ETV Bharat / state

ಹೋಮ್​ ಡೆಲಿವರಿ ಆ್ಯಪ್​ ಮೂಲಕ​ ಹಿರಿಯ ನಾಗರಿಕರಿಗೆ ಮನೆ ಬಾಗಿಲಿಗೆ ಅನ್ನ ಸುವಿಧಾ ಯೋಜನೆ

author img

By ETV Bharat Karnataka Team

Published : Feb 16, 2024, 11:12 AM IST

Updated : Feb 16, 2024, 2:57 PM IST

2024-25ನೇ ಸಾಲಿನ ಬಜೆಟ್​ ಮಂಡಿಸುತ್ತಿರುವ ಸಿದ್ದರಾಮಯ್ಯ ಆಹಾರ ಇಲಾಖೆಯಲ್ಲಿ ಪರಿಚಯಿಸಿದ ಹೊಸ ಯೋಜನೆ ಇದಾಗಿದೆ.

anna suvidha project announced in siddaramaiah budget
anna suvidha project announced in siddaramaiah budget

ಬೆಂಗಳೂರು: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಡಿ ಅನ್ನಭಾಗ್ಯ ಯೋಜನೆಯನ್ನು ಬಜೆಟ್​​ನಲ್ಲಿ ಸಮರ್ಥಿಸಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 80 ವರ್ಷ ದಾಟಿದ ಹಿರಿಯ ನಾಗರಿಕರಿಗೆ ಹೋಮ್ ಡೆಲಿವರಿ ಮೂಲಕ ಪಡಿತರ ತಲುಪಿಸುವ ಹೊಸ 'ಅನ್ನ ಸುವಿಧಾ ಯೋಜನೆ'ಯನ್ನು ಘೋಷಿಸಿದ್ದಾರೆ.

ಅನ್ನ ಸುವಿಧಾ ಎಂಬ ಹೊಸ ಯೋಜನೆಯಡಿಯಲ್ಲಿ ಹೋಮ್ ಡೆಲಿವೆರಿ ಆ್ಯಪ್ ಮೂಲಕ 80 ವರ್ಷ ದಾಟಿದ ಹಿರಿಯ ನಾಗರಿಕರು ಮಾತ್ರ ಇರುವ ಮನೆಯ ಬಾಗಿಲಿಗೆ ಆಹಾರ ಧಾನ್ಯಗಳನ್ನು ತಲುಪಿಸುವ ಸಾಮಾಜಿಕ ಭದ್ರತಾ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ಬಜೆಟ್​​ನಲ್ಲಿ ಸಿಎಂ ಹೇಳಿದ್ದಾರೆ.

ಕೇಂದ್ರದ ವಿರುದ್ಧ ಟೀಕೆ: ಹಸಿವು ಮುಕ್ತ ಕರ್ನಾಟಕ ನಿರ್ಮಾಣದ ಕನಸಿನೊಂದಿಗೆ ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಉಚಿತ ಅಕ್ಕಿ ವಿತರಿಸುವ ಅನ್ನಭಾಗ್ಯ ಯೋಜನೆ ಜಾರಿಗೆ ತರಲಾಗಿತ್ತು. ಈ ಬಾರಿ ನಾವು ನೀಡಿದ್ದ ಭರವಸೆಯಂತೆ ಹೆಚ್ಚುವರಿಯಾಗಿ 5 ಕೆ.ಜಿ. ಆಹಾರ ಧಾನ್ಯ ನೀಡಲು ತೀರ್ಮಾನಿಸಲಾಗಿದೆ. ಆದರೆ, ಕೇಂದ್ರ ಸರ್ಕಾರದ ಅಸಹಕಾರ ಧೋರಣೆಯಿಂದಾಗಿ ಅಕ್ಕಿ ಲಭ್ಯವಾಗದ ಕಾರಣ, ಪ್ರತಿ ಫಲಾನುಭವಿಗೆ ಪ್ರತಿ ಕೆ.ಜಿ. ಅಕ್ಕಿಗೆ 34 ರೂ.ನಂತೆ ಪ್ರತಿ ಮಾಹೆ 170 ರೂ. ನೇರ ನಗದು ವರ್ಗಾವಣೆ ಮಾಡುವ ಮೂಲಕ ನಮ್ಮ ಬದ್ಧತೆಯನ್ನು ಪ್ರದರ್ಶಿಸಿದ್ದೇವೆ. ಜನವರಿ 2024 ರ ಅಂತ್ಯದವರೆಗೆ 4.02 ಕೋಟಿ ಫಲಾನುಭವಿಗಳಿಗೆ 4,595 ಕೋಟಿ ರೂ. ವರ್ಗಾವಣೆ ಮಾಡಲಾಗಿದೆ ಎಂದು ಬಜೆಟ್​​ ಸಂದರ್ಭದಲ್ಲಿಯೇ ಕೇಂದ್ರದ ಧೋರಣೆಯನ್ನು ಸಿಎಂ ಟೀಕಿಸಿದರು.

ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ನು 2013 ರಲ್ಲಿ ಜಾರಿಗೆ ತರಲಾಯಿತು. ಪಡಿತರ ಹಾಗೂ ಆಹಾರ ಧಾನ್ಯ ವಿತರಣಾ ವ್ಯವಸ್ಥೆಯನ್ನು ತಳಹಂತದಲ್ಲಿ ಬಲಪಡಿಸುವ ಮೂಲಕ ಜಾಗೃತಿ ಸಮಿತಿಗಳಲ್ಲಿ ಜನರ ಸಹಭಾಗಿತ್ವವನ್ನು ಹೆಚ್ಚಿಸಲಾಗುವುದು. ಇದರಿಂದ ಆಹಾರ ಭದ್ರತಾ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನ, ಹಾಗೂ ಹಸಿವು ಮುಕ್ತ ಕರ್ನಾಟಕದ ನಮ್ಮ ಆಶಯವನ್ನು ಈಡೇರಿಸಲು ನೆರವಾಗಲಿದೆ ಎಂದು ಸಿದ್ದರಾಮಯ್ಯ ಪ್ರಸ್ತಾಪಿಸಿದರು.

ಇಂಧನ ಇಲಾಖೆಯ ಬಜೆಟ್​ ಮುಖ್ಯಾಂಶಗಳು:

  • ಮುಂದಿನ ಏಳು ವರ್ಷದಲ್ಲಿ ಇಂಧನ ವಲಯಕ್ಕೆ ಹೆಚ್ಚಿನ ಬಂಡವಾಳ ಆಕರ್ಷಣೆಗಾಗಿ, ವಿದ್ಯುತ್​ ಉತ್ಪಾನದೆ ಸಾಮರ್ಥ್ಯ 32 ಸಾವಿರ ಮೆಗಾ ವ್ಯಾಟ್​ನಿಂದ 6 ಸಾವಿರ ಮೆಗಾ ವ್ಯಾಟ್​​ಗೆ ಹೆಚ್ಚಳ ಮಾಡುವುದಾಗಿ ಬಜೆಟ್​ನಲ್ಲಿ ಹೇಳಲಾಗಿದೆ.
  • ಸೋಲಾರ್​ ಪಂಪ್​ಗಳ ಸ್ಥಾಪನೆಗೆ ನೀಡಲಾಗುತ್ತಿರುವ ಸಹಾಯ ಧನ 30 ರಿಂದ 50ಕ್ಕೆ ಹೆಚ್ಚಳ
  • ಕೃಷಿ ಪಂಪ್​ ಸೆಟ್​ ಫೀಡರ್​ ಸೌರಿಕರಣ ಯೋಜನೆಯ ಎರಡನೇ ಹಂತದಲ್ಲಿ 1192 ಮೆಗಾವ್ಯಾಟ್​ ಸೌರ ಯೋಜನೆ ಅನುಷ್ಠಾನಕ್ಕಾಗಿ 4.3 ಲಕ್ಷ ಐಪಿ ಸೆಟ್​ ಸೌರೀಕರಣಕ್ಕೆ ಕ್ರಮ
  • ಎಸ್ಕಾಂ ವ್ಯಾಪ್ತಿಯ ಆಯ್ದ ಹಿಂದುಳಿದ ಗ್ರಾಮದಲ್ಲಿ ಪ್ರಯೋಗಿಕವಾಗಿ ಮೈಕ್ರೋ ಗ್ರೀಡ್​ ವ್ಯವಸ್ಥೆ ಮೂಲಕ ಶೇಖರಣೆ ಹೊಂದಿದ 500 ಕಿ.ವ್ಯಾ ಸಾಮರ್ಥ್ಯದ ಸೌರ ಘಟಕ ಸ್ಥಾಪನೆ
  • ಬೆಂಗಳೂರು ನಗರ ಸುತ್ತಮುತ್ತಲಿನ ವಿದ್ಯುತ್​ ಬೇಡಿಕೆ ನೀಗಿಸಲು ಪಿಪಿಪಿ ಸಬ್​ ಸ್ಟೇಷನ್​ಗಳ ಉನ್ನತೀಕರಣ
  • ಪಿಪಿಪಿ ಸಹಭಾಗಿತ್ವದಲ್ಲಿ 2500 ಇವಿ ಚಾರ್ಜಿಂಗ್​ ಕೇಂದ್ರ ಸ್ಥಾಪನೆಗೆ ನಿರ್ಧಾರ
  • ವಿದ್ಯುತ್​ ಸರಬರಾಜು ಕಂಪನಿಗಳ ಮೂಲಕ 35 ಕೋಟಿ ವೆಚ್ಚದಲ್ಲಿ 100 ಚಾರ್ಜಿಂಗ್​ ಕೇಂದ್ರ ಸ್ಥಾಪನೆ ಮಾಡಲಾಗುವುದು ಎಂದು ಸಿಎಂ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಬಜೆಟ್​ ಮಂಡನೆ ವೇಳೆ ವಿಪಕ್ಷಗಳಿಂದ ಗದ್ದಲ

Last Updated : Feb 16, 2024, 2:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.