ETV Bharat / state

ಅಧಿವೇಶನದಲ್ಲಿ ಎಲ್ಲಾ ಶಾಸಕರು ಸಮಯಕ್ಕೆ ಸರಿಯಾಗಿ ಭಾಗವಹಿಸಬೇಕು: ಸ್ಪೀಕರ್​ ಖಾದರ್​

author img

By ETV Bharat Karnataka Team

Published : Feb 7, 2024, 9:42 PM IST

ಅಧಿವೇಶನ ನಡೆಯುವಾಗ ಸಮಯಕ್ಕೆ ಸರಿಯಾಗಿ ಬಂದು ಬೆಳಗ್ಗಿನಿಂದ ಸಂಜೆಯವರೆಗೆ ಸಕ್ರಿಯವಾಗಿ ಭಾಗವಹಿಸಬೇಕು ಎಂದು ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಸೂಚನೆ ನೀಡಿದ್ದಾರೆ.

ವಿಧಾನಸಭಾ ಸ್ಪೀಕರ್ ಯು ಟಿ ಖಾದರ್
ವಿಧಾನಸಭಾ ಸ್ಪೀಕರ್ ಯು ಟಿ ಖಾದರ್

ವಿಧಾನಸಭೆ ಸ್ಪೀಕರ್​ ಖಾದರ್ ಹೇಳಿಕೆ​

ರಾಯಚೂರು: ವಿಧಾನಸಭೆ ಅಧಿವೇಶನದಲ್ಲಿ ಎಲ್ಲಾ ಶಾಸಕರು ಭಾಗವಹಿಸಬೇಕು. ಜನಸಾಮಾನ್ಯರು ಮತ‌ಕೊಟ್ಟು ಅವರನ್ನು ವಿಧಾನಸಭೆಗೆ ಕಳುಹಿಸುತ್ತಾರೆ. ಅವರು ಅದನ್ನು ಅರ್ಥ ಮಾಡಿಕೊಳ್ಳಬೇಕು. ಸಮಯಕ್ಕೆ ಸರಿಯಾಗಿ ಬಂದು ಸಕ್ರಿಯವಾಗಿ ಭಾಗವಹಿಸಬೇಕು ಎಂದು ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ತಿಳಿಸಿದರು.

ಫೆ.12ರಿಂದ 23ರವರೆಗೆ ಅಧಿವೇಶನ: ರಾಯಚೂರು ಜಿಲ್ಲೆಯಲ್ಲಿ ಇಂದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಖಾದರ್ ಆಗಮಿಸಿದ್ದರು. ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು. ವಿಧಾನಸಭಾ ಅಧಿವೇಶನ ಬರುವ ಫೆ.12ರಿಂದ 23ರವರೆಗೆ ನಡೆಯಲಿದೆ. ಫೆ.16ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡಿಸಲಿದ್ದಾರೆ ಎಂದರು.

ಯಾವುದೇ ಕೆಲಸವಿರಲಿ ಅಥವಾ ಎಷ್ಟೇ ಕೆಲಸವಿದ್ದರೂ ಬದಿಗಿಟ್ಟು ಶಾಸಕರು ವಿಧಾನಸಭೆಯಲ್ಲಿ ಹಾಜರಾಗಬೇಕು. ಯಾರು ಅಧಿವೇಶನದಲ್ಲಿ ಬೆಳಗ್ಗೆಯಿಂದ ಸಂಜೆಯತನಕ ಕುಳಿತುಕೊಳ್ಳುತ್ತಾರೆ, ಯಾರು ಎಲ್ಲ ಚರ್ಚೆಯಲ್ಲೂ ಭಾಗವಹಿಸುತ್ತಾರೆ, ಯಾರು ಬೇರೆಯವರ ಚರ್ಚೆಯನ್ನೂ ಸ್ವಲ್ಪ ಕೇಳುತ್ತಾರೆ ಮತ್ತು ತಾಳ್ಮೆಯಿಂದ ಕಾದು ಕುಳಿತು ಭಾಗವಹಿಸುತ್ತಾರೋ ಅಂಥವರು ಯಶಸ್ವಿ ನಾಯಕರಾಗುತ್ತಾರೆ ಎಂದು ಹೇಳಿದರು.

ವಿಧಾನಸಭೆಯನ್ನು ಜನಸಾಮಾನ್ಯನ ಹತ್ತಿರ ತೆಗೆದುಕೊಂಡು ಹೋಗಬೇಕು. ಅದು ಜನಸಾಮಾನ್ಯರಿಂದ ದೂರವಾಗಬಾರದು. ಸಮಾಜದ ಕಟ್ಟಕಡೇಯ ವ್ಯಕ್ತಿಗೂ ಸಿಗುವಂತಾಗಬೇಕು. ಅದು ನನ್ನಿಂದ ದೂರವಾಗಿದೆ ಎಂದು ಮನಸ್ಸಿಗೆ ಬರಬಾರದು. ಯಾರಿಗೆ ಬೇಕೋ ಅವರಿಗೆ ಬರುವಂತಹ ಕೆಲಸ ಮಾಡುತ್ತೇವೆ. ಬರುವವರ, ಹೋಗುವವರ ಸಮಯ, ಡೇಟಾ ಸಹ ಇದೆ. ಸಿಸಿ ಕ್ಯಾಮರಾಗಳನ್ನು ಅಳವಡಿಸಲು ವ್ಯವಸ್ಥೆ ಮಾಡಲಾಗಿದೆ ಎಂದರು.

ಕೂಲಿ ಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿಗಳು, ಕ್ರೀಡಾಪಟುಗಳು, ಪೌರಕಾರ್ಮಿಕರು ಸೇರಿದಂತೆ ಸಮಾಜದ ಎಲ್ಲಾ ವರ್ಗದವರಿಗೂ ಒಂದು ದಿನ ಅಧಿವೇಶನ ವೀಕ್ಷಿಸಲು ಅವಕಾಶ ಮಾಡಿಕೊಡುವ ಚಿಂತನೆ ನಡೆದಿದೆ. ಈ ನಿಟ್ಟಿನಲ್ಲಿ ವ್ಯವಸ್ಥೆ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದು ತಿಳಿಸಿದರು.

ಫೆ.12ರಿಂದ ಜಂಟಿ ಸದನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. ಇದಾದ ನಂತರ 15ನೇ ತಾರೀಖಿನವರೆಗೆ‌ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯುತ್ತದೆ. 16ರಂದು ಬಜೆಟ್ ಮಂಡನೆ. ಬಳಿಕ 23ರವರೆಗೂ ಬಜೆಟ್ ಮೇಲೆ ಚರ್ಚೆ ನಡೆಯಲಿದೆ ಎಂದರು.

ಇದಕ್ಕೂ ಮೊದಲೇ 9ನೇ ತಾರೀಖಿನಂದು ಶಾಸಕರು ಹಾಗೂ ಪತ್ರಕರ್ತರಿಗೆ ದಿನದ ಬಜೆಟ್ ಕುರಿತಾಗಿ ಬೆಂಗಳೂರಿನ ಕ್ಯಾಪಿಟಲ್‌ ಹೊಟೇಲ್‌ನಲ್ಲಿ ಒಂದು ದಿನದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಾಗಾರದಲ್ಲಿ ಬಜೆಟ್ ಅಂದರೆ ಏನು? ಯಾವ ರೀತಿಯಾಗಿ ಅನುದಾನ ಹಂಚಿಕೆಯಾಗುತ್ತದೆ?. ಅದರ ಮಹತ್ವ ಏನು? ಎನ್ನುವುದೂ ಸೇರಿದಂತೆ ಎಲ್ಲವನ್ನೂ ತಿಳಿಸಲಾಗುತ್ತದೆ. ನೂತನ ಶಾಸಕರಿಗೂ ಮಾಹಿತಿ ದೊರೆಯಲಿದೆ. ಪತ್ರಕರ್ತರಿಗೂ ಸಹ ಅದೇ ದಿನ ತರಬೇತಿ ನೀಡಲಾಗುವುದು ಎಂದರು.

ಇದನ್ನೂ ಓದಿ: ಸೋಷಿಯಲ್​ ಮೀಡಿಯಾಗಳಲ್ಲಿ ಗೀಚುವವರನ್ನು, ಪ್ರಶ್ನಿಸುವವರನ್ನು ಇತಿಹಾಸ ನೆನಪಿಡಲ್ಲ: ಸ್ಪೀಕರ್​ ಯು ಟಿ ಖಾದರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.