ETV Bharat / bharat

ಹೈದರಾಬಾದಿನ ರಾಮೇಶ್ವರಂ ಕೆಫೆಗೆ ಒವೈಸಿ ಭೇಟಿ: ಬೆಂಗಳೂರಿನ ಘಟನೆಗೆ ಖಂಡನೆ

author img

By ANI

Published : Mar 3, 2024, 1:20 PM IST

ಹೈದರಾಬಾದ್​ನ ರಾಮೇಶ್ವರಂ ಕೆಫೆಗೆ ಭೇಟಿ ನೀಡಿದ ಅಸಾದುದ್ದೀನ್ ಒವೈಸಿ, ಬೆಂಗಳೂರು ಸ್ಫೋಟದ ಘಟನೆಯನ್ನು ಖಂಡಿಸಿದ್ದಾರೆ.

Asaduddin Owaisi visits Hyderabad's Rameshwaram Cafe
Asaduddin Owaisi visits Hyderabad's Rameshwaram Cafe

ಹೈದರಾಬಾದ್: ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಹೈದರಾಬಾದ್‌ನ ರಾಮೇಶ್ವರಂ ಕೆಫೆಗೆ ಭೇಟಿ ನೀಡಿದರು. ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಬಾಂಬ್​ ಸ್ಪೋಟದ ಹಿನ್ನೆಲೆಯಲ್ಲಿ ಹೈದರಾಬಾದ್​ ನ ರಾಮೇಶ್ವರಂ ಕೆಫೆಗೆ ಭೇಟಿ ನೀಡಿದ ಒವೈಸಿ, ಸ್ಪೋಟದ ಸಂತ್ರಸ್ತರಿಗೆ ಸಾಂತ್ವನ ಸೂಚಿಸಿದರು. ಬೆಂಗಳೂರು ಸ್ಪೋಟದ ಘಟನೆಯನ್ನು ಖಂಡಿಸಿದ ಓವೈಸಿ, ಕೆಫೆಗೆ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಜನ್ಮಸ್ಥಳದ ಹೆಸರನ್ನಿಟ್ಟಿರುವುದನ್ನು ಸ್ಮರಿಸಿದರು.

"ಸ್ಫೋಟದ ಸಂತ್ರಸ್ತರ ಸಂಕಷ್ಟದಲ್ಲಿ ಭಾಗಿಯಾಗಿರುವುದನ್ನು ಸೂಚಿಸಲು ಹೈದರಾಬಾದ್​ನ ರಾಮೇಶ್ವರಂ ಕೆಫೆಗೆ ಭೇಟಿ ನೀಡಿದ್ದೇನೆ. ಇಲ್ಲಿನ ಆಹಾರ ತುಂಬಾ ರುಚಿಕಟ್ಟಾಗಿದೆ ಮತ್ತು ಈ ಕೆಫೆಗೆ ಎಪಿಜೆ ಅಬ್ದುಲ್ ಕಲಾಂ ಅವರ ಜನ್ಮಸ್ಥಳದ ಹೆಸರನ್ನು ಇಡಲಾಗಿದೆ ಎಂಬುದನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ. ರಾಮೇಶ್ವರಂ ಕೆಫೆ ಮೇಲೆ ದಾಳಿ ನಡೆಸಿದ್ದು ಹೇಡಿತನದ ಕೃತ್ಯ ಮತ್ತು ಅದು ಭಾರತದ ಮೌಲ್ಯಗಳ ಮೇಲಿನ ದಾಳಿ" ಎಂದು ಓವೈಸಿ 'ಎಕ್ಸ್' ಪೋಸ್ಟ್​ನಲ್ಲಿ ತಿಳಿಸಿದ್ದಾರೆ. ಹೋಟೆಲ್​ನಲ್ಲಿ ರುಚಿಕರವಾದ ಊಟ ಸವಿದ ಒವೈಸಿ, ಹೋಟೆಲ್​ಗೆ ಬಂದಿದ್ದ ಕೆಲ ಗ್ರಾಹಕರೊಂದಿಗೆ ಮಾತುಕತೆ ನಡೆಸಿದರು.

ಇದಕ್ಕೂ ಮುನ್ನ ಬೆಂಗಳೂರಿನ ಆಸ್ಪತ್ರೆಗಳಲ್ಲಿ ದಾಖಲಾಗಿರುವ ರಾಮೇಶ್ವರಂ ಕೆಫೆ ಸ್ಫೋಟದ ಗಾಯಾಳುಗಳನ್ನು ಭೇಟಿ ಮಾಡಿದ ಸಿಎಂ ಸಿದ್ದರಾಮಯ್ಯ, ಗಾಯಾಳುಗಳ ವೈದ್ಯಕೀಯ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಭರವಸೆ ನೀಡಿದರು.

ಏತನ್ಮಧ್ಯೆ, ಈ ಘಟನೆಯ ಬಗ್ಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಸಿದ್ದರಾಮಯ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದೆ.

ಆಡಳಿತಾರೂಢ ಕಾಂಗ್ರೆಸ್ ಪಕ್ಷವು ತನ್ನ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕಿದೆ ಮತ್ತು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿರುವ ಇಂತಹ ದುಷ್ಟ ಶಕ್ತಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ ಎಂದು ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಶುಕ್ರವಾರ ಹೇಳಿದ್ದಾರೆ.

ಬೆಂಗಳೂರಿನ ಕುಂದಲಹಳ್ಳಿ ಬಳಿಯ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಐಇಡಿ ಬಾಂಬ್ ಸ್ಫೋಟದಲ್ಲಿ 9 ಜನ ಗಾಯಗೊಂಡಿದ್ದಾರೆ. ಈ ಘಟನೆ ದೇಶಾದ್ಯಂತ ಆತಂಕಕ್ಕೆ ಕಾರಣವಾಗಿದೆ. ಸ್ಪೋಟದ ಹಿಂದಿನ ಆರೋಪಿಗಳನ್ನು ಪತ್ತೆ ಮಾಡಲು ಭದ್ರತಾ ಸಂಸ್ಥೆಗಳು ತೀವ್ರವಾಗಿ ತನಿಖೆ ನಡೆಸುತ್ತಿವೆ.

ಇದನ್ನೂ ಓದಿ: ಬೆಂಗಳೂರು ಕೆಫೆ ಸ್ಫೋಟ: ತನಿಖೆಗೆ ಸವಾಲಾದ ಆರೋಪಿ ಬಳಸಿಕೊಂಡ ಸಮಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.