ETV Bharat / state

ಬಿಎಂಟಿಸಿ ಬಸ್‌ನಲ್ಲಿ ಹಲ್ಲೆ ಪ್ರಕರಣ: ಮಹಿಳೆ ವಿರುದ್ಧ ಪ್ರತಿ ದೂರು ದಾಖಲಿಸಿದ ನಿರ್ವಾಹಕ - Bengaluru Assault Case

author img

By ETV Bharat Karnataka Team

Published : Apr 10, 2024, 1:53 PM IST

ಬಸ್​​ನಲ್ಲಿ ಹಲ್ಲೆ ಆರೋಪ ಪ್ರಕರಣದಲ್ಲಿ, ಜಾಮೀನು ಪಡೆದಿರುವ ಕಂಡಕ್ಟರ್ ಇದೀಗ ದೂರು ನೀಡಿದ್ದ ಮಹಿಳೆ ವಿರುದ್ಧ ಪ್ರತಿದೂರು ದಾಖಲಿಸಿದ್ದಾರೆ.

BMTC Bus conductor complaint against woman in assault case
ಬಿಎಂಟಿಸಿ ಬಸ್‌ನಲ್ಲಿ ಹಲ್ಲೆ ಪ್ರಕರಣ

ಬೆಂಗಳೂರು: ಬಸ್‌ನಲ್ಲಿ ಮಹಿಳೆ ಮೇಲೆ ಹಲ್ಲೆ ನಡೆಸಿರುವ ಆರೋಪದಡಿ ಬಂಧಿತನಾಗಿದ್ದ ಬಿಎಂಟಿಸಿ ನಿರ್ವಾಹಕ ಹೊನ್ನಪ್ಪ ಅಗಸರ್ ದೂರುದಾರ ಮಹಿಳೆ ತಂಜಿಲಾ ವಿರುದ್ಧ ಪ್ರತಿದೂರು ನೀಡಿದ್ದು, ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದಲ್ಲಿ ಜಾಮೀನು ಪಡೆದ ಬಳಿಕ ನಿರ್ವಾಹಕ ಹೊನ್ನಪ್ಪ ಪೊಲೀಸ್ ಠಾಣಾ ಮೆಟ್ಟಿಲೇರಿದ್ದಾರೆ.

ದೂರಿನ ಸಾರಾಂಶ: ಮಾರ್ಚ್ 26ರಂದು ಬಿಳೇಕಹಳ್ಳಿಯಲ್ಲಿ ಬಸ್ ಹತ್ತಿದ್ದ ಆರೋಪಿ ಮಹಿಳೆ ಉಚಿತ ಟಿಕೆಟ್ ಪಡೆಯಲು ಆಧಾರ್ ಕಾರ್ಡ್ ತೋರಿಸಿರಲಿಲ್ಲ. ಮತ್ತೊಂದೆಡೆ ಹಣ ನೀಡಿಯೂ ಟಿಕೆಟ್ ಪಡೆದಿರಲಿಲ್ಲ. ಬಸ್ ಡೈರಿ ಸರ್ಕಲ್ ಬಳಿ ಬಂದಾಗ ಪುನಃ ಮತ್ತೊಮ್ಮೆ ಮಹಿಳೆಯನ್ನು ನಾನು ವಿಚಾರಿಸಿದಾಗ ಅವಾಚ್ಯವಾಗಿ ಹಿಂದಿ ಭಾಷೆಯಲ್ಲಿ ನಿಂದಿಸಲಾರಂಭಿಸಿದ್ದರು. ಅಲ್ಲದೇ ನನ್ನ ಸಮವಸ್ತ್ರ ಹಿಡಿದು ಎಳೆದಾಡಿ ಹಲ್ಲೆ ಮಾಡಿದ್ದಾರೆ. ನನ್ನ ರಕ್ಷಣೆಗಾಗಿ ನಾನು ಆಕೆಯನ್ನು ತಳ್ಳಿರುತ್ತೇನೆ. ನಡೆದ ವಿಚಾರವನ್ನು ಡಿಪೋ ಮ್ಯಾನೇಜರ್ ಅವರಿಗೆ ಕರೆ ಮಾಡಿ ತಿಳಿಸಿದ್ದೇನೆ ಕೂಡಾ, ಇತರ ಪ್ರಯಾಣಿಕರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ನಾನು ನನ್ನ ಕರ್ತವ್ಯ ಮುಂದುವರೆಸಿರುತ್ತೇನೆ.

ಅದೇ ದಿನ ಆರೋಪಿ ಮಹಿಳೆ ನೀಡಿರುವ ದೂರಿನ ಅನ್ವಯ ಪೊಲೀಸರು ನನ್ನನ್ನು ದಸ್ತಗಿರಿ ಮಾಡಿ ನ್ಯಾಯಾಲಯದ ಮುಂದೆ ಹಾಜರುಪಡಿಸಿರುತ್ತಾರೆ. ಜಾಮೀನು ಪಡೆದ ಬಳಿಕ ದೂರು ನೀಡುತ್ತಿದ್ದು, ಸಾರ್ವಜನಿಕ ಕರ್ತವ್ಯಕ್ಕೆ ಅಡ್ಡಿಪಡಿಸಿ, ಹಲ್ಲೆ ಮಾಡಿ ಅವಾಚ್ಯವಾಗಿ ನಿಂದಿಸಿರುವ ಆರೋಪಿ ವಿರುದ್ಧ ಕ್ರಮ ಕೈಗೊಳ್ಳುವಂತೆ ತಮ್ಮ ದೂರಿನಲ್ಲಿ ಹೊನ್ನಪ್ಪ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಆದಿಚುಂಚನಗಿರಿ ಮಠಕ್ಕೆ ಒಟ್ಟಾಗಿ ಆಗಮಿಸಿದ ಬಿಜೆಪಿ, ಜೆಡಿಎಸ್ ನಾಯಕರು - BJP JDS Leaders

ಮಾರ್ಚ್ 26ರಂದು ಬಿಳೇಕಳ್ಳಿಯಿಂದ ಶಿವಾಜಿನಗರ ಮಾರ್ಗದ ಬಸ್‌ನಲ್ಲಿ ಟಿಕೆಟ್ ವಿಚಾರವಾಗಿ ಮಹಿಳೆಯ ಮೇಲೆ ನಿರ್ವಾಹಕ ಹಲ್ಲೆ ಮಾಡಿದ್ದ ಆರೋಪ ಕೇಳಿ ಬಂದಿತ್ತು. ಪ್ರಯಾಣಿಕರೊಬ್ಬರ ಮೊಬೈಲ್ ಫೋನ್‌ನಲ್ಲಿ ಸೆರೆಯಾಗಿದ್ದ ಹಲ್ಲೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಬಳಿಕ ಸಿದ್ದಾಪುರ ಠಾಣಾ ಪೊಲೀಸರು ಹೊನ್ನಪ್ಪ ಅವರನ್ನ ಬಂಧಿಸಿದ್ದರು. ಘಟನೆಯ ಕುರಿತು ವಿಷಾದ ವ್ಯಕ್ತಪಡಿಸಿದ್ದ ಬಿಎಂಟಿಸಿ, ಹೊನ್ನಪ್ಪರನ್ನು ವಿಚಾರಣಾ ಇತ್ಯರ್ಥ ಪೂರ್ವ ಅಮಾನತ್ತಿನಲ್ಲಿರಿಸಿ ಆದೇಶ ಹೊರಡಿಸಿತ್ತು. ಇದೀಗ ಅವರು, ದೂರು ನೀಡಿದ ಮಹಿಳೆ ವಿರುದ್ಧ ಪ್ರತಿ ದೂರು ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಪಿಯುಸಿ ಫಲಿತಾಂಶ; ಎಂದಿನಂತೆ ದಕ್ಷಿಣ ಕನ್ನಡವೇ ಫಸ್ಟ್​ - ಈ ಬಾರಿ ಗದಗ ಲಾಸ್ಟ್​​​: ಶೇ. 81.15ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ - 2nd Puc Results

ETV Bharat Logo

Copyright © 2024 Ushodaya Enterprises Pvt. Ltd., All Rights Reserved.