ETV Bharat / bharat

ಚುನಾವಣಾ ಬಾಂಡ್​ ರದ್ದಿನಿಂದ ಪಾರದರ್ಶಕತೆ ಕಾಪಾಡಲು ಸಾಧ್ಯ: ಅಮರ್ತ್ಯ ಸೇನ್

author img

By ETV Bharat Karnataka Team

Published : Feb 26, 2024, 11:37 AM IST

ಭಾರತದಲ್ಲಿ ಚುನಾವಣಾ ಬಾಂಡ್​ಗಳನ್ನು ರದ್ದು ಮಾಡಿದ ಸುಪ್ರೀಂಕೋರ್ಟ್​ ತೀರ್ಪನ್ನು ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರು ಶ್ಲಾಘಿಸಿದ್ದಾರೆ.

ಅಮರ್ತ್ಯ ಸೇನ್
ಅಮರ್ತ್ಯ ಸೇನ್

ಕೋಲ್ಕತ್ತಾ (ಪಶ್ಚಿಮ ಬಂಗಾಳ): ಚುನಾವಣಾ ಬಾಂಡ್​​ಗಳನ್ನು ರದ್ದು ಮಾಡಿದ ಸುಪ್ರೀಂಕೋರ್ಟ್​ ತೀರ್ಪನ್ನು ಖ್ಯಾತ ಅರ್ಥಶಾಸ್ತ್ರಜ್ಞ ಮತ್ತು ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್ ಅವರು ಸ್ವಾಗತಿಸಿದ್ದು, ಇದೊಂದು ದೊಡ್ಡ ಹಗರಣವಾಗಿದೆ ಎಂದು ಟೀಕಿಸಿದ್ದಾರೆ.

ಅಮೆರಿಕದ ಮೆಸಾಚುಸೆಟ್ಸ್​ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿರುವ ಅವರು, ಚುನಾವಣಾ ಬಾಂಡ್​ಗಳು ಅಕ್ರಮವಾಗಿ ಹಣವನ್ನು ಕೊಡುಗೆಯಾಗಿ ನೀಡಲು ಬಳಕೆ ಮಾಡಲಾಗುತ್ತದೆ. ಇಂತಹ ಯೋಜನೆಯನ್ನು ಭಾರತದ ಸುಪ್ರೀಂಕೋರ್ಟ್​ ರದ್ದು ಮಾಡಿದ್ದು ಉತ್ತಮ ನಿರ್ಧಾರ. ಚುನಾವಣೆಗಳಲ್ಲಿ ಹೆಚ್ಚಿನ ಪಾರದರ್ಶಕತೆ ಉಳಿಸಿಕೊಳ್ಳಲು ಇದರಿಂದ ಸಾಧ್ಯವಾಗುತ್ತದೆ ಎಂದು ವ್ಯಾಖ್ಯಾನಿಸಿದ್ದಾರೆ.

ಚುನಾವಣಾ ಬಾಂಡ್‌ಗಳು ಹಗರಣ ನಡೆಸಲು ನೆರವಾಗುತ್ತದೆ. ಈಗ ಅವುಗಳನ್ನು ಕೈಬಿಟ್ಟಿರುವುದು ಖುಷಿಯ ವಿಚಾರ. ಚುನಾವಣಾ ಸಂದರ್ಭದಲ್ಲಿ ಜನರು ರಾಜಕೀಯ ಪಕ್ಷಕ್ಕೆ ನೀಡುವ ಬೆಂಬಲದಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಚುನಾವಣೆ ಮೇಲೆ ರಾಜಕೀಯ ಪ್ರಭಾವ: ಭಾರತದಲ್ಲಿ ರಾಜಕೀಯ ಪಕ್ಷಗಳು ಚುನಾವಣಾ ಪ್ರಕ್ರಿಯೆ ಮೇಲೆ ಪ್ರಭಾವಿ ಬೀರುವಂತಾಗಿವೆ. ಇದರಿಂದ ನ್ಯಾಯಯುತ ಚುನಾವಣೆಗಳು ನಡೆಯದೇ ಹೋಗಬಹುದು. ಇದು ಮತದಾರರ ನಿಜವಾದ ಹಕ್ಕನ್ನು ಕಿತ್ತುಕೊಳ್ಳಲಿದೆ. ರಾಜಕೀಯದ ಹೆಚ್ಚಿನ ಬಲದಿಂದಾಗಿ ಸಾಮಾನ್ಯ ಜನರು ಚುನಾವಣೆಯಲ್ಲಿ ಪೂರ್ಣ ಸ್ವಾತಂತ್ರ್ಯ ಹೊಂದಲು ಅಸಾಧ್ಯವಾಗುತ್ತದೆ ಎಂದಿದ್ದಾರೆ.

ಆಡಳಿತದಲ್ಲಿರುವ ಸರ್ಕಾರವು ವಿರೋಧ ಪಕ್ಷಗಳನ್ನು ಹೇಗೆ ನಡೆಸಿಕೊಳ್ಳುತ್ತದೆ ಎಂಬುದರ ಮೇಲೆ ದೇಶದ ಚುನಾವಣಾ ವ್ಯವಸ್ಥೆಯ ಪಾರದರ್ಶಕತೆ ಉಳಿದುಕೊಳ್ಳುತ್ತದೆ ಎಂದು ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ. ವಿರೋಧ ಪಕ್ಷಗಳು ಬಲವಾಗಿರಬೇಕು. ಇಲ್ಲವಾದಲ್ಲಿ ಸರ್ಕಾರವು ಹಲವು ನಿರ್ಬಂಧಗಳ ಅಡಿ ವ್ಯವಸ್ಥೆಯನ್ನು ಇರಿಸಿಕೊಳ್ಳಲು ಬಯಸುತ್ತದೆ. ನಾಗರಿಕರ ವಾಕ್ ಮತ್ತು ಕ್ರಿಯೆಯ ಸ್ವಾತಂತ್ರ್ಯದ ಜೊತೆಗೆ ಸಾಧ್ಯವಾದಷ್ಟು ಮುಕ್ತ ಚುನಾವಣಾ ವ್ಯವಸ್ಥೆಯು ಸಮಾಜದಲ್ಲಿ ಇರುವುದನ್ನ ನಾವು ಬಯಸುತ್ತೇವೆ ಎಂದು ಅವರು ಹೇಳಿದ್ದಾರೆ.

ಭಾರತದ ಸಂವಿಧಾನವು ಎಲ್ಲಾ ನಾಗರಿಕರಿಗೆ ರಾಜಕೀಯ ಸ್ವಾತಂತ್ರ್ಯ ನೀಡಿದೆ. ಯಾವುದೇ ನಿರ್ದಿಷ್ಟ ಸಮುದಾಯಕ್ಕೆ ವಿಶೇಷ ಸ್ಥಾನಮಾನ ನೀಡಿಲ್ಲ ಎಂದು ಅಮರ್ತ್ಯ ಸೇನ್​ ಹೇಳಿದ್ದಾರೆ.

ಸುಪ್ರೀಂಕೋರ್ಟ್​ ತೀರ್ಪೇನು?: ಚುನಾವಣಾ ಬಾಂಡ್‌ ಯೋಜನೆ ಕುರಿತು ಸುಪ್ರೀಂಕೋರ್ಟ್​ ಫೆಬ್ರವರಿ 15 ರಂದು ಮಹತ್ವದ ತೀರ್ಪು ನೀಡಿದೆ. ಈ ಯೋಜನೆಯು ಸಂವಿಧಾನ ಬಾಹಿರವಾಗಿದೆ. ಮೂಲ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಹೀಗಾಗಿ ಯೋಜನೆ ರದ್ದು ಮಾಡಬೇಕು ಎಂದು ಆದೇಶಿಸಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್​ ಅವರ ನೇತೃತ್ವದ ಪಂಚಪೀಠವು ಈ ತೀರ್ಪು ನೀಡಿದೆ. ಚುನಾವಣಾ ಬಾಂಡ್​ ಅಸಾಂವಿಧಾನಿಕ. ರಾಜಕೀಯ ಪಕ್ಷಗಳಿಗೆ ಬಾಂಡ್​ಗಳನ್ನು ಕೊಡುವುದನ್ನು ನಿಲ್ಲಿಸಿಬಿಡಿ ಎಂದು ಪೀಠವು ಸೂಚಿಸಿದೆ. ರಾಜಕೀಯ ಪಕ್ಷಗಳು ನಗದೀಕರಿಸಿದ ಪ್ರತಿ ಚುನಾವಣಾ ಬಾಂಡ್‌ನ ವಿವರಗಳನ್ನು ಚುನಾವಣಾ ಆಯೋಗಕ್ಕೆ ನೀಡುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಗೆ ನಿರ್ದೇಶನ ನೀಡಿದೆ. ಈ ಮಾಹಿತಿಯು ನಗದೀಕರಣದ ದಿನಾಂಕ ಮತ್ತು ಬಾಂಡ್‌ಗಳ ಮುಖಬೆಲೆ ಒಳಗೊಂಡಿರಬೇಕು ಮತ್ತು ಮಾರ್ಚ್ 6 ರೊಳಗೆ ಚುನಾವಣಾ ಸಮಿತಿಗೆ ಸಲ್ಲಿಸಬೇಕು ಎಂದಿದೆ.

ಇದನ್ನೂ ಓದಿ: ಚುನಾವಣಾ ಬಾಂಡ್​ಗಳು ಸಂವಿಧಾನ ಬಾಹಿರ, ತಕ್ಷಣವೇ ರದ್ದು ಮಾಡಿ: ಸುಪ್ರೀಂಕೋರ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.