ETV Bharat / state

ಧರ್ಮಸ್ಥಳಕ್ಕೆ ಸಿಎಂ, ಡಿಸಿಎಂ ಭೇಟಿ: ಸಾಂಪ್ರದಾಯಿಕ ಉಡುಗೆಯೊಂದಿಗೆ ದೇವರ ದರ್ಶನ - CM DCM Visited Dharmasthala

author img

By ETV Bharat Karnataka Team

Published : May 25, 2024, 5:07 PM IST

ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿ.ಕೆ ಶಿವಕುಮಾರ್​ ಅವರೊಂದಿಗೆ ಧರ್ಮಸ್ಥಳಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಧರ್ಮಸ್ಥಳಕ್ಕೆ ಸಿಎಂ, ಡಿಸಿಎಂ ಭೇಟಿ
ಧರ್ಮಸ್ಥಳಕ್ಕೆ ಸಿಎಂ, ಡಿಸಿಎಂ ಭೇಟಿ (ETV Bharat)

ಧರ್ಮಸ್ಥಳಕ್ಕೆ ಸಿಎಂ, ಡಿಸಿಎಂ ಭೇಟಿ (ETV Bharat)

ಮಂಗಳೂರು: ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್​ ಇಂದು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ದೇವಸ್ಥಾನಕ್ಕೆ ಸಾಂಪ್ರದಾಯಿಕ ಉಡುಗೆಗಳಾದ ಶೆಲ್ಲೆ ಮತ್ತು ಪಂಚೆಯನ್ನು ತೊಟ್ಟು ತೆರಳಿದ ಕೈನಾಯಕರು ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಬೆಂಗಳೂರಿನಿಂದ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ಬಳಿಕ ರಸ್ತೆ ಮಾರ್ಗವಾಗಿ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿದರು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ರೆಡ್ ಕಾರ್ಪೆಟ್ ಹಾಕಿ, ವಾದ್ಯಘೋಷ, ಆನೆ, ಪದಾತಿ ಸಮ್ಮೇಳನದೊಂದಿಗೆ ವೈಭವದೊಂದಿಗೆ ದೇವಾಲಯದೊಳಗೆ ಸ್ವಾಗತಿಸಲಾಯಿತು. ಬಳಿಕ ದೇವರ ದರ್ಶನ ಪಡೆದರು. ನಂತರ ಧರ್ಮಸ್ಥಳದ ಧರ್ಮಾಧಿಕಾರಿಯಾದ ಡಾ.ವಿರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಕುಶಲೋಪರಿ ವಿಚಾರಿಸಿದರು.

ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ‘ರಾಜ್ಯದಲ್ಲಿ ಉತ್ತಮ ಮಳೆ - ಬೆಳೆ ಆಗಲೆಂದು ಪ್ರಾರ್ಥನೆ ಮಾಡಿದ್ದೇವೆ. ನಮ್ಮ ಧರ್ಮದ ಸಂಪ್ರದಾಯದಂತೆ ಧರ್ಮಸ್ಥಳದ ಮಂಜುನಾಥ ಸ್ವಾಮಿಗೆ ನಮಸ್ಕಾರ ಹೇಳಲು ಬಂದಿದ್ದೇವೆ. ರಾಜ್ಯದ ಜನತೆ ಪರವಾಗಿ ಹಾಗೂ ವೈಯಕ್ತಿಕ ಪ್ರಾರ್ಥನೆ ಮಾಡಿದ್ದೇನೆ. ರಾಜ್ಯದ ನಾನಾ ಕಡೆಗಳಿಂದ ಶಕ್ತಿ ಯೋಜನೆ ಪ್ರಯೋಜನ ಪಡೆದು ಧರ್ಮಸ್ಥಳಕ್ಕೆ ಭಕ್ತರು ಬರುತ್ತಿದ್ದಾರೆಂದು ವೀರೇಂದ್ರ ಹೆಗ್ಗಡೆಯವರು ಹೇಳಿದ್ದಾರೆ. ದೇವಸ್ಥಾನದೊಳಗೆ ಇದ್ದ ಮಹಿಳಾ ಭಕ್ತರು ತಮಗೆ ಎರಡು ಸಾವಿರ ಸಿಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಅವರೆಲ್ಲರ ಆಶೀರ್ವಾದ ನಮಗೆ ಶಕ್ತಿ ತುಂಬಿದೆ ಎಂದರು.

ಭಕ್ತರ ಆಕ್ರೋಶ: ಸಿಎಂ, ಡಿಸಿಎಂ ದೇವಸ್ಥಾನಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಭದ್ರತಾ ದೃಷ್ಟಿಯಿಂದ ಕೆಲ ಸಮಯ ಭಕ್ತರ ದರ್ಶನಕ್ಕೆ ಬ್ರೇಕ್​ ಹಾಕಲಾಗಿತ್ತು. ಇದರಿಂದ ದೇವರ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತರು ಅಸಹನೆ ವ್ಯಕ್ತಪಡಿಸಿರುವ ಘಟನೆಯೂ ನಡೆದಿದೆ. ಅವಧಿಗೂ ದೇವರ ದರ್ಶನ ಬಂದ್ ಮಾಡಲಾಗಿತ್ತು. ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸಾಲುಗಟ್ಟಿ ನಿಂತಿರುವ ದೃಶ್ಯಗಳ ಕಂಡು ಬಂದವು.

ಬೆಳಗ್ಗೆ 10 ಗಂಟೆಯಿಂದ ಸರತಿ ಸಾಲಿನಲ್ಲಿ ನಿಂತಿದ್ದೇವೆ. ಆದರೆ, ದೇವರ ದರ್ಶನಕ್ಕೆ ಅವಕಾಶ ನೀಡುತ್ತಿಲ್ಲ. ಮಧ್ಯಾಹ್ನ 2.30 ಗಂಟೆಯಾದರೂ ಊಟವನ್ನೂ ಮಾಡಿಲ್ಲ. ಮಕ್ಕಳು - ಮರಿಗಳು ಜೊತೆಗಿದ್ದಾರೆ. ಅವರು ಹಸಿವಿನಿಂದ ಬಳಲುತ್ತಿದ್ದಾರೆ. ಬಹಿರ್ದೆಸೆಗೂ ಹೋಗಲಾಗುತ್ತಿಲ್ಲ. ಹೀಗಾದರೆ ಹೇಗೆ ಎಂದು ಭಕ್ತರು ಅಸಹನೆ ವ್ಯಕ್ತಪಡಿಸಿ ಆಕ್ರೋಶ ಹೊರಹಾಕಿದ್ದಾರೆ.

ಮೋದಿ ಪರ ಘೋಷಣೆ: ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತರು ಸಿಎಂ, ಡಿಸಿಎಂ ದೇವಸ್ಥಾನ ಪ್ರವೇಶಿಸುತ್ತಿದ್ದಂತೆ ಜೈಶ್ರೀರಾಂ, ಮೋದಿ ಪರ ಘೋಷಣೆ ಕೂಗಿದರು. ಅಲ್ಲದೇ ಅಬ್​​ ಕಿ ಬಾರ್ ಮೋದಿ ಸರ್ಕಾರ್ ಎಂದು ಘೋಷಣೆಗಳು ಹಾಕಿದ ಘಟನೆಯೂ ನಡೆಯಿತು.

ಇದನ್ನೂ ಓದಿ: ಲೋಕಸಭಾ ಚುನಾವಣೆ ಫಲಿತಾಂಶಕ್ಕೆ ದಿನಗಣನೆ ಶುರು, ರಾಯರ ಸನ್ನಿಧಿಗೆ ಭೇಟಿ ನೀಡಿದ ಅಣ್ಣಾಮಲೈ ದಂಪತಿ - Raghavendra Swamy Temple

ETV Bharat Logo

Copyright © 2024 Ushodaya Enterprises Pvt. Ltd., All Rights Reserved.