ETV Bharat / bharat

ಅಯೋಧ್ಯೆಯಲ್ಲಿ ರಾಮ ನವಮಿ ಸಂಭ್ರಮ: ಹಳದಿ ಬಣ್ಣ ಅಲಂಕರಿಸುವ ಬಾಲಕ ರಾಮ; 'ದಿವ್ಯ ಅಭಿಷೇಕ' - Ram Navami Celebrations in Ayodhya

author img

By ETV Bharat Karnataka Team

Published : Apr 17, 2024, 12:01 PM IST

ಅಯೋಧ್ಯೆಯ ರಾಮಮಂದಿರ ಇವತ್ತು ವಿಶೇಷ ಕ್ಷಣಕ್ಕೆ ಸಾಕ್ಷಿಯಾಗಿದೆ. 500 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ರಾಮಮಂದಿರದಲ್ಲಿ ರಾಮನವಮಿ ಆಚರಣೆ ಮಾಡಲಾಗುತ್ತಿದೆ. ನಸುಕಿನಿಂದಲೇ ಭಕ್ತರು ರಾಮನ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.

Ram Navami Celebrations in Ayodhya among devotees Surya Tilak Aarti of Ram Lalla
Etv Bharatಅಯೋಧ್ಯೆಯಲ್ಲಿ ರಾಮ ನವಮಿ ಸಂಭ್ರಮ: ಹಳದಿ ಬಣ್ಣ ಅಲಂಕರಿಸುವ ಬಾಲಕ ರಾಮ; 'ದಿವ್ಯಾ ಅಭಿಷೇಕ'

ಅಯೋಧ್ಯೆ (ಉತ್ತರ ಪ್ರದೇಶ): ದೇಶಾದ್ಯಂತ ಇಂದು ರಾಮನವಮಿ ಆಚರಿಸಲಾಗುತ್ತಿದೆ. ಅದರಲ್ಲೂ ಅಯೋಧ್ಯೆಯಲ್ಲಿ ರಾಮನವಮಿ ಸಂಭ್ರಮ ಮುಗಿಲು ಮುಟ್ಟಿದೆ. ಹೆಚ್ಚಿನ ಸಂಖ್ಯೆಯ ಭಕ್ತರು ಬೆಳಗ್ಗೆಯೇ ಅಯೋಧ್ಯೆಯ ರಾಮ ಮಂದಿರಕ್ಕೆ ಆಗಮಿಸಿ ಬಾಲಕ ರಾಮನ ದರ್ಶನ ಪಡೆಯುತ್ತಿದ್ದಾರೆ. ಇದೇ ವೇಳೆ ಪ್ರಧಾನಿ ಕೂಡ ದೇಶದ ಜನರಿಗೆ ರಾಮನವಮಿಯ ಶುಭ ಕೋರಿದ್ದಾರೆ.

ದೇವಾಲಯಕ್ಕೆ ಭೇಟಿ ನೀಡುವ ಮೊದಲು, ಭಕ್ತರು ಅಯೋಧ್ಯೆಯ ಸರಯು ನದಿಯಲ್ಲಿ ಪವಿತ್ರ ನೀರಿನಲ್ಲಿ ಸ್ನಾನ ಮಾಡಿ, ಮರ್ಯಾದಾ ಪುರುಷೋತ್ತಮನ ದರ್ಶನ ಪಡೆಯುತ್ತಿದ್ದಾರೆ. ರಾತ್ರಿಯಿಂದಲೇ ಭಕ್ತರ ದಂಡು ಘಾಟಿಗೆ ಬರಲಾರಂಭಿಸಿದೆ. ರಾಮಮಂದಿರದಲ್ಲಿ ಬೆಳಗಿನ ಜಾವ 3.30ಕ್ಕೆ ‘ದರ್ಶನ’ ಆರಂಭವಾಗಿದ್ದು, ಆಗಿನಿಂದಲೇ ಭಕ್ತರು ನಿರಂತರ ದರ್ಶನದಲ್ಲಿ ತೊಡಗಿದ್ದಾರೆ.

ಅಯೋಧ್ಯೆ ರಾಮಮಂದಿರದಲ್ಲಿ ಬೆಳಗ್ಗೆಯೇ ಆರತಿ: ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್, ಅಯೋಧ್ಯೆಯ ರಾಮ ಮಂದಿರದ ನಿರ್ವಹಣೆಯ ಜವಾಬ್ದಾರಿ ವಹಿಸಿಕೊಂಡಿದೆ. ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ರಾಮ ಲಲ್ಲಾನ "ದಿವ್ಯ ಅಭಿಷೇಕ" ವನ್ನು ಬೆಳಗ್ಗೆ ಅತ್ಯಂತ ಉತ್ಸಾಹ ಮತ್ತು ಆಧ್ಯಾತ್ಮಿಕತೆಯಿಂದ ನಡೆಸಲಾಯಿತು ಎಂದು ಟ್ರಸ್ಟ್​ ಮಾಹಿತಿ ನೀಡಿದೆ.

ರಾಮ್ ಲಲ್ಲಾ ಮೇಲೆ ಸೂರ್ಯ ತಿಲಕ್: ಬುಧವಾರ ರಾಮ್ ಲಲ್ಲಾನ ಹಣೆಯ ಮೇಲೆ ಸೂರ್ಯನ ಕಿರಣಗಳು ಬೀಳುವ ಸೂರ್ಯ ತಿಲಕವು ಈ ದಿನದ ಹಾಗೂ ರಾಮನವಮಿಯ ಪ್ರಮುಖ ಅಂಶವಾಗಿದೆ. ಕನ್ನಡಿಗಳು ಮತ್ತು ಮಸೂರಗಳನ್ನು ಒಳಗೊಂಡಿರುವ ಒಂದು ವಿಸ್ತಾರವಾದ ಕಾರ್ಯವಿಧಾನದಿಂದ ದೇವರ ಹಣೆ ಮೇಲೆ 'ಸೂರ್ಯ ತಿಲಕ'ವನ್ನು ಮೂಡಿಸಲಾಗಿದೆ. ಈ ವ್ಯವಸ್ಥೆ ಬಗ್ಗೆ ಮಂಗಳವಾರವೇ ಎಲ್ಲ ಪರೀಕ್ಷೆಗಳನ್ನು ಮಾಡಲಾಗಿದೆ.

ರಾಮ ನವಮಿಯಂದು ವಿಐಪಿಗಳಿಗಿಲ್ಲ ದರ್ಶನ ಭಾಗ್ಯ: ಅಯೋಧ್ಯೆಯ ರಾಮಮಂದಿರದ ನಿರ್ವಹಣೆಯ ಹೊಣೆ ಹೊತ್ತಿರುವ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್, ರಾಮನವಮಿಯಂದು ದರ್ಶನದ ಅವಧಿಯನ್ನು ವಿಸ್ತರಿಸಿದ್ದು, ಇಂದು ಯಾವುದೇ ವಿಶೇಷ ದರ್ಶನಕ್ಕೆ ಅವಕಾಶ ಇರುವುದಿಲ್ಲ ಎಂದು ಹೇಳಿದೆ.

ಪ್ರಧಾನಿ ಮೋದಿ ಅವರಿಂದ ಶುಭ ಕೋರಿಕೆ: ಪ್ರಧಾನಿ ನರೇಂದ್ರ ಮೋದಿ ರಾಮ ನವಮಿಯ ಈ ಶುಭ ಸಂದರ್ಭದಲ್ಲಿ ಜನರಿಗೆ ಶುಭಾಶಯಗಳನ್ನು ಕೋರಿದ್ದಾರೆ. ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ನಂತರ ಅಯೋಧ್ಯೆಯು ಇದೇ ಮೊದಲ ಬಾರಿಗೆ ಉತ್ಸವವನ್ನು ಆಚರಿಸುತ್ತಿರುವುದರಿಂದ ಅಯೋಧ್ಯೆಯು ಹೋಲಿಸಲಾಗದ ಆನಂದದಲ್ಲಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

500 ವರ್ಷಗಳ ಕಾಯುವಿಕೆ ಅಂತ್ಯ: ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮನವಮಿ ಆಚರಣೆಯನ್ನು 500 ವರ್ಷಗಳಿಂದ ಕಾತರದಿಂದ ನಿರೀಕ್ಷಿಸಲಾಗಿತ್ತು. ಆ ಗಳಿಗೆ ಈಗ ಬಂದಿದೆ. ಶ್ರೀರಾಮ ಜನ್ಮಭೂಮಿಯಲ್ಲಿ ಪ್ರಾಣ ಪ್ರತಿಷ್ಠೆಯ ನಂತರ ಇದು ಮೊದಲ ರಾಮನವಮಿ. ಹೀಗಾಗಿ ಭಕ್ತರಿಗೆ ಇದೊಂದು ವಿಶೇಷ ದಿನ ಎಂದು ವಿಶ್ವ ಹಿಂದೂ ಪರಿಷತ್ ವಕ್ತಾರ ಶರದ್ ಶರ್ಮಾ ಹೇಳಿದ್ದಾರೆ.

ಅಯೋಧ್ಯೆಯಲ್ಲಿ ಅಭೂತಪೂರ್ವ ಭದ್ರತೆ: ಭದ್ರತಾ ವ್ಯವಸ್ಥೆಗಳ ಜವಾಬ್ದಾರಿ ಐಜಿ ಪ್ರವೀಣ್ ಕುಮಾರ್ ಅವರ ಹೆಗಲಿಗೆ ಬಿದ್ದಿದೆ. ಅಯೋಧ್ಯೆ ಭದ್ರತೆಗಾಗಿ ವಲಯಗಳಾಗಿ ವಿಂಗಡಿಸಲಾಗಿದೆ. ನಮ್ಮ ಸ್ವಯಂಸೇವಕರು ಮತ್ತು ಫೋರ್ಸ್ ಮಲ್ಟಿಪ್ಲೈಯರ್‌ಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. ಭಾರೀ ವಾಹನಗಳ ಸಂಚಾರಕ್ಕೂ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ಐಜಿ ಭದ್ರತೆಯ ಬಗ್ಗೆ ಮಾಹಿತಿ ನೀಡಿದರು. ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ವಿಶೇಷ ಗಮನಹರಿಸಲಾಗಿದ್ದು, ಕುಡಿಯುವ ನೀರಿನ ವ್ಯವಸ್ಥೆ, ಬಿಸಿಲಿನಿಂದ ರಕ್ಷಿಸಲು ಬಣ್ಣಬಣ್ಣದ ಟಾರ್ಪಲ್, ಭಕ್ತರಿಗೆ ತಂಗಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅವರು ಇದೇ ವೇಳೆ ತಿಳಿಸಿದರು.

ಲೈವ್ ಸ್ಟ್ರೀಮಿಂಗ್: ಸುಗ್ರೀವ ಕೋಟೆಯ ಕೆಳಗೆ, ಬಿರ್ಲಾ ಧರ್ಮಶಾಲಾ ಮುಂಭಾಗದಲ್ಲಿ, ಶ್ರೀರಾಮ ಜನ್ಮಭೂಮಿ ಪ್ರವೇಶದ್ವಾರದಲ್ಲಿ, ದೇವಾಲಯದ ಟ್ರಸ್ಟ್‌ನಿಂದ ಪ್ರಯಾಣಿಕರ ಸೇವಾ ಕೇಂದ್ರವನ್ನು ಸ್ಥಾಪಿಸಲಾಗಿದೆ, ಇದರಲ್ಲಿ ಸಾರ್ವಜನಿಕ ಸೌಲಭ್ಯಗಳು ಲಭ್ಯವಿದೆ. ಭಕ್ತರಿಗೆ ಆಸನದಿಂದ ಹಿಡಿದು ಚಿಕಿತ್ಸೆ ನೀಡುವವರೆಗೆ ವಿಶೇಷ ಕಾಳಜಿ ವಹಿಸಲಾಗಿದೆ. ಅಯೋಧ್ಯಾ ಮುನ್ಸಿಪಲ್ ಕಾರ್ಪೊರೇಷನ್ ಪ್ರದೇಶದ 100 ಸ್ಥಳಗಳಲ್ಲಿ ಎಲ್ಇಡಿ ಪರದೆಯ ಮೂಲಕ ದೇವಾಲಯದಲ್ಲಿ ನಡೆಸುವ ಎಲ್ಲ ಕಾರ್ಯಕ್ರಮಗಳ ನೇರ ಪ್ರಸಾರವನ್ನು ಮಾಡಲಾಗುತ್ತಿದೆ.

ಇದನ್ನು ಓದಿ: ರಾಮನಾಮದಲ್ಲಿ ಮುಳುಗಿದ ಅಯೋಧ್ಯೆ: ಇಂದು 12 ಗಂಟೆಗೆ ಬಾಲರಾಮನಿಗೆ 'ಸೂರ್ಯ ತಿಲಕ' ವಿಸ್ಮಯ - surya tilak on ramlalla

ETV Bharat Logo

Copyright © 2024 Ushodaya Enterprises Pvt. Ltd., All Rights Reserved.