ETV Bharat / state

ಆನೇಕಲ್: ಬಿ.ಟೆಕ್‌ ವಿದ್ಯಾರ್ಥಿಯ ಶವ ನೀಲಗಿರಿ ತೋಪಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆ

author img

By ETV Bharat Karnataka Team

Published : Feb 25, 2024, 10:34 AM IST

Updated : Feb 25, 2024, 1:10 PM IST

ಆನೇಕಲ್​ನ ಕಾಳನಾಯಕನಹಳ್ಳಿ ಸಮೀಪದ ನೀಲಗಿರಿ ತೋಪಿನಲ್ಲಿ ವಿದ್ಯಾರ್ಥಿಯ ಶವ ಸುಟ್ಟ ರೀತಿಯಲ್ಲಿ ಪತ್ತೆಯಾಗಿದೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

dead body found at nilgiri grove anekal
ನೀಲಗಿರಿ ತೋಪಿನಲ್ಲಿ ಶವ ಪತ್ತೆ

ವಿದ್ಯಾರ್ಥಿಯ ಶವ ಪತ್ತೆ

ಆನೇಕಲ್​(ಬೆಂಗಳೂರು): ಇಲ್ಲಿನ ನೀಲಗಿರಿ ತೋಪಿನಲ್ಲಿ ಸುಟ್ಟ ರೀತಿಯಲ್ಲಿ ವಿದ್ಯಾರ್ಥಿಯೊಬ್ಬನ ಶವ ಪತ್ತೆಯಾಗಿದೆ. ಮೃತಪಟ್ಟ ವ್ಯಕ್ತಿಯನ್ನು ಹರ್ಷಿತ್ ಕೊಂಟಾಳ ಎಂದು ಗುರುತಿಸಲಾಗಿದೆ. ಈತ ಆನೇಕಲ್‌ನ ಕಾಲೇಜೊಂದರಲ್ಲಿ ಬಿ.ಟೆಕ್ ವ್ಯಾಸಂಗ ಮಾಡುತ್ತಿದ್ದು,​ ಉತ್ತರಾಖಂಡ ರಾಜ್ಯದ ಹಾಲ್‌ಧ್ವನಿ ಎಂಬಲ್ಲಿನ ನಿವಾಸಿ ಎಂದು ತಿಳಿದುಬಂದಿದೆ.

ಹರ್ಷಿತ್ ಕೊಂಟಾಳ ಫೆಬ್ರುವರಿ 22ರಂದು ಹಾಸ್ಟೆಲ್​ನಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ತಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆದರೆ ಇಂದು ಬೆಳಗ್ಗೆ ಕಾಳನಾಯಕನಹಳ್ಳಿ ಬಳಿಯ ನೀಲಗಿರಿ ತೋಪಿನಲ್ಲಿ ಸುಟ್ಟು ಹಾಕಿರುವಂತೆ ಶವ ಸಿಕ್ಕಿದೆ. ಮೃತದೇಹದ ಪಕ್ಕ ಕಾಲೇಜು ಬ್ಯಾಗ್​, ಮೊಬೈಲ್​ ದೊರೆತಿದೆ. ಘಟನಾ ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿದ್ಯಾರ್ಥಿ ಹಾಸ್ಟೆಲ್ ಹೊರಗಡೆ ಕಾಣಿಸಿಕೊಂಡ ಕೊನೆಯ ವಿಡಿಯೋ ಲಭ್ಯವಾಗಿತ್ತು. ಈ ವಿಡಿಯೋ ಜೊತೆಗೆ ಕಾಲೇಜು ಆಡಳಿತ ಮಂಡಳಿ ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದರು.

ಸ್ಥಳೀಯರೊಬ್ಬರು ಈ ಕುರಿತು ಮಾಹಿತಿ ನೀಡಿದ್ದು, "ಬೆಳಗ್ಗೆ 6.30ರ ಸಮಯಕ್ಕೆ ನನ್ನ ಸ್ನೇಹಿತ ಕರೆ ಮಾಡಿದ್ದ. ಆತ ಆನೇಕಲ್​ನಿಂದ ತನ್ನ ವಾಹನದಲ್ಲಿ ಬರುತ್ತಿರುವಾಗ ಶೌಚಾಲಯಕ್ಕೆಂದು ಇಳಿದಿದ್ದಾನೆ. ಈ ಸಂದರ್ಭದಲ್ಲಿ ದುರ್ವಾಸನೆ ಗಮನಿಸಿ ಮೃತದೇಹವನ್ನು ನೋಡಿದ್ದಾನೆ. ತಕ್ಷಣ ನನಗೆ ಕರೆ ಮಾಡಿದ್ದಾನೆ. ನಾನು ಪೊಲೀಸ್​ ಠಾಣೆಗೆ ಮಾಹಿತಿ ನೀಡಿದೆ. ಪೊಲೀಸರು ಬಂದು ಪರಿಶೀಲಿಸಿದಾಗ ಮೃತಪಟ್ಟ ಯುವಕ ಸ್ಥಳೀಯ ಕಾಲೇಜಿನ ವಿದ್ಯಾರ್ಥಿ ಎಂದು ಗೊತ್ತಾಯಿತು. ಇಲ್ಲಿಗೆ ಈ ವಿದ್ಯಾರ್ಥಿ ಹೇಗೆ ಬಂದ ಅಥವಾ ಕೊಲೆ ಮಾಡಿ ತರಲಾಗಿದೆಯೇ ಎಂಬುದರ ಬಗ್ಗೆ ನಮಗೇನೂ ಮಾಹಿತಿ ಇಲ್ಲ. ಘಟನಾ ಸ್ಥಳದಲ್ಲಿ ಮದ್ಯಪಾನದ ಬಾಟಲಿ​ಗಳು ದೊರೆತಿವೆ" ಎಂದರು.

ಇದನ್ನೂ ಓದಿ: ಹಾವೇರಿ: ಅಳಿಯನಿಗೆ ಮದ್ಯ ಕುಡಿಸಿ ಚಾಕುವಿನಿಂದ ಇರಿದು ಕೊಂದ ಮಾವ

Last Updated :Feb 25, 2024, 1:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.