ETV Bharat / state

ರಾಜೀನಾಮೆ ಪತ್ರ ಹಿಡಿದು ಸಭಾಪತಿ ಮುಂದೆ ಕುಳಿತಿದ್ದ ಇಬ್ಬರು ಎಂಎಲ್​ಸಿಗಳ ಮನವೊಲಿಸಿದ ಬೈರತಿ ಸುರೇಶ್ - KOLAR TICKET ISSUE

author img

By ETV Bharat Karnataka Team

Published : Mar 27, 2024, 3:26 PM IST

Updated : Mar 27, 2024, 5:08 PM IST

ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್​ ಟಿಕೆಟ್​ ನೀಡಿಕೆ ವಿಚಾರವಾಗಿ ರಾಜೀನಾಮೆಗೆ ಮುಂದಾಗಿದ್ದ ನಜೀರ್ ಅಹ್ಮದ್ ಹಾಗೂ ಅನಿಲ್ ಅವರ ಮನವೊಲಿಸುವಲ್ಲಿ ಸಚಿವ ಬೈರತಿ ಸುರೇಶ್ ಯಶಸ್ವಿಯಾಗಿದ್ದಾರೆ.

byrathi-suresh-persuaded-the-two-mlcs-who-were-ready-to-give-resign
ರಾಜೀನಾಮೆ ಪತ್ರ ಹಿಡಿದು ಸಭಾಪತಿ ಮುಂದೆ ಕುಳಿತಿದ್ದ ಇಬ್ಬರು ಎಂಎಲ್​ಸಿಗಳ ಮನವೊಲಿಸಿದ ಬೈರತಿ ಸುರೇಶ್

ಇಬ್ಬರು ಎಂಎಲ್​ಸಿಗಳ ಮನವೊಲಿಸಿದ ಬೈರತಿ ಸುರೇಶ್

ಬೆಂಗಳೂರು: ಕೋಲಾರ ಟಿಕೆಟ್ ವಿಚಾರದಲ್ಲಿ ರಾಜೀನಾಮೆಗೆ ಮುಂದಾಗಿದ್ದ ಇಬ್ಬರು ವಿಧಾನ ಪರಿಷತ್ ಸದಸ್ಯರು ಹಾಗೂ ಮೂವರು ಶಾಸಕರನ್ನು ಮನವೊಲಿಸುವಲ್ಲಿ ಸಚಿವ ಬೈರತಿ ಸುರೇಶ್ ಸಫಲರಾಗಿದ್ದಾರೆ. ಅವರು ರಾಜೀನಾಮೆ ನೀಡಲು ಸಭಾಪತಿ ಕೊಠಡಿಗೆ ತೆರಳಿದ್ದ ಇಬ್ಬರು ಪರಿಷತ್ ಸದಸ್ಯರನ್ನು ರಾಜೀನಾಮೆ ನೀಡದಂತೆ ತಡೆದಿದ್ದಾರೆ. ಕೋಲಾರ ಟಿಕೆಟ್ಅನ್ನು ಸಚಿವ ಮುನಿಯಪ್ಪ ಕುಟುಂಬಕ್ಕೆ ನೀಡುವುದನ್ನು ಖಂಡಿಸಿ ಕೋಲಾರ ಭಾಗದ ಶಾಸಕರು ರಾಜೀನಾಮೆಗೆ ಮುಂದಾಗಿದ್ದು, ಅದರಂತೆ ವಿಧಾನ ಪರಿಷತ್ ಸದಸ್ಯರಾದ ನಜೀರ್ ಅಹ್ಮದ್ ಹಾಗೂ ಅನಿಲ್ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ಸಭಾಪತಿ ಬಸರವರಾಜ್​ ಹೊರಟ್ಟಿ ಅವರನ್ನು ಭೇಟಿ ಮಾಡಿದ್ದರು.

ಈ ವೇಳೆ ಸಿಎಂ, ಡಿಸಿಎಂ ನಿರ್ದೇಶನದಂತೆ ಪಕ್ಷದ ಸಂದೇಶ ಹೊತ್ತು ತಂದ ಸಚಿವ ಬೈರತಿ ಸುರೇಶ್ ನಜೀರ್ ಹಾಗೂ ಅನಿಲ್ ಅವರು ರಾಜೀನಾಮೆ ನೀಡದಂತೆ ಮನವೊಲಿಕೆ ಮಾಡುವಲ್ಲಿ ಸಫಲರಾಗಿದ್ದಾರೆ. ಕೈ ಬರಹದಲ್ಲಿ ರಾಜೀನಾಮೆ ಪತ್ರ ಬರೆದಿದ್ದ ಸದಸ್ಯರು ರಾಜೀನಾಮೆ ನೀಡದೇ ಮತ್ತಷ್ಟು ಸಮಯಾವಕಾಶ ಬೇಕು ಎನ್ನುವ ಸ್ಪಷ್ಟೀಕರಣ ನೀಡಿ ಇಂದಿನ ಮಟ್ಟಿಗೆ ತಮ್ಮ ನಿರ್ಧಾರವನ್ನು ಬದಲಿಸಿದ್ದಾರೆ. ಇದಕ್ಕೂ ಮುನ್ನ ವಿಧಾನ ಪರಿಷತ್ ಸದಸ್ಯರಾದ ನಜೀರ್‌ಅಹ್ಮದ್ ಹಾಗೂ ಅನಿಲ್‌ಕುಮಾರ್ ಅವರು ತಮ್ಮ ರಾಜೀನಾಮೆ ಪತ್ರದೊಂದಿಗೆ ಸಭಾಪತಿ ಕೊಡಿಗೆ ಬಂದಿದ್ದು, ರಾಜೀನಾಮೆ ಪತ್ರಗಳನ್ನೂ ಮಾಧ್ಯಮದವರಿಗೆ ಪ್ರದರ್ಶಿಸಿದ್ದು ಕಂಡು ಬಂದಿತು.

ಈ ಕುರಿತು ಸಭಾಪತಿ ಬಸವರಾಜ್​ ಹೊರಟ್ಟಿ ಮಾತನಾಡಿ, ಇಂದು ತೇಜಸ್ವಿನಿಗೌಡ ಹೊರತುಪಡಿಸಿ ಮತ್ತೆ ಯಾರೂ ರಾಜೀನಾಮೆ ಕೊಟ್ಟಿಲ್ಲ. ಕಾಂಗ್ರೆಸ್ ನ ಇಬ್ಬರು ಸದಸ್ಯರು ರಾಜೀನಾಮೆ ನೀಡುವುದಾಗಿ ಸಮಯ ಪಡೆದಿದ್ದರು, ಆದರೆ ಈಗ ರಾಜೀನಾಮೆ ಕೊಟ್ಟಿಲ್ಲ. ರಾಜೀನಾಮೆ ಕೊಡುವುದಾಗಿ ಬೆಳಗ್ಗೆ 11ಕ್ಕೆ ಕರೆ ಮಾಡಿದ್ದರು. ಅವರಿಗೆ 12.30 ರಿಂದ 1.00 ಗಂಟೆಯವರೆಗೆ ಸಮಯ ನೀಡಿದ್ದೆ. ಸಮಯಕ್ಕೆ ಬಂದರು ಬಿಳಿ ಹಾಳೆಯಲ್ಲಿ ರಾಜೀನಾಮೆ ಪತ್ರ ತಂದಿದ್ದರು, ಅದನ್ನು ಸ್ವೀಕರಿಸಲಿಲ್ಲ. ಲೆಟರ್​ಹೆಡ್ ನಲ್ಲಿ ಬರೆದುಕೊಡಿ ಎಂದೆ, ನಂತರ ಲೆಟರ್​ಹೆಡ್ ತರಿಸಿಕೊಂಡು ರಾಜೀನಾಮೆ ಪತ್ರ ಬರೆದರು. ಆದರೆ, ನನಗೆ ಕೊಡಲಿಲ್ಲ. ಈಗ ಇನ್ನೂ ಸ್ವಲ್ಪ ಸಮಯ ಬೇಕು ಎನ್ನುತ್ತಿದ್ದಾರೆ, ಅವರು ರಾಜೀನಾಮೆ ಕೊಡದಿದ್ದಲ್ಲಿ ನಾವು ಒತ್ತಾಯ ಮಾಡಲಾಗಲ್ಲ. ಅವರು ಕೊಟ್ಟರೆ ಸ್ವೀಕಾರ ಮಾಡುತ್ತೇನೆ, ಇಲ್ಲದಿದ್ದರೆ ಇಲ್ಲ ಎಂದರು.

ಅಸಮಾಧಾನಿತರ ಸಮ್ಮುಖದಲ್ಲಿ ಚರ್ಚಿಸಿ ಟಿಕೆಟ್ ಅಂತಿಮಗೊಳಿಸಲಾಗುತ್ತದೆ: ಸಚಿವ ಬೈರತಿ ಸುರೇಶ್ ಮಾತನಾಡಿ, ಕೋಲಾರ ಲೋಕಸಭಾ ಟಿಕೆಟ್ ವಿಚಾರದಲ್ಲಿ ಎಂಎಲ್​ಸಿಗಳಾದ ಅನಿಲ್, ನಜೀರ್ ಹಾಗೂ ಮೂವರು ಶಾಸಕರು ಅಸಮಧಾನಗೊಂಡಿದ್ದಾರೆ. ಅವರ ಮನವೊಲಿಸಲು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನನಗೆ ತಿಳಿಸಿ ಇಲ್ಲಿಗೆ ಕಳುಹಿಸಿಕೊಟ್ಟಿದ್ದಾರೆ. ಅವರಿಗೆ ಅಸಮಾಧಾನವಾಗದ ರೀತಿಯಲ್ಲಿ ನಾವೆಲ್ಲಾ ಕುಳಿತು ಸೌಹಾರ್ದಯುತವಾಗಿ ಸಮಸ್ಯೆ ಪರಿಹರಿಸೋಣ ಎಂದಿದ್ದಾರೆ. ಅದರಂತೆ ಪಕ್ಷದ ನಾಯಕರ ಸಂದೇಶವನ್ನು ಶಾಸಕರಿಗೆ ಹೇಳಿದ್ದೇನೆ, ಅವರೂ ಒಪ್ಪಿಕೊಂಡಿದ್ದಾರೆ. ಇಂದು ರಾತ್ರಿ ಸಿಎಂ, ಡಿಸಿಎಂ ನಗರಕ್ಕೆ ವಾಪಸ್ ಬರುತ್ತಿದ್ದಾರೆ. ಆಗ ಚರ್ಚಿಸೋಣ ಎಂದಿದ್ದೇನೆ. ಅದಕ್ಕೆ ಐವರೂ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.

ಇನ್ನೂ ಕೋಲಾರ ಟಿಕೆಟ್ ಪ್ರಕಟ ಆಗಿಲ್ಲ, ಎಐಸಿಸಿ ಅಧ್ಯಕ್ಷರು ಸಿಎಂ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಟಿಕೆಟ್ ನಿರ್ಧಾರವಾಗಿಲ್ಲ ಕುಳಿತು ಚರ್ಚಿಸಿ ಸಮಸ್ಯೆ ಬಗೆಹರಿಸೋಣ ಎಂದಿದ್ದಾರೆ. ಎಲ್ಲರೂ ಕುಳಿತು ಸೌಹಾರ್ಯದಯುತವಾಗಿ ಪರಿಹರಿಸೋಣ ಎಂದಿದ್ದಾರೆ. ಎಲ್ಲ ನಾಯಕರು ರಾತ್ರಿ ಬರುತ್ತಿದ್ದಾರೆ. ಆಗ ಇದರ ಬಗ್ಗೆ ಮಾತನಾಡಿ ತೀರ್ಮಾನ ತೆಗೆದುಕೊಳ್ಳಲಿದ್ದೇನೆ. ಕೋಲಾರ ಟಿಕೆಟ್ ಅಧಿಕೃತವಾಗಿ ಪ್ರಕಟವಾಗಿಲ್ಲ, ಎರಡು ಮೂರು ದಿನದಲ್ಲಿ ಆಗಲಿದೆ. ಅಸಮಾಧಾನಿತರ ಸಮ್ಮುಖದಲ್ಲಿ ಚರ್ಚಿಸಿ ಟಿಕೆಟ್ ಅಂತಿಮಗೊಳಿಸಲಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ: ಲೋಕಸಭೆ ಚುನಾವಣೆ ಹೊತ್ತಲ್ಲೇ ಬಿಜೆಪಿ ಎಂಎಲ್​ಸಿ ತೇಜಸ್ವಿನಿ ಗೌಡ ರಾಜೀನಾಮೆ - Tejaswini Gowda Resigned

Last Updated : Mar 27, 2024, 5:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.