ETV Bharat / state

ಒಂದು ಜಿಲ್ಲೆ ಒಂದು ಉತ್ಪನ್ನ ಉತ್ತೇಜಿಸಲು 'ಯುನಿಟಿ ಮಾಲ್' ನಿರ್ಮಾಣಕ್ಕೆ ರಾಜ್ಯ ಸಂಪುಟ ಅಸ್ತು

author img

By ETV Bharat Karnataka Team

Published : Feb 9, 2024, 1:10 PM IST

ಯುನಿಟಿ ಮಾಲ್ ನಿರ್ಮಾಣ, ಕರ್ನಾಟಕ ಆಡಳಿತ ಸೇವೆಗಳು ನೇಮಕಾತಿ ತಿದ್ದುಪಡಿ ನಿಯಮಗಳು 2024ಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ.

Cabinet meet
ರಾಜ್ಯ ಸಚಿವ ಸಂಪುಟ ಸಭೆ

ಬೆಂಗಳೂರು: ಕೇಂದ್ರ ಸರ್ಕಾರವು ನೀಡುವ 193 ಕೋಟಿ ರೂಪಾಯಿಗಳ ಬಡ್ಡಿರಹಿತ ಸಾಲದ ನೆರವಿನಿಂದ ಒಂದು ಜಿಲ್ಲೆ ಒಂದು ಉತ್ಪನ್ನ, ಜಿಐ ಉತ್ಪನ್ನಗಳು ಹಾಗೂ ಇತರ ಕರಕುಶಲ ಉತ್ಪನ್ನಗಳನ್ನು ಉತ್ತೇಜಿಸಲು ರಾಜ್ಯದಲ್ಲಿ 'ಯುನಿಟಿ ಮಾಲ್' ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಮೈಸೂರಿನ ವಸ್ತು ಪ್ರದರ್ಶನ ಪ್ರಾಧಿಕಾರ ವ್ಯಾಪ್ತಿಯಲ್ಲಿ 6.5 ಎಕರೆ ಜಾಗದಲ್ಲಿ ಈ ಯುನಿಟಿ ಮಾಲ್ ನಿರ್ಮಾಣ ಮಾಡಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ.

ವಿಧಾನಸೌಧದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ಮಾಹಿತಿ ನೀಡಿದರು. ಕೆಎಎಸ್ (ಸೂಪರ್ ಟೈಮ್ ಸ್ಕೇಲ್) ಮತ್ತು ಕೆಎಎಸ್ (ಆಯ್ಕೆ ಶ್ರೇಣಿ) ಮುಂಬಡ್ತಿಗೆ ನಿಗದಿಪಡಿಸಿರುವ ಕನಿಷ್ಠ ಅರ್ಹತಾದಾಯಕ ಸೇವೆಯನ್ನು ಕಡಿಮೆಗೊಳಿಸುವ ಸಂಬಂಧ ಕರ್ನಾಟಕ ಆಡಳಿತ ಸೇವೆಗಳು ನೇಮಕಾತಿ ತಿದ್ದುಪಡಿ ನಿಯಮಗಳು 2024ಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಶೇ.45 ರಷ್ಟು ಹುದ್ದೆಗಳು ಇನ್ನೂ ಖಾಲಿ ಇವೆ. ಅದನ್ನು ಭರ್ತಿ ಮಾಡಲು ಕ್ಯಾಬಿನೆಟ್​​ನಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಹೇಳಿದರು.

ಕರ್ನಾಟಕ ಕುಲಾಂತರಿ ಮತ್ತು ತಳಿ ವಿಜ್ಞಾನದ ಪ್ರಕಾರ ಮಾರ್ಪಾಟಾದ ಹತ್ತಿ ಬೀಜಗಳ ಮಾರಾಟ ಬೆಲೆಯ ನಿಗದಿ ಮತ್ತು ಪರಿಹಾರದ ಸಂದಾಯ ವಿಧೇಯಕ 2015ವನ್ನು ಇಂದಿನ ಕ್ಯಾಬಿನೆಟ್​​ನಲ್ಲಿ ಹಿಂಪಡೆಯಲಾಗಿದೆ. ಕೇಂದ್ರ ಕೂಡ ಇದೇ ಮಾದರಿಯ ವಿಧೇಯಕ ಮಂಡನೆ ಮಾಡಲು ತಯಾರಿ ನಡೆಸಿದೆ. ಹೀಗಾಗಿ ಕೇಂದ್ರದ ಕೋರಿಕೆ ಮೇರೆಗೆ 2015 ರ ವಿಧೇಯಕ ವಾಪಸ್ ಪಡೆಯಲು ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು.

ಕರ್ನಾಟಕ ಸಹಕಾರ ಸಂಘಗಳ ತಿದ್ದುಪಡಿ ವಿಧೇಯಕ 2024 ಕ್ಕೆ ಅನುಮೋದನೆ ನೀಡಲಾಗಿದೆ. ಈ ತಿದ್ದುಪಡಿಯಲ್ಲಿ ಸಹಕಾರ ಸಂಘಗಳ ಚುನಾವಣೆ ಹಾಗೂ ನಾಮನಿರ್ದೇಶನಗಳಲ್ಲಿ ಮೀಸಲಾತಿ ನೀಡಲು ವಿಧೇಯಕಕ್ಕೆ ತಿದ್ದುಪಡಿ ತರಲು ತೀರ್ಮಾನ ಮಾಡಲಾಗಿದೆ. ಕರ್ನಾಟಕ ಸೌಹಾರ್ದ ಸಹಕಾರಿ ತಿದ್ದುಪಡಿ ವಿಧೇಯಕ 2024ಕ್ಕೆ ಅನುಮೋದನೆ ನೀಡಲಾಗಿದೆ ಎಂದು ಹೇಳಿದರು.

ಇತರ ಸಚಿವ ಸಂಪುಟದ ಹೈಲೈಟ್ಸ್​​:

  • ಬೀದರ್ ಜಿಲ್ಲೆ ಬಸವಕಲ್ಯಾಣ ನಗರದಲ್ಲಿ ನೂತನ 4 ಕೋರ್ಟ್ ಹಾಲ್​​ಗಳ ನ್ಯಾಯಾಲಯ ಸಂಕೀರ್ಣವನ್ನ 17.50 ಕೋಟಿ ರೂಪಾಯಿಗಳ ಅಂದಾಜು ಮೊತ್ತದಲ್ಲಿ ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ
  • ವಿಶೇಷ ವಿವಾಹ ಕರ್ನಾಟಕ ತಿದ್ದುಪಡಿ ನಿಯಮಗಳು 2024ಕ್ಕೆ ಅನುಮೋದನೆ. ಈ-ಮೇಲ್ ಮೂಲಕವೂ ಕೂಡ ವಿವಾಹ ನೊಂದಣಿ ಮಾಡಿಕೊಳ್ಳಬಹುದು
  • ರಾಮನಗರ ತಾಲೂಕು ಬಿಡದಿ ಹೋಬಳಿಯ ಬಿಡದಿಯಲ್ಲಿ ಮಹಿಳೆಯರಿಗಾಗಿ ಪ್ರಾದೇಶಿಕ ವಾಹನ ಚಾಲನ ತರಬೇತಿ ಕೇಂದ್ರವನ್ನ ಅವೇಕ್ ಸಂಸ್ಥೆ- ರಾಜಾಜಿನಗರ ಬೆಂಗಳೂರು ಮತ್ತು ಸಾರಿಗೆ ಇಲಾಖೆಯ ಜಂಟಿ ಸಹಭಾಗಿತ್ವದಲ್ಲಿ 10.5 ಕೋಟಿ ಅಂದಾಜು ಮೊತ್ತದಲ್ಲಿ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ
  • ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ ಅಮರಗೋಳ ಗ್ರಾಮದ ಬ್ಲಾಕ್ ನಂಬರ್ 89 ಭಾಗ ಸಂಖ್ಯೆ 32 ರಲ್ಲಿ 39 ಗುಂಟೆ ಜಮೀನನ್ನು ಆಡಳಿತ ಕಚೇರಿ, ವಿದ್ಯಾರ್ಥಿ ನಿಲಯ, ಆಟದ ಮೈದಾನಕ್ಕಾಗಿ ಕರ್ನಾಟಕ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿ ಇವರಿಗೆ 30 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೀಡಲು ಅನುಮೋದನೆ
  • 2023 24ನೇ ಸಾಲಿಗೆ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಮೇಲ್ವಿಚಾರಕಿಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ 75,938 ಸ್ಮಾರ್ಟ್ ಫೋನ್​​ಗಳನ್ನು 89.61 ಕೋಟಿಗಳ ವೆಚ್ಚದಲ್ಲಿ ಖರೀದಿಸಿ ಒದಗಿಸಲು ಆಡಳಿತಾತ್ಮಕ ಅನುಮೋದನೆ
  • ಜಲ್ ಜೀವನ್ ಮಿಷನ್ ಯೋಜನೆಯಡಿ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ದಡ್ಡಿ ಹಾಗೂ ಇತರ 81 ಗ್ರಾಮಗಳಿಗೆ ಮತ್ತು ಬೆಳಗಾವಿ ತಾಲೂಕಿನ ಒಂದು ಗ್ರಾಮಕ್ಕೆ 285 ಕೋಟಿ ರೂಪಾಯಿಗಳ ಅಂದಾಜು ಮೊತ್ತದಲ್ಲಿ ಬಹು ಗ್ರಾಮ ಕುಡಿಯುವ ನೀರು ಯೋಜನೆಯನ್ನು DBOT ಆಧಾರದ ಮೇಲೆ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ
  • ಜಲ್ ಜೀವನ್ ಮಿಷನ್ ಯೋಜನೆಯಡಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಪಚ್ಚಾಪುರ ಹಾಗೂ ಇತರೆ 18 ಗ್ರಾಮಗಳಿಗೆ ಹಾಗೂ ಗೋಕಾಕ ತಾಲೂಕಿನ ಕುಂದರಗಿ ಹಾಗೂ ಇತರೆ 21 ಗ್ರಾಮಗಳಿಗೆ 92 ಕೋಟಿ ಅಂದಾಜು ಮೊತ್ತದಲ್ಲಿ ಬಹು ಗ್ರಾಮ ಕುಡಿಯುವ ನೀರು ಯೋಜನೆಯನ್ನು DBOT ಆಧಾರದ ಮೇಲೆ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ
  • 2023- 24ನೇ ಸಾಲಿನ ಎಸ್ ಸಿ ಪಿ ಎಸ್ ಪಿ ಕ್ರಿಯಾಯೋಜನೆಯ ಅಡಿ ಸರ್ಕಾರಿ ಅನುದಾನಿತ ಮತ್ತು ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಸ್ಸಿ ಎಸ್ಟಿ ವಿದ್ಯಾರ್ಥಿಗಳಿಗೆ 45.28 ಕೋಟಿಗಳ ವೆಚ್ಚದಲ್ಲಿ ಟೂಲ್ ಕಿಟ್ ಗಳನ್ನು ಖರೀದಿಸಿ ವಿತರಿಸಲು ಕ್ಯಾಬಿನೆಟ್ ಅನುಮೋದನೆ. ಇದರಿಂದ ಸುಮಾರು 34,178 ವಿದ್ಯಾರ್ಥಿಗಳಿಗೆ ಟೂಲ್ ಕಿಟ್ ಗಳನ್ನ ಉಚಿತವಾಗಿ ವಿತರಿಸಲು ಅನುಮೋದನೆ ನೀಡಲಾಗಿದೆ.

ಇದನ್ನೂ ಓದಿ: ರಾಜ್ಯದ ಮೇಲೆ ಕೇಂದ್ರ ಗಧಾ ಪ್ರಹಾರ ನೀತಿ ಅನುಸರಿಸುತ್ತಿದೆ : ಸಚಿವ ಹೆಚ್.ಕೆ‌‌‌. ಪಾಟೀಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.