ETV Bharat / entertainment

ಹೊಸ ಪ್ರತಿಭೆಗಳ 'ರಣಹದ್ದು' ಚಿತ್ರಕ್ಕೆ ಶರಣ್ ​ಸಾಥ್ - Ranahaddu

author img

By ETV Bharat Karnataka Team

Published : May 14, 2024, 8:28 AM IST

'ರಣಹದ್ದು' ಚಿತ್ರದ ಕಾರ್ಯಕ್ರಮಕ್ಕೆ ನಟ ಶರಣ್​ ಸೇರಿದಂತೆ ಹಲವರು ಸಾಥ್​ ನೀಡಿದ್ದಾರೆ.

Ranahaddu Team
ರಣಹದ್ದು ಚಿತ್ರತಂಡ (ETV Bharat)

ಪ್ರಸನ್ನ ಕುಮಾರ್ (ಜಂಗ್ಲಿ ಪ್ರಸನ್ನ) ಕಳೆದ 40 ವರ್ಷಗಳಿಂದ ಪೋಷಕ ಕಲಾವಿದನಾಗಿ ಕನ್ನಡ ಚಿತ್ರರಂಗಕ್ಕೆ ಚಿರಪರಿಚಿತರು. ನೂರಾರು ಚಿತ್ರಗಳಲ್ಲಿ ನಟಿಸಿ ಜನಪ್ರಿಯರಾಗಿರುವ ಇವರು ಇದೀಗ 'ರಣಹದ್ದು' ಚಿತ್ರದ ಮೂಲಕ ನಿರ್ದೇಶಕರಾಗಿ ಭಡ್ತಿ ಪಡೆದಿದ್ದಾರೆ. ಚಿತ್ರದ ನಿರ್ಮಾಪಕರು ಕೂಡ ಇವರೇ. ಪ್ರಸನ್ನ ಕುಮಾರ್ ಅವರ ಮಕ್ಕಳಾದ ಶಶಾಂಕ್ ಹಾಗೂ ಸೂರಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ‌. ಒಬ್ಬ ಮಗ ನಾಯಕನಾಗಿ, ಮತ್ತೋರ್ವ ಖಳನಾಯಕನಾಗಿ ಚಿತ್ರರಂಗ ಪ್ರವೇಶಿಸಿದ್ದಾರೆ.

ಇತ್ತೀಚೆಗೆ ಚಿತ್ರದ ಹಾಡುಗಳು ಹಾಗೂ ಟೀಸರ್ ಸಿರಿಮ್ಯೂಸಿಕ್ ಮೂಲಕ ಅನಾವರಣಗೊಂಡಿತು. ಡಾ.ರಾಜ್​​ಕುಮಾರ್ ಪುತ್ರಿ ಲಕ್ಷ್ಮೀ ಗೋವಿಂದರಾಜು ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಸ್.ಎ.ಚಿನ್ನೇಗೌಡ, ಎಸ್.ಎ.ಗೋವಿಂದರಾಜು, ಎಸ್.ಎ.ಶ್ರೀನಿವಾಸ್ ಟೀಸರ್ ಬಿಡುಗಡೆಗೊಳಿಸಿದರು. ನಟ ಶರಣ್ ಹಾಡುಗಳನ್ನು ರಿಲೀಸ್ ಮಾಡಿದರು.

Ranahaddu Team
ರಣಹದ್ದು ಚಿತ್ರತಂಡ (ETV Bharat)

ನಿರ್ಮಾಪಕ, ನಿರ್ದೇಶಕ ಪ್ರಸನ್ನ ಕುಮಾರ್ ಮಾತನಾಡಿ, ''ಕಳೆದ ನಲವತ್ತು ವರ್ಷಗಳಿಂದ ಕನ್ನಡ ಚಿತ್ರರಂಗ ನನಗೆ ಅನ್ನ ಹಾಕುತ್ತಿದೆ. ಅದಕ್ಕೆ ನಾನು ಹಾಗೂ ನನ್ನ ಕುಟುಂಬ ಚಿರಋಣಿ. ಕೆಲವು ವರ್ಷಗಳ ಹಿಂದೆ ಅಪಘಾತದಲ್ಲಿ ನನ್ನ ಕಾಲಿಗೆ ಗಾಯವಾಗಿತ್ತು. ಆ ಸಮಯದಲ್ಲಿ ಬಹಳ ಯೋಚನೆ ಮಾಡುತ್ತಿದ್ದೆ‌. ಕೆಲವು ದಿನಗಳ ನಂತರ ಚಿತ್ರವೊಂದನ್ನು ನಿರ್ಮಾಣದ ಜೊತೆಗೆ ನಿರ್ದೇಶನ ಕೂಡ ಮಾಡಬೇಕೆಂದು ಅನಿಸಿತು. ಆ ಆಸೆಯನ್ನು ಮಕ್ಕಳಲ್ಲಿ ಹೇಳಿಕೊಂಡೆ. ನನ್ನ ಆಸೆಗೆ ಮಕ್ಕಳು ಆಸರೆಯಾದರು. ಚಿತ್ರದಲ್ಲಿ ನಟಿಸುವ ಮೂಲಕ ಇಬ್ಬರು ಮಕ್ಕಳು ಚಿತ್ರರಂಗ ಪ್ರವೇಶಿಸಿದ್ದಾರೆ''‌‌.

ಇದನ್ನೂ ಓದಿ: ಅರ್ಮಾನ್ ಮಲಿಕ್​ ದನಿಯಲ್ಲಿ ಮೂಡಿಬಂತು ಡಾಲಿಯ 'ಕೋಟಿ' ಚಿತ್ರದ ಚೊಚ್ಚಲ ಗೀತೆ - Kotee Movie Song

''ಅನೇಕ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ‌. ಹಣವಿಲ್ಲದ ಮನುಷ್ಯನನ್ನು ಸಮಾಜ ಹೇಗೆ ನೋಡುತ್ತದೆ ಎಂಬುದೇ ಚಿತ್ರದ ಸಾರಾಂಶ‌. ಅಷ್ಟೇ ಅಲ್ಲ, ನೋಡುಗನಿಗೆ ಬೇಕಾದ ಎಲ್ಲಾ ಅಂಶಗಳು ಈ ಸಿನಿಮಾದಲ್ಲಿದೆ‌‌‌. ಚಿತ್ರೀಕರಣ ಮುಕ್ತಾಯವಾಗಿ ಬಿಡುಗಡೆ ಹಂತದಲ್ಲಿದ್ದೇವೆ'' ಎಂದು ತಿಳಿಸಿದರು.

ಇದನ್ನೂ ಓದಿ: ಮುಮ್ಮುಟ್ಟಿ ಜೊತೆಗೆ ನಟ ರಾಜ್​ ಬಿ ಶೆಟ್ಟಿ; ಬಿಡುಗಡೆಯಾಯ್ತು ಕನ್ನಡದ ನಟನ ಮಲಯಾಳಂ ಚಿತ್ರದ ಟ್ರೈಲರ್​ - RAJ B shetty malayalam Movie

ಬಳಿಕ ತಮ್ಮ ಪಾತ್ರದ ಬಗ್ಗೆ ಶಶಾಂಕ್, ಸೂರಜ್ ಕೊಂಚ ಮಾಹಿತಿ ನೀಡಿದರು. ಚಿತ್ರದಲ್ಲಿ ನಾಲ್ಕು ಹಾಡುಗಳಿರುವುದಾಗಿ ಸಂಗೀತ ನಿರ್ದೇಶಕ ಸಿಂಗರ್ ಶ್ರೀನಿವಾಸ್ ತಿಳಿಸಿದರು.

ಕಾರ್ಯಕ್ರಮದಲ್ಲಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ.ಸುರೇಶ್, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಎನ್.ಆರ್.ಕೆ.ವಿಶ್ವನಾಥ್, ಸಿರಿ ಮ್ಯೂಸಿಕ್​ನ ಸುರೇಶ್ ಚಿಕ್ಕಣ್ಣ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಕೆಲವರು ಪ್ರಸನ್ನ ಕುಮಾರ್ ಅವರೊಂದಿಗಿನ ಒಡನಾಟವನ್ನು ನೆನಪಿಸಿಕೊಂಡು, ಚಿತ್ರಕ್ಕೆ ಶುಭ ಕೋರಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.