ETV Bharat / state

'ಕಾಂಗ್ರೆಸ್ ಪರ ಪ್ರಚಾರ ಮಾಡ್ತೀನಿ, ಬಿಜೆಪಿಯವರ ಕೈಯಲ್ಲಿ ಏನ್‌ ಮಾಡೋಕಾಗುತ್ತೋ ಮಾಡಲಿ' - S T Somashekhar

author img

By ETV Bharat Karnataka Team

Published : Apr 5, 2024, 4:24 PM IST

Updated : Apr 5, 2024, 4:39 PM IST

ಚಿಕ್ಕಮಗಳೂರಿನಿಂದ ಗೋ ಬ್ಯಾಕ್ ಎಂದು ಹೊರ ಹಾಕಿದವರನ್ನು ತಂದು ಇಲ್ಲಿ ಲೋಕಸಭೆ ಚುನಾವಣೆಗೆ ನಿಲ್ಲಿಸಿದ್ದಾರೆ. ಅಂಥವರನ್ನು ಬೆಂಗಳೂರಿನವರು ಸ್ವಾಗತ ಮಾಡಬೇಕೇ ಎಂದು ಶಾಸಕ ಎಸ್.ಟಿ.ಸೋಮಶೇಖರ್ ಪ್ರಶ್ನಿಸಿದ್ದಾರೆ.

bengaluru-north-bjp-candidate-not-inviting-me-to-campaign-says-mla-s-t-somashekhar
ಕಾಂಗ್ರೆಸ್ ಪರ ಪ್ರಚಾರ ಮಾಡ್ತೀನಿ, ಬಿಜೆಪಿಯವರ ಕೈಯಲ್ಲಿ ಏನು ಮಾಡೋಕಾಗುತ್ತೋ ಮಾಡಲಿ: ಶಾಸಕ ಎಸ್.ಟಿ ಸೋಮಶೇಖರ್

ಶಾಸಕ ಎಸ್.ಟಿ.ಸೋಮಶೇಖರ್

ಬೆಂಗಳೂರು: ನನ್ನ ಕ್ಷೇತ್ರಕ್ಕೆ ಯಾರು ಸಹಾಯ ಮಾಡುತ್ತಾರೋ ಅವರಿಗೆ ಬೆಂಬಲ ನೀಡುತ್ತೇನೆ. ಅವರ ಪರ ಪ್ರಚಾರ ಮಾಡುತ್ತೇನೆ. ಅವರ ಕೈಯಲ್ಲಿ ಏನು ಮಾಡೋಕಾಗುತ್ತೋ ಮಾಡಲಿ ಎಂದು ಶಾಸಕ ಎಸ್.ಟಿ.ಸೋಮಶೇಖರ್ ನೇರವಾಗಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡುವ ಘೋಷಣೆ ಮಾಡಿದ್ದಾರೆ.

ಕೆಂಗೇರಿಯಲ್ಲಿ ಇಂದು ಕಾರ್ಯಕರ್ತರ ಸಭೆ ನಡೆಸಿದ ನಂತರ ಮಾತನಾಡಿದ ಅವರು, ಚಿಕ್ಕಮಗಳೂರಿನಿಂದ ಗೋ ಬ್ಯಾಕ್ ಎಂದು ಹೊರ ಹಾಕಿದವರನ್ನು ತಂದು ಇಲ್ಲಿ ಚುನಾವಣೆಗೆ ನಿಲ್ಲಿಸಿದ್ದಾರೆ. ಅಂಥವರನ್ನು ಬೆಂಗಳೂರಿನವರು ಸ್ವಾಗತ ಮಾಡಬೇಕಾ? ಎಂದರು.

ಕ್ಷೇತ್ರದ ಎಲ್ಲಾ ಮತದಾರರ ಸಭೆ ಕರೆದಿದ್ದೇನೆ. ಈ ಸಭೆಯಲ್ಲಿ ಇದುವರೆಗೂ ನಡೆದಂತಹ ಎಲ್ಲಾ ಮಾಹಿತಿಯನ್ನು ಕೊಟ್ಟಿದ್ದೇನೆ. ಲೋಕಸಭೆ ಅಭ್ಯರ್ಥಿ ಘೋಷಣೆಯಾಗಿದೆ. ಇದುವರೆಗೂ ಯಾರೊಬ್ಬರೂ ನನ್ನನ್ನು ಬೆಂಬಲ ಕೊಡಿ ಎಂದು ಕೇಳಿಲ್ಲ. ನನ್ನ ಕ್ಷೇತ್ರದಲ್ಲಿ 7ರಿಂದ 8 ಬಾರಿ ಪ್ರಚಾರ ಮಾಡಿದ್ದಾರೆ. ಯಾರೂ ನನ್ನನ್ನು ಸಂಪರ್ಕಿಸಿಲ್ಲ. ಯಾರು ನನ್ನನ್ನು ಸಂಪರ್ಕ ಮಾಡದೇ ಇದ್ದುದಕ್ಕೆ ಸಭೆ ಕರೆದಿದ್ದೇನೆ. ಇಷ್ಟೆಲ್ಲಾ ಆದಮೇಲೆ ಸುಮ್ಮನಿದ್ದರೆ ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತದೆ ಎಂದು ಹೇಳಿದರು.

ಬಿಜೆಪಿಯವರು ಏನೆಲ್ಲಾ ಅವಮಾನ ಮಾಡಿದ್ದಾರೆ ಎಂಬುದು ನನಗೆ ಗೊತ್ತಿದೆ. ರಾಜ್ಯ ಮಾತ್ರವಲ್ಲದೇ ಕೇಂದ್ರ ನಾಯಕರೂ ನನ್ನ ಸಂಪರ್ಕಿಸಿಲ್ಲ. ಮೊನ್ನೆ ಅಮಿತ್ ಶಾ ಬಂದ್ರೂ ಕೂಡ ನನಗೆ ಆಹ್ವಾನ ನೀಡಿಲ್ಲ. ನಿನ್ನೆಯವರೆಗೂ ಕಾದಿದ್ದೆ, ಆದರೂ ನೋ ರೆಸ್ಪಾನ್ಸ್. ಹಾಗಾಗಿ ಇವತ್ತು ಕಾರ್ಯಕರ್ತರ ಸಭೆ ಕರೆದಿದ್ದೇನೆ. ನಮ್ಮ ಅವಶ್ಯಕತೆ ಇಲ್ಲದವರು ಬಳಿ ನಾವೇಕೆ ಹೋಗಬೇಕು? ಎಂದು ಹೇಳಿದರು.

ಕಾಂಗ್ರೆಸ್​ಗೆ ಮರು ಸೇರ್ಪಡೆಯಾಗುತ್ತೀರಾ ಎಂಬ ಪ್ರಶ್ನೆಗೆ, ಎಲ್ಲವನ್ನೂ ಕಾದು ನೋಡಿ. ಈಗ ಬಿಜೆಪಿಯ ಯಾರು ಬಂದು ಕೇಳಿದರೂ ನಾನು ಬೆಂಬಲ ನೀಡುವುದಿಲ್ಲ. ನನಗೆ ಯಾವ ಹೈಕಮಾಂಡ್ ಕೂಡ ಇಲ್ಲ. ನನಗೆ ನನ್ನ ಕ್ಷೇತ್ರದ ಮತದಾರರೇ ಹೈಕಮಾಂಡ್. ಮತದಾರರ ತೀರ್ಮಾನವೇ ನನ್ನ ಅಂತಿಮ ನಿರ್ಧಾರ. ಕಾಂಗ್ರೆಸ್ ಅಭ್ಯರ್ಥಿ ಪರ ಮನೆ ಮನೆಗೆ ತೆರಳಿ ಪ್ರಚಾರ ಮಾಡುತ್ತೇನೆ. ಪ್ರಚಾರ ಮಾಡಬೇಕಾದದ್ದು ನನ್ನ ಕಮಿಟ್ಮೆಂಟ್. ಪ್ರತೀದಿನ ಬಿಜೆಪಿಯವರು ನನ್ನನ್ನು ಯಾವ ರೀತಿ ಟಾರ್ಗೆಟ್ ಮಾಡಿದ್ದಾರೆ ಎಂಬುದು ಗೊತ್ತಿದೆ. ಎಲ್ಲವನ್ನೂ ಮತದಾರರ ಮುಂದೆ ಬಿಚ್ಚಿಟ್ಟಿದ್ದೇನೆ ಎಂದು ತಿಳಿಸಿದರು.

ಇದನ್ನೂ ಓದಿ: ಅಧಿಕೃತವಾಗಿ ಬಿಜೆಪಿ ಸೇರಿದ ಸಂಸದೆ ಸುಮಲತಾ ಅಂಬರೀಶ್ - MP Sumalata joined BJP

Last Updated : Apr 5, 2024, 4:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.