ETV Bharat / state

ನಗರ್ತಪೇಟೆ ಪ್ರತಿಭಟನೆ: ಪಿ.ಸಿ.ಮೋಹನ್, ಶೋಭಾ ಕರಂದ್ಲಾಜೆ, ತೇಜಸ್ವಿ ಸೂರ್ಯ ಸೇರಿ 43 ಜನರ ವಿರುದ್ಧ ಪ್ರಕರಣ - CASE AGAINST BJP LEADERS

author img

By ETV Bharat Karnataka Team

Published : Mar 21, 2024, 5:46 PM IST

ನಗರ್ತಪೇಟೆಯಲ್ಲಿ ಪ್ರತಿಭಟನೆ ನಡೆಸಿದ ಮೂವರು ಸಂಸದರು, ಓರ್ವ ಶಾಸಕ ಸೇರಿದಂತೆ 43 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

43 ಜನರ ವಿರುದ್ಧ ಪ್ರಕರಣ ದಾಖಲು
43 ಜನರ ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಮೊಬೈಲ್ ಬಿಡಿ ಭಾಗಗಳ‌ ಮಾರಾಟಗಾರನ ಮೇಲೆ ಹಲ್ಲೆ ಖಂಡಿಸಿ ನಗರ್ತಪೇಟೆಯಲ್ಲಿ ಪ್ರತಿಭಟನೆ ನಡೆಸಿದ್ದ ಆರೋಪ ಸಂಬಂಧ ಮೂವರು ಸಂಸದರು, ಓರ್ವ ಶಾಸಕ ಸೇರಿದಂತೆ 43 ಮಂದಿ ವಿರುದ್ಧ ಹಲಸೂರು ಗೇಟ್​ಠಾಣೆ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಚುನಾವಣಾ ಅಧಿಕಾರಿಗಳ ಸೂಚನೆ ಮೇರೆಗೆ ಇನ್​ಸ್ಪೆಕ್ಟರ್ ಹನುಮಂತ ಕೆ.ಭಜಂತ್ರಿ ಅವರು ಸಂಸದರಾದ ಪಿ.ಸಿ.ಮೋಹನ್, ಶೋಭಾ ಕರಂದ್ಲಾಜೆ, ತೇಜಸ್ವಿ ಸೂರ್ಯ, ರಾಜ್ಯಸಭಾ ಸದಸ್ಯ, ಶಾಸಕ ಸಿ.ಕೆ.ರಾಮಮೂರ್ತಿ, ವಿಧಾನಪರಿಷತ್ ಸದಸ್ಯ ಸಪ್ತಗಿರಿಗೌಡ ಸೇರಿದಂತೆ 43 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಾರ್ವಜನಿಕವಾಗಿ ಜಮಾವಣೆಗೊಂಡು ಪ್ರತಿಭಟನೆ ಬಿಜೆಪಿ ನಡೆಸಿತ್ತು.

ನಗರ್ತಪೇಟೆಯ ಸಿದ್ದಣ್ಣಗಲ್ಲಿಯಲ್ಲಿ ಮೊಬೈಲ್ ಬಿಡಿ ಭಾಗಗಳ ಮಾರಾಟ ಅಂಗಡಿ ಇಟ್ಟುಕೊಂಡಿದ್ದ ಮುಕೇಶ್ ತನ್ನ ಅಂಗಡಿಯಲ್ಲಿ ಭಕ್ತಿಗೀತೆ ಸೌಂಡ್ ಕಡಿಮೆ‌‌ ಮಾಡದ್ದಕ್ಕೆ ಅನ್ಯಕೋಮಿನವರು ಅಕ್ರೋಶಗೊಂಡು ಹಲ್ಲೆ‌ ನಡೆಸಿದ್ದರು.‌ ಬಳಿಕ ಮುಕೇಶ್ ನೀಡಿದ ದೂರಿನ ಮೇರೆಗೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಹಲ್ಲೆ ಖಂಡಿಸಿ ಬಿಜೆಪಿ ನಿಯೋಗ ಅನುಮತಿ ಪಡೆದುಕೊಳ್ಳದೆ ಸಿದ್ದಣ್ಣಗಲ್ಲಿಯಲ್ಲಿ ಸಾವಿರಾರು ಜನರನ್ನ ಜಮಾಯಿಸಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ್ದರು. ಈ ವೇಳೆ‌ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ಉಂಟಾಗಿತ್ತು. ಇದೇ ವೇಳೆ ಪಿ.ಸಿ.ಮೋಹನ್, ಶೋಭಾ ಕರಂದ್ಲಾಜೆ ಹಾಗೂ ತೇಜಸ್ವಿ ಸೂರ್ಯ ಸೇರಿದಂತೆ ಇನ್ನಿತರರನ್ನು ವಶಕ್ಕೆ ಪಡೆದುಕೊಂಡು ಬಿಡುಗಡೆಗೊಳಿಸಲಾಗಿತ್ತು. ಸದ್ಯ ಸುಮೊಟೊ‌ ಪ್ರಕರಣ ದಾಖಲಿಸಿಕೊಂಡು 43 ಮಂದಿ ವಿರುದ್ಧ ಎಫ್ಐಅರ್ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕರಂದ್ಲಾಜೆ ವಿರುದ್ಧ ನಗರದಲ್ಲೇ ಎರಡು ಎಫ್ಐಆರ್ ದಾಖಲು: ತಮಿಳರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ಆರೋಪದಡಿ ತಮಿಳುನಾಡಿನಲ್ಲಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಪ್ರಕರಣ ದಾಖಲಾದ ಬೆನ್ನಲ್ಲೇ ನಗರದ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿಯೂ ಎಫ್ಐಆರ್ ದಾಖಲಾಗಿತ್ತು.‌ ಇದೀಗ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಶೋಭಾ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ. ಬೆಂಗಳೂರಿನಲ್ಲಿ ಎರಡು ಹಾಗೂ ತಮಿಳುನಾಡಿನಲ್ಲಿ ಒಂದು ಸೇರಿ ಪ್ರತ್ಯೇಕ ಒಟ್ಟು ಮೂರು ಪ್ರಕರಣಗಳು ದಾಖಲಾಗಿವೆ.

ರಾಜ್ಯ ಚುನಾವಣಾ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಶೋಭಾ ಕರಂದ್ಲಾಜೆ ವಿರುದ್ಧ ಪ್ರಕರಣ ದಾಖಲಾಗಿತ್ತು. ಕಳೆದ ಎರಡು ದಿನಗಳ ಹಿಂದೆ ನಗರ್ತಪೇಟೆಯಲ್ಲಿ ನಡೆಸಿದ ಪ್ರತಿಭಟನೆ ವೇಳೆ ತಮಿಳುನಾಡಿನಿಂದ ನಗರಕ್ಕೆ ಬಂದು ಬಾಂಬ್ ಬ್ಲಾಸ್ಟ್ ಮಾಡ್ತಾರೆ ಎಂದು ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದರು. ಸಂಸದೆ ಹೇಳಿಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ ತಮಿಳುನಾಡು ಸಿಎಂ ಸ್ಟಾಲಿನ್ ಅವರು ಈ ಹೇಳಿಕೆಯನ್ನು ಖಂಡಿಸಿದ್ದರು. ವಿರೋಧ ವ್ಯಕ್ತವಾಗುತ್ತಿದ್ದಂತೆ ಶೋಭಾ ಕರಂದ್ಲಾಜೆ ಅವರು ತಮ್ಮ ಹೇಳಿಕೆ ಹಿಂಪಡೆದು ಕ್ಷಮೆಯಾಚಿಸಿದ್ದರು. ಸದ್ಯ ಚುನಾವಣಾ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಕರಂದ್ಲಾಜೆ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಶೋಭಾ ಕರಂದ್ಲಾಜೆ ವಿರುದ್ಧ ಬೆಂಗಳೂರಲ್ಲೂ ಎಫ್ಐಆರ್ - FIR AGAINST SHOBHA KARANDLAJE

ETV Bharat Logo

Copyright © 2024 Ushodaya Enterprises Pvt. Ltd., All Rights Reserved.