ETV Bharat / bharat

ಡಿಜಿಟಲ್​ ಕ್ರಾಂತಿಯಿಂದ ಹವಾಮಾನ ವೈಪರೀತ್ಯದವರೆಗೆ: ಬಿಲ್​ಗೇಟ್ಸ್​ ಜತೆ ಪ್ರಧಾನಿ ಮೋದಿ ಸಂವಾದ - Modi Bill Gates Interaction

author img

By ETV Bharat Karnataka Team

Published : Mar 29, 2024, 11:59 AM IST

ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚಿಗೆ ಮೈಕ್ರೋಸಾಫ್ಟ್​ ಸಹ ಸಂಸ್ಥಾಪಕ ಬಿಲ್​ಗೇಟ್ಸ್​ ಜತೆ ಸಂವಾದ ನಡೆಸಿದ್ದರು. ಈ ಸಂದರ್ಭದಲ್ಲಿ ಅನೇಕ ವಿಚಾರಗಳ ಕುರಿತು ಚರ್ಚೆ ನಡೆಸಿದ್ದಾರೆ.

prime-minister-narendra-modi-interaction-with-bill-gates
prime-minister-narendra-modi-interaction-with-bill-gates

ನವದೆಹಲಿ: ಕೃತಕ ಬುದ್ಧಿಮತ್ತೆಯಿಂದ (ಎಐ) ಹವಾಮಾನ ವೈಪರೀತ್ಯ ಸೇರಿದಂತೆ ಅನೇಕ ಪ್ರಮುಖ ವಿಚಾರಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಮತ್ತು ಮೈಕ್ರೋಸಾಫ್ಟ್​ ಸಹ ಸಂಸ್ಥಾಪಕ ಬಿಲ್​ ಗೇಟ್ಸ್ ಅವರು ​ಚರ್ಚೆ ನಡೆಸಿದ್ದಾರೆ. ಪ್ರಧಾನಿ ನಿವಾಸದಲ್ಲಿ ನಡೆದ ಈ ಸಂವಾದದ ಟೀಸರ್​​ ಅನ್ನು ಮಾರ್ಚ್​​ 28ರಂದು ಬಿಡುಗಡೆ ಮಾಡಲಾಗಿದ್ದು, ಇಂದು ಈ ಸಂವಾದದ ವಿಡಿಯೋ ಪ್ರಧಾನಿ ಎಕ್ಸ್​ ಖಾತೆಯಲ್ಲಿ ಲಭ್ಯವಿದೆ.

2023 ಜಿ20 ಶೃಂಗಸಭೆ: ಭಾರತದ ಅಧ್ಯಕ್ಷತೆಯಲ್ಲಿ 2023ರಲ್ಲಿ ನಡೆದ ಜಿ20 ಶೃಂಗಸಭೆ ಕುರಿತು ಮಾತನಾಡಿರುವ ಮೋದಿ, ಶೃಂಗಸಭೆಗೂ ಮುನ್ನ ಹಲವು ವಿಸ್ತಾರವಾದ ಚರ್ಚೆಗಳನ್ನು ನಾವು ನಡೆಸಿದ್ದೆವು. ನೀವೂ ಅದನ್ನು ಗಮನಿಸಿರಬಹುದು. ಶೃಂಗಸಭೆಯ ಪ್ರಕ್ರಿಯೆಗಳು ಅನೇಕ ತಿರುವುಗಳನ್ನು ಪಡೆದವು. ನಾವು ಜಿ20ಯ ಪ್ರಮುಖ ಉದ್ದೇಶ, ಗುರಿಗಳನ್ನು ಅರ್ಥಮಾಡಿಕೊಂಡಿದ್ದೇವೆ ಎಂದು ನಂಬುತ್ತೇನೆ. ಇದು ನಮ್ಮನ್ನು ಮುಖ್ಯಭೂಮಿಕೆಗೆ ಕರೆತಂದಿತು ಎಂದರು.

ಮೋದಿ ಮಾತಿಗೆ ಪ್ರತಿಕ್ರಿಯಿಸಿದ ಗೇಟ್ಸ್​, ಜಿ20 ಹೆಚ್ಚು ಅಂತರ್ಗತವಾಗಿದ್ದು, ಭಾರತದ ನೇತೃತ್ವದಲ್ಲಿ ಅದ್ಭುತವಾಗಿ ನಡೆಯಿತು. ಶೃಂಗಸಭೆಯಲ್ಲಿ ಡಿಜಿಟಲ್​ ಆವಿಷ್ಕಾರಗಳಿಗೆ ವಿಶೇಷ ಒತ್ತು ನೀಡಲಾಗಿದೆ. ದೇಶದಲ್ಲಿ ನೀವು ಸಾಧಿಸಿರುವ ಹಿಂದಿನ ಫಲಿತಾಂಶಗಳ ಬಗ್ಗೆಯೂ ನಮ್ಮ ಫೌಂಡೇಷನ್ ಉತ್ಸುಕವಾಗಿದೆ ಎಂದು ಹೇಳಿದರು.

ಭಾರತದಲ್ಲಿ ಡಿಜಿಟಲ್​ ಕ್ರಾಂತಿ: ಇಬ್ಬರು ನಾಯಕರು ಭಾರತದಲ್ಲಿನ ಡಿಜಿಟಲ್​ ಕ್ರಾಂತಿಯ ಜತೆಗೆ ಆರೋಗ್ಯ, ಕೃಷಿ ಮತ್ತು ಶಿಕ್ಷಣ ವಲಯದ ಕುರಿತು ಚರ್ಚಿಸಿದರು. ಇಂಡೋನೇಷ್ಯಾದಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಜಗತ್ತಿನೆಲ್ಲೆಡೆಯ ಪ್ರತಿನಿಧಿಗಳು ಭಾರತದ ಡಿಜಿಟಲ್​ ಕ್ರಾಂತಿ ಬಗ್ಗೆ ಕುತೂಹಲ ಹೊಂದಿದ್ದರು. ಏಕಸ್ವಾಮ್ಯವನ್ನು ತಡೆಯುವ ಉದ್ದೇಶದಿಂದ ನಾವು ತಂತ್ರಜ್ಞಾನವನ್ನು ಪ್ರಜಾಪ್ರಭುತ್ವಗೊಳಿಸಿದ್ದೇವೆ ಎಂದು ನಾನು ಅವರಿಗೆ ವಿವರಿಸಿದೆ. ಇದು ಜನರಿಂದ ಜನರಿಗಾಗಿ ಇದೆ ಎಂದು ಬೀಲ್​ಗೇಟ್ಸ್​ ತಿಳಿಸಿದರು.

ಕೋವಿಡ್​ ಸಂದರ್ಭದಲ್ಲಿ ಭಾರತ: ಸಂವಾದದಲ್ಲಿ ಪ್ರಧಾನಿ ಮೋದಿ, ಕೋವಿಡ್​ 19 ಸಾಂಕ್ರಾಮಿಕತೆಯ ಸಮಯದಲ್ಲಿ ಲಸಿಕೆ ತಯಾರಿ ಕುರಿತು ಮೆಲುಕು ಹಾಕಿದರು. ಮೊದಲಿಗೆ ನಾವು ವೈರಸ್​ ವಿರುದ್ಧ ಹೇಗೆ ಹೋರಾಡಬೇಕು ಎಂಬುದಕ್ಕೆ ಒತ್ತು ನೀಡಿದೆವು. ಇದು ಸರ್ಕಾರ ವರ್ಸಸ್​ ವೈರಸ್​ ಅಲ್ಲ. ಬದಲಾಗಿ ವೈರಸ್​ ವರ್ಸಸ್​ ಜೀವನದ ಹೋರಾಟ. ಇದು ನನ್ನ ಮೊದಲ ತತ್ವವಾಗಿತ್ತು. ಈ ನಿಟ್ಟಿನಲ್ಲಿ ಮೊದಲ ದಿನದಿಂದಲೇ ನನ್ನ ದೇಶದ ಜನರೊಂದಿಗೆ ನೇರವಾಗಿ ಸಂವಹನ ನಡೆಸಲು ಶುರು ಮಾಡಿದೆ. ಸಾರ್ವಜನಿಕವಾಗಿ ನಾನು ಎಲ್ಲಾ ಶಿಷ್ಟಾಚಾರಗಳನ್ನು ಪಾಲಿಸಿದೆ. ಅವರಿಗೆ ತಾಲಿ ಬಜಾವೋ (ಚಪ್ಪಾಳೆ ತಟ್ಟಿ) ಎಂದೆ. ಇದನ್ನು ಕೆಲವರು ಅಪಹಾಸ್ಯ ಮಾಡಿದರು. ಆದರೆ, ಜನರು ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಂಡರು ಎಂದು ಮೋದಿ ವಿವರಿಸಿದರು.

ಒಮ್ಮೆ ಆತ್ಮವಿಶ್ವಾಸ ನಿರ್ಮಾಣವಾದರೆ, ಅದು ಸಾಮೂಹಿಕ ಚಳುವಳಿಯಾಗುತ್ತದೆ. ಲಸಿಕೆ ಸಂಶೋಧನೆಯ ವೆಚ್ಚದಿಂದ ಆರ್ಥಿಕ ಸವಾಲು ಕೂಡ ಗಣನೀಯವಾಗಿತ್ತು. ನಾನೇ ಮೊದಲ ಲಸಿಕೆ ಪಡೆಯುವ ಮೂಲಕ ಜನರಲ್ಲಿ ಆತ್ಮವಿಶ್ವಾಸ ಮೂಡಿಸಿದೆ. ನನ್ನ 95 ವರ್ಷದ ತಾಯಿ ಕೂಡ ಲಸಿಕೆ ಪಡೆದರು. ನನ್ನ ಹೊಸ ಸರ್ಕಾರದಲ್ಲಿ ಗರ್ಭಕಂಠ ಕ್ಯಾನ್ಸರ್​ ಸಂಶೋಧನೆಯಲ್ಲಿ ಸಾಕಷ್ಟು ಹೂಡಿಕೆ ಮಾಡಲು ಬಯಸುತ್ತೇನೆ ಎಂದರು.

ನಮೋ ಡ್ರೋನ್​ ದೀದಿ: ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಇಂದು ಪ್ರಮುಖ ಅವಶ್ಯಕತೆಯಾಗಿದೆ. ಇದರಿಂದ ಭಾರತದಲ್ಲಿ ಮಹಿಳೆಯರು ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ನಮೋ ಡ್ರೋನ್​ ದೀದಿ ಯೋಜನೆ ಆರಂಭಿಸಿದೆ. ಇದು ಯಶಸ್ವಿಯಾಯಿತು. ಇತ್ತೀಚಿಗೆ ಈ ಸಂಬಂಧ ಮಹಿಳೆಯರೊಂದಿಗೆ ಸಂವಾದ ನಡೆಸಿದಾಗ ಅವರು ಹೆಚ್ಚು ಸಂತೋಷ ಹೊಂದಿರುವುದು ತಿಳಿಯಿತು. ಬೈಸಿಕಲ್​ ಓಡಿಸಲು ಬಾರದೇ ಇರುವವರು ಕೂಡಾ ಇಂದು ಪೈಲಟ್​​ ಮತ್ತು ಡ್ರೋನ್​ ಓಡಿಸುತ್ತಿರುವುದಾಗಿ ಹೇಳುತ್ತಿದ್ದಾರೆ. ಜನರ ಮನಸ್ಥಿತಿ ಬದಲಾಗಿದೆ ಎಂದು ವಿವರಿಸಿದರು.

ಡೀಪ್​ ಫೇಕ್​: ಕೃತಕ ಬುದ್ಧಿಮತ್ತೆಯ ಬೆಳವಣಿಗೆ ಮತ್ತು ಅದಕ್ಕೆ ಸಂಬಂಧಿಸಿದ ಅಪಾಯಗಳ ಕುರಿತು ಮಾತನಾಡಿದ ಇಬ್ಬರು ನಾಯಕರು, ಎಐ ಅನ್ನು ಮ್ಯಾಜಿಕ್​ ಸಾಧನವಾಗಿ ನಾವು ಬಳಸಿದರೆ, ಇದು ಹೆಚ್ಚಿನ ದುರ್ಬಳಕೆಗೆ ಕಾರಣವಾಗಬಹುದು. ಇದನ್ನು ಸೋಮಾರಿತನದಿಂದ ಅಭಿವೃದ್ಧಿ ಮಾಡಿದರೆ, ಅದೂ ಕೂಡ ತಪ್ಪು ಮಾರ್ಗವಾಗುತ್ತದೆ ಎಂದರು.

ಎಐ ತನ್ನ ಆರಂಭಿಕ ದಿನಗಳಲ್ಲಿ ಕಠಿಣ ಎಂಬ ಕೆಲಸವನ್ನೂ ಸುಲಭ ಮಾಡುತ್ತದೆ. ನೀವು ಸುಲಭ ಎನ್ನುವ ಕೆಲಸದಲ್ಲಿ ಅದು ನಿಮ್ಮನ್ನು ಸೋಲಿಸುತ್ತದೆ. ಎಐ ಹೆಚ್ಚಿನ ಅವಕಾಶ ಹೊಂದಿರುವ ಜತೆಗೆ ಸವಾಲನ್ನೂ ಕೂಡಾ ಹೊಂದಿದೆ ಎಂದು ಬಿಲ್​ಗೇಟ್ಸ್​ ತಿಳಿಸಿದರು.

ಇದನ್ನೂ ಓದಿ: ಲಸಿಕೆಯಲ್ಲಿ ಭಾರತ ಜಾಗತಿಕ ನಾಯಕ: ಬಿಲ್​ ಗೇಟ್ಸ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.