ETV Bharat / bharat

5ನೇ ತರಗತಿಗೆ ಶಿಕ್ಷಣ ನಿಲ್ಲಿಸಿದ್ದ ಬಾಲಕ ಈಗ ಗ್ರಾಮದ ಇತರ ಮಕ್ಕಳ ಶಿಕ್ಷಣಕ್ಕೆ ಸ್ಫೂರ್ತಿ - Inspirational Boy

author img

By ETV Bharat Karnataka Team

Published : Apr 3, 2024, 9:32 PM IST

ಏಕತಾ ಸಂಸ್ಥೆಯ ಸಹಕಾರದಿಂದ ಅರ್ಧದಲ್ಲೇ ನಿಲ್ಲಿಸಿದ್ದ ಶಿಕ್ಷಣವನ್ನು ಮುಂದುವರಿಸುವ ಮೂಲಕ ಬಾಲಕ ದೊಮ್​ ಎಂಬಾತ ತಮ್ಮ ಗ್ರಾಮದ ಇತರ ಮಕ್ಕಳಿಗೂ ಸ್ಫೂರ್ತಿಯಾಗಿದ್ದಾನೆ.

Boy Dom
ಬಾಲಕ ದೊಮ್

ಕೋರಾಪುಟ್(ಒಡಿಶಾ): ಶಿಕ್ಷಣವನ್ನು ಅರ್ಧದಲ್ಲೇ ಮೊಟಕುಗೊಳಿಸಿ, ಕೆಲಸಕ್ಕೆ ಹೋಗಲು ಪ್ರಾರಂಭಿಸಿದ್ದ ಕೋರಾಪುಟ ಜಿಲ್ಲೆಯ ಬಾಲಕನೋರ್ವ ಇದೀಗ ಶಾಲೆಗೆ ಹೋಗದ ಹಾಗೂ ಹೋಗಲು ಸಾಧ್ಯವಾಗದ ಗ್ರಾಮದ ಇತರ ಮಕ್ಕಳಿಗೆ ಸ್ಫೂರ್ತಿಯಾಗಿದ್ದಾನೆ.

ಕೋರಾಪುಟ ಜಿಲ್ಲೆಯ ಬೋರಿಗುಮ್ಮ ಬ್ಲಾಕ್​ನ ಮಾಲಿಗುಡ ಗ್ರಾಮದ ನಿವಾಸಿ ದೊಮ್​ ಪೂಜಾರಿ ಎಂಬಾತನೇ ಬಾಲಕ. ದೊಮ್​ ಸಣ್ಣದಿರುವಾಗಲೇ ತಂದೆ ಸಾವನ್ನಪ್ಪಿದ್ದು, ತಾಯಿ ಬಿಟ್ಟುಹೋಗಿದ್ದಾರೆ. ಎಪ್ಪತ್ತು ವರ್ಷದ ಅಜ್ಜಿ ದಸ್ಮಾ ಪೂಜಾರಿ ಜತೆಗೆ ದೊಮ್​ ಪೂಜಾರಿ ವಾಸಿಸುತ್ತಿದ್ದಾನೆ. ಅಜ್ಜಿ ಒಬ್ಬಳೇ ದೊಮ್​ನನ್ನು ಬೆಳೆಸಿದ್ದಳು. ಸಾಧ್ಯವಾದಷ್ಟು ಶಾಲೆಗೂ ಕಳುಹಿಸಿದ್ದಳು. ಎರಡು ವರ್ಷಗಳ ಹಿಂದೆ ದೊಮ್​ ಸ್ಥಳೀಯ ಪ್ರಾಥಮಿಕ ಶಾಲೆಯಲ್ಲಿ ಐದನೇ ತರಗತಿ ಪೂರೈಸಿದ್ದ. ನಂತರ ಅಜ್ಜಿ, ನನಗೆ ಇನ್ನು ಮುಂದೆ ಶಾಲೆಗೆ ಕಳುಹಿಸಲು ಸಾಮರ್ಥ್ಯ ಇಲ್ಲ ಎಂದು ಹೇಳಿದ ಕಾರಣ ಶಿಕ್ಷಣವನ್ನು ಅರ್ಧದಲ್ಲೇ ಮೊಟಕುಗೊಳಿಸಬೇಕಾಯಿತು. ನಂತರ ಅಜ್ಜಿಯ ಜತೆಗೆ ದೊಮ್​ ಕೂಡ ಚಿಕ್ಕ ಜಮೀನಿನಲ್ಲಿ ಕೆಲಸಕ್ಕೆ ಹೋಗಿ ಬಂದು, ಹಳ್ಳಿ ರಸ್ತೆಯಲ್ಲೇ ಕಾಲ ಕಳೆಯುತ್ತಿದ್ದ.

ಓದು ಅರ್ಧಕ್ಕೆ ನಿಲ್ಲಿಸಿ ಕೆಲಸಕ್ಕೆ ಹೋಗುತ್ತಿದ್ದ ಬಾಲಕನನ್ನು ಗಮನಿಸಿದ ಆ ಗ್ರಾಮದ ಯುವಕ ಕೃಷ್ಣ ಮುದುಳಿ ಎಂಬಾತ ಬಾಲಕನಿಗೆ ಶಿಕ್ಷಣ ಕೊಡಿಸುವ ವ್ಯವಸ್ಥೆ ಮಾಡಿದ್ದಾರೆ. ಈ ಭಾಗದ ಮಕ್ಕಳ ಶಿಕ್ಷಣ ಮತ್ತು ಆರೋಗ್ಯದ ಬಗ್ಗೆ ಕೆಲಸ ಮಾಡುವ ಏಕತಾ ಸಂಸ್ಥೆಯಲ್ಲಿ ಸ್ವಯಂಸೇವಕನಾಗಿ ಕೆಲಸ ಮಾಡುತ್ತಿರುವ ಕೃಷ್ಣ ಮುದುಳಿ, ಸಂಸ್ಥೆಯ ಹಿರಿಯ ಕಾರ್ಯಕರ್ತರೊಂದಿಗೆ ಬಾಲಕನ ಕಥೆಯನ್ನು ಹಂಚಿಕೊಂಡಿದ್ದಾರೆ. ನಂತರ ಏಕತಾ ಸಂಸ್ಥೆಯ ಕಾರ್ಯಕರ್ತರು ದೊಮ್​ಗೆ ಶಾಲೆಯಲ್ಲಿ ಉಚಿತ ಶಿಕ್ಷಣ ಪಡೆಯಲು ಸಹಕರಿಸಿದರು.

ಮಾನವ ಜೀವನದಲ್ಲಿ ಶಿಕ್ಷಣದ ಮೌಲ್ಯ ಹಾಗೂ ಉನ್ನತ ಶಿಕ್ಷಣದ ಅಗತ್ಯವನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ದೊಮ್​ನ ಅಜ್ಜಿಗೆ ಮನವರಿಕೆ ಮಾಡಿದ ನಂತರ, ದೊಮ್​ನನ್ನು ಶಾಲೆಗೆ ಕಳುಹಿಸಲು ಅಜ್ಜಿ ಒಪ್ಪಿದರು. ಆದರೆ ಗ್ರಾಮದಿಂದ 20 ರಿಂದ 40 ಕಿ.ಮೀ ದೂರದಲ್ಲಿರುವ ರಂಸ್​ಪುರ, ಖಾದ್ರಗಡ ಮತ್ತು ಗುಮುಡಾದ ವಸತಿ ಶಾಲೆಗಳಿಗೆ ಹೋಗಲು ಗ್ರಾಮದಿಂದ ಯಾವುದೇ ವಾಹನಗಳ ಸೌಲಭ್ಯವಿಲ್ಲ. ಅಷ್ಟು ದೂರದ ಶಾಲೆಗೆ ಮೊಮ್ಮಗನನ್ನು ಕಳುಹಿಸುವುದು ಅಜ್ಜಿಗೆ ಕಷ್ಟವಾಗಿತ್ತು. ಹಾಗಾಗಿ ದೊಮ್​ಗೆ ಮಾಲಿಗುಡದಿಂದ 10 ಕಿ.ಮೀ ದೂರದಲ್ಲಿರುವ ದಸ್ಮಂತಪುರ ಬ್ಲಾಕ್​ನ ನಂದಿಗಾಂವ್​ನ ನಂದಿಗೋನ್​ ಪ್ರೌಢಶಾಲೆಯಲ್ಲಿ 6ನೇ ತರಗತಿ ಓದುವುದು ಒಂದೇ ಮಾರ್ಗವಾಗಿತ್ತು.

ಕಳೆದ ವರ್ಷ ದೊಮ್​ಗೆ ಶಾಲೆಗೆ ತೆರಳಲು ಏಕತಾ ಸಂಸ್ಥೆ ಸೈಕಲ್​ ವ್ಯವಸ್ಥೆಯನ್ನು ಮಾಡಿಕೊಟ್ಟಿದೆ. ಇದೀಗ ಪ್ರತಿದಿನ 20 ಕಿ.ಮೀ ಸೈಕ್ಲಿಂಗ್​ ಮಾಡಿ ದೊಮ್​ ಶಿಕ್ಷಣ ಮುಂದುವರಿಸಿದ್ದಾನೆ. ಅಷ್ಟೇ ಅಲ್ಲದೆ ಈ ಬಾಲಕನಿಂದ ಸ್ಫೂರ್ತಿಗೊಂಡು ಗ್ರಾಮದಲ್ಲಿ ಶಾಲೆಗೆ ಹೋಗದ ಸದನಿ, ಜಾನಿ, ರಶ್ಮಿ ಜಾನಿ, ಸುಮಿತ್ರಾ ಮುದುಳಿ ಮುಂತಾದ ಅನೇಕ ಮಕ್ಕಳು ದೂರದ ಹಾಸ್ಟೆಲ್​ಗಳಲ್ಲಿದ್ದುಕೊಂಡು ಓದಲಾರಂಭಿಸಿದ್ದಾರೆ.

ಇತರ ಮಕ್ಕಳಿಗೆ ಸ್ಫೂರ್ತಿ ಈ ಬಾಲಕ: ಏಕತಾ ಸಂಸ್ಥೆಯ ಸಹಕಾರದೊಂದಿಗೆ ಗ್ರಾಮದಲ್ಲಿ ಮಕ್ಕಳ ಪಾರ್ಲಿಮೆಂಟ್​ ರಚಿಸುವ ಮೂಲಕ ದೊಮ್​ ಆತನ ಇತರ ಸಹವರ್ತಿ ಮಕ್ಕಳು, ಗ್ರಾಮದ ಮಕ್ಕಳಲ್ಲಿ ಹಾಗೂ ಪೋಷಕರಲ್ಲಿ ಶಿಕ್ಷಣ ಪಡೆಯುವ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಏಕತಾ ಸಂಸ್ಥೆಯ ಸ್ವಯಂಸೇವಕ ಕೃಷ್ಣ ಮುದುಳಿ ಅವರ ಸಹಾಯದಿಂದ ಗ್ರಾಮದಲ್ಲಿ ಮಕ್ಕಳು ಶಿಕ್ಷಣ ಮುಂದುವರಿಸಲು ಇದ್ದ ಸಮಸ್ಯೆಗಳು ಬಗೆಹರಿದಿವೆ. ಹಾಗಾಗಿ ಗ್ರಾಮದಲ್ಲಿ ಶಾಲೆಗೆ ದಾಖಲಾಗುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ.

"ಮಕ್ಕಳ ಸಂಸತ್ತು ಮೂಲಕ ಗ್ರಾಮದಿಂದ ವಿವಿಧೆಡೆಗೆ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಸಮಸ್ಯೆ ಎದುರಿಸುತ್ತಿರುವ ಬಗ್ಗೆ ಸರಪಂಚ್​ಗೆ ಮಕ್ಕಳು ತಿಳಿಸಿದ್ದಾರೆ. ಹೀಗಾಗಿ ಆ ಗ್ರಾಮದಲ್ಲಿ ಪ್ರೌಢಶಾಲೆ ತೆರೆದರೆ ಈ ಗ್ರಾಮ ಮಾತ್ರವಲ್ಲದೆ ಸಮೀಪದ ಗ್ರಾಮಗಳಲ್ಲೂ, ಶಾಲೆ ಇಲ್ಲದ ಕಾರಣ ಶಿಕ್ಷಣವನ್ನು ಅರ್ಧದಲ್ಲೇ ಮೊಟಕುಗೊಳಿಸುವ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತದೆ" ಎಂದು ಮಾಲಿಗುಡ ಶಿಕ್ಷಕ ಪ್ರದೀಪ್​ ಕುಮಾರ್​ ಬಾಳ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ಶಿಕ್ಷಣಾಧಿಕಾರಿ ಪ್ರಶಾಂತ್​ ಕುಮಾರ್​ ಮೊಹಂತಿ ಮಾತನಾಡಿ, "ಶಾಲೆ ಬಿಟ್ಟ ಮಕ್ಕಳನ್ನು ಮತ್ತೆ ಕರೆತರಲು ಹಾಗೂ ಅರ್ಧದಲ್ಲೇ ಶಿಕ್ಷಣ ಮೊಟಕುಗೊಳಿಸುವುದನ್ನು ತಡೆಯಲು ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ. ಸರ್ಕಾರದ ಯೋಜನೆಗಳು ಹಾಗೂ ಏಕತಾ ಸಂಸ್ಥೆಯ ಸಹಕಾರ ಹಾಗೂ ದೊಮ್​ ಪೂಜಾರಿಯಂತಹ ಬಾಲಕರಿಂದ ಕೋರಾಪುಟ್​ ಜಿಲ್ಲೆಯ ಮಕ್ಕಳಿಗೆ ಹೊಸ ಭರವಸೆ ರವಾನೆಯಾಗುತ್ತದೆ ಎನ್ನುವ ಭರವಸೆ ಇದೆ" ಎಂದು ಹೇಳಿದರು.

ಇದನ್ನೂ ಓದಿ: ಭವಿಷ್ಯದ ಕ್ರೀಡಾಳುಗಳಿಗೆ ಸ್ಫೂರ್ತಿ ಕಾಮನ್‌ವೆಲ್ತ್‌ ಗೇಮ್ಸ್‌ ಪದಕ ವಿಜೇತೆ ಪಿಂಕಿ ಸಿಂಗ್ ಸಾಧನೆ: ಸಂದರ್ಶನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.