ETV Bharat / state

ಬೆಂಗಳೂರು ಜೋಡಿ ಕೊಲೆ ಪ್ರಕರಣ: 11 ಜನರ ವಿರುದ್ಧ ಎಫ್ಐಆರ್

author img

By ETV Bharat Karnataka Team

Published : Feb 9, 2024, 3:28 PM IST

Updated : Feb 9, 2024, 4:55 PM IST

ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಜೋಡಿ ಕೊಲೆ ಘಟನೆಗೆ ಸಂಬಂಧಿಸಿದಂತೆ ಹನ್ನೊಂದು ಆರೋಪಿಗಳ ವಿರುದ್ದ ಹಲಸೂರು ಗೇಟ್​ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ.

ಬೆಂಗಳೂರು
ಬೆಂಗಳೂರು

ಬೆಂಗಳೂರು: ಇತ್ತೀಚಿಗೆ ನಗರದ ಹಲಸೂರು ಗೇಟ್‌ನಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಆರೋಪಿಗಳ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹತ್ಯೆಯಾದ ಸುರೇಶ್ ಪುತ್ರಿ ವಿನುತಾ ನೀಡಿದ ದೂರಿನನ್ವಯ ಬದ್ರಿಪ್ರಸಾದ್, ಮುನಿಸ್ವಾಮಿ, ರಾಜಪ್ಪ, ಮಹೇಶ್, ವೆಂಕಟೇಶ್, ಚಂದ್ರಶೇಖರ, ರವಿಶಂಕರ್, ಶಿವಕುಮಾರ್, ರಾಮಪ್ಪ, ಶಶಿಕಲಾ ಹಾಗೂ ಚೆನ್ನಕೃಷ್ಣಪ್ಪ ಎಂಬವರ ವಿರುದ್ಧ ಪೊಲೀಸರು ಎಫ್ಐಆರ್‌ ದಾಖಲಿಸಿಕೊಂಡಿದ್ದಾರೆ.

ದೂರಿನ ವಿವರ: ಕುಂಬಾರಪೇಟೆ ಅನ್ನದಾನ ಸಮಿತಿ ಟ್ರಸ್ಟ್ ಹಾಗೂ ಕುಂಬಾರಪೇಟೆಯ ಆಂಜನೇಯ ಸ್ವಾಮಿ ಬಿಲ್ಡಿಂಗ್ ಸಮಿತಿ ಟ್ರಸ್ಟ್ ಮತ್ತು ಕುಂಬಾರ ಪೇಟೆ ಅನ್ನದಾನ ಸಮಿತಿ ಕಲ್ಯಾಣ ಮಂದಿರ ಟ್ರಸ್ಟ್ ಆಸ್ತಿಯ ವಿಚಾರವಾಗಿ ಸುರೇಶ್ ಹಾಗೂ ಬದ್ರಿಪ್ರಸಾದ್ ನಡುವೆ ಸಿವಿಲ್ ವ್ಯಾಜ್ಯವಿತ್ತು. ನಂತರ ಕೋರ್ಟ್ ತೀರ್ಪು ಸುರೇಶ್ ಪರವಾಗಿ ಬಂದಿತ್ತು. ಇದೇ ವಿಚಾರವಾಗಿ ಕಳೆದ ಏಪ್ರಿಲ್‌ನಲ್ಲಿ ಆರೋಪಿಗಳು ಸುರೇಶ್ ಮತ್ತು ಅವರ ಪತ್ನಿಯ ಮೇಲೆ ಹಲ್ಲೆ ಮಾಡಿದ್ದರು. ಈ ಬಗ್ಗೆ ಸುರೇಶ್ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ನ್ಯಾಯಾಲಯದ ಮುಂದೆ ವಿಚಾರಣೆಯಲ್ಲಿದೆ.

ಇದಾದ ನಂತರವೂ ಸಹ ಆಸ್ತಿ ವಿಚಾರವಾಗಿ ಆರೋಪಿಗಳು ಸುರೇಶ್ ವಿರುದ್ಧ ಸಿಟಿ ಮಾರ್ಕೆಟ್ ಠಾಣೆಯಲ್ಲಿ ಸುಳ್ಳು ಆರೋಪದ ದೂರು ನೀಡಿದ್ದು, ಅದರಲ್ಲೂ ಸುರೇಶ್ ಪರವಾಗಿಯೇ ತೀರ್ಪು ಬಂದಿತ್ತು. ಇದೇ ಜಿದ್ದಿನಿಂದ ಇತರೆ ಆರೋಪಿಗಳ ಕುಮ್ಮಕ್ಕಿನಿಂದ ಆರೋಪಿ ಬದ್ರಿಪ್ರಸಾದ್ ಕೃತ್ಯ ಎಸಗಿದ್ದಾರೆ. ಆದ್ದರಿಂದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಾಗೂ ತಮ್ಮ ಕುಟುಂಬಕ್ಕೆ ರಕ್ಷಣೆ ಒದಗಿಸುವಂತೆ ಅವರು ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಆರೋಪಿ ಬದ್ರಿ ಪ್ರಸಾದ್​ನನ್ನು ಬಂಧಿಸಿರುವ ಹಲಸೂರು ಗೇಟ್ ಠಾಣೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಸಿಸಿಟಿವಿಯಲ್ಲಿ ಕೃತ್ಯ ಸೆರೆ: ಕೊಲೆ ಸಂದರ್ಭದಲ್ಲಿ ಸುತ್ತಲೂ ಸಾಕಷ್ಟು ಜನರಿದ್ದರೂ ಸಹ ಆರೋಪಿಯ ಅಟ್ಟಹಾಸ ತಡೆಯಲು ಸಾಧ್ಯವಾಗದಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿದೆ. ಸುರೇಶ್ ಹತ್ಯೆಗೆ ಅಡ್ಡ ಬಂದ ಅವರ ಸ್ನೇಹಿತ ಮಹೇಂದ್ರನನ್ನು ಕಚೇರಿ ಒಳಗಡೆ ಚಾಕು ಇರಿದು ಹತ್ಯೆಗೈದಿದ್ದ ಆರೋಪಿ ಬಳಿಕ ಸುರೇಶ್​​ರನ್ನು ಬಿಡದೆ ಅಟ್ಟಾಡಿಸಿದ್ದಾನೆ. ಈ ಸಮಯದಲ್ಲಿ ಸುರೇಶ್ ಜೀವ ಉಳಿಸಿಕೊಳ್ಳಲು ಅಂಗಡಿಯಿಂದ ಹೊರಗಡೆ ಓಡಿ ಬಂದಿದ್ದರು.

ಚಾಕು ಇರಿಯುತ್ತಿದ್ದರೂ ಸಹ ಸುತ್ತಮುತ್ತಲಿನ ಅಂಗಡಿಯವರು ಯಾರೂ ಸಹಾಯಕ್ಕೆ ಬಂದಿಲ್ಲ. ಇದೇ ವೇಳೆ ಸುರೇಶ್ ಯಾರಿಗೋ ಕರೆ ಮಾಡಿ ಸಹಾಯಕ್ಕಾಗಿ ಅಂಗಲಾಚಿದ್ದಾರೆ. ಆದರೂ ಸಹ ಆರೋಪಿಯು ಬಿಡದೆ ಚಾಕುವಿನಿಂದ ಇರಿದಿದ್ದಾನೆ. ಗಾಯಗೊಂಡು ಗೂಡ್ಸ್ ಸಾಗಿಸುವ ತಳ್ಳುವ ಗಾಡಿಯೊಳಕ್ಕೆ ಬಿದ್ದ ಸುರೇಶ್, ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ. ಸಂಪೂರ್ಣ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಇದನ್ನೂ ಓದಿ: 10 ಲಕ್ಷ ಲೋನ್​ಗೆ 5 ಲಕ್ಷ ರೂ ಸಬ್ಸಿಡಿ ಕೊಡುತ್ತೇವೆಂದು ಕೋಟ್ಯಾಂತರ ರೂ ವಂಚನೆ ಆರೋಪ: ಸಂತ್ರಸ್ತ ಮಹಿಳೆಯರಿಂದ ದೂರು

Last Updated : Feb 9, 2024, 4:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.