ETV Bharat / entertainment

ಬಾಲಿವುಡ್​ ನಟ ಅಮಿತಾಭ್​ ಬಚ್ಚನ್ ಅನಾರೋಗ್ಯದ ವದಂತಿ​: ಸ್ಪಷ್ಟನೆ ನೀಡಿದ ಬಿಗ್​ ಬಿ

author img

By PTI

Published : Mar 16, 2024, 9:52 AM IST

Updated : Mar 16, 2024, 12:15 PM IST

ಆರೋಗ್ಯದ ಬಗೆಗಿನ ವದಂತಿಯನ್ನು ಸ್ವತಃ ಅಮಿತಾಭ್​ ಬಚ್ಚನ್​ ತಳ್ಳಿ ಹಾಕಿದ್ದು, ಐಎಸ್​ಪಿಎಲ್​ನಲ್ಲಿ ಕ್ರಿಕೆಟಿಗ ಸಚಿನ್​ ತೆಂಡೂಲ್ಕರ್​ ಜೊತೆಗಿರುವ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಸ್ಪಷ್ಟನೆ ನೀಡಿದ್ದಾರೆ.

Actor Amithabh Bacchan
ನಟ ಅಮಿತಾಭ್​ ಬಚ್ಚನ್​

ಮುಂಬೈ: ಬಾಲಿವುಡ್​ ನಟ ಅಮಿತಾಭ್​ ಬಚ್ಚನ್​ ಅವರು, ತಾವು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಸುದ್ದಿಗಳನ್ನು ತಳ್ಳಿ ಹಾಕಿದ್ದಾರೆ. ಆಸ್ಪತ್ರೆಗೆ ದಾಖಲಾದ ಬಗೆಗಿನ ವದಂತಿಗಳಿಗೆ ಕೊನೆ ಹಾಡಿದ್ದಾರೆ. ಬಚ್ಚನ್​ ಅವರ ಆರೋಗ್ಯದಲ್ಲಿ ಏರುಪೇರಾಗಿದೆ ಎನ್ನುವ ಸುದ್ದಿಯಿಂದ ಚಿಂತೆಗೀಡಾಗಿದ್ದ ಅಭಿಮಾನಿಗಳಿಗೆ ಸ್ವತಃ ಅಮಿತಾಭ್​ ಬಚ್ಚನ್​ ಅವರೇ, ಎಲ್ಲವೂ ಸುಳ್ಳು, ನಾನು ಆರೋಗ್ಯವಾಗಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಅಮಿತಾಭ್​ ಬಚ್ಚನ್​ ಅವರು ಆಸ್ಪತ್ರೆಗೆ ದಾಖಲಾಗಿದ್ದು, ಕಾಲಿನಲ್ಲಿ ಹೆಪ್ಪುಗಟ್ಟುವಿಕೆಗಾಗಿ ಆಂಜಿಯೋಪ್ಲಾಸ್ಟಿ ಪ್ರಕ್ರಿಯೆಗೆ ಒಳಗಾಗಿದ್ದಾರೆ ಎನ್ನುವ ವರದಿಗಳು ಮಾಧ್ಯಮಗಳಲ್ಲಿ ಹರಿದಾಡಿದ್ದವು. ಇದರ ಬೆನ್ನಲ್ಲೇ ಬಚ್ಚನ್​ ಆರೋಗ್ಯದ ಬಗ್ಗೆ ಚಿಂತೆಗೊಳಗಾಗಿದ್ದ ಅಭಿಮಾನಿಗಳು ಸೋಶಿಯಲ್​ ಮೀಡಿಯಾದಲ್ಲಿ, ಪ್ರಶ್ನೆಗಳ ಜೊತೆಗೆ, ತಮ್ಮ ನೆಚ್ಚಿನ ನಟನ ಆರೋಗ್ಯಕ್ಕಾಗಿ ಪ್ರಾರ್ಥಿಸಿದ ಪೋಸ್ಟ್​ಗಳು ತುಂಬಿ ತುಳುಕಿದ್ದವು.

ಆಸ್ಪತ್ರೆಗೆ ದಾಖಲಾದ ವರದಿಗಳು ಮಾಧ್ಯಮಗಳಲ್ಲಿ ಪ್ರಕಟವಾದ ಕೆಲವೇ ಗಂಟೆಗಳಲ್ಲಿ ಸಂಜೆ ಹೊತ್ತಿಗೆ ಅಮಿತಾಭ್​ ಬಚ್ಚನ್​ ಹಾಗೂ ಪುತ್ರ ಅಭಿಷೇಕ್​ ಬಚ್ಚನ್​ ಥಾಣೆಯ ದಾಡೋಜಿ ಕೊಂಡದೇವ್ ಸ್ಟೇಡಿಯಂನಲ್ಲಿ ನಡೆಯುತ್ತಿದ್ದ ಇಂಡಿಯನ್​ ಸ್ಟ್ರೀಟ್​ ಪ್ರೀಮಿಯರ್​ ಲೀಗ್​ (ಐಎಸ್​ಪಿಎಲ್​)ನ ಮಝಿ ಮುಂಬೈ ಮತ್ತು ಕೋಲ್ಕತ್ತಾದ ಟೈಗರ್ಸ್​ ನಡುವಿನ ಅಂತಿಮ ಪಂದ್ಯದ ವೇಳೆ ಕ್ಯಾಮರಾಗಳಲ್ಲಿ ಸೆರೆಯಾಗಿದ್ದಾರೆ. ಅದಲ್ಲದೆ ಸ್ವತಃ ಐಎಸ್​ಪಿಎಲ್​ನಲ್ಲಿ ಭಾಗವಹಿಸಿರುವ ಅವರು, ಮಗ ಹಾಗೂ ಕ್ರಿಕೆಟಿಗ ಸಚಿನ್​ ತೆಂಡೂಲ್ಕರ್​ ಜೊತೆಗಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಹಂಚಿಕೊಂಡಿದ್ದಾರೆ.

ನಂತರದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋವೊಂದರಲ್ಲಿ ಬಚ್ಚನ್​ ಕ್ರೀಡಾಂಗಣದಿಂದ ನಿರ್ಗಮಿಸುತ್ತಿರುವುದನ್ನು ಕಂಡು, ಜನರ ಗುಂಪಿನಲ್ಲಿದ್ದ ಯಾರೋ ಒಬ್ಬರು ಅವರ ಆರೋಗ್ಯದ ಬಗ್ಗೆ ಕೇಳಿದ್ದಾರೆ. ಆಗ ಅಮಿತಾಭ್​ ಬಚ್ಚನ್​ ಎಲ್ಲವೂ ಚೆನ್ನಾಗಿದೆ ಎಂದು ಕೈಯಲ್ಲಿ ಸನ್ನೆ ಮಾಡುತ್ತಿರುವುದನ್ನು ಕಾಣಬಹುದು. ಆಗ ಆ ವ್ಯಕ್ತಿ ಹೇಗಿದ್ದೀರಾ? ಎಲ್ಲವೂ ಚೆನ್ನಾಗಿದೆಯಾ? ಎಂದು ಪ್ರಶ್ನೆ ಮಾಡಿದ್ದಾರೆ. ಆಗ ಬಚ್ಚನ್​ "ಎಲ್ಲವೂ ಫೇಕ್​ ನ್ಯೂಸ್" ಎಂದು ಉತ್ತರಿಸಿದ್ದಾರೆ.

ಶುಕ್ರವಾರ ಮಧ್ಯಾಹ್ನ ಅಮಿತಾಭ್​ ಬಚ್ಚನ್​ ಅವರು ಸಾಮಾನ್ಯ ತಪಾಸಣೆಗಾಗಿ ಕೋಕಿಲಾಬೆನ್​ ಧೀರೂಭಾಯ್​ ಅಂಬಾನಿ ಆಸ್ಪತ್ರೆಗೆ ಹೋಗಿದ್ದಾರೆ ಎಂದು ಕೆಲ ವರದಿಗಳು ಆಗಿದ್ದರೆ, ಇನ್ನೂ ಕೆಲವು ಆಂಜಿಯೋಪ್ಲಾಸ್ಟಿಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವ ವರದಿಗಳು ಪ್ರಸಾರವಾಗುವ ಮೂಲಕ ಈ ವದಂತಿ ಹಬ್ಬಲು ಪ್ರಾರಂಭವಾಗಿತ್ತು. ಆದರೆ ಈ ಬಗ್ಗೆ ಆಸ್ಪತ್ರೆಯಿಂದಾಗಲೀ ಅಥವಾ ಅವರ ಕಚೇರಿಯಿಂದಾಗಲೀ ಯಾವುದೇ ದೃಢೀಕರಣ ಬಂದಿರಲಿಲ್ಲ. ಸುಳ್ಳು ಸುದ್ದಿಯಾಗಿದ್ದರೂ ಸಾಮಾಜಿಕ ಜಾಲತಾಣದಲ್ಲಿ #AmitabhBachchan ಹಾಗೂ #KokilabenHospital ಟಾಪ್​ ಟ್ರೆಂಡಿಂಗ್​ನಲ್ಲಿದ್ದವು.

ಕಾಂಗ್ರೆಸ್​ ನಾಯಕ ಸಂಜಯ್​ ನಿರುಪಮ್​ ಅವರೂ ಕೂಡ ಎಕ್ಸ್​ನಲ್ಲಿ ಅಮಿತಾಭ್​ ಬಚ್ಚನ್​ ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಪೋಸ್ಟ್​ ಹಾಕಿದ್ದರು. ಇನ್ನೂ ಅನೇಕರು ಬಿಗ್​ ಬಿ ಶೀಘ್ರದಲ್ಲೇ ಗುಣಮುಖರಾಗಲಿ ಎಂದು ಪ್ರಾರ್ಥಿಸಿ, ಪೋಸ್ಟ್​ ಹಂಚಿಕೊಂಡಿದ್ದರು.

ಅಮಿತಾಭ್​ ಬಚ್ಚನ್​ ಅವರು ಕೊನೆಯ ಬಾರಿಗೆ ಟೈಗರ್​ ಶ್ರಾಫ್​ ಅವರ ಗಣಪತ್​ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಮುಂದಿನ ಸಿನಿಮಾಗಳನ್ನು ಗಮನಿಸಿದರೆ, ಟಾಲಿವುಡ್​ ಸ್ಟಾರ್​ ಪ್ರಭಾಸ್​ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ಕಲ್ಕಿ AD 2898 ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದಲ್ಲದೆ ತಮಿಳು ಸಿನಿಮಾ ವೆಟ್ಟೈಯಾನ್​ ನಲ್ಲಿ ರಜನಿಕಾಂತ್​ ಅವರ ಜೊತೆಗೆ ಅಭಿನಯಿಸುತ್ತಿದ್ದಾರೆ.

ಇದನ್ನೂ ಓದಿ: ಅಂಬಾನಿ ಕಾರ್ಯಕ್ರಮಕ್ಕೆ ಆಗಮಿಸಿದ ಅಮಿತಾಭ್​​-ರಜನಿ, ಐಶ್​-ಅಭಿ: ವಿಡಿಯೋ

Last Updated : Mar 16, 2024, 12:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.