ETV Bharat / state

ಅನಂತಕುಮಾರ್ ಹೆಗಡೆ ಅವರಿಂದ ಹೈಕಮಾಂಡ್ ಸ್ಪಷ್ಟನೆ ಕೇಳಿದೆ: ಪಿ ರಾಜೀವ್

author img

By ETV Bharat Karnataka Team

Published : Mar 11, 2024, 4:15 PM IST

ಸಂಸದ ಅನಂತ ಕುಮಾರ್ ಹೆಗಡೆ ಅವರ ಹೇಳಿಕೆ ಗಮನಿಸಿದ ಹೈಕಮಾಂಡ್ ಅವರಿಂದ ಸ್ಪಷ್ಟನೆ ಕೇಳಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ ರಾಜೀವ್ ಅವರು ತಿಳಿಸಿದ್ದಾರೆ.

P Rajiv
ಪಿ ರಾಜೀವ್

ಬೆಂಗಳೂರು : ಸಂಸದ ಅನಂತಕುಮಾರ್ ಹೆಗಡೆ ಅವರು ಸಂವಿಧಾನದ ಕುರಿತಾಗಿ ಕೊಟ್ಟ ಹೇಳಿಕೆ ಮತ್ತು ಬಿಜೆಪಿಗೆ ಯಾವುದೇ ರೀತಿಯ ಸಂಬಂಧ ಇಲ್ಲ. ರಾಷ್ಟ್ರೀಯ ನಾಯಕರು ಕೂಡ ಅದನ್ನು ಗಮನಿಸಿ ಅವರಿಂದ ಸ್ಪಷ್ಟನೆ ಕೇಳಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ ರಾಜೀವ್ ಅವರು ತಿಳಿಸಿದರು.

ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ಸಿನ ಕಾರ್ಯಕರ್ತರೊಬ್ಬರು ಪ್ರಧಾನಮಂತ್ರಿಯವರಿಗೆ ಅವಮಾನಕರವಾಗಿ ಹೇಳಿಕೆ ನೀಡಿದ್ದಾರೆ. ನಮ್ಮ ಪಕ್ಷದಲ್ಲಿ ಇಂಥ ಚಟುವಟಿಕೆಯಾದರೆ ಅದನ್ನು ಗಮನಿಸಿ ತಕ್ಷಣದಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ. ಪ್ರಧಾನಿ ನರೇಂದ್ರ ಮೋದಿಯವರು ಸಂವಿಧಾನಕ್ಕೆ ತಲೆಬಾಗಿ ನಮಿಸಿ ಸಂಸತ್ತನ್ನು ಪ್ರವೇಶ ಮಾಡಿದವರು. ಆದರೆ, ಸಂವಿಧಾನಕ್ಕೆ ಗೌರವಿಸಿ ಸಂಸತ್ ಪ್ರವೇಶಿಸಿದ ಪ್ರಧಾನಿಯವರ ಕುರಿತು ಕಾಂಗ್ರೆಸ್ ಕಾರ್ಯಕರ್ತ ಇಷ್ಟೊಂದು ಅವಹೇಳನಕಾರಿಯಾಗಿ ಮಾತನಾಡಿದಾಗ ಆತನಿಗೆ ತಿಳಿಹೇಳುವ ಮತ್ತು ಆತನ ಹೇಳಿಕೆಯನ್ನು ಖಂಡಿಸುವ ಕನಿಷ್ಠ ವರ್ತನೆಯನ್ನು ಕಾಂಗ್ರೆಸ್ಸಿನ ಯಾವ ನಾಯಕರೂ ಮಾಡಿಲ್ಲ ಎಂದು ಆಕ್ಷೇಪಿಸಿದರು.

ಗೌರವಸ್ಥರಾದ ಮಲ್ಲಿಕಾರ್ಜುನ ಖರ್ಗೆಯವರಿಗೂ ಇಂಥ ಮಾತುಗಳು ಇಷ್ಟ ಆಗುವುದಿಲ್ಲ ಎಂದು ಭಾವಿಸುತ್ತೇನೆ. ಅವರ ಪಕ್ಷದ ಯಾರಾದರೂ ಕಾರ್ಯಕರ್ತರು ಈ ರೀತಿ ಮಾತನಾಡಿದಾಗ ಅವರು ವೈಯಕ್ತಿಕವಾಗಿ ನೊಂದುಕೊಳ್ಳುತ್ತಾರೆ ಎಂಬುದು ನನ್ನ ಭಾವನೆ ಎಂದ ಅವರು, ಇಂತಹ ಕಾರ್ಯಕರ್ತರಿಗೆ ಬುದ್ಧಿವಾದ ಹೇಳಬೇಕಿತ್ತು. ಡಿ. ಕೆ ಶಿವಕುಮಾರ್ ಅವರು ತಾವು ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು. ಕುಂಟುನೆಪದ ಮೂಲಕ ಗಮನ ಬೇರೆ ಕಡೆ ಸೆಳೆಯುವುದನ್ನು ಬಿಟ್ಟುಬಿಡಲಿ. ಈ ಸರ್ಕಾರ ಮುಂದಿನ ಪೂರ್ಣ ಅವಧಿಯವರೆಗೆ ಜನಪರ ಕೆಲಸ ಮಾಡಬೇಕು. ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಬೇಕು ಎಂದು ಒತ್ತಿ ಹೇಳುತ್ತೇವೆ. ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸುತ್ತೇವೆ ಎಂದರು.

ಸಂಸದ ಅನಂತಕುಮಾರ್ ಹೆಗಡೆ ಅವರ ಹೇಳಿಕೆ ವೈಯಕ್ತಿಕ ವಿಚಾರ: ಸಂಸದರಾದ ಅನಂತಕುಮಾರ್ ಹೆಗಡೆ ಅವರ ಹೇಳಿಕೆ ಅವರ ವೈಯಕ್ತಿಕ ವಿಚಾರವೇ ಹೊರತು, ಪಕ್ಷದ ವಿಚಾರ ಅಲ್ಲ ಎಂದು ಬಿಜೆಪಿ ರಾಜ್ಯ ವಕ್ತಾರ ಮತ್ತು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದರು.

ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಬಿಜೆಪಿ ಯಾವತ್ತೂ ಕೂಡ ಬಾಬಾ ಸಾಹೇಬ್​ ಅಂಬೇಡ್ಕರರ ತತ್ವ, ಸಿದ್ಧಾಂತಗಳ ಜೊತೆ ಇದೆ. ನಮ್ಮ ದೇಶದಲ್ಲಿರುವ ಪ್ರತಿಯೊಬ್ಬರಿಗೂ ಸಮಪಾಲು, ಸಮಬಾಳು ಸಿಗಬೇಕೆಂಬ ನಿಟ್ಟಿನಲ್ಲಿ ನಾವು ಕಾರ್ಯ ನಿರ್ವಹಿಸುತ್ತಿದ್ದೇವೆ. ಯಾವುದೇ ಕಾರಣಕ್ಕೂ ಸಂವಿಧಾನ ಬದಲಾವಣೆಯ ಮಾತೇ ಇಲ್ಲ ಎಂದು ಪ್ರಧಾನಿಯವರೂ ಹೇಳಿದ್ದಾರೆ. ಅಲ್ಲದೆ ಸಂವಿಧಾನಕ್ಕೆ ನಮಿಸಿ ಪ್ರಧಾನಿ ಅವರು ಅಧಿಕಾರ ಸ್ವೀಕರಿಸಿದವರು ಎಂದು ನೆನಪಿಸಿದರು.

ಸಂಸದ ಅನಂತಕುಮಾರ್ ಹೆಗಡೆ ಅವರು ಬಹಳ ಹಿಂದೆ ‘ನಾವು ಬಂದಿರುವುದೇ ಸಂವಿಧಾನವನ್ನು ಬದಲಾವಣೆ ಮಾಡಲಿಕ್ಕೆ’ ಎಂದು ಹೇಳಿಕೆ ಕೊಟ್ಟಿದ್ದರು. ಆಗ ಅವರು ಸಚಿವರಾಗಿದ್ದರು. ಪ್ರಧಾನಮಂತ್ರಿ ಮೋದಿ ಅವರು ಅವರನ್ನು ಸದನಕ್ಕೆ ಕರೆಸಿ ಕ್ಷಮೆ ಕೇಳಿಸುವ ಕೆಲಸ ಮಾಡಿದ್ದರು. ಅದಾದ ಬಳಿಕ ಅವರನ್ನು ಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಲಾಗಿತ್ತು. ಇದೆಲ್ಲವೂ ಗೊತ್ತಿದ್ದರೂ ಕೂಡ ಎರಡ್ಮೂರು ದಿನಗಳ ಹಿಂದೆ ಅವರು, ಸಂವಿಧಾನದಲ್ಲಿ ಬದಲಾವಣೆ ಮಾಡಲು 400 ಸ್ಥಾನಗಳನ್ನು ಗೆಲ್ಲುವ ಗುರಿ ಇದೆ ಎಂದು ಹೇಳಿದ್ದಾರೆ. ಪಕ್ಷಕ್ಕೆ ಮುಜುಗರ ತರುವ ಮತ್ತು ವಿಪಕ್ಷಕ್ಕೆ ಆಹಾರ ಕೊಡುವಂಥ ಹೇಳಿಕೆ ನೀಡುವ ಅನಂತಕುಮಾರ್ ಸ್ಥಿಮಿತದಲ್ಲಿ ಇದ್ದಾರೋ ಇಲ್ಲವೋ ಗೊತ್ತಿಲ್ಲ. ಅವರ ಹೇಳಿಕೆ ಖಂಡನಾರ್ಹ. ಇಂಥ ಹೇಳಿಕೆಯಿಂದ ದೂರ ಉಳಿಯಲು ಮನವಿ ಮಾಡಿದರು.

ದೇಶದ ಪ್ರಧಾನಿ ಮೋದಿಯವರನ್ನು ಕೀಳುಮಟ್ಟದ ಭಾಷೆಯಲ್ಲಿ ಟೀಕಿಸುವುದು ಕಾಂಗ್ರೆಸ್ಸಿಗರ ಜಾಡ್ಯ; ಇದೊಂದು ಅಂಟು ರೋಗ. ಮುಖ್ಯಮಂತ್ರಿ ಆದಿಯಾಗಿ ಕೆಲವರಿಗೆ ಇರುವ ರೋಗವು ತಳಮಟ್ಟಕ್ಕೂ ಹರಡಿದೆ ಎಂದು ಅವರು ವಿಶ್ಲೇಷಿಸಿದರು. ಇದಕ್ಕೆ ರಾಜ್ಯದ ಮುಖ್ಯಮಂತ್ರಿಯವರು ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ : ಸಂವಿಧಾನ ಕುರಿತ ಅನಂತ್ ಕುಮಾರ್ ಹೆಗಡೆ ಹೇಳಿಕೆ ವೈಯಕ್ತಿಕ ಅಲ್ಲ, ಬಿಜೆಪಿಯ ಗುಪ್ತ ಅಜೆಂಡಾ: ಸಿಎಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.