ಭಾರತೀಯ ವಿದ್ಯಾರ್ಥಿಗಳಿಗಾಗಿ ನಾಲ್ಕೂವರೆ ಗಂಟೆ ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸಿದ್ದ ಪ್ರಧಾನಿ ಮೋದಿ: ರಾಜನಾಥ್​ ಸಿಂಗ್ - Rajnath Singh

author img

By ETV Bharat Karnataka Team

Published : Apr 23, 2024, 6:33 PM IST

ರಾಜನಾಥ್​ ಸಿಂಗ್​
Rajnath Singh ()

ಉಕ್ರೇನ್‌ನಲ್ಲಿ ಸಿಲುಕಿದ್ದ ಭಾರತೀಯ ವಿದ್ಯಾರ್ಥಿಗಳಿಗಾಗಿ ಪ್ರಧಾನಿ ಮೋದಿ ರಷ್ಯಾ ಮತ್ತು ಉಕ್ರೇನ್​ ನಡುವಿನ ಯುದ್ಧವನ್ನು ನಾಲ್ಕೂವರೆ ಗಂಟೆಗಳ ಕಾಲ ನಿಲ್ಲಿಸಿದ್ದರು ಎಂದು ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಹೇಳಿದರು.

ಕುಂತಿ(ಜಾರ್ಖಂಡ್): ರಷ್ಯಾ ಮತ್ತು ಉಕ್ರೇನ್​ ನಡುವಿನ ಯುದ್ಧವನ್ನು ಪ್ರಧಾನಿ ಮೋದಿ ನಾಲ್ಕೂವರೆ ಗಂಟೆಗಳ ಕಾಲ ನಿಲ್ಲಿಸಿದ್ದರು. ಈ ಮೂಲಕ ಉಕ್ರೇನ್‌ನಲ್ಲಿ ಸಿಲುಕಿದ್ದ 20,000ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ತವರಿಗೆ ಮರಳಲು ಅನುಕೂಲವಾಗುವಂತೆ ಯುದ್ಧ ತಡೆದಿದ್ದರು. ಇದನ್ನು ವಿಶ್ವದ ಯಾವುದೇ ನಾಯಕರಿಗೂ ಮಾಡಲು ಸಾಧ್ಯವಾಗಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ತಿಳಿಸಿದರು.

ಕುಂತಿಯಲ್ಲಿ ಇಂದು ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಅರ್ಜುನ್ ಮುಂಡಾ ಪರ ಚುನಾವಣಾ ಭಾಷಣ ಉದ್ದೇಶಿಸಿ ಮಾತನಾಡಿದ ಅವರು, ''ರಷ್ಯಾ ಮತ್ತು ಉಕ್ರೇನ್ ನಡುವೆ ಎರಡು ವರ್ಷಗಳಿಂದ ಯುದ್ಧ ನಡೆಯುತ್ತಿದೆ. ಇಬ್ಬರೂ ರಾಷ್ಟ್ರಗಳು ಪರಸ್ಪರ ಬಾಂಬ್ ಹಾಕುವುದು​ ಮತ್ತು ಕ್ಷಿಪಣಿಗಳನ್ನು ಉಡಾಯಿಸುತ್ತಿದ್ದಾರೆ. ಯುದ್ಧ ಪ್ರಾರಂಭವಾದಾಗ ಸಾವಿರಾರು ಭಾರತೀಯ ಮಕ್ಕಳು ಅಲ್ಲಿ ಸಿಲುಕಿದ್ದರು. ಭಾರತದಲ್ಲಿರುವ ಹೆತ್ತವರು ತಮ್ಮ ಮಕ್ಕಳ ಬಗ್ಗೆ ಚಿಂತಿತರಾಗಿದ್ದರು. ಪ್ರಧಾನಿ ಮೋದಿ ಅವರ ಭೇಟಿಯಾಗಿ ತಮ್ಮ ಮಕ್ಕಳನ್ನು ಭಾರತಕ್ಕೆ ಮರಳಿ ಕರೆತರುವಂತೆ ಪೋಷಕರು ಕೇಳಿಕೊಂಡಿದ್ದರು'' ಎಂದು ಹೇಳಿದರು.

ಮುಂದುವರೆದು, ''ಬಾಂಬ್ ಸ್ಫೋಟಗಳ ನಡುವೆ ಭಾರತಕ್ಕೆ ವಿದ್ಯಾರ್ಥಿಗಳು ಮರಳಲು ಹೇಗೆ ಸಾಧ್ಯವಾಯಿತು ಎಂದರೆ, ಪ್ರಧಾನಿ ಮೋದಿ ಫೋನ್ ಮೂಲಕ ರಷ್ಯಾ ಅಧ್ಯಕ್ಷ ಪುಟಿನ್ ಮತ್ತು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರಿಗೆ ಕರೆ ಮಾಡಿ ಮಾತನಾಡಿದರು. ಆಗ ನಾಲ್ಕೂವರೆ ಗಂಟೆಗಳ ಕಾಲ ಯುದ್ಧ ನಿಲ್ಲಿಸಲಾಯಿತು. ನಮ್ಮ 22,500 ಮಕ್ಕಳು ಭಾರತಕ್ಕೆ ಮರಳಿದರು'' ಎಂದು ರಕ್ಷಣಾ ಸಚಿವರು ವಿವರಿಸಿದರು.

ಇದೇ ವೇಳೆ, ''ಭಾರತವು ಮುಂದಿನ ಮೂರು ವರ್ಷಗಳಲ್ಲಿ ಅಮೆರಿಕ ಮತ್ತು ಚೀನಾದ ನಂತರ ಭಾರತವು ಅಗ್ರ ಮೂರು ಜಾಗತಿಕ ಆರ್ಥಿಕತೆಗಳಲ್ಲಿ ಸ್ಥಾನಕ್ಕೇರಲಿದೆ' ಎಂದು ರಾಜನಾಥ್​ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದರು. ತಮ್ಮ ಭಾಷಣದಲ್ಲಿ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ಮಾಡಿದ ಅವರು, ''ಕಾಂಗ್ರೆಸ್ ದೇಶದ ಜಾತ್ಯತೀತ ರಚನೆಯನ್ನೇ ನಾಶಪಡಿಸುತ್ತಿದೆ. ಹಿಂದೂ ಮತ್ತು ಮುಸ್ಲಿಮರನ್ನು ವಿಭಜಿಸುವ ರಾಜಕಾರಣ ಮಾಡುತ್ತಿದೆ. ಜನಸಾಮಾನ್ಯರ ಕಲ್ಯಾಣಕ್ಕೆ ವಿರುದ್ಧವಾಗಿ ಕೆಲಸ ಮಾಡುತ್ತಿದೆ. ಆದರೆ, ಬಿಜೆಪಿ ಧರ್ಮ ಅಥವಾ ಜಾತಿಯ ಆಧಾರದ ನಡುವೆ ಯಾವುದೇ ತಾರತಮ್ಯ ಅನುಸರಿಸುವುದಿಲ್ಲ'' ಎಂದರು.

ಭಾರತೀಯ ವಿದ್ಯಾರ್ಥಿಗಳಿಗಾಗಿ ಉಕ್ರೇನ್​ ಮತ್ತು ರಷ್ಯಾ ಯುದ್ಧ ನಿಲ್ಲಿಸಿದ್ದ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಕೂಡ ಮಾರ್ಚ್‌ನಲ್ಲಿ ನೀಡಿದ ಹೇಳಿಕೆ ನೀಡಿದ್ದರು. ಭಾರತೀಯ ವಿದ್ಯಾರ್ಥಿಗಳ ಸುರಕ್ಷಿತ ಆಗಮನ ಖಚಿತಪಡಿಸಿಕೊಳ್ಳಲು ಪ್ರಧಾನಿ ಮೋದಿ ಅವರು, ಪುಟಿನ್ ಮತ್ತು ಝೆಲೆನ್ಸ್ಕಿ ಇಬ್ಬರಿಗೂ ಕರೆ ಮಾಡಿದ್ದರು ಎಂದು ಜೈಶಂಕರ್ ಹೇಳಿದ್ದರು. ಇದರ ಬೆನ್ನಲ್ಲೇ ರಕ್ಷಣಾ ಸಚಿವ ರಾಜನಾಥ್​ ಸಹ ಯುದ್ಧ ನಿಲ್ಲಿಸಿದ್ದ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಆಡಳಿತದಲ್ಲಿ ಹನುಮಾನ್​ ಚಾಲೀಸ ಆಲಿಸುವುದೂ ಕೂಡ ಅಪರಾಧ: ಬೆಂಗಳೂರು ಘಟನೆ ಉಲ್ಲೇಖಿಸಿ ಮೋದಿ ವಾಗ್ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.