ETV Bharat / entertainment

'ತಂದೆಯ ಬೆಲೆ ಅವರು ಇದ್ದಾಗ ಗೊತ್ತಾಗಲ್ಲ': ಅಭಿಷೇಕ್ ಅಂಬರೀಶ್ ಭಾವುಕ

author img

By ETV Bharat Karnataka Team

Published : Feb 2, 2024, 11:42 AM IST

'ಅಪ್ಪಾ ಐ ಲವ್ ಯು' ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ತಮ್ಮ ತಂದೆಯನ್ನು ನೆನೆದು ಪುತ್ರ ಅಭಿಷೇಕ್ ಅಂಬರೀಶ್ ಭಾವುಕರಾದರು.

ಅಭಿಷೇಕ್ ಅಂಬರೀಶ್
ಅಭಿಷೇಕ್ ಅಂಬರೀಶ್

ಬೆಂಗಳೂರು: ತಂದೆ ಇರುವವರೆಗೂ ಅವರ ಬೆಲೆ ಗೊತ್ತಾಗೋಲ್ಲ. ಅವರು ಇಲ್ಲಾ ಅಂದಾಗ ಅವರ ಶಕ್ತಿಯೇನು ಅನ್ನೋದು ತಿಳಿಯುತ್ತದೆ ಎಂದು ಅಭಿಷೇಕ್ ಅಂಬರೀಶ್ ಹೇಳಿದರು. 'ಅಪ್ಪಾ ಐ ಲವ್ ಯು' ಸಿನಿಮಾದ ಆಡಿಯೋ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ನಮ್ಮ‌ಅಪ್ಪನ ಬಗ್ಗೆ ಮಾತಾಡಬೇಕು ಎಂದರೆ ಗಂಟೆಗಟ್ಟಲೆ ಮಾತನಾಡಬೇಕಾಗುತ್ತದೆ. ನನ್ನನ್ನು ಯಾಕೆ ಪ್ರೇಮಣ್ಣ ಕಾರ್ಯಕ್ರಮಕ್ಕೆ ಕರೀತಾರೆ ಎನಿಸಿತ್ತು. ಆದರೆ ಟೈಟಲ್ ನೋಡಿ ಇದೇ ಕಾರಣಕ್ಕೆ ಕರೆದಿರಬಹುದು ಎಂದುಕೊಂಡೆ. ಪ್ರತಿಯೊಬ್ಬರಿಗೂ ಅಪ್ಪನ ಜೊತೆಗೆ ಒಂದು ವಿಶೇಷ ಮೆಮೊರಿ ಇದ್ದೇ ಇರುತ್ತದೆ ಎಂದರು.

ಇನ್ನು ಸಿನಿಮಾ ಕುರಿತು ಮಾತನಾಡಿ, ಕವಿರಾಜ್ ಸರ್ ತುಂಬಾ ಚೆನ್ನಾಗಿ ಹಾಡು ಬರೆದಿದ್ದಾರೆ. ತಬಲ ನಾಣಿ ಸರ್ ಒಂದೊಳ್ಳೆ ಮೆಸೇಜ್, ಕಂಟೆಂಟ್ ಇಟ್ಕೊಂಡು ಸಮಾಜಕ್ಕೆ ಏನಾದರೂ ಕೊಡಬೇಕು ಎಂದು ಬಂದಿದ್ದೀರಿ, ಒಳ್ಳೆಯದಾಗಲಿ ಎಂದು ಹೇಳಿದರು.

ಅಪ್ಪಾ ಐ ಲವ್ ಯು ಎಂಬ ಹಾಡು ಕನ್ನಡ ಚಿತ್ರರಂಗದಲ್ಲಿ ‌ಹೊಸ ದಾಖಲೆ ಬರೆದ ಅಪ್ಪ ಮಗಳ ಬಾಂಧವ್ಯ ಗೀತೆ‌. ಇದೀಗ ಈ ಹಾಡಿನ ಪದವೇ ಸಿನಿಮಾ ಶೀರ್ಷಿಕೆಯಾಗಿದೆ.‌ ನೆನಪಿರಲಿ ಪ್ರೇಮ್ ಹಾಗೂ ಟಗರು ಪುಟ್ಟಿ ಖ್ಯಾತಿಯ ಮಾನ್ವಿತ್ ಕಾಮತ್ ಇದೇ ಮೊದಲ ಬಾರಿಗೆ ಜೋಡಿಯಾಗಿ ಅಪ್ಪಾ ಐ ಲವ್ ಯು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರೀಕರಣ ಮುಗಿಸಿ ಪ್ರೇಕ್ಷಕರ ಮುಂದೆ ಬರಲು ಸಿನಿಮಾ ರೆಡಿಯಾಗಿದೆ. ಇದ‌ರ ಭಾಗವಾಗಿ ಮೊದಲ ಹಾಡು ಅನಾವರಣವಾಗಿದೆ.

ಅಪ್ಪಾ ಐ ಲವ್ ಯು ಸಿನಿಮಾ ತಂಡ
ಅಪ್ಪಾ ಐ ಲವ್ ಯು ಸಿನಿಮಾ ತಂಡ

ಚಿತ್ರರಂಗದಲ್ಲಿ 22 ವರ್ಷ ಪೂರೈಸಿದ ಪ್ರೇಮ್: ನೆನಪಿರಲಿ ಪ್ರೇಮ್ ಮಾತನಾಡಿ, ಸಿನಿಮಾದಲ್ಲಿ 22 ವರ್ಷ ಪೂರೈಸಿದ್ದೇನೆ. ಇದು ಸಾಧ್ಯವಾಗಿದ್ದು ನನ್ನ ತಂದೆಯಿಂದ ಎಂದು ಹೆಮ್ಮೆಯಿಂದ ಹೇಳುತ್ತೇನೆ. ಹೀರೋ ಆಗಬೇಕು ಅಂತಾ ಕನಸು ಕಟ್ಟಿಕೊಂಡಾಗ ಗಾಂಧಿನಗರದಲ್ಲಿ ಫೋಟೋ ಇಟ್ಟುಕೊಂಡು ತಿರುಗಾಡುತ್ತಿದ್ದೆ. ಮದುವೆ ಆಗಿತ್ತು. ಆಗ ತಾನೇ ಮಗಳು ಹುಟ್ಟಿದ್ದಳು. ಕಷ್ಟದಲ್ಲಿದ್ದೆ. ಕೆಲಸ ಮಾಡು ಅಂತಾ ಎಲ್ಲರೂ ಹೇಳುವವರು. ಆಗ ನಮ್ಮ‌ ತಂದೆ ಬಳಿ ಕೆಲಸಕ್ಕೆ ಹೋಗುತ್ತೇನೆ ಎಂದೆ. ನನ್ನ ತಂದೆ ಹೇಳಿದ‌ ಒಂದು ಮಾತಿನಿಂದ ನಾನು ಸ್ಟಾರ್ ಆಗಿ ಇಲ್ಲಿ ನಿಂತಿದ್ದೇನೆ. ತಬಲನಾಣಿ ಅವರು ಸಿನಿಮಾರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅಥರ್ವ ಆರ್ಯ ಮೊದಲ ಸಿನಿಮಾದಲ್ಲಿ ಅದ್ಭುತ ಕಂಟೆಂಟ್ ತೆಗೆದುಕೊಂಡು ಬಂದಿದ್ದಾರೆ. ನಮಗೆಲ್ಲರಿಗೂ ಅವಕಾಶ ಕೊಟ್ಟಿದ್ದಾರೆ ಎಂದು ಹೇಳಿದರು.

ನಿರ್ದೇಶಕ ಅಥರ್ವ ಆರ್ಯ ಮಾತನಾಡಿ, ನಾವು ಮಂಡ್ಯದವರು. ಅಂಬರೀಶ್ ಅಣ್ಣ ಅಂದರೆ ನಮಗೆ ವಿಶೇಷವಾದ ಪ್ರೀತಿ. ಅವರು ರೋಲ್ ಮಾಡೆಲ್. ನಮಗೆ ಬುದ್ದಿ ಬಂದಾಗಿನಿಂದ ನಮ್ಮ ಫಸ್ಟ್ ಹೀರೋ ಯಾರು ಅಂದರೆ ಅಂಬರೀಶ್ ಅಣ್ಣ. ಅವರ ಸಿನಿಮಾ ನೋಡಿಕೊಂಡು ಬಂದವರು ನಾವು. ಅಂಬಿಯಣ್ಣನ ಸ್ಫೂರ್ತಿಯಿಂದ ಇಂಡಸ್ಟ್ರೀಗೆ ಬಂದಿದ್ದೇವೆ. ಜೀವನದಲ್ಲಿ ಪ್ರತಿಯೊಬ್ಬರೂ ತಮ್ಮ ತಂದೆಗೆ ಅಪ್ಪ ಐ ಲವ್ ಯು ಅಂತಾ ಹೇಳಲೇಬೇಕು. ಚಿಕ್ಕವರಿದ್ದಾಗ ಹೇಳುವುದು ಸಾಮಾನ್ಯ. ವಯಸ್ಸಾಗಿ, ಏನೂ ಆಗುತ್ತಿಲ್ಲ ಅಂತಾದಾಗ ಅವರ ಮುಂದೆ ನಿಂತು ಅಪ್ಪಾ ಐ ಲವ್ ಯು ಅಂತಾ ಹೇಳಬೇಕು ಎಂದರು.

ಜೂಟಾಟ ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿರುವ ಅಥರ್ವ್ ಆರ್ಯ ಅಪ್ಪಾ ಐ ಲವ್ ಯೂ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಕುಟುಂಬ ಅಥವಾ ಸಮಾಜದಲ್ಲಿ ತಂದೆ ಕಡೆಗಣನೆಗೆ ಒಳಗಾದಾಗ ಯಾವ ರೀತಿ ನೋವು ಅನುಭವಿಸುತ್ತಾನೆ ಎಂಬುದೇ ಕಥೆಯ ತಿರುಳು. ಇಲ್ಲಿ ತಂದೆಯಾಗಿ ತಬಲಾನಾಣಿ ಬಣ್ಣ ಹಚ್ಚಿದ್ದು, ರಂಗಭೂಮಿ ಕಲಾವಿದರಾದ ಸಂಜಯ್ ಹಾಗೂ ಜೀವಿತ ವಸಿಷ್ಠ ಚಿತ್ರರಂಗಕ್ಕೆ ಪರಿಚಿತರಾಗುತ್ತಿದ್ದಾರೆ.

ಅಪ್ಪ-ಮಗನ ಬಾಂಧವ್ಯದ ಗೀತೆಯಾಗಿರುವ ಮನೆಗೊಂದು ಮಾಳಿಗೆ ಹಾಡಿಗೆ ಕಿನ್ನಾಳ್ ರಾಜ್ ಸಾಹಿತ್ಯ ಬರೆದಿದ್ದು, ವಿಜಯ್ ಪ್ರಕಾಶ್ ಧ್ವನಿಯಾಗಿದ್ದಾರೆ. ಆಕಾಶ್ ಪರ್ವ ಸಂಗೀತ ನೀಡಿದ್ದಾರೆ. ಉಳಿದ ಹಾಡುಗಳಿಗೆ ಡಾ.ನಾಗೇಂದ್ರ ಪ್ರಸಾದ್, ಕವಿರಾಜ್, ಕೆ.ಕಲ್ಯಾಣ್ ಸಾಹಿತ್ಯ ಬರೆದಿದ್ದಾರೆ. ನಾಗಾರ್ಜುನ್ ಆರ್.ಡಿ.ಛಾಯಾಗ್ರಹಣ, ವೇಧಿಕ್ ವೀರ ಸಂಕಲನ, ಗಂಗಮ್ ರಾಜು ಕೊರಿಯೋಗ್ರಫಿ ಚಿತ್ರಕ್ಕಿದೆ.

ಸಂಜಯ್, ಜೀವಿತಾ, ರಂಗೀತರಂಗ ಅರವಿಂದ್, ವಿಜಯ್ ಚೆಂಡೂರ್, ಬಲ ರಾಜ್ವಾಡಿ, ಮಿಮಿಕ್ರಿ ಗೋಪಿ, ಅರುಣ ಬಾಲರಾಜ್, ವರ್ಧನ್ ತೀರ್ಥಹಳ್ಳಿ, ಗಿರೀಶ್ ಜತ್ತಿ, ಪಟೇಲ್ ಅಣ್ಣಯ್ಯಪ್ಪ ಸೇರಿದಂತೆ ಹಲವು ತಾರಾಬಳಗ ಚಿತ್ರದಲ್ಲಿದೆ. ಬೆಂಗಳೂರು, ಮೈಸೂರು, ಮಂಗಳೂರು ಸುತ್ತಮುತ್ತ 65 ದಿನಗಳ ಕಾಲ ಶೂಟಿಂಗ್ ನಡೆಸಲಾಗಿದೆ. ಕೆಆರ್​ಎಸ್​ ಪ್ರೊಡಕ್ಷನ್ಸ್​ನ ಚೊಚ್ಚಲ ಕಾಣಿಕೆ‌ ಅಪ್ಪಾ ಐ ಲವ್ ಯೂ ಸಿನಿಮಾ. ಶೀಘ್ರದಲ್ಲಿಯೇ ಸಿನಿಮಾವನ್ನು ತೆರೆಗೆ ತರಲು ಚಿತ್ರತಂಡ ಸಜ್ಜಾಗಿದೆ.

ಇದನ್ನೂ ಓದಿ: ವಿನಯ್ ರಾಜ್​ಕುಮಾರ್ ಸರಳ ಪ್ರೇಮಕಥೆಗೆ ಮನಸೋತ ಮೋಹಕ ತಾರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.