ETV Bharat / entertainment

'ಮೆಜೆಸ್ಟಿಕ್'ಗೆ ಮರಿದಾಸನ ಎಂಟ್ರಿ: ಶಿವರಾತ್ರಿಯಂದೇ ಸೆಟ್ಟೇರಲಿದೆ ಮೆಜೆಸ್ಟಿಕ್ 2

author img

By ETV Bharat Karnataka Team

Published : Feb 20, 2024, 2:30 PM IST

ರಾಮು ಅವರ ಮೆಜೆಸ್ಟಿಕ್ 2 ಸಿನಿಮಾ ಶಿವರಾತ್ರಿ ಸಂದರ್ಭದಲ್ಲಿ ಸೆಟ್ಟೇರಲಿದೆ.

Majestic 2
ಮೆಜೆಸ್ಟಿಕ್ 2

ಮೆಜೆಸ್ಟಿಕ್ 2

ಕನ್ನಡ ಚಿತ್ರರಂಗದಲ್ಲಿ ನಟ ದರ್ಶನ್ ಅವರಿಗೆ ದಾಸ ಎಂಬ ಹೆಸರು ತಂದುಕೊಟ್ಟಿದ್ದೇ ''ಮೆಜೆಸ್ಟಿಕ್'' ಚಿತ್ರ. 22 ವರ್ಷಗಳ ಹಿಂದೆ ತೆರೆಕಂಡು ದೊಡ್ಡ ದಾಖಲೆ ಬರೆದಿದ್ದ ಮೆಜೆಸ್ಟಿಕ್ ಸಿನಿಮಾ ನಟ ದರ್ಶನ್ ಅವರಿಗೆ ಒಳ್ಳೆ ಹೆಸರನ್ನು ತಂದುಕೊಟ್ಟಿತ್ತು. ಆ ಚಿತ್ರಕ್ಕೆ ಆರಂಭದಲ್ಲಿ ಕಾನ್ಸೆಪ್ಟ್ ಹೆಣೆದಿದ್ದ ರಾಮು ಅವರೇ ಈಗ 'ಮೆಜೆಸ್ಟಿಕ್ 2' ನಿರ್ದೇಶಿಸಲು ಮುಂದಾಗಿದ್ದಾರೆ. ಮಹಾಶಿವರಾತ್ರಿಯ ಶುಭ ದಿನದಂದು ಈ ಸಿನಿಮಾ ಸೆಟ್ಟೇರಲಿದೆ.

ಈ ಚಿತ್ರದ ಮೂಲಕ ಹಿರಿಯ ನಿರ್ಮಾಪಕ, ವಿತರಕ ಶಿಲ್ಪಾ ಶ್ರೀನಿವಾಸ್ ಅವರ ಪುತ್ರ ಭರತ್ ನಾಯಕ ನಟನಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಅಮ್ಮಾ ಎಂಟರ್​ಪ್ರೈಸಸ್ ಮೂಲಕ ಚಿತ್ರದುರ್ಗ ಮೂಲದ ಟಿ. ಆನಂದಪ್ಪ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ದಶಕಗಳಿಂದಲೂ ತಂತ್ರಜ್ಞನಾಗಿ ಕೆಲಸ ಮಾಡುತ್ತಿರುವ ರಾಮು ಅವರು ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಇತ್ತೀಚೆಗೆ ಮೆಜೆಸ್ಟಿಕ್ 2 ಚಿತ್ರದ ಟೈಟಲ್ ಅನಾವರಣ ಮಾಡಲಾಯಿತು.

Majestic 2
ಮೆಜೆಸ್ಟಿಕ್ 2

ನಿರ್ದೇಶಕ ರಾಮು ಮಾತನಾಡಿ, ಆರಂಭದಲ್ಲಿ ನಾನು ಪಿ.ಎನ್ ಸತ್ಯ ಪ್ರೇಂ ಜೊತೆ ಕೆಲಸ ಮಾಡಿದ್ದೆ. ಮೆಜೆಸ್ಟಿಕ್ ಸ್ಕ್ರಿಪ್ಟ್ ಬರೆದಿದ್ದು ನಾನೇ. ನಂತರ ಕಾರಣಾಂತರಗಳಿಂದ ನಾನು ಚಿತ್ರತಂಡದಿಂದ ಹೊರಬರಬೇಕಾಯಿತು. ನಾನು ಬೆಂಗಳೂರಿಗೆ ಬಂದಾಗ ಮೆಜೆಸ್ಟಿಕ್‌ನಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡಿದಾಗಲೇ ಈ ಟೈಟಲ್ ಹೊಳೆದಿತ್ತು. ಮೆಜೆಸ್ಟಿಕ್ ಸಿನಿಮಾ ನನ್ನ ಕನಸು, ಅದೀಗ ನನಸಾಗುತ್ತಿದೆ ಎಂದು ತಿಳಿಸಿದರು.

ಬಳಿಕ ಉದಯೋನ್ಮುಖ ನಾಯಕ ನಟ ಭರತ್ ಮಾತನಾಡಿ, ನಿರ್ದೇಶಕರು ಈ ಕಥೆ, ಟೈಟಲ್ ಹೇಳಿದಾಗ ಬಹಳ ಖುಷಿಯಾಯ್ತು. ನಾನು ದರ್ಶನ್ ಅವರ ಅಭಿಮಾನಿ. ಅವರು ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ ಸಂದರ್ಭದಲ್ಲಿ ನಮ್ಮ ಸಿನಿಮಾ ಲಾಂಚ್ ಆಗ್ತಿದೆ. ಮರಿದಾಸನ ಪಾತ್ರಕ್ಕೆ ಸಾಕಷ್ಟು ತಯಾರಿ ಮಾಡಿಕೊಂಡಿದ್ದೇನೆ ಎಂದು ತಿಳಿಸಿದರು.

ನಿರ್ಮಾಪಕ ಆನಂದಪ್ಪ ಮಾತನಾಡಿ, ನಾನು ಈ ಹಿಂದೆ ಪಿಂಕ್ ನೋಟ್ ಎಂಬ ಚಿತ್ರವನ್ನು ಆರಂಭಿಸಿದ್ದೇನೆ. ಆ ಚಿತ್ರದ ಕೆಲಸ ಶೇ. 90ರಷ್ಟು ಮುಗಿದಿದೆ. ಇದು ನನ್ನ ಎರಡನೇ ಚಿತ್ರ. ಸ್ನೇಹಿತ ರಾಮು ಬಹಳ ದಿನಗಳಿಂದ ಈ ಕಥೆ ಚೆನ್ನಾಗಿದೆ, ನೋಡಿ ಅಂತಾ ಹೇಳುತ್ತಿದ್ದರು. ಒಮ್ಮೆ ಕಥೆ ಕೇಳಿದೆ, ಇಷ್ಟವಾಯ್ತು. ಜನರು ನಮ್ಮ ಸಿನಿಮಾ ನೋಡಿ ಅದರಲ್ಲಿ ಏನಾದರೂ ಆಯ್ಕೆ ಮಾಡಿಕೊಳ್ಳಬೇಕು, ಅಂತಹ ಸಿನಿಮಾ ಮಾಡಿ ಎಂದು ತಿಳಿಸಿದೆ. ನಾವೆಲ್ಲಾ ಸೇರಿ ಒಳ್ಳೆ ಚಿತ್ರ ಮಾಡುತ್ತಿದ್ದೇವೆ. ನಿಮ್ಮೆಲ್ಲರ ಆಶೀರ್ವಾದ ಬೇಕು ಎಂದು ಕೇಳಿಕೊಂಡರು.

Majestic 2
ಮೆಜೆಸ್ಟಿಕ್ 2

ಇದನ್ನೂ ಓದಿ: ವಿಭಿನ್ನ ಕಥೆಯೊಂದಿಗೆ ಪ್ರೇಕ್ಷಕರ ಎದುರು ಬರಲಿದ್ದಾರೆ ನಿರ್ದೇಶಕ ಗಿರಿರಾಜ್

ನಟ ಭರತ್ ತಂದೆ ಶಿಲ್ಪಾ ಶ್ರೀನಿವಾಸ್ ಮಾತನಾಡಿ, ನಾನು 1976ರಿಂದ ಚಿತ್ರರಂಗದಲ್ಲಿದ್ದೇನೆ. ಬಹುತೇಕ ಸ್ಟಾರ್‌ಗಳ ಜೊತೆ 25 ಸಿನಿಮಾಗಳನ್ನು ನಿರ್ಮಿಸಿದ್ದು, 500ಕ್ಕೂ ಹೆಚ್ಚು ಚಿತ್ರಗಳನ್ನು ವಿತರಿಸಿದ್ದೇನೆ. ನನ್ನ ಮಗ ಭರತ್ ಮೊದಲ ಬಾರಿಗೆ ಹೀರೋ ಆಗುತ್ತಿದ್ದಾನೆ. ದೇವರು, ಆನಂದಪ್ಪ ಅವರನ್ನು ಕಳುಹಿಸಿದ್ದಾರೆ. ನಿರ್ದೇಶಕ - ರಾಮು, ಸಂಗೀತ ನಿರ್ದೇಶಕ - ವಿನು ಮನಸ್​, ಛಾಯಾಗ್ರಾಹಕ - ವೀನಸ್ ಮೂರ್ತಿ ಇವರೆಲ್ಲರ ಕಲ್ಪನೆಯಲ್ಲಿ ಮೆಜೆಸ್ಟಿಕ್ ಚಿತ್ರ ಮೂಡಿ ಬರುತ್ತಿದೆ.

ಇದನ್ನೂ ಓದಿ: ಶಿವರಾಜ್​ಕುಮಾರ್ ಸಿನಿಪಯಣಕ್ಕೆ 38ರ ಸಂಭ್ರಮ; ಸರ್ವರಿಗೂ ಧನ್ಯವಾದ ಅರ್ಪಿಸಿದ ಹ್ಯಾಟ್ರಿಕ್ ಹೀರೋ

ನಮ್ಮ ಉಸಿರಲ್ಲಿ ಉಸಿರಾಗಿ, ಜೀವದಲ್ಲಿ ಜೀವವಾಗಿ, ಬೆರೆತು ಹೋಗಿರೋ ಮಾಧ್ಯಮಮಿತ್ರರಲ್ಲಿ, ಇದು ನಿಮ್ಮ ಸಿನಿಮಾ ಎಂದು ತಿಳಿದು ಚಿತ್ರಕ್ಕೆ ಆಶೀರ್ವಾದ ಮಾಡಿ ಅಂತಾ ವಿನಂತಿಸಿಕೊಳ್ಳುತ್ತೇನೆ ಎಂದು ತಿಳಿಸಿದರು. ಭರತ್ ಜೋಡಿಯಾಗಿ ನಟಿ ಸಂಹಿತಾ ವಿನ್ಯಾ ನಟಿಸಲಿದ್ದಾರೆ. ಸ್ಟಂಟ್ ಮಾಸ್ಟರ್ ಚಿನ್ನಯ್ಯ ಆಕ್ಷನ್ ಸಂಯೋಜನೆ ಮಾಡಲಿದ್ದಾರೆ‌. ಒಟ್ಟಾರೆ ಮೆಜೆಸ್ಟಿಕ್ 2 ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.