ETV Bharat / state

ಮಹದೇವಪುರ ವಲಯದ 21 ಐಟಿ ಪಾರ್ಕ್‌ಗಳಿಗೆ ಕಾವೇರಿ ನೀರು ಪೂರೈಸಲು ಜಲಮಂಡಳಿ ಸಿದ್ಧ - Cauvery water supply

author img

By ETV Bharat Karnataka Team

Published : Apr 18, 2024, 6:51 AM IST

ಮಹದೇವಪುರ ವಲಯದ ಪಾರ್ಕ್‌ಗಳಿಗೆ ಕಾವೇರಿ ನೀರನ್ನು ಸರಬರಾಜು ಮಾಡಲು ಜಲಮಂಡಳಿ ಸಿದ್ಧವಿದೆ ಎಂದು ಜಲಮಂಡಳಿ ಅಧ್ಯಕ್ಷ ರಾಮ್‌ ಪ್ರಸಾತ್‌ ಮನೋಹರ್​ ತಿಳಿಸಿದ್ದಾರೆ.

ಜಲಮಂಡಳಿ
ಜಲಮಂಡಳಿ

ಬೆಂಗಳೂರು: ಮಹದೇವಪುರ ವಲಯದ 21 ಐಟಿ ಪಾರ್ಕ್‌ಗಳಿಗೆ ಅಗತ್ಯವಿರುವಷ್ಟು ಕಾವೇರಿ ನೀರನ್ನು ಸರಬರಾಜು ಮಾಡಲು ಜಲಮಂಡಳಿ ಸಿದ್ಧವಿದೆ. ಐಟಿ ಕಂಪನಿಗಳ ನೀರಿನ ಕೊರತೆಯನ್ನು ಪರಿಹರಿಸಲಾಗಿದ್ದು, ಕಾವೇರಿ ನೀರಿನ ಬೇಡಿಕೆ ಇಟ್ಟ ಕಂಪನಿಗಳಿಗೆ ಕಾವೇರಿ ನಾಲ್ಕನೇ ಹಂತದ ನೀರನ್ನು ಪೈಪ್‌ಲೈನ್‌ ಸರಬರಾಜು ಮಾಡಲು ಜಲಮಂಡಳಿ ಸಿದ್ಧವಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ. ರಾಮ್‌ ಪ್ರಸಾತ್‌ ಮನೋಹರ್‌ ಹೇಳಿದ್ದಾರೆ.

ಜಲಮಂಡಳಿ ಸಭೆ
ಜಲಮಂಡಳಿ ಸಭೆ

ಬುಧವಾರ ಔಟರ್‌ ರಿಂಗ್‌ ರೋಡ್‌ ಕಂಪನೀಸ್‌ ಅಸೋಸಿಯೇಷನ್‌ ಪದಾಧಿಕಾರಿಗಳ ಜೊತೆ ಸಭೆ ನಡೆಸಿ ಈ ಮಹದೇವಪುರ ಭಾಗದಲ್ಲಿ ನೀರಿನ ಲಭ್ಯತೆ, ಸರಬರಾಜು ಮತ್ತು ಉಳಿತಾಯ ಹಾಗೂ ಮರುಬಳಕೆಗೆ ಅಳವಡಿಸಿಕೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದು ಮಾತನಾಡಿದರು.

ಜಲಮಂಡಳಿ ಸಭೆ
ಜಲಮಂಡಳಿ ಸಭೆ

ಡಾ. ರಾಮ್‌ ಪ್ರಸಾತ್‌ ಮನೋಹರ್‌-"ಮಹದೇಪುರ ವಲಯದಲ್ಲಿ 21 ಐಟಿ ಪಾರ್ಕ್‌ಗಳಿವೆ. ಇಲ್ಲಿ ಬೋರ್​ವೇಲ್​ಗಳ ಮೇಲೆ ಹೆಚ್ಚಿನ ಅವಲಂಬನೆ ಇದೆ. ನೀರಿನ ಕೊರತೆ ಉಂಟಾಗಿದ್ದನ್ನು ಜಲಮಂಡಳಿ ಅಗತ್ಯ ವ್ಯವಸ್ಥೆ ಮಾಡುವ ಮೂಲಕ ಸರಿಪಡಿಸಿದೆ. ಈ ಎಲ್ಲ ಪಾರ್ಕ್‌ಗಳ ಬಳಕೆಗೆ ಸುಮಾರು 12 ಎಂ.ಎಲ್‌.ಡಿ ಕಾವೇರಿ ನೀರಿನ ಅವಶ್ಯಕತೆ ಬೀಳುತ್ತದೆ. ಇದರಲ್ಲಿ ಸದ್ಯ ಲಭ್ಯವಿರುವ ಕಾವೇರಿ 4 ನೇ ಹಂತದ ಯೋಜನೆಯಲ್ಲೇ ಸುಮಾರು 5 ಎಂ.ಎಲ್‌.ಡಿ ನೀರನ್ನು ನೀಡಬಹುದಾಗಿದೆ.

ಜಲಮಂಡಳಿ ಸಭೆ
ಜಲಮಂಡಳಿ ಸಭೆ


ಆದರೆ, ಇದಕ್ಕೆ ತಗಲುವ ಪ್ರೋರೇಟಾ ಹಾಗೂ ಇನ್ನಿತರ ಶುಲ್ಕಗಳನ್ನು ಭರಿಸಬೇಕಾಗುತ್ತದೆ. ಶುಲ್ಕ ಭರಿಸಿದರೆ 30 ದಿನಗಳಲ್ಲಿ ಪೈಪ್‌ಲೈನ್‌ ಮೂಲಕ ನೀರು ಸರಬರಾಜು ಪ್ರಾರಂಭಿಸಬಹುದಾಗಿದೆ. ಕಾವೇರಿ 5 ನೇ ಹಂತದ ಯೋಜನೆ ಜಾರಿಗೊಂಡ ನಂತರ ಹೆಚ್ಚಿನ ಪ್ರಮಾಣದ ನೀರು ಒದಗಿಸಬಹುದಾಗಿದೆ. ಅಲ್ಲದೇ, ಇನ್ನುಳಿದ ಬೇಡಿಕೆಯನ್ನು ಸಂಸ್ಕರಿಸಿದ ನೀರನ್ನು ಸರಬರಾಜು ಮಾಡುವ ಮೂಲಕ ಈಡೇರಿಸಲಾಗುವುದು".

"ದಿನನಿತ್ಯದ ಬಳಕೆಯ ಶೇಕಡಾ 50 ರಷ್ಟು ನೀರಿನ ಅವಶ್ಯಕತೆಯನ್ನು ಸಂಸ್ಕರಿಸಿದ ನೀರಿನಿಂದ ಪೂರೈಸಿಕೊಳ್ಳಬಹುದಾಗಿದೆ. ಬೆಂಗಳೂರು ಜಲಮಂಡಳಿಯ ಬಳಿ ವಿಫುಲವಾದ ಸಂಸ್ಕರಿತ ನೀರಿನ ಲಭ್ಯತೆಯಿದೆ. ಉತ್ತಮ ಗುಣಮಟ್ಟದ ನೀರನ್ನು ನಾವು ಟ್ಯಾಂಕರ್‌ ಮೂಲಕ ಸರಬರಾಜು ಮಾಡಬಹುದಾಗಿದೆ. ನಿಮ್ಮ ಅವಶ್ಯಕತೆಯನ್ನು ವೆಬ್‌ಸೈಟ್‌ ಮೂಲಕ ನೀಡಿದಲ್ಲಿ ನಾವು ಪ್ರತಿನಿತ್ಯ ನೀರನ್ನು ಪೂರೈಸಲಿದ್ದೇವೆ. ಮನೆಗಳ ಹಾಗೂ ಕಚೇರಿಗಳ ಶೌಚಾಲಯದ ನೀರನ್ನು ಹೊರತುಪಡಿಸಿ ಇನ್ನಿತರ ಬಳಕೆಯಿಂದ ಲಭ್ಯವಾಗುವ ನೀರನ್ನು ಗ್ರೇ ವಾಟರ್​ ಎಂದು ಕರೆಯಲಾಗುತ್ತದೆ. ಇದನ್ನು ಸಂಸ್ಕರಿಸುವುದು ಬಹಳ ಸುಲಭ. ಇದರ ಸಂಸ್ಕರಣೆ ಹಾಗೂ ಮರುಬಳಕೆಗೆ ಆದ್ಯತೆ ನೀಡುವಂತೆ ಕರೆ ನೀಡಿದರು".

"ಬಹಳಷ್ಟು ಐಟಿ ಪಾರ್ಕ್‌ಗಳು ಈಗಾಗಲೇ ಮಳೆ ನೀರು ಕೊಯ್ಲು ಪದ್ದತಿಯನ್ನು ಅಳವಡಿಸಿಕೊಂಡಿವೆ. ಇವುಗಳನ್ನ ಹೊರತುಪಡಿಸಿ ಹೊರ ಪ್ರದೇಶದಲ್ಲಿ ಬೀಳುವ ಮಳೆ ನೀರನ್ನ ಶೇಖರಿಸಿ ನಾವು ಹತ್ತಿರದ ಕೆರೆಗಳು ಅಥವಾ ಜಲಮೂಲಗಳಿಗೆ ಹರಿಯಬಿಡಬಹುದಾಗಿದೆ. ಇದರಿಂದ ಮಳೆಯ ನೀರನ್ನು ಸಂಗ್ರಹಿಸುವ ಹಾಗೂ ಅಂತರ್ಜಲ ಮರುಪೂರಣಕ್ಕೆ ಉಪಯೋಗಿಸಲು ಸಾಧ್ಯವಾಗಲಿದೆ. ಹತ್ತಿರದ ಐಟಿ ಪಾರ್ಕ್‌ಗಳಿಂದ ಹತ್ತಿರದ ಕೆರೆಗಳಿಗೆ ಮಳೆ ನೀರನ್ನು ತಗೆದುಕೊಂಡು ಹೋಗುವ ಕಾರ್ಯವನ್ನು ಮಾಡಬೇಕು" ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ಔಟರ್‌ ರಿಂಗ್‌ ರೋಡ್‌ ಕಂಪನೀಸ್‌ ಅಸೋಸಿಯೇಷನ್‌ ನ ಉಪಾಧ್ಯಕ್ಷ ಅರ್ಚನಾ ತಯಾದೇ, ಕಾರ್ಯದರ್ಶಿ ರಮೇಶ್‌ ವೆಂಕಟರಾಮು, ಜನೆರಲ್‌ ಮ್ಯಾನೇಜರ್‌ ಕೃಷ್ಣ ಕುಮಾರ್‌ ಗೌಡ ಉಪಸ್ಥಿತರಿದ್ದರು.

ಇದನ್ನೂ ಓದಿ: ಪೀಣ್ಯ ಕೈಗಾರಿಕಾ ಪ್ರದೇಶದ ತ್ಯಾಜ್ಯ ನೀರು ನಿರ್ವಹಣೆಗೆ ಜಪಾನೀಸ್‌ ತಂತ್ರಜ್ಞಾನ ಅಳವಡಿಸಲು ಜಲಮಂಡಳಿ ಪ್ಲಾನ್​ - BWSSB

ETV Bharat Logo

Copyright © 2024 Ushodaya Enterprises Pvt. Ltd., All Rights Reserved.