ETV Bharat / state

ಟಿಕೆಟ್ ರೇಸ್​ನಲ್ಲಿ ಗೆದ್ದ ಮಾಜಿ ಶಾಸಕ: ಚಾಮರಾಜನಗರ ಬಿಜೆಪಿ ಅಭ್ಯರ್ಥಿ ಬಾಲರಾಜು ವಿವರ

author img

By ETV Bharat Karnataka Team

Published : Mar 14, 2024, 11:05 AM IST

ರಾಜ್ಯದಲ್ಲೂ ಲೋಕಸಭೆ ಚುನಾವಣೆಗೆ ಬಿಜೆಪಿ- ಕಾಂಗ್ರೆಸ್​ ಭರ್ಜರಿ ತಯಾರಿ ನಡೆಸಿವೆ. ಈಗಾಗಲೇ ಬಹುತೇಕ ಅಭ್ಯರ್ಥಿಗಳ ಪಟ್ಟಿ ರಿಲೀಸ್​ ಆಗಿದ್ದು, ಕೆಲ ಕ್ಷೇತ್ರಗಳಲ್ಲಿ ಹುರಿಯಾಳುಗಳ ಘೋಷಣೆ ಬಾಕಿ ಇದೆ. ಈ ಮಧ್ಯೆ ಚಾಮರಾಜನಗರ ಕ್ಷೇತ್ರದಲ್ಲಿ ಟಿಕೆಟ್​ ಪಡೆದಿರುವ ಬಿಜೆಪಿ ಅಭ್ಯರ್ಥಿ ಬಾಲರಾಜು ಅವರ ಮಾಹಿತಿ ಇಲ್ಲಿದೆ.

bjp candidate balaraju
ಬಿಜೆಪಿ ಅಭ್ಯರ್ಥಿ ಬಾಲರಾಜು

ಚಾಮರಾಜನಗರ: ಲೋಕಸಭಾ ಚುನಾವಣೆಯಲ್ಲಿ ಪ್ರಬಲ ಟಿಕೆಟ್ ಆಕಾಂಕ್ಷಿಗಳಾಗಿದ್ದ ಸಂಸದ ಶ್ರೀನಿವಾಸ ಪ್ರಸಾದ್ ಅಳಿಯಂದಿರುಗಳಿಗೆ ಟಿಕೆಟ್ ಕೈ ತಪ್ಪಿದ್ದು, ಮಾಜಿ ಶಾಸಕ ಬಾಲರಾಜು ಕಮಲಪಡೆಯ ಹುರಿಯಾಳಾಗಿದ್ದಾರೆ.

2004ರಲ್ಲಿ ಕೊಳ್ಳೇಗಾಲ ಕ್ಷೇತ್ರದಲ್ಲಿ ಪಕ್ಷೇತರರಾಗಿ ಸ್ಪರ್ಧೆ ಮಾಡಿ ಶಾಸಕರಾಗಿದ್ದ ಬಾಲರಾಜು ಬಳಿಕ ನಡೆದ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದರೂ ಅದೃಷ್ಟ ಕೈ ಹಿಡಿದಿರಲಿಲ್ಲ. 2023ರ ಚುನಾವಣೆ ಸಂದರ್ಭ ಕಾಂಗ್ರೆಸ್​ನಿಂದ ಬಿಜೆಪಿಗೆ ಬಂದ ಬಾಲರಾಜು ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿ ಗುರುತಿಸಿಕೊಂಡು ಕ್ಷೇತ್ರದಲ್ಲಿ ಓಡಾಟ ನಡೆಸಿದ್ದರು. ಮಾಜಿ ಸಿಎಂ ಬಿ ಎಸ್​ ಯಡಿಯೂರಪ್ಪ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಬಾಲರಾಜು ಬಿಜೆಪಿ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲ ಬಾರಿಗೆ ಲೋಕಸಭಾ ಅಖಾಡಕ್ಕೆ ಇಳಿಯಲಿದ್ದಾರೆ. ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಚಾಮರಾಜನಗರದಲ್ಲಿ ಮೊದಲ ಬಾರಿಗೆ ಶ್ರೀನಿವಾಸ್​ ಪ್ರಸಾದ್ ಕಮಲ ಅರಳಿಸಿದ್ದರು.

bjp candidate balaraju
ಬಿಜೆಪಿ ಅಭ್ಯರ್ಥಿ ಬಾಲರಾಜು

ಟಿಕೆಟ್ ಆಕಾಂಕ್ಷಿಗಳು ಯಾರ್ಯಾರಿದ್ದರು? ಬಿಜೆಪಿಯಿಂದ ಟಿಕೆಟ್ ಪಡೆಯಲು ಆಕಾಂಕ್ಷಿಗಳ ಸರತಿ ಸಾಲು ನಿರ್ಮಾಣವಾಗಿತ್ತು. ಎಸ್.ಬಾಲರಾಜು, ಪ್ರಸಾದ್ ಅಳಿಯಂದಿರಾದ ಡಾ. ಮೋಹನ್, ಹರ್ಷವರ್ಧನ್, ಎಸ್. ಮಹಾದೇವಯ್ಯ, ವೆಂಕಟರಮಣಸ್ವಾಮಿ ಪಾಪು ಆಕಾಂಕ್ಷಿಗಳಾಗಿ ಗುರುತಿಸಿಕೊಂಡಿದ್ದರು.

ಬಾಲರಾಜು ವಿವರ: ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆದಿರುವ ಬಾಲರಾಜು 1991ರಲ್ಲಿ ಮುತ್ಸದ್ಧಿ ರಾಜಕಾರಣಿ ಎಂ. ರಾಜಶೇಖರಮೂರ್ತಿ ಅವರ ಗರಡಿಯಿಂದ ಬಂದ ರಾಜಕಾರಣಿಯಾಗಿದ್ದಾರೆ. ರಾಜಶೇಖರಮೂರ್ತಿ ಶಿಷ್ಯನಾಗಿ ಕಾಂಗ್ರೆಸ್ ಮೂಲಕ ರಾಜಕೀಯಕ್ಕೆ ಬಂದು ವಿವಿಧ ಘಟಕಗಳಲ್ಲಿ ಸೇವೆ ಸಲ್ಲಿಸಿದ್ದರು. ಅದಾದ ಬಳಿಕ, 1993ರಲ್ಲಿ ಟಿಎಪಿಎಂಎಸ್ ನಿರ್ದೇಶಕರಾಗಿ ಆಯ್ಕೆಯಾಗಿ, 1997ರಲ್ಲಿ ಯುವ ಕಾಂಗ್ರೆಸ್ ಚಾಮರಾಜನಗರ ವಿಭಾಗದ ಅಧ್ಯಕ್ಷರಾದರು. 1999ರಲ್ಲಿ ರಾಜಶೇಖರಮೂರ್ತಿ ಅವರೊಟ್ಟಿಗೆ ಬಿಜೆಪಿಗೆ ಸೇರ್ಪಡೆಗೊಂಡು ಕೊಳ್ಳೇಗಾಲ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ 5,421 ಮತಗಳಿಂದ ಸೋಲು ಕಂಡರು.

ಇದನ್ನೂ ಓದಿ: ಮಹಿಳಾ ಪಿಎಸ್ಐಗೆ ಪ್ರೀತಿಸುವಂತೆ ಬ್ಲ್ಯಾಕ್ ಮೇಲ್‌ ಆರೋಪ; ಬೆಂಗಳೂರಲ್ಲಿ ಸಹಪಾಠಿ ಪಿಎಸ್ಐ ಅರೆಸ್ಟ್

ಅದೇ ವರ್ಷ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ-ಜೆಡಿಯು ಹೊಂದಾಣಿಕೆ ನಡುವೆ ಟಿಕೆಟ್ ಕೈ ತಪ್ಪಿದ್ದರಿಂದ 2004ರಲ್ಲಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಿಂತು ಮೊದಲ ಬಾರಿಗೆ ಶಾಸಕರಾದರು.

ಇದನ್ನೂ ಓದಿ: ಲೋಕ ಸಮರ: ಬಿಜೆಪಿ ಅಭ್ಯರ್ಥಿಗಳಿಗೆ ಆರ್​. ಅಶೋಕ್​ ಅಭಿನಂದನೆ; ಪ್ರಧಾನಿಗೆ ಧನ್ಯವಾದ ಅರ್ಪಿಸಿದ ತೇಜಸ್ವಿ ಸೂರ್ಯ

2013ರಲ್ಲಿ ಯಡಿಯೂರಪ್ಪ ಅವರನ್ನು ಹಿಂಬಾಲಿಸಿ ಕೆಜೆಪಿ ಸೇರಿದ ಬಾಲರಾಜು ಮತ್ತೆ ಚುನಾವಣೆಗೆ ನಿಂತು ಮೂರನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. 2013ರಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡು ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. 2023ರ ಚುನಾವಣೆಯಲ್ಲಿ ಕಾಂಗ್ರೆಸ್​​​ನಿಂದ ಹೊರಬಂದು ಬಿಜೆಪಿ ಸೇರ್ಪಡೆಗೊಂಡು ಎನ್.ಮಹೇಶ್ ಪರ ಪ್ರಚಾರ ನಡೆಸಿದ್ದರು. ವಿಧಾನಸಭಾ ಚುನಾವಣೆಯಾದ ಬಳಿಕ ಲೋಕಸಭಾ ಟಿಕೆಟ್​ನ ಪ್ರಬಲ ಆಕಾಂಕ್ಷಿಯಾಗಿ ಗುರುತಿಸಿಕೊಂಡಿದ್ದ ಬಾಲರಾಜು ಅವರಿಗೆ ಹೈಕಮಾಂಡ್ ಒಲವು ತೋರಿ ಟಿಕೆಟ್ ಕೊಟ್ಟಿದೆ. ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಮೋದಿ ಅಲೆ-ಸಿದ್ದು ಹವಾ ಎರಡೂ ಇದ್ದು, ಮತದಾರರು ಯಾರಿಗೆ ಮಣೆ ಹಾಕುತ್ತಾರೆಂಬುದನ್ನು ಕಾದು ನೋಡಬೇಕಿದೆ‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.