ETV Bharat / state

ಕೊಡಗು: ನಿಶ್ಚಿತಾರ್ಥ ಮುಂದೂಡಿಕೆಯಾಗಿದ್ದಕ್ಕೆ ಬಾಲಕಿಯ ಹತ್ಯೆಗೈದು ರುಂಡದೊಂದಿಗೆ ಆರೋಪಿ ಪರಾರಿ - Kodagu Girl Murder

author img

By ETV Bharat Karnataka Team

Published : May 10, 2024, 10:00 AM IST

Updated : May 10, 2024, 1:17 PM IST

ನಿಶ್ಚಿತಾರ್ಥ ಮುಂದೂಡಿಕೆಯಾಗಿದ್ದರಿಂದ ಯುವಕನೋರ್ವ ಕೋಪದಲ್ಲಿ ಎಸ್​ಎಸ್​ಎಲ್​ಸಿ ಬಾಲಕಿಯ ತಲೆ ಕಡಿದು ಹತ್ಯೆ ಮಾಡಿದ ಘಟನೆ ಕೊಡಗು ಜಿಲ್ಲೆಯಲ್ಲಿ ಗುರುವಾರ ನಡೆದಿದೆ.

girl murder
ಆರೋಪಿ (ETV Bharat)

ಕೊಡಗು: ನಿಶ್ಚಿತಾರ್ಥ ಮುಂದೂಡಿಕೆಯಾದ ಕೋಪಕ್ಕೆ ಯುವಕನೋರ್ವ 16 ವರ್ಷದ ಅಪ್ರಾಪ್ತ ಬಾಲಕಿಯ ತಲೆ ಕಡಿದು ಭೀಕರವಾಗಿ ಹತ್ಯೆಗೈದಿರುವ ಹೃದಯವಿದ್ರಾವಕ ಘಟನೆ ಜಿಲ್ಲೆಯ ಸೋಮವಾರಪೇಟೆಯ ಸುರ್ಲಬ್ಬಿಯಲ್ಲಿ ಗುರುವಾರ ನಡೆದಿದೆ. 32 ವರ್ಷದ ಪ್ರಕಾಶ್ (32) ಎಂಬ ಆರೋಪಿ ಕೃತ್ಯ ಎಸಗಿ, ಬಳಿಕ ಬಾಲಕಿಯ ರುಂಡದ ಜೊತೆಗೆ ಪರಾರಿಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನಿಶ್ಚಿತಾರ್ಥ ಮುರಿದು ಬಿದ್ದಿದ್ದಕ್ಕೆ ಕೋಪ: ಗುರುವಾರ ಆರೋಪಿ ಪ್ರಕಾಶ್ ಮತ್ತು ಬಾಲಕಿಯ ನಿಶ್ಚಿತಾರ್ಥ ನಿಶ್ಚಯವಾಗಿತ್ತು. ಅಪ್ರಾಪ್ತೆಯ ನಿಶ್ಚಿತಾರ್ಥದ ಬಗ್ಗೆ ಮಾಹಿತಿ ಅರಿತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಬಾಲಕಿಯ ಮನೆಗೆ ಆಗಮಿಸಿದ್ದರು. ಬಳಿಕ ಎರಡೂ ಕುಟುಂಬಸ್ಥರ ಪೋಷಕರ ಮನವೊಲಿಸಿದ್ದರು. ಇದರಿಂದಾಗಿ ಬಾಲಕಿ 18 ವರ್ಷ ದಾಟಿದ ಬಳಿಕ ಪ್ರಕಾಶ್ ಜೊತೆ ಮದುವೆ ಮಾಡುವುದಾಗಿ ಎರಡೂ ಮನೆಯ ಪೋಷಕರು ಒಪ್ಪಿಕೊಂಡಿದ್ದರು. ಆ ಬಳಿಕ ಅಧಿಕಾರಿಗಳು ಮತ್ತು ಯುವಕನ ಮನೆಯವರು ಬಾಲಕಿಯ ಮನೆಯಿಂದ ತೆರಳಿದ್ದರು. ಇದರಿಂದ ಕೋಪಗೊಂಡಿದ್ದ ಯುವಕ ಸಾಯಂಕಾಲ 5.30ರ ವೇಳೆಗೆ ಬಾಲಕಿಯ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಬಾಲಕಿಯ ಪೋಷಕರ ಮೇಲೆ ಹಲ್ಲೆ ಮಾಡಿದ್ದ. ಬಳಿಕ ಬಾಲಕಿಯನ್ನು ಮನೆಯಿಂದ 100 ಮೀಟರ್​ ವರೆಗೆ ಎಳೆದೊಯ್ದಿದ್ದಾನೆ. ಅಲ್ಲಿ ಬಾಲಕಿಯ ತಲೆ ಕಡಿದು ಹತ್ಯೆ ಮಾಡಿ, ದೇಹವನ್ನು ಅಲ್ಲೆ ಬಿಟ್ಟು ತಲೆಯನ್ನು ತನ್ನೊಂದಿಗೆ ತೆಗೆದುಕೊಂಡು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯ ಹಲ್ಲೆಯಿಂದ ಬಾಲಕಿಯ ಪೋಷಕರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಾಲಕಿಯ ತಾಯಿಗೆ ತೀವ್ರವಾದ ಗಾಯವಾಗಿದ್ದು, ತಂದೆಯ ಸಣ್ಣ ಪ್ರಮಾಣದ ಗಾಯವಾಗಿದೆ. ಇನ್ನು ಬಾಲಕಿಯ ದೇಹ ಮಾತ್ರ ಪತ್ತೆಯಾಗಿದ್ದು, ರುಂಡಕ್ಕಾಗಿ ಶೋಧ ಕಾರ್ಯ ನಡೆಸಿದ್ದೇವೆ. ಆರೋಪಿಯ ವಿರುದ್ಧ ಪೋಕ್ಸೋ, ಕೊಲೆ ಪ್ರಕರಣ ದಾಖಲಿಸಿದ್ದು, ಬಂಧನಕ್ಕಾಗಿ ಬಲೆ ಬೀಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಸ್​ಎಸ್​ಎಲ್​ಸಿಯಲ್ಲಿ ಪಾಸ್​ ಆಗಿದ್ದ ಬಾಲಕಿ: ಮೃತ ಬಾಲಕಿಯ ಎಸ್ಎಸ್​ಎಲ್​ಸಿ ಫಲಿತಾಂಶ ಗುರುವಾರವಷ್ಟೇ ಪ್ರಕಟವಾಗಿತ್ತು. ಉತ್ತಮ ಅಂಕದೊಂದಿಗೆ ಪರೀಕ್ಷೆಯಲ್ಲಿ ಬಾಲಕಿ ಪಾಸ್​ ಆಗಿದ್ದಳು. ಆದರೆ ಪರೀಕ್ಷೆ ಫಲಿತಾಂಶದ ಖುಷಿಯಲ್ಲಿದ್ದ ಬಾಲಕಿಯನ್ನು ಸಂಜೆ ವೇಳೆಗೆ ಯುವಕ ಎಳೆದೊಯ್ದು ಹತ್ಯೆ ಮಾಡಿದ್ದಾನೆ. ಬಾಲಕಿಯ ಭೀಕರ ಹತ್ಯೆಯ ಪ್ರಕರಣವನ್ನು ಕೈಗೆತ್ತಿಕೊಂಡಿರುವ ಕೊಡಗು ಪೊಲೀಸರು ಬಿರುಸಿನ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಹಾಸನ: ಮನೆಯಲ್ಲೇ ಅತಿಥಿ ಉಪನ್ಯಾಸಕಿ ಆತ್ಮಹತ್ಯೆ - lecturer suicide

Last Updated : May 10, 2024, 1:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.