ETV Bharat / sports

ಟೀಂ ಇಂಡಿಯಾದ ಮುಖ್ಯ ಕೋಚ್ ಹುದ್ದೆಗೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗರನ್ನು ಸಂಪರ್ಕಿಸಿಲ್ಲ: ಜಯ್ ಶಾ ಸ್ಪಷ್ಟನೆ - JAY SHAH ON INDIA HEAD COACH

author img

By ETV Bharat Karnataka Team

Published : May 24, 2024, 3:44 PM IST

ಭಾರತದ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಗಾಗಿ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗರನ್ನು ನಾವು ಸಂಪರ್ಕಿಸಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸ್ಪಷ್ಟನೆ ನೀಡಿದ್ದಾರೆ.

Jay Shah, Roger Binny
ಜಯ್ ಶಾ, ರೋಜರ್ ಬಿನ್ನಿ (ANI Pictures)

ಮುಂಬೈ (ಮಹಾರಾಷ್ಟ್ರ): ಭಾರತದ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಗೆ ಭಾರತೀಯ ಕ್ರಿಕೆಟ್ ಮಂಡಳಿಯು ತಮ್ಮನ್ನು ಸಂಪರ್ಕಿಸಿದೆ ಎಂಬ ಆಸ್ಟ್ರೇಲಿಯಾದ ಮಾಜಿ ಬ್ಯಾಟರ್‌ಗಳಾದ ರಿಕಿ ಪಾಂಟಿಂಗ್ ಮತ್ತು ಜಸ್ಟಿನ್ ಲ್ಯಾಂಗರ್ ಹೇಳಿಕೆಯನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಶುಕ್ರವಾರ ತಳ್ಳಿ ಹಾಕಿದ್ದಾರೆ.

ಜೂನ್ 2ರಿಂದ ಪ್ರಾರಂಭವಾಗುವ ಟಿ-20 ವಿಶ್ವಕಪ್ ಮುಕ್ತಾಯದೊಂದಿಗೆ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿಯು ಕೊನೆಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹೊಸ ಮುಖ್ಯ ಕೋಚ್​ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಮೇ 27 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ದ್ರಾವಿಡ್ ಮೂಲ ಅಧಿಕಾರಾವಧಿಯು 2023ರ ಏಕದಿನ ವಿಶ್ವಕಪ್​ಗೆ ಕೊನೆಗೊಂಡಿತ್ತು. ಆದರೆ, ಬಿಸಿಸಿಐ ಕೆರಿಬಿಯನ್ ದ್ವೀಪಗಳು ಮತ್ತು ಅಮೆರಿಕಾದಲ್ಲಿ ನಡೆಯಲಿರುವ ಮುಂಬರುವ ಟಿ-20 ವಿಶ್ವಕಪ್​ವರೆಗೆ ವಿಸ್ತರಿಸಿದೆ. ಈಗ ದ್ರಾವಿಡ್ ಕೋಚ್​ ಆಗಿ ಮುಂದುವರೆಯುವ ಆಸಕ್ತಿ ಹೊಂದಿಲ್ಲ ಎಂದು ಬಿಸಿಸಿಐಗೆ ತಿಳಿಸಿದ್ದಾರೆ. ಇದೇ ವೇಳೆ, ಪಾಂಟಿಂಗ್ ಮತ್ತು ಲ್ಯಾಂಗರ್ ತಾವು ಕೋಚ್​ ಆಫರ್​​ಅನ್ನು ತಿರಸ್ಕರಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

ಜಯ್ ಶಾ ಸ್ಪಷ್ಟನೆ: ಈ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ನಾನಾಗಲಿ ಅಥವಾ ಬಿಸಿಸಿಐ ಆಗಲಿ ಯಾವುದೇ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗರನ್ನು ಕೋಚ್​ ಹುದ್ದೆಯ ಆಫರ್‌ನೊಂದಿಗೆ ಸಂಪರ್ಕಿಸಿಲ್ಲ. ಕೆಲ ಮಾಧ್ಯಮ ವಿಭಾಗಗಳಲ್ಲಿ ಪ್ರಸಾರವಾಗಿರುವ ವರದಿಗಳು ಸಂಪೂರ್ಣವಾಗಿ ತಪ್ಪು ಎಂದು ತಿಳಿಸಿದ್ಧಾರೆ.

ಮುಂದುವರೆದು, ನಮ್ಮ ರಾಷ್ಟ್ರೀಯ ತಂಡಕ್ಕೆ ಸರಿಯಾದ ತರಬೇತುದಾರನನ್ನು ಹುಡುಕುವುದು ಒಂದು ನಿಖರವಾದ ಮತ್ತು ಸಂಪೂರ್ಣ ಪ್ರಕ್ರಿಯೆಯಾಗಿದೆ. ಭಾರತೀಯ ಕ್ರಿಕೆಟ್ ರಚನೆಯ ಬಗ್ಗೆ ಆಳವಾದ ತಿಳಿವಳಿಕೆ ಹೊಂದಿರುವ ಮತ್ತು ಶ್ರೇಯಾಂಕಗಳ ಮೂಲಕ ಏರಿದ ವ್ಯಕ್ತಿಗಳನ್ನು ಗುರುತಿಸುವಲ್ಲಿ ನಾವು ಗಮನಹರಿಸಿದ್ದೇವೆ ಎಂದು ಜಯ್ ಶಾ ಹೇಳಿದ್ಧಾರೆ. ಈ ಮೂಲಕ ದ್ರಾವಿಡ್ ನಂತರದ ಮುಖ್ಯ ಕೋಚ್​ ಭಾರತೀಯರೇ ಆಗಿರಬಹುದು ಎಂಬ ಸುಳಿವು ನೀಡಿದ್ದಾರೆ.

ಗಂಭೀರ್ ಹೆಸರು ಮುನ್ನೆಲೆಗೆ: ಇದೀಗ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದ ಮೆಂಟರ್ ಆಗಿರುವ ಮಾಜಿ ಬ್ಯಾಟರ್ ಗೌತಮ್ ಗಂಭೀರ್ ಕೋಚ್​ ಹುದ್ದೆಯ ಪ್ರಮುಖ ಸ್ಪರ್ಧಿಗಳಲ್ಲಿ ಒಬ್ಬರು ಎಂದು ಸುದ್ದಿ ಹರಿಡಿದೆ. ಗಂಭೀರ್ 2022ರಿಂದ ಐಪಿಎಲ್ ತಂಡಗಳೊಂದಿಗೆ ಕೆಲಸ ಮಾಡುತ್ತಿದ್ದಾರೆ. ಆದರೆ, ದೇಶೀಯ ಅಥವಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಾವುದೇ ತರಬೇತುದಾರ ಅನುಭವವನ್ನು ಹೊಂದಿಲ್ಲ.

ಟೀಂ ಇಂಡಿಯಾ ಅಥವಾ ಐಪಿಎಲ್ ಫ್ರಾಂಚೈಸಿಗೆ ನಾಯಕರಾದ ಅನುಭವ ಹೊಂದಿರುವ ಗಂಭೀರ್ ಅವರ ದಾಖಲೆಯು ಸಾಕಷ್ಟು ಅತ್ಯುತ್ತಮವಾಗಿದೆ. 2010ರ ಕೊನೆಯಲ್ಲಿ ಮತ್ತು 2011ರ ಆರಂಭದಲ್ಲಿ ಭಾರತವು ಇವರ ನಾಯಕತ್ವದಲ್ಲಿ ಎಲ್ಲ ಆರು ಪಂದ್ಯಗಳನ್ನು ಗೆದ್ದಿತ್ತು. 2012 ಮತ್ತು 2014ರಲ್ಲಿ ಕೆಕೆಆರ್​ ಐಪಿಎಲ್​ನಲ್ಲಿ ಎರಡು ಪ್ರಶಸ್ತಿಗಳನ್ನು ಗೆದ್ದಿದೆ.

ಇದನ್ನೂ ಓದಿ: ಟೀಮ್​ ಇಂಡಿಯಾ ಮುಖ್ಯ​ ಕೋಚ್​ ಹುದ್ದೆಯ ಆಫರ್​ ನಿರಾಕರಿಸಿದ ರಿಕಿ ಪಾಂಟಿಂಗ್​: ಕಾರಣ ಇದು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.