ETV Bharat / state

ಇಂಡಿಯಾ ಮೈತ್ರಿಕೂಟದ ಪರವಾಗಿ ಜನ ಅಚ್ಚರಿಯ ಫಲಿತಾಂಶ ನೀಡಲಿದ್ದಾರೆ : ಎಐಸಿಸಿ ಅಧ್ಯಕ್ಷ ಖರ್ಗೆ ವಿಶ್ವಾಸ - Mallikarjuna Kharge

author img

By ETV Bharat Karnataka Team

Published : May 24, 2024, 10:55 PM IST

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಲೋಕಸಭೆ ಚುನಾವಣೆ ಬಗ್ಗೆ ಮಾತನಾಡಿದರು.

aicc-president-mallikarjuna-kharge
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (ETV Bharat)

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (ETV Bharat)

ಕಲಬುರಗಿ : ಈ ಬಾರಿಯ ಲೋಕಸಭಾ ಚುನಾವಣೆ ಕಾಂಗ್ರೆಸ್ ಬಿಜೆಪಿ ಮಧ್ಯದಲ್ಲ, ಬದಲಾಗಿ ದೇಶದ ಜನ ಹಾಗೂ ಮೋದಿ ಮಧ್ಯೆ ನಡೆಯುತ್ತಿದೆ. ಕೇಂದ್ರ ಸರ್ಕಾರದ ವಿರುದ್ಧ ಬೇಸತ್ತಿರುವ ಜನರು ಜೂನ್ 4ರಂದು ಇಂಡಿಯಾ ಮೈತ್ರಿಕೂಟದ ಪರವಾಗಿ ಅಚ್ಚರಿಯ ಫಲಿತಾಂಶ ನೀಡಲಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿಂದು ಮಾತನಾಡಿದ ಅವರು, ಇನ್ನೂ ಎರಡೂ ಹಂತದ ಚುನಾವಣೆ ಬಾಕಿಯಿದೆ. ಇಂದು ನಾನು ಜಾರ್ಖಂಡ್ ರಾಜ್ಯಕ್ಕೆ ಪ್ರಚಾರಕ್ಕೆ ಹೋಗುತ್ತೇನೆ. ಇಲ್ಲಿಯವರೆಗೆ ಇಂಡಿಯಾ ಮೈತ್ರಿಕೂಟಕ್ಕೆ ಒಳ್ಳೆ ಮತ ಬಂದಿದೆ. ಜನ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ನಮಗೆ ಬಹುಮತ ಬರುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಿದರು.

ಇಷ್ಟೇ ನಂಬರ್ ಬರುತ್ತೆ ಅಂತ ನಾನೂ ಹೇಳೋದಿಲ್ಲ. ರಾಜಕೀಯದಲ್ಲಿ ಅದು ಬಹಳ ವಿರಳ. ಆದರೆ ಮೋದಿಯವರಿಗೆ 400 ಪಾರ್ ಹೇಗೆ ಗೊತ್ತಾಯಿತೋ ಗೊತ್ತಿಲ್ಲ. ಕರ್ನಾಟಕ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರದಲ್ಲಿ ಹೆಚ್ಚಿನ ಸ್ಥಾನ ನಾವು ಗೆಲ್ತೇವೆ. ರಾಜಾಸ್ಥಾನದಲ್ಲಿ ಈ ಬಾರಿ 7 ಸ್ಥಾನ ಗೆಲ್ಲುವ ಸಾಧ್ಯತೆ ಇದೆ. ಮಧ್ಯಪ್ರದೇಶದಲ್ಲಿ ಕೂಡಾ ಒಳ್ಳೆ ವಾತಾವರಣವಿದೆ. ಇಲ್ಲೆಲ್ಲಾ ನಮಗೆ ಹೆಚ್ಚಿನ ಸ್ಥಾನ ಸಿಗುವ ಮುನ್ಸೂಚನೆ ನೀಡುತ್ತಿವೆ ಎಂದು ಹೇಳಿದರು.

ನಾವು ಎಲ್ಲಾ ಧರ್ಮ, ಜಾತಿಯಲ್ಲಿ ನಂಬಿಕೆಯಿಟ್ಟಿದ್ದೇವೆ. ಮೋದಿಯವರು ಎಷ್ಟು ಬಾರಿ ರಾಮ ರಾಮ ಎನ್ನೋ ಹೆಸರು ತರುತ್ತಿರಾ..? ಹೀಗೆ ಮಾಡೋದ್ರಿಂದ ಮತ ಬರುತ್ತೆ ಎನ್ನುತ್ತಿದ್ದಾರೆ. ಆದರೆ ಫಲಿತಾಂಶದ ನಂತರ ಅವರಿಗೆ ಗೊತ್ತಾಗಲಿದೆ ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಇನ್ನು ಮೋದಿಯವರ ನಡವಳಿಕೆ ವಿಚಿತ್ರವಾಗಿದೆ. ಮೋದಿಯವರು ಚಿಲ್ಲರೆ ಮಾತನಾಡಿದ್ರೆ ಅವರಿಗೂ ಗೌರವ ಬರೋದಿಲ್ಲ. ನಮಗೂ ಗೌರವ ಬರೋದಿಲ್ಲ. ಅವರು ಪ್ರತಿದಿನ ಧರ್ಮ, ಜಾತಿ, ಕೈ ಅಧಿಕಾರಕ್ಕೆ ಬಂದ್ರೆ ಮಂಗಳ ಸೂತ್ರ ಇರೋಲ್ಲ, ನಿಮ್ಮ ಆಸ್ತಿ ಮುಸ್ಲಿಮರಿಗೆ ಹಂಚುತ್ತಾರೆ ಎನ್ನೋದನ್ನ ಬಿಡಬೇಕು ಎಂದು ಸಲಹೆ ನೀಡಿದರು.

ಗಾಂಧಿ ಕುಟುಂಬ ಅಧಿಕಾರ ಬಿಟ್ಟು ಸುಮಾರು ವರ್ಷ ಕಳೆದಿದೆ. 1989 ರ ಬಳಿಕ ಗಾಂಧಿ ಕುಟುಂಬದ ಯಾರೊಬ್ಬರು ಮಂತ್ರಿಯಾಗಿಲ್ಲ. ಆದ್ರೂ ಮೋದಿಯವರು ಗಾಂಧಿ, ನೆಹರು ಬಗ್ಗೆಯೇ ಬಡಬಡಿಸುತ್ತಾರೆ ಎಂದು ಖರ್ಗೆ ಕುಟುಕಿದರು. ಇದೇ ವೇಳೆ ಪ್ರಜ್ವಲ್ ರೇವಣ್ಣ ಕೇಸ್ ಬಗ್ಗೆ ಪ್ರತಿಕ್ರಿಯೆ ನೀಡೋಕೆ ನಿರಾಕರಿಸಿದ ಖರ್ಗೆ, ಅದರ ಬಗ್ಗೆ ರಾಜ್ಯ ನಾಯಕರು ಮಾತನಾಡ್ತಾರೆ. ಕಾನೂನಿನ ಪ್ರಕಾರ ಕ್ರಮ ಆಗಬೇಕು. ಅದು ಪ್ರಜ್ವಲ್ ಇರಲಿ, ಕೇಜ್ರಿವಾಲ್ ಸೆಕ್ರೆಟರಿ ಇರಲಿ. ನೆಲದ ಕಾನೂನು ಎಲ್ಲರಿಗೂ ಒಂದೇ ಎಂದು ಹೇಳಿದರು.

ಇದನ್ನೂ ಓದಿ : ಮೋದಿ ಕಾಂಗ್ರೆಸ್​ಗೆ ಬೈದಷ್ಟು ಒಳ್ಳೆಯದಾಗುತ್ತದೆ: ಮಲ್ಲಿಕಾರ್ಜುನ ಖರ್ಗೆ - Mallikarjuna Kharge

ETV Bharat Logo

Copyright © 2024 Ushodaya Enterprises Pvt. Ltd., All Rights Reserved.