ETV Bharat / state

'ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ' ಪುನಃ ಬರೆಸದಿದ್ದರೆ ಪರಿಣಾಮ ಎದುರಿಸಿ: ಬಿಜೆಪಿ ಎಚ್ಚರಿಕೆ

author img

By ETV Bharat Karnataka Team

Published : Feb 19, 2024, 4:00 PM IST

ವಸತಿ ಶಾಲೆಗಳ ಮೇಲೆ ಬರೆಸಲಾಗಿದ್ದ ಈ ಹಿಂದಿನ 'ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ' ಘೋಷ ವಾಕ್ಯ ಬದಲಾವಣೆ ಬಗ್ಗೆ ರಾಜ್ಯ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

bjp-leaders-outraged-over-slogan-change-in-residential-schools
'ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ' ಮತ್ತೆ ಬರೆಸದಿದ್ದರೆ ಪರಿಣಾಮ ಎದುರಿಸಿ: ಬಿಜೆಪಿ ಎಚ್ಚರಿಕೆ

ಬೆಂಗಳೂರು: 'ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ' ಎನ್ನುವ ಬರಹಕ್ಕೆ ರಾಜ್ಯ ಬಿಜೆಪಿ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಸತಿ ಶಾಲೆಗಳ ಮೇಲೆ ಬರೆಸಲಾಗಿದ್ದ ಈ ಹಿಂದಿನ 'ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ' ಘೋಷ ವಾಕ್ಯ ಮತ್ತೆ ಬರೆಯಿಸಬೇಕು ಹಾಗೂ ಈ ಆದೇಶದ ಹಿಂದಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಾಗುವ ಪರಿಣಾಮಗಳನ್ನು ಸರ್ಕಾರ ಎದುರಿಸಬೇಕಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಎಕ್ಸ್​​ನಲ್ಲಿ ಪೋಸ್ಟ್​​ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ''ಶಾಲೆಗಳೆಂದರೆ ಪವಿತ್ರ ತಾಣ, ಇದನ್ನು ಅರ್ಥೈಸಿಕೊಳ್ಳದ ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ಮನಸ್ಥಿತಿ, ಇಲಾಖೆಯ ಹಿರಿಯ ಐಎಎಸ್ ಅಧಿಕಾರಿಯ ಮೂಲಕ ಸರ್ಕಾರಿ ವಸತಿ ಶಾಲೆಗಳ ದ್ವಾರದಲ್ಲಿ ಬರೆಸಲಾಗಿದ್ದ 'ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ' ಎಂಬ ಘೋಷವಾಕ್ಯವನ್ನು ಬದಲಿಸಿ 'ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ' ಎಂದು ಬರೆಸಲು ಪ್ರಾರಂಭಿಸಿದೆ. ಮೊನ್ನೆಯಷ್ಟೇ ಇದೇ ಶಾಲೆಗಳಲ್ಲಿ ಧಾರ್ಮಿಕ ಹಬ್ಬ, ಪೂಜೆಗಳಿಗೆ ನಿಷೇಧ ಹೇರಿ ಆದೇಶ ಹೊರಡಿಸಿದ್ದರು. ಬಳಿಕ ಇದರಿಂದ 'ಕೈ' ಸುಡಲು ಆರಂಭವಾದ ಬೆನ್ನಲ್ಲೇ ಆದೇಶ ಹಿಂಪಡೆದು, ತನ್ನ ಹಿಂದೂ ವಿರೋಧಿ ಮನಸ್ಥಿತಿಯನ್ನು ಅದುಮಿಟ್ಟುಕೊಂಡಿದ್ದ ಸರ್ಕಾರ, ಇದೀಗ ಮತ್ತೊಂದು ಮತಿಗೇಡಿತನಕ್ಕೆ ಕೈಹಾಕಿದೆ. ಜೊತೆಗೆ, ವಿದ್ಯಾರ್ಥಿಗಳನ್ನು ಶಿಕ್ಷಕರ ವಿರುದ್ಧ ಎತ್ತಿಕಟ್ಟಲು ಈ ಸಾಲುಗಳು ಪ್ರಚೋದನೆ ನೀಡುವಂತಿದೆ'' ಎಂದು ಆರೋಪಿಸಿದ್ದಾರೆ.

''ಕೈ ಮುಗಿದು ಒಳಗೆ ಬಾ… ಎಂಬ ರಾಷ್ಟ್ರಕವಿ ಕುವೆಂಪು ಅವರ ಪದ್ಯದ ಸಾಲುಗಳಿಂದ ಪ್ರೇರಣೆ ಪಡೆದು ನಾಡಿನ ಅನೇಕ ಶಿಕ್ಷಣ ಸಂಸ್ಥೆಗಳು 'ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ' ಎಂದು ಘೋಷವಾಕ್ಯ ಬರೆಸಿವೆ. ಇದನ್ನೇ ಸರ್ಕಾರಿ ಶಾಲೆಗಳಲ್ಲೂ ಅನುಸರಿಸಲಾಗಿದೆ. 'ವಿದ್ಯಾ ದದಾತಿ ವಿನಯಂ… ವಿದ್ಯೆ ಎಂದರೆ ವಿನಯ, ವಿನಯವಿದ್ದೆಡೆ ಮಾತ್ರ ವಿದ್ಯೆ ಒಲಿಯುವುದು. ವಿದ್ಯಾಲಯವನ್ನು ದೇಗುಲದಂತೆ ಭಾವಿಸಿ 'ಕೈ ಮುಗಿದು ಒಳಗೆ ಬನ್ನಿ' ಎಂಬ ಸದ್ವಿನಯ, ಸಂಸ್ಕಾರ, ಶ್ರದ್ಧಾಗುಣಗಳನ್ನು ನೆನಪಿಸುವ ಈ ಸಾಲು ಯಾವ ಧರ್ಮದವರನ್ನು ನೋಯಿಸುತ್ತದೋ ತಿಳಿಯದಾಗಿದೆ? ಇದಕ್ಕೆ ಕಾಂಗ್ರೆಸ್ ಸರ್ಕಾರವೇ ಜನರಿಗೆ ಸ್ಪಷ್ಟನೆ ನೀಡಬೇಕಿದೆ'' ಎಂದು ವಿಜಯೇಂದ್ರ ಒತ್ತಾಯಿಸಿದ್ದಾರೆ.

''ದೇಶದ ಆರನೇ ಹಾಗೂ ಕರ್ನಾಟಕ ರಾಜ್ಯದ ಮೊದಲನೇ ವಿಶ್ವವಿದ್ಯಾಲಯವಾಗಿರುವ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸ್ಥಾಪಿಸಿದ ಮೈಸೂರು ವಿಶ್ವವಿದ್ಯಾಲಯದ ಧ್ಯೇಯ ವಾಕ್ಯ 'ನಹಿ ಜ್ಞಾನೇನ ಸದೃಶಂ' ಅಂದರೆ 'ಜ್ಞಾನಕ್ಕೆ ಸಮನಾದುದು ಯಾವುದು ಇಲ್ಲ' ಎಂಬುದಾಗಿದೆ. ಈ ಘೋಷವಾಕ್ಯ ವಿಶ್ವವಿದ್ಯಾಲಯದ ಕಾರ್ಯಸೌಧವನ್ನು ಅಲಂಕರಿಸಿದೆ. ಜೊತೆಗೆ ವಿದ್ಯೆಯ ಅಧಿದೇವತೆ ಸರಸ್ವತಿಯನ್ನೂ ಪಡಿಮೂಡಿಸಲಾಗಿದೆ. ತನ್ನ ಅಧೀನದಲ್ಲಿದೆ ಎಂಬ ಅಹಂನಿಂದ, ಭಗವದ್ಗೀತೆಯ ಈ ಶ್ಲೋಕ ಹಾಗೂ ಸರಸ್ವತಿಯನ್ನು ತೆಗೆಸುವ ಐತಿಹಾಸಿಕ ಪ್ರಮಾದವೆಸಗಲೂ ಈ ಕಾಂಗ್ರೆಸ್ ಸರ್ಕಾರ ಹಿಂದೇಟು ಹಾಕುವುದಿಲ್ಲ ಎನಿಸುತ್ತಿದೆ'' ಎಂದು ಟೀಕಿಸಿದ್ದಾರೆ.

''ವಸತಿ ಶಾಲೆಗಳ ಮೇಲೆ ಬರೆಸಲಾಗಿದ್ದ ಈ ಹಿಂದಿನ ಘೋಷ ವಾಕ್ಯ ಮತ್ತೆ ಬರೆಸದೆ, ಈ ಆದೇಶದ ಹಿಂದಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳದಿದ್ದರೆ ಮುಂದಾಗುವ ಪರಿಣಾಮಗಳನ್ನು ಸರ್ಕಾರ ಎದುರಿಸಬೇಕಿದೆ'' ಎಂದು ವಿಜಯೇಂದ್ರ ಎಚ್ಚರಿಕೆ ನೀಡಿದ್ದಾರೆ.

ವಿಧಾನಸೌಧದಲ್ಲಿನ ಧ್ಯೆಯವಾಕ್ಯವನ್ನೂ ಬದಲಿಸುತ್ತೀರಾ?: ''ಹುಸಿ ಜಾತ್ಯಾತೀತತೆಯ ಮತ್ತೊಂದು ಹುಸಿ ಪ್ರಯೋಗ. ರಾಷ್ಟ್ರಕವಿ ಕುವೆಂಪು ಅವರ ಪ್ರೇರಣಾದಾಯಿ ಘೋಷವಾಕ್ಯಕ್ಕೇ ಕತ್ತರಿ ಪ್ರಯೋಗ! ಅಂದ ಹಾಗೆ ವಿಧಾನಸೌಧದ ದ್ವಾರದಲ್ಲಿ ಕೆಂಗಲ್ ಹನುಮಂತಯ್ಯ ಅವರು ಬರೆಸಿರುವ ಧ್ಯೇಯವಾಕ್ಯವನ್ನೂ ಸಹ ಬದಲಿಸಲಾಗುತ್ತದೆಯೇ?'' ಎಂದು ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರಶ್ನಿಸಿದ್ದಾರೆ‌.

ವಿದ್ಯಾರ್ಥಿಗಳಲ್ಲಿ ನಕ್ಸಲ್​ ವಾದ ಬಿತ್ತುವ ಯತ್ನ: ಕಾಂಗ್ರೆಸ್ ಸರ್ಕಾರವು ಬಡ ಶಾಲಾ ಮಕ್ಕಳ ಬ್ರೈನ್ ವಾಶ್ ಮಾಡಲು ಕುವೆಂಪು ಅವರ ಧ್ಯೇಯ ವಾಕ್ಯವನ್ನೇ ಬದಲಾಯಿಸಲಾಗುತ್ತಿದೆ. ಅರ್ಥಗರ್ಭಿತವಾದ ಈ ಸಾಲುಗಳನ್ನು ಬದಲಾಯಿಸಿ ವಿದ್ಯಾರ್ಥಿಗಳ ತಲೆಯಲ್ಲಿ ಜಿಹಾದಿ ಮಾನಸಿಕತೆ, ನಕ್ಸಲ್ ವಿಚಾರವಾದ ಬಿತ್ತಲು ಹೊರಟಿರುವ ನಿಮ್ಮ ಸರ್ಕಾರದ ಉದ್ದೇಶವೇನು? ಕುವೆಂಪು ಅವರ ಸಾಲುಗಳು ನಿಮಗೆ ಬೇಡವಾದವೇ? ಸಿದ್ದರಾಮಯ್ಯ ಅವರೇ'' ಎಂದು ಮಾಜಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಅವರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಪರಿಷತ್​ನಲ್ಲಿ ಪ್ರತಿಧ್ವನಿಸಿದ 'ಜ್ಞಾನದೇಗುಲವಿದು ಧೈರ್ಯವಾಗಿ ಪ್ರಶ್ನಿಸು': ಸದನದ ಬಾವಿಗಿಳಿದು ಬಿಜೆಪಿ ಧರಣಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.