ಲವೂ ಒಟ್ಟಾಗಿ ಕೆಲಸ ಮಾಡಬೇಕಿದೆ ಎಂದರು.

ಕುಡಿಯುವ ನೀರಿನ ವಿಚಾರವಾಗಿ ಸುಪ್ರೀಂ ಕೋರ್ಟ್ ಆದೇಶದಂತೆ 6 ಟಿಎಂಸಿ ನೀರನ್ನು ಬೆಂಗಳೂರಿಗೆ ಬಳಸಲು ಸರ್ಕಾರಿ ಆದೇಶ ಹೊರಡಿಸಲಾಗಿದೆ. ಆ ಮೂಲಕ ಕುಡಿಯುವ ನೀರು ಪೂರೈಕೆಗೆ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು. ಅನಧಿಕೃತ ಫ್ಲೆಕ್ಸ್​ಗಳನ್ನು ನಿಷೇಧಿಸಲಾಗಿದ್ದು, ಪಾಲಿಕೆ ಅಧಿಕಾರಿಗಳು ನನ್ನ ಮೇಲೂ ದಂಡ ವಿಧಿಸಿದ್ದಾರೆ. ಯಾವುದೇ ಪಕ್ಷ, ನಾಯಕರು ಅನಧಿಕೃತ ಫ್ಲೆಕ್ಸ್ ಹಾಕಿದರೂ ಕಾನೂನು ರೀತಿಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಇಲ್ಲದಿದ್ದರೆ ಫ್ಲೆಕ್ಸ್ ಹಾವಳಿ ನಿಯಂತ್ರಣ ಕಷ್ಟ ಎಂದು ಹೇಳಿದರು.

ಬೆಂಗಳೂರಿನಲ್ಲಿ ಪಾಲಿಕೆ ಸದಸ್ಯರಾಗಿ, ಶಾಸಕರಾಗಿ, ಮಂತ್ರಿಗಳಾಗಿ ಆಡಳಿತ ನಡೆಸಿರುವ ನಿಮ್ಮಿಂದ ಈ ವಿಚಾರವಾಗಿ ಸಲಹೆ ಕೇಳಲು ಸಭೆ ಕರೆಯಲಾಗಿದೆ. ನಿಮ್ಮ ಸಲಹೆ ಸ್ವೀಕರಿಸಲು ಸಿದ್ಧರಿದ್ದೇವೆ. ಈ ಹಿಂದೆ ಯೋಜನಾ ಆಯೋಗದಲ್ಲಿ ಹಣವನ್ನು ಮೀಸಲಿಟ್ಟಿದ್ದರು. ಆದರೆ ಅದು ಬಂದಿಲ್ಲ. ಬೆಂಗಳೂರಿಗೆ ಆದ್ಯತೆ ನೀಡಲು ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಲು ಸಮಯಾವಕಾಶ ಕೋರಿದ್ದೇನೆ. ಈ ಮಧ್ಯೆ ಕೇಂದ್ರ ಸಚಿವರುಗಳನ್ನು ಭೇಟಿ ಮಾಡಿ ಮನವಿ ಮಾಡಿದ್ದೇನೆ. ನೀವು ಸಭೆಯಲ್ಲಿ ಮೌಖಿಕವಾಗಿಯಾದರೂ ಸಲಹೆ ನೀಡಬಹುದು, ಲಿಖಿತ ರೂಪದಲ್ಲಿಯಾದರೂ ನೀಡಬಹುದು. ನಿಮ್ಮ ಸಲಹೆ ಸ್ವೀಕರಿಸಲು ನಾವು ಸಿದ್ಧವಿದ್ದೇವೆ ಎಂದು ಹೇಳಿದರು.

preliminary meeting
ಪೂರ್ವಭಾವಿ ಸಭೆ

ಪ್ರಮುಖ ಸಲಹೆಗಳು:
• ಬ್ರ್ಯಾಂಡ್ ಬೆಂಗಳೂರು ಅಡಿ ಯೋಜನೆಗಳನ್ನು ಅನುಷ್ಠಾನಗೊಳಿಸುವುದು.
• ಆಸ್ತಿ ತೆರಿಗೆ ವಿಚಾರದಲ್ಲಿ ಸರಿಯಾದ ಕ್ರಮಗಳನ್ನು ಜಾರಿಗೆ ತಂದು ಹೆಚ್ಚು ತೆರಿಗೆ ಸಂಗ್ರಹ ಮಾಡುವುದು.
• ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್ಲಾ ಇಲಾಖೆಗಳ ಸಮನ್ವಯತೆ.
• ಪಾದಚಾರಿ ಒತ್ತುವರಿಗಳನ್ನು ತೆರವುಗೊಳಿಸಿ ಅಭಿವೃದ್ಧಿಪಡಿಸುವ ಮೂಲಕ ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವುದು.
• ನಗರದ ರಸ್ತೆಗಳ ಬದಿಯಲ್ಲಿ ಅನಾಥ ವಾಹನಗಳು ರಸ್ತೆ ಬದಿಯಲ್ಲೇ ನಿಂತಿವೆ. ಅದಕ್ಕೆ ಜಾಗಗಳನ್ನು ಗುರುತಿಸಿ ವಾಹನಗಳನ್ನು ತೆರವುಗೊಳಿಸುವುದು.
• ಅಕ್ರಮ-ಸಕ್ರಮ ನ್ಯಾಯಾಲಯದಲ್ಲಿ ಇತ್ಯರ್ಥಪಡಿಸಿಕೊಂಡು ಸಮಸ್ಯೆ ಬಗೆಹರಿಸುವುದು.
• ಆಟದ ಮೈದಾನ, ಕೆರೆ, ಉದ್ಯಾನಗಳಿಗಳಲ್ಲಿ ಬದ್ರತಾ ಸಿಬ್ಬಂದಿ ನಿಯೋಜನೆ ಮಾಡುವುದು ಹಾಗೂ ಸರಿಯಾಗಿ ನಿರ್ವಹಣೆ ಮಾಡುವುದು.
• ಕಲ್ಯಾಣ ಕಾರ್ಯಕ್ರಮದಡಿ ಬಡವರ್ಗದ ಜನರಿಗೆ ಅನುಕೂಲ ಮಾಡುವುದು.
• ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವುದು.
• ಕಸದ ಸಮಸ್ಯೆ ಬಗೆಹರಿಸುವುದು.
• ವಿಧಾನಸಭಾ ಕ್ಷೇತ್ರದ ವಿಸ್ತೀರ್ಣ/ಜನಸಂಖ್ಯೆಗೆ ಅನುಗುಣವಾಗಿ ಅನುದಾನ ನೀಡಲು ಕ್ರಮ.
• ಸಂಚಾರ ದಟ್ಟಣೆ ನಿಯಂತ್ರಿಸುವುದು.
• ನಗರದಲ್ಲಿ ಮೇಲುಸೇತುವೆ ಮತ್ತು ಮೆಟ್ರೋದ ಡಬ್ಬಲ್ ಡೆಕ್ಕರ್ ವ್ಯವಸ್ಥೆ ಮಾಡಲು ಕ್ರಮ ಕೈಗೊಂಡು, ಅದಕ್ಕೆ ಅನುದಾನ ಮೀಸಲಿಡಬೇಕು.
• ಬೃಹತ್ ನೀರುಗಾಲುವೆ ಸಮಸ್ಯೆ ಬಗೆಹರಿಸುವುದು.
• ಬೀದಿ ದೀಪಗಳ ಅಳವಡಿಕೆ ಹಾಗೂ ನಿರ್ವಹಣೆ.
• ರಸ್ತೆ ಅಭಿವೃದ್ಧಿಗೆ ಸೂಕ್ರ ಕ್ರಮ ತೆಗೆದುಕೊಳ್ಳುವುದು.

ಇದನ್ನೂ ಓದಿ: ಕಾಡ್ಗಿಚ್ಚು ಪತ್ತೆಗೆ ದೂರಸಂವೇದಿ ತಂತ್ರಜ್ಞಾನ ಬಳಸಿ: ಸಚಿವ ಈಶ್ವರ ಖಂಡ್ರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.