ETV Bharat / state

ಶ್ರೀನಿವಾಸ್ ಪ್ರಸಾದ್​ ಬೆಂಬಲ ಪಡೆಯಲು ಕೈ, ಕಮಲ ನಾಯಕರ ಕಸರತ್ತು: ಯಾರಿಗೆ ಸಿಗಲಿದೆ ಅವರ ಬೆಂಬಲ? - Srinivas Prasad

author img

By ETV Bharat Karnataka Team

Published : Mar 30, 2024, 7:49 PM IST

ಚಾಮರಾಜನಗರ ಕ್ಷೇತ್ರ ಸಂಸದ ಶ್ರೀನಿವಾಸ್ ಪ್ರಸಾದ್ ಅವರು ರಾಜಕೀಯ ನಿವೃತ್ತಿ ಹೊಂದಿದ್ದಾರೆ. ಸದ್ಯ ಲೋಕಸಭಾ ಚುನಾವಣೆಯಲ್ಲಿ ಅವರ ಬೆಂಬಲ ಪಡೆಯಲು ಬಿಜೆಪಿ ಮತ್ತು ಕಾಂಗ್ರೆಸ್​ ನಾಯಕರು ಕಸರತ್ತು ನಡೆಸುತ್ತಿದ್ದಾರೆ.

bjp-and-congress-leaders-are-trying-to-get-srinivas-prasads-support-for-lok-sabha-election
ಶ್ರೀನಿವಾಸ್ ಪ್ರಸಾದ್​ ಬೆಂಬಲ ಪಡೆಯಲು ಕೈ, ಕಮಲ ನಾಯಕರ ಕಸರತ್ತು: ಯಾರಿಗೆ ಸಿಗಲಿದೆ ಅವರ ಬೆಂಬಲ?

ಮೈಸೂರು: ಕಳೆದ 50 ವರ್ಷಗಳಿಂದ ಮೈಸೂರು - ಚಾಮರಾಜನಗರ ರಾಜಕಾರಣದಲ್ಲಿ ಸಕ್ರಿಯರಾಗಿದ್ದ ಚಾಮರಾಜನಗರ ಕ್ಷೇತ್ರ ಸಂಸದ ಶ್ರೀನಿವಾಸ್ ಪ್ರಸಾದ್ ಅವರು ಮಾರ್ಚ್ 17 ರಂದು ರಾಜಕೀಯ ನಿವೃತ್ತಿ ಘೋಷಿಸಿದ್ದರು. ಸದ್ಯ ಅವರ ಬೆಂಬಲ ಪಡೆಯಲು ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಮುಗಿ ಬೀಳುತ್ತಿದ್ದು, ಈಗ ಶ್ರೀನಿವಾಸ್ ಪ್ರಸಾದ್ ಅವರ ಮನೆ ಈ ಭಾಗದ ರಾಜಕೀಯ 'ಪವರ್ ಸೆಂಟರ್ ' ಆಗಿ ಬದಲಾಗಿದೆ.

bjp and congress Leaders are trying to get Srinivas Prasads support for lok sabha election
ಶ್ರೀನಿವಾಸ್ ಪ್ರಸಾದ್​ ಬೆಂಬಲ ಪಡೆಯಲು ಕೈ, ಕಮಲ ನಾಯಕರ ಕಸರತ್ತು: ಯಾರಿಗೆ ಸಿಗಲಿದೆ ಅವರ ಬೆಂಬಲ?

ಕಳೆದ 50 ವರ್ಷ ರಾಜಕಾರಣದಲ್ಲಿ 8 ಲೋಕಸಭೆ ಹಾಗೂ 6 ವಿಧಾನಸಭೆ ಚುನಾವಣೆಗಳನ್ನು ಎದುರಿಸಿರುವ ಶ್ರೀನಿವಾಸ್ ಪ್ರಸಾದ್ ಅವರು 6 ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು. ಆ ಪೈಕಿ 4 ಬಾರಿ ಕಾಂಗ್ರೆಸ್ ನಿಂದಲೇ ಆಯ್ಕೆಯಾಗಿದ್ದರು. ಇದರ ಜೊತೆಗೆ 6 ವಿಧಾನಸಭಾ ಚುನಾವಣೆಗಳನ್ನು ಎದುರಿಸಿದ್ದು, ಅದರಲ್ಲಿ 2 ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದರು. ಕಳೆದ ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ರಾಜಕೀಯದಿಂದ ದೂರ ಉಳಿದರೂ ಈ ಭಾಗದಲ್ಲಿ ಅಪಾರ ಬೆಂಬಲಿಗರನ್ನು ಹೊಂದಿರುವ ಅವರ ಬೆಂಬಲ ಪಡೆಯಲು ರಾಜಕೀಯ ನಾಯಕರು ಅವರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸುತ್ತಿದ್ದಾರೆ.

ಶ್ರೀನಿವಾಸ್ ಪ್ರಸಾದ್​ಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದ ಸಿಎಂ: ಒಂದು ಕಾಲದಲ್ಲಿ ಮೈಸೂರು ಭಾಗದಲ್ಲಿ ಸಿದ್ದರಾಮಯ್ಯ, ಶ್ರೀನಿವಾಸ್ ಪ್ರಸಾದ್ ಜೋಡಿಯನ್ನ ಜೋಡೆತ್ತುಗಳು ಎಂದು ಕರೆಯಲಾಗುತ್ತಿತ್ತು. ಅಷ್ಟು ಸ್ನೇಹ - ಸಮನ್ವಯ ಇವರ ನಡುವೆ ಇತ್ತು. ಆದರೆ, ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಇಬ್ಬರು ರಾಜಕೀಯ ಬದ್ಧ ವೈರಿಗಳಾದರು. ಆದರೆ 3 ದಿನಗಳ ಹಿಂದೆ ಮೈಸೂರಿಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶ್ರೀನಿವಾಸ್ ಪ್ರಸಾದ್ ಅವರಿಗೆ ದೂರವಾಣಿ ಕರೆ ಮಾಡಿ ಆರೋಗ್ಯ ವಿಚಾರಿಸಿ, ರಾಜಕೀಯ ನಿವೃತ್ತಿಯ ನಂತರದ ಜೀವನ ಸುಖಕರವಾಗಿರಲಿ ಎಂದು ಹಾರೈಸಿದ್ದರು.

bjp and congress Leaders are trying to get Srinivas Prasads support for lok sabha election
ಶ್ರೀನಿವಾಸ್ ಪ್ರಸಾದ್​ ಬೆಂಬಲ ಪಡೆಯಲು ಕೈ, ಕಮಲ ನಾಯಕರ ಕಸರತ್ತು: ಯಾರಿಗೆ ಸಿಗಲಿದೆ ಅವರ ಬೆಂಬಲ?

ಶ್ರೀವಾಸ್​ ಪ್ರಸಾದ್ ಅಳಿಯಂದಿರಿಗೆ ಬಿಜೆಪಿ ಟಿಕೆಟ್ ಮಿಸ್: ಶ್ರೀನಿವಾಸ್ ಪ್ರಸಾದ್ ಅವರ ಅಳಿಯಂದಿರಾದ ಮಾಜಿ ಶಾಸಕ ಬಿ ಹರ್ಷವರ್ಧನ್ ಹಾಗೂ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ಕೊಟ್ಟು ಚುನಾವಣಾ ರಾಜಕೀಯಕ್ಕೆ ಎಂಟ್ರಿಕೊಟ್ಟಿದ್ದ ಮತ್ತೊಬ್ಬ ಅಳಿಯ ಡಾ.ಮೋಹನ್ ಅವರು ಚಾಮರಾಜನಗರ ಕ್ಷೇತ್ರದ ಬಿಜೆಪಿ ಟಿಕೆಟ್ ಪಡೆಯುವ ನಿರೀಕ್ಷೆಯಲ್ಲಿದ್ದರು. ಆದರೆ, ಈ ಇಬ್ಬರಿಗೂ ಟಿಕೆಟ್ ನೀಡದೇ ಮಾಜಿ ಶಾಸಕ ಬಾಲರಾಜ್​ಗೆ ಬಿಜೆಪಿ ಮಣೆ ಹಾಕಿದೆ. ಮತ್ತೊಂದೆಡೆ, ಶ್ರೀನಿವಾಸ್ ಪ್ರಸಾದ್ ಇನ್ನೊಬ್ಬ ಅಳಿಯ ಧೀರಜ್ ಪ್ರಸಾದ್ ಬಿಜೆಪಿ ತೊರೆದು ಕಾಂಗ್ರೆಸ್​ಗೆ ಸೇರ್ಪಡೆ ಆಗಲು ಮಂದಾಗಿದ್ದಾರೆ. ಹೀಗೆಯೆ ಶ್ರೀನಿವಾಸ್ ಪ್ರಸಾದ್ ಅವರು ಮೂವರು ಅಳಿಯಂದಿರು ಈಗ ರಾಜಕೀಯ ನೆಲೆ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇದರ ನಡುವೆ ಶ್ರೀನಿವಾಸ್ ಪ್ರಸಾದ್ ಅವರು ರಾಜಕೀಯ ನಿವೃತ್ತಿ ಹೊಂದಿರುವುದು ಅವರ ಅಳಿಯಂದಿರ ರಾಜಕೀಯ ಭವಿಷ್ಯದ ಮೇಲೆ ಪರಿಣಾಮ ಬೀರಿದೆ.

ಶ್ರೀನಿವಾಸ್ ಪ್ರಸಾದ್ ಭೇಟಿಯಾದ ಸಚಿವ ಮಹದೇವಪ್ಪ​: ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್​ ಸಿ ಮಹದೇವಪ್ಪ ಅವರು ಸಿದ್ದರಾಮಯ್ಯ ಅವರ ಆಪ್ತರಾಗಿದ್ದಾರೆ. ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಕಳೆದ 2 ದಿನಗಳ ಹಿಂದೆ ಶ್ರೀನಿವಾಸ್ ಪ್ರಸಾದ್ ಅವರ ಮನೆಗೆ ಭೇಟಿ ನೀಡಿದ್ದರು. ಈ ವೇಳೆ, ತಮ್ಮ ಮಗ ಸುನಿಲ್ ಬೋಸ್​ ಚಾಮರಾಜನಗರ ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು, ಅವರನ್ನ ಬೆಂಬಲಿಸುವಂತೆ ಕೋರಿದ್ದಾರೆ ಎನ್ನಲಾಗಿದೆ.

ಈಟಿವಿ ಭಾರತ್​ಗೆ ಶ್ರೀನಿವಾಸ್ ಪ್ರಸಾದ್ ಪ್ರತಿಕ್ರಿಯೆ: ಈ ಟಿವಿ ಭಾರತ್​ಗೆ ಪ್ರತಿಕ್ರಿಯೆ ನೀಡಿರುವ ಸಂಸದ ಶ್ರೀನಿವಾಸ್ ಪ್ರಸಾದ್, ನಾನು ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗಿದ್ದೇನೆ. ಈ ಚುನಾವಣೆಯಲ್ಲಿ ಯಾರನ್ನು ಬೆಂಬಲಿಸುವುದಿಲ್ಲ. ಎರಡು ಪಕ್ಷದ ನಾಯಕರುಗಳು ನನ್ನನ್ನ ಭೇಟಿಯಾಗಿ ಆರೋಗ್ಯ ವಿಚಾರಿಸುತ್ತಿದ್ದಾರೆ. ಕಳೆದ ಮೂರು ದಿನದ ಹಿಂದೆ ಮುಖ್ಯಮಂತ್ರಿಗಳು ಸ್ವತಃ ಕರೆ ಮಾಡಿ ಆರೋಗ್ಯ ವಿಚಾರಿಸಿ, ನಿವೃತ್ತಿ ನಂತರದ ಜೀವನ ಸುಖಕರವಾಗಿರಲಿ ಎಂದು ಹಾರೈಸಿದ್ದಾರೆ. ನನ್ನ ಬೆಂಬಲಿಗರಿಗೂ ಸಹ ಈ ಚುನಾವಣೆಯಲ್ಲಿ ಇಂಥವರಿಗೆ ಬೆಂಬಲಿಸಿ ಎಂದು ಹೇಳುವುದಿಲ್ಲ. ನನ್ನ ಬೆಂಬಲಿಗರು ಅವರ ಇಚ್ಛೆಯಂತೆ ತೀರ್ಮಾನ ಕೈಕೊಳ್ಳಬಹುದು. ಸದ್ಯ ರಾಜಕೀಯ ವಾತಾವರಣ ಕಲುಷಿತಗೊಂಡಿದ್ದು. ಅದರ ಸುಧಾರಣೆ ಅಗತ್ಯ ಇದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕೋಲಾರದಲ್ಲಿ ಇಬ್ಬರ ಜಗಳದಲ್ಲಿ ಮೂರನೇಯವರಿಗೆ ಲಾಭ; ಕಾಂಗ್ರೆಸ್​ನಿಂದ​ ಕೆ. ವಿ. ಗೌತಮ್​ಗೆ ಟಿಕೆಟ್ - KOLAR LOK SABHA CONSTITUENCY

ETV Bharat Logo

Copyright © 2024 Ushodaya Enterprises Pvt. Ltd., All Rights Reserved.