ETV Bharat / state

'ಬಿಜೆಪಿ-ಜೆಡಿಎಸ್​ ಮೈತ್ರಿ ಸುಸೂತ್ರವಾಗಿ ನಡೆಯಲಿದೆ, ಗೊಂದಲಗಳು ಸುಖಾಂತ್ಯ ಕಾಣಲಿವೆ'

author img

By ETV Bharat Karnataka Team

Published : Mar 19, 2024, 11:50 AM IST

Updated : Mar 19, 2024, 1:02 PM IST

ಮೈತ್ರಿ ಪಕ್ಷಗಳೆಂದಾಗ ಸಣ್ಣಪುಟ್ಟ ಗೊಂದಲ ಸಹಜ. ಏನೇ ವ್ಯತ್ಯಾಸಗಳಿದ್ದರೂ ಸುಖಾಂತ್ಯವಾಗಲಿದೆ. ಒಳ್ಳೆಯ ರೀತಿಯಲ್ಲಿ ಮೈತ್ರಿ ಮುಂದುವರೆಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

Etv Bharat
Etv Bharat

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆ

ಬೆಂಗಳೂರು: ಲೋಕಸಭಾ ಚುನಾವಣೆಗೆ ಸೀಟು ಹಂಚಿಕೆ ವಿಚಾರವಾಗಿ ಬಿಜೆಪಿ ಹಾಗು ಜೆಡಿಎಸ್ ಪಕ್ಷಗಳ​ ನಡುವೆ ಯಾವುದೇ ಗೊಂದಲವಿಲ್ಲ. ಮೈತ್ರಿ ಸುಸೂತ್ರವಾಗಿ ನಡೆಯಲಿದೆ. ಜೆಡಿಎಸ್ ನಾಯಕರಿಗೆ ಸಮಾಧಾನವಾಗುವಂತಹ ನಿರ್ಧಾರವನ್ನೇ ಬಿಜೆಪಿ ವರಿಷ್ಠರು ತೆಗೆದುಕೊಳ್ಳಲಿದ್ದು ಸಣ್ಣಪುಟ್ಟ ಗೊಂದಲಗಳು ಸುಖಾಂತ್ಯ ಕಾಣಲಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸ್ಪಷ್ಟಪಡಿಸಿದರು.

ಡಾಲರ್ಸ್ ಕಾಲೊನಿಯಲ್ಲಿರುವ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೀಟು ಹಂಚಿಕೆ ವಿಚಾರ ಸಂಬಂಧ ಬಿಜೆಪಿ-ಜೆಡಿಎಸ್ ನಡುವೆ ಯಾವುದೇ ಗೊಂದಲವಿಲ್ಲ. ಮೈತ್ರಿ ಪಕ್ಷಗಳೆಂದಾಗ ಸಣ್ಣಪುಟ್ಟ ಗೊಂದಲಗಳು ಸಹಜ. ನಿನ್ನೆ ನಮ್ಮ ರಾಷ್ಟ್ರೀಯ ನಾಯಕರೊಂದಿಗೆ ದೂರವಾಣಿ ಮೂಲಕ ಎಲ್ಲ ವಿಚಾರಗಳ ಕುರಿತು ಚರ್ಚಿಸಿದ್ದೇನೆ. ನಂತರ ನಮ್ಮ ವರಿಷ್ಠರು ನೀಡಿದ ಸಂದೇಶದೊಂದಿಗೆ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ಜೊತೆಯಲ್ಲಿಯೂ ದೂರವಾಣಿ ಮೂಲಕ ಚರ್ಚಿಸಿದ್ದೇನೆ. ನಂತರ ಕುಮಾರಸ್ವಾಮಿ ಜೊತೆಗೂ ದೂರವಾಣಿ ಮೂಲಕ ಇಂದು ಬೆಳಗ್ಗೆ ಮಾತನಾಡಿ, ಮಾಹಿತಿ ನೀಡಿದ್ದೇನೆ. ಎಲ್ಲ ಒಟ್ಟಾರೆಯಾಗಿ ಚರ್ಚೆಯಾಗಿ ಸರಿ ಹೋಗಲಿದೆ. ಜೆಡಿಎಸ್​ನವರಿಗೂ ಸಮಾಧಾನವಾಗುವ ರೀತಿಯಲ್ಲಿ ನಮ್ಮ ನಾಯಕರು ತೀರ್ಮಾನ ಮಾಡಲಿದ್ದಾರೆ ಎಂದರು.

ಹೆಚ್.ಡಿ.ಕುಮಾರಸ್ವಾಮಿಗೆ ಬೇಸರವಾಗಿರುವ ವಿಚಾರದ ಕುರಿತು ಪ್ರತಿಕ್ರಿಯಿಸಿ, ಈಗಿನ ಅಸಮಾಧಾನದ ಬಗ್ಗೆ ನಾವು ಚರ್ಚಿಸುವುದು ತಪ್ಪಾಗುತ್ತದೆ. ಯಾವ ಸಂದರ್ಭದಲ್ಲಿ ಏನೇನು ಮಾತನಾಡಬೇಕು, ಏನು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಬಿಜೆಪಿ ವರಿಷ್ಠರು ಮತ್ತು ಜೆಡಿಎಸ್ ವರಿಷ್ಠರು ಚರ್ಚಿಸಲಿದ್ದಾರೆ. ಜೆಡಿಎಸ್​ಗೆ ಎಷ್ಟು ಸ್ಥಾನ ಎಂದು ಇನ್ನೂ ಅಂತಿಮವಾಗಿಲ್ಲ, ಚರ್ಚೆ ನಡೆಯುತ್ತಿದೆ ಎಂದು ಹೇಳಿದರು.

ಮಾಜಿ ಸಿಎಂ ಡಿ.ವಿ.ಸದಾನಂದ ಗೌಡರ ಅಸಮಾಧಾನ ವಿಚಾರಕ್ಕೆ, ಕಾಂಗ್ರೆಸ್ ನಾಯಕರಿಗೆ ಅವರ ಮುಖಂಡರಿಗಿಂತ ಬಿಜೆಪಿ ಮುಖಂಡರ ಬಗ್ಗೆಯೇ ಹೆಚ್ಚು ವಿಶ್ವಾಸ ಬಂದಿದೆ. ಬೇರೆ ರೀತಿಯ ಚರ್ಚೆಗಳು ನಡೆಯುತ್ತಿವೆ. ಆದರೂ ಎಲ್ಲವೂ ಸರಿ ಹೋಗಲಿದೆ. ಸದಾನಂದ ಗೌಡರು ಪಕ್ಷ ತೊರೆಯುವುದಿಲ್ಲ, ಬಿಜೆಪಿಯಲ್ಲಿಯೇ ಇರಲಿದ್ದಾರೆ ಎಂದು ತಿಳಿಸಿದರು.

ಮತ್ತೊಬ್ಬ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಅವರನ್ನು ಕಡೆಗಣಿಸುವ ಇಲ್ಲವೇ ಪಕ್ಷದಿಂದ ಕೈಬಿಡುವ ಪ್ರಶ್ನೆಯೇ ಇಲ್ಲ. ಅವರು ನಮ್ಮ ಹಿರಿಯ ನಾಯಕರು. ಕೆಲವು ತಪ್ಪು ಮಾಹಿತಿಯ ಕಾರಣದಿಂದಾಗಿ ಅವರು ಅಸಮಾಧಾನಗೊಂಡಿದ್ದಾರೆ. ಪಕ್ಷದ ವಿರುದ್ದ ಮಾತನಾಡುತ್ತಿದ್ದಾರೆ. ಆದರೆ ಸತ್ಯ ಗೊತ್ತಾದ ನಂತರ ಎಲ್ಲವೂ ಸರಿಹೋಗಲಿದೆ ಎಂದು ವಿಜಯೇಂದ್ರ ಹೇಳಿದರು.

ಬೆಳಗಾವಿ ಟಿಕೆಟ್ ಅ​ನ್ನು ಜಗದೀಶ್​ ಶೆಟ್ಟರ್​ಗೆ ನೀಡಿದಂತೆ ಸ್ಥಳೀಯ ನಾಯಕರು ಒತ್ತಾಯ ಮಾಡುತ್ತಿರುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ವಿಜಯೇಂದ್ರ, ಈ ವಿಚಾರದಲ್ಲಿ ಬಹಿರಂಗ ಚರ್ಚೆ ಮಾಡುವುದಿಲ್ಲ. ಇಂದು ಮತ್ತು ನಾಳೆ ದೆಹಲಿಯಲ್ಲಿ ಹೈಕಮಾಂಡ್ ನಾಯಕರು ಚರ್ಚಿಸಲಿದ್ದಾರೆ. ವರಿಷ್ಠರು ಯಾರಿಗೆ ಟಿಕೆಟ್​​ ಎಂದು ನಿರ್ಧಾರ ಮಾಡುತ್ತಾರೋ ಅದೇ ಅಂತಿಮ. ಈಗಾಗಲೇ ಮೊದಲ ಪಟ್ಟಿ ಬಿಡುಗಡೆಯಾಗಿದೆ. ಸದ್ಯದಲ್ಲೇ ಎರಡನೇ ಪಟ್ಟಿ ಬಿಡುಗಡೆಯಾಗಲಿದೆ. ಎಲ್ಲ ಗೊಂದಲಗಳಿಗೂ ತೆರೆ ಬೀಳಲಿದೆ ಎಂದು ಭರವಸೆ ಕೊಟ್ಟರು.

ಮೋದಿ ರಾಜ್ಯ ಪ್ರವಾಸ ಯಶಸ್ವಿಯಾಗಿದೆ. ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯೊಳಗೊಂಡಂತೆ ಶಿವಮೊಗ್ಗದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮ ಯಶಸ್ವಿಯಾಗಿದೆ. ಕಡಿಮೆ ಅವದಿಯಲ್ಲಿ ನಿಗದಿಯಾದರೂ ಕಾರ್ಯಕ್ರಮ ಯಶಸ್ವಿಯಾಗಿದೆ. ಕಲಬುರಗಿ ಮತ್ತು ಶಿವಮೊಗ್ಗ ಕಾರ್ಯಕ್ರಮ ಯಶಸ್ವಿಗೆ ಮೋದಿ ಕೂಡ ಸಂತೋಷ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ದಿನೇ ದಿನೇ ನರೇಂದ್ರ ಮೋದಿ ಜನಪ್ರಿಯತೆ ಎತ್ತರಕ್ಕೆ ಹೋಗುತ್ತಿದೆ. ಇದರಿಂದ ರಣಭೂಮಿಯಲ್ಲಿರುವ ನಮ್ಮ ಕಾರ್ಯಕರ್ತರಿಗೆ ಮತ್ತಷ್ಟು ಉತ್ಸಾಹ ತಂದುಕೊಟ್ಟಿದೆ ಎಂದರು.

ಇದನ್ನೂ ಓದಿ: ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಈಶ್ವರಪ್ಪ ಸೇರಿ ಹಲವರು ಗೈರು: ಕಮಲ ಪಡೆಗೆ ಬಂಡಾಯದ ಬಿಸಿ

Last Updated : Mar 19, 2024, 1:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.