ETV Bharat / state

ಪೂರ್ವ ಮುಂಗಾರು ಬಿತ್ತನೆ: ರೈತರಿಗೆ ಕೃಷಿ ಇಲಾಖೆ ನಿರ್ದೇಶಕರಿಂದ ಮಹತ್ವದ ಮಾಹಿತಿ - Pre Monsoon Sowing

author img

By ETV Bharat Karnataka Team

Published : May 23, 2024, 10:46 AM IST

Updated : May 23, 2024, 2:01 PM IST

ಕೃಷಿಗೆ ಬೇಕಾದ ಪೂರಕ ವಾತಾವರಣ ಇನ್ನೂ ಕಂಡುಬಂದಿಲ್ಲ. ಈ ಸಂದರ್ಭದಲ್ಲಿ ಬಿತ್ತನೆ ಮಾಡಿದರೆ ಕೊಳೆತು ನಷ್ಟ ಅನುಭವಿಸುವ ಸಾಧ್ಯತೆ ಇದೆ ಎಂದು ಹಾವೇರಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು ರೈತರಲ್ಲಿ ಮನವಿ ಮಾಡಿದ್ದಾರೆ.

ಮುಂಗಾರು ಬಿತ್ತನೆ ಮಾಡದಂತೆ ಕೃಷಿ ನಿರ್ದೇಶಕ ಮನವಿ!
ರೈತರಿಗೆ ಕೃಷಿ ಇಲಾಖೆ ನಿರ್ದೇಶಕರಿಂದ ಮಹತ್ವದ ಮಾಹಿತಿ (ETV Bharat)

ಕೃಷಿ ಇಲಾಖೆ ನಿರ್ದೇಶಕರಿಂದ ಮಹತ್ವದ ಮಾಹಿತಿ (ETV Bharat)

ಹಾವೇರಿ: ಹಾವೇರಿ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದೆ. ರೈತರು ಜಮೀನುಗಳನ್ನು ಹದಗೊಳಿಸುತ್ತಿದ್ದಾರೆ. ಇನ್ನು ಕೆಲವರು ಮುಂಗಾರುಪೂರ್ವ ಮಳೆಗೆ ಬಿತ್ತನೆ ಮಾಡುತ್ತಿದ್ದಾರೆ. ಕೆಲವು ರೈತರು ಶೇಂಗಾ ಮತ್ತು ಸೋಯಾಬಿನ್ ಬಿತ್ತನೆಗೆ ಭರದ ಸಿದ್ಧತೆ ನಡೆಸಿದ್ದು ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜಕ್ಕಾಗಿ ಮುಗಿಬೀಳುತ್ತಿದ್ದಾರೆ.

ಕೃಷಿಗೆ ಬೇಕಾದ ವಾತಾವರಣ ಇನ್ನೂ ಕಂಡುಬಂದಿಲ್ಲ: ಆದರೆ, ಪೂರ್ವ ಮುಂಗಾರಿಗೆ ಬೀಜ ಬಿತ್ತದಂತೆ ಹಾವೇರಿ ಕೃಷಿ ಇಲಾಖೆಯ ಜಂಟಿ ಸಹಾಯಕ ನಿರ್ದೇಶಕ ಮಂಜುನಾಥ್ ರೈತರಲ್ಲಿ ಮನವಿ ಮಾಡಿದ್ದಾರೆ. "ಪ್ರಸ್ತುತ ವರ್ಷ ಮುಂಗಾರುಪೂರ್ವ ಮಳೆ ಉತ್ತಮವಾಗಿದೆ. ವಾಡಿಕೆಗಿಂತ ಅಧಿಕ ಪ್ರಮಾಣದಲ್ಲಿ ಮಳೆಯಾಗಿರುವುದು ರೈತರಲ್ಲಿ ಸಂತಸ ತಂದಿದೆ. ಆದರೆ ಕೃಷಿಗೆ ಬೇಕಾದ ವಾತಾವರಣ ಇನ್ನೂ ಕಂಡುಬಂದಿಲ್ಲ. ಈ ಸಂದರ್ಭದಲ್ಲಿ ರೈತರು ಬಿತ್ತನೆ ಮಾಡಿದರೆ ಸರಿಯಾದ ಪ್ರಮಾಣದಲ್ಲಿ ಬೀಜಗಳು ಮೊಳಕೆಯೊಡೆಯುವುದಿಲ್ಲ. ಅಲ್ಲದೇ ಮಣ್ಣಿನಲ್ಲಿ ಕೊಳೆತು ಹೋಗುವ ಸಾಧ್ಯತೆಯೂ ಇದೆ. ಹೀಗಾಗಿ ರೈತರು ಬಿತ್ತನೆ ಮಾಡಬಾರದು" ಎಂದು ಸಲಹೆ ನೀಡಿದರು.

ಇದೇ ವೇಳೆ, ಈ ಸಮಯದಲ್ಲಿ ಬಿತ್ತನೆ ಮಾಡಿದರೆ ಇಳುವರಿ ಪ್ರಮಾಣವೂ ಕಡಿಮೆಯಾಗಲಿದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.

"ಜಿಲ್ಲೆಯ ರೈತರಿಗೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ಕೊರತೆಯಾಗದಂತೆ ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ. ಕಾಲಕಾಲಕ್ಕೆ ತಕ್ಕಂತೆ ರೈತರಿಗೆ ಬೀಜ, ರಸಗೊಬ್ಬರ ವಿತರಣೆ ಮಾಡಲಾಗುತ್ತದೆ. ರೈತರು ಈಗ ಬಿತ್ತನೆ ಬೀಜ ಮತ್ತು ರಸಗೊಬ್ಬರ ಖರೀದಿ ಮಾಡಿ ಮನೆಯಲ್ಲಿಟ್ಟುಕೊಳ್ಳಿ. ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ ಭೂಮಿ ಹದ ಮಾಡಿ ಮತ್ತು ವಾತಾವರಣ ತಂಪು ಇರುವ ಸಮಯದಲ್ಲಿ ಬಿತ್ತನೆ ಮಾಡಿ. ಇದರಿಂದ ಅಧಿಕ ಪ್ರಮಾಣದ ಬೆಳೆ ಬರಲಿದೆ."

"ಜಿಲ್ಲೆಯಾದ್ಯಂತ 42 ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜ, ಗೊಬ್ಬರ ವಿತರಣೆ ಮಾಡಲಾಗುತ್ತಿದೆ. ಗೋವಿಜೋಳ 60 ಸಾವಿರ ಟನ್, 800 ಕ್ವಿಂಟಲ್ ಭತ್ತ, 800 ಕ್ವಿಂಟಲ್ ಶೇಂಗಾ, ಸೋಯಾಬಿನ್ 3,063 ಕ್ವಿಂಟಲ್ ಸೇರಿದಂತೆ ರೈತರಿಗೆ ಬೇಕಾದಂತಹ ಬಿತ್ತನೆ ಬೀಜ ಹಾಗೂ ರಸಗೊಬ್ಬರ ದಾಸ್ತಾನಿದೆ. ಹಾಗಾಗಿ ರೈತರು ಹೆದರುವ ಅವಶ್ಯಕತೆ ಇಲ್ಲ" ಎಂದು ಕೃಷಿ ಅಧಿಕಾರಿ ತಿಳಿಸಿದರು.

ಆದರೆ, ಜಿಲ್ಲಾಡಳಿತ ಎಷ್ಟೇ ಮುಂಜಾಗೃತಾ ಕ್ರಮಗಳನ್ನು ಕೈಗೊಂಡರೂ ರೈತರಲ್ಲಿ ಆತಂಕ ಕಡಿಮೆಯಾಗಿಲ್ಲ. ತಮಗೆ ಬೇಕಾದ ಬಿತ್ತನೆ ಬೀಜ ಸಿಗುತ್ತೋ ಇಲ್ಲವೋ, ಗೊಬ್ಬರ ಸಿಗುತ್ತೋ ಇಲ್ಲವೋ ಎಂದು ರೈತ ಸಂಪರ್ಕ ಕೇಂದ್ರಗಳಲ್ಲಿ ಸರತಿಯಲ್ಲಿ ನಿಂತು ಖರೀದಿ ಮಾಡುತ್ತಿದ್ದಾರೆ.

ಬಿತ್ತನೆಗೆ ಹೊಲ ಹದಗೊಳಿಸುತ್ತಿರುವ ರೈತ
ಬಿತ್ತನೆಗೆ ಹೊಲ ಹದಗೊಳಿಸುತ್ತಿರುವ ರೈತ (ETV Bharat)

ಈ ಬಗ್ಗೆ ಪ್ರತಿಕ್ರಿಯಿಸಿರುವ ರೈತರು, "ಜಿಲ್ಲಾಡಳಿತ ಮೊದಮೊದಲು ಸಮರ್ಪಕ ದಾಸ್ತಾನಿದೆ ಎಂದು ತಿಳಿಸುತ್ತದೆ. ಆದರೆ ಸರಿಯಾದ ಸಮಯಕ್ಕೆ ಬಿತ್ತನೆ ಬೀಜ, ಗೊಬ್ಬರ ಸಿಗದೇ ನಷ್ಟ ಅನುಭವಿಸಿದ್ದೇವೆ. ಒಂದೊಂದು ಬಾರಿ ಭೂಮಿ ಹದ ಇರುತ್ತದೆ, ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ ಸಿಗುವುದಿಲ್ಲ. ಮತ್ತೆ ನಮ್ಮ ಬೆಳೆಗೆ ಗೊಬ್ಬರದ ಅವಶ್ಯವಾಗಿರುತ್ತೆ. ಅಂತಹ ಸಮಯದಲ್ಲಿ ಗೊಬ್ಬರ ಸಿಗುವುದಿಲ್ಲ. ಈ ಸಂದರ್ಭದಲ್ಲಿ ಬೆಳೆ ಹಾಳಾಗಿದ್ದನ್ನು ನೋಡಿದ್ದೇವೆ. ಜಿಲ್ಲಾಡಳಿತ ರೈತರಿಗೆ ಯಾವುದೇ ತೊಂದರೆಯಾಗದಂತೆ ಸಮರ್ಪಕ ಬಿತ್ತನೆ ಬೀಜ ಗೊಬ್ಬರ ನೀಡಿದರೆ ಸಾಕು" ಎಂದು ಹೇಳಿದರು.

ಇದನ್ನೂ ಓದಿ: ಬೆಳಗಾವಿ: ರೈತ ಹೋರಾಟಗಾರ್ತಿ ಜಯಶ್ರೀ ಗುರನ್ನವರ ನಿಧನ - Jayashree Gurannavar

Last Updated : May 23, 2024, 2:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.