ETV Bharat / state

ಲೋಕಸಭೆ ಚುನಾವಣಾ ಫಲಿತಾಂಶದ ಪರಿಣಾಮದಿಂದಾಗುವ ವಿದ್ಯಮಾನಗಳಿಗೆ ನಾವು ಜವಾಬ್ದಾರಿ ಅಲ್ಲ: ವಿಜಯೇಂದ್ರ - B Y Vijayendra

author img

By ETV Bharat Karnataka Team

Published : May 13, 2024, 3:09 PM IST

ರಾಜ್ಯದಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದ ನಂತರ ಸಿಎಂ ಸ್ಥಾನಕ್ಕೆ ಜಗಳ ನಡೆಯುತ್ತಲೇ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ತಿಳಿಸಿದ್ದಾರೆ.

b-y-vijayendra
ಬಿ. ವೈ ವಿಜಯೇಂದ್ರ (ETV Bharat)

ಬೆಂಗಳೂರು : ನಾವು ಪ್ರತಿಪಕ್ಷದಲ್ಲಿ ಸಂತೋಷದಿಂದ ಇದ್ದೇವೆ, ಯಾವ ಕಾರಣಕ್ಕೂ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಬೀಳಿಸುವ ಪ್ರಯತ್ನ ಮಾಡಲ್ಲ. ಯಾವುದೇ ರೀತಿಯ ಆಪರೇಷನ್ ಮಾಡುವ ಪ್ರಶ್ನೆಯೂ ಇಲ್ಲ. ಆದರೆ ಲೋಕಸಭೆ ಚುನಾವಣಾ ಫಲಿತಾಂಶ ಯಾವ ರೀತಿ ಪ್ರಭಾವ ಬೇಕಾದರೂ ಬೀರಬಹುದು. ಅದರ ಪರಿಣಾಮ ಏನು ಬೇಕಾದರೂ ಆಗಬಹುದು. ಅದಕ್ಕೆ ನಾವು ಜವಾಬ್ದಾರರು ಅಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ತಿಳಿಸಿದ್ದಾರೆ.

ಶಾಂತಿನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಕಾಂಗ್ರೆಸ್ ಪತನದ ಕುರಿತು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಏನು ಹೇಳಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಇಲ್ಲ. ವಿರೋಧಪಕ್ಷವಾಗಿ ನಮ್ಮ ಜವಾಬ್ದಾರಿಯನ್ನು ನಾವು ಯಶಸ್ವಿಯಾಗಿ ನಿರ್ವಹಿಸುತ್ತಿದ್ದೇವೆ. ಕಾಂಗ್ರೆಸ್ ಸರ್ಕಾರ ಬೀಳಿಸುವ ಕೆಲಸವನ್ನು ನಾವು ಮಾಡುವುದಿಲ್ಲ. ಆದರೆ, ಲೋಕಸಭೆ ಚುನಾವಣಾ ಫಲಿತಾಂಶದ ಬಳಿಕ ಕಾಂಗ್ರೆಸ್​ನಲ್ಲಿ ಯಾವ ರೀತಿ ಅಲ್ಲೋಲ ಕಲ್ಲೋಲವಾಗಲಿದೆ ಎನ್ನುವುದನ್ನು ನಾನು ಹೇಳಲ್ಲ ಎಂದರು.

ಶಿಂಧೆ ಹೇಳಿಕೆ ಕುರಿತು ಮಾತನಾಡಿದ ಮಾಜಿ ಡಿಸಿಎಂ ಅಶ್ವತ್ಥನಾರಾಯಣ, ಈ ಸರ್ಕಾರ ಪತನಕ್ಕೆ ನಾವು ಏನೂ ಮಾಡುವ ಅಗತ್ಯ ಇಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಸಿಎಂ ಸ್ಥಾನಕ್ಕೆ ಜಗಳ ನಡೆಯುತ್ತಲೇ ಇದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ನಡುವೆ ದೊಡ್ಡ ಸಂಘರ್ಷವಾಗುತ್ತಿದೆ. ನಿತ್ಯ ಗುಂಪುಗಾರಿಕೆ ಜಗಳ ನಡೆಯುತ್ತಿದೆ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಆಗುತ್ತಿಲ್ಲ ಎಂದು ಹೇಳಿದರು.

ಅವರ ಶಾಸಕರೇ ಸರ್ಕಾರ ಪತನದ ಹೇಳಿಕೆ ನೀಡುತ್ತಿದ್ದಾರೆ. ಈ ಸರ್ಕಾರ ಉಳಿಯಲ್ಲ ಅಂತಾ ಜನರೇ ಹೇಳುತ್ತಿದ್ದಾರೆ. ನಾವು ಇದರಲ್ಲಿ ಹಸ್ತಕ್ಷೇಪ ಮಾಡಲ್ಲ. ಅವರ ಒಳಜಗಳ ಕಿತ್ತಾಟದಿಂದ, ಅಧಿಕಾರದ ದಾಹದಿಂದ ಸರ್ಕಾರ ಬೀಳಬೇಕೇ ಹೊರತು, ಇದಕ್ಕೆ ನಮ್ಮ ಸಹಕಾರ ಬೇಕಿಲ್ಲ. ಲೋಕಸಭಾ ಚುನಾವಣೆ ನಂತರ ಸರ್ಕಾರದ ಕುರ್ಚಿಯ ಎಲ್ಲಾ ಕಾಲು ಮುರಿದು ಅವರೇ ಸರ್ಕಾರ ಪತನಗೊಳಿಸಲಿದ್ದಾರೆ. ಇದನ್ನು ಸ್ವತಃ ಕಾಂಗ್ರೆಸ್​ನವರೇ ಹೇಳುತ್ತಿದ್ದಾರೆ ಎಂದರು.

ಮಹಾರಾಷ್ಟ್ರದಲ್ಲಿಯೂ ಅವರ ಒಳ ಜಗಳದಿಂದ ಸರ್ಕಾರ ಬಿತ್ತು. ಇಲ್ಲಿಯೂ ಕಾಂಗ್ರೆಸ್ ಸರ್ಕಾರದಲ್ಲಿ ಒಳಜಗಳ ನಡೆಯುತ್ತಿದೆ. ನಾವು ಯಾವ ಕಾರಣಕ್ಕೂ ಈ ಸರ್ಕಾರ ಬೀಳಿಸುವ ಪ್ರಯತ್ನ ಮಾಡಲ್ಲ. ಅವರ ಸ್ವಯಂಕೃತ ಅಪರಾಧ ಕಾರಣದಿಂದ ಪತನವಾಗಲಿದೆ. ಅವರ ಜಗಳದಿಂದಲೇ ಸರ್ಕಾರ ಬೀಳಲಿದೆ ಎಂದು ಭವಿಷ್ಯ ನುಡಿದರು.

ಇದನ್ನೂ ಓದಿ : ಕರ್ನಾಟಕದಲ್ಲಿ ಮಹಾರಾಷ್ಟ್ರ ರೀತಿಯಲ್ಲಿ ಆಪರೇಷನ್ ಆಗುತ್ತದೆ: ಸಿಎಂ ಏಕನಾಥ್​ ಶಿಂಧೆ - CM Eknath Shinde

ETV Bharat Logo

Copyright © 2024 Ushodaya Enterprises Pvt. Ltd., All Rights Reserved.