ETV Bharat / bharat

ಬರೇಲಿ ಸೇನಾ ಶಿಬಿರದಲ್ಲಿ ಕೊಲೆ: ಕಾನ್ಸ್​​ಟೇಬಲ್​​ಗೆ ರೈಫಲ್​ನಿಂದ ಗುಂಡು ಹಾರಿಸಿದ ಸೈನಿಕ

author img

By ETV Bharat Karnataka Team

Published : Feb 24, 2024, 9:21 AM IST

ಕಾನ್ಸ್​​​ಟೇಬಲ್​ ​ ಹಾಗೂ ಯೋಧನ ನಡುವಿನ ಗಲಾಟೆಯಲ್ಲಿ ಕಾನ್ಸ್​ಟೇಬಲ್​​ ಪ್ರಾಣ ಕಳೆದುಕೊಂಡಿರುವ ಘಟನೆ ಬರೇಲಿಯಲ್ಲಿ ನಡೆದಿದೆ.

murder in Bareilly army camp: Constable shot by soldier with rifle
ಬರೇಲಿ ಸೇನಾ ಶಿಬಿರದಲ್ಲಿ ಕೊಲೆ: ಕಾನ್​​ಸ್ಟೇಬಲ್​ಗೆ ರೈಫಲ್​ನಿಂದ ಗುಂಡು ಹಾರಿಸಿದ ಸೈನಿಕ

ಬರೇಲಿ (ಉತ್ತರ ಪ್ರದೇಶ): ಯೋಧನೊಬ್ಬ ಸಹ ಕಾನ್ಸ್​ಟೇಬಲ್​ಗೆ ರೈಫಲ್​ನಿಂದ ಗುಂಡು ಹಾರಿಸಿ ಕೊಲೆ ಮಾಡಿರುವ ಘಟನೆ ಉತ್ತರಪ್ರದೇಶದ ಬರೇಲಿಯ ಕ್ಯಾಂಟ್​ ಪೊಲೀಸ್​ ಠಾಣೆ ವ್ಯಾಪ್ತಿಯ ಸೇನಾ ಶಿಬಿರದಲ್ಲಿ ಶುಕ್ರವಾರ ನಡೆದಿದೆ. ಯೋಧ ಹಾಗೂ ಕಾನ್ಸ್​ಟೇಬಲ್​​ ನಡುವೆ ಕೆಲವು ವಿಚಾರಕ್ಕೆ ವಾಗ್ವಾದ ನಡೆದಿದ್ದು, ಗಲಾಟೆ ತಾರಕಕ್ಕೇರಿ ಯೋಧ ಗೇಟ್​ ಬಳಿ ನಿಂತಿದ್ದ ಕಾವಲುಗಾರನ ಸರ್ವಿಸ್ ರೈಫಲ್​ ಕಿತ್ತುಕೊಂಡು ಗುಂಡು ಹಾರಿಸಿದ್ದಾನೆ. 40 ವರ್ಷದ ಕಮಲ್​ ಜೋಶಿ ಕೊಲೆಯಾದ ಕಾನ್ಸ್​ಟೇಬಲ್​ ಎಂದು ತಿಳಿದು ಬಂದಿದೆ.

ಬರೇಲಿಯ ಕ್ಯಾಂಟ್​ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿರುವ ಸೇನೆಯ 606 ಇಎಂಇ ಬೆಟಾಲಿಯನ್​ನಲ್ಲಿ ಕಾನ್ಸ್​ಟೇಬಲ್​ ​ ಆಗಿ ಅಸ್ಸಾಂನ ನಿವಾಸಿಯಾಗಿದ್ದ ಕಮಲ್​ ಜೋಶಿ ನೇಮಕಗೊಂಡಿದ್ದರು. ರಜೆಯಲ್ಲಿ ಮನೆಗೆ ತೆರಳಿದ್ದ ಅವರು ಶುಕ್ರವಾರ ಬೆಟಾಲಿಯನ್​ಗೆ ವಾಪಸ್​ ಆಗಿದ್ದರು. ಈ ಸಂದರ್ಭದಲ್ಲಿ ಬೆಟಾಲಿಯನ್​ನಲ್ಲಿದ್ದ ಯೋಧ ರಾಜೇಶ್​ ರತ್ನ ಹಾಗೂ ಇವರ ಮಧ್ಯೆ ಯಾವುದೋ ವಿಷಯಕ್ಕೆ ಸಣ್ಣದಾಗಿ ಜಗಳ ಪ್ರಾರಂಭವಾಗಿದೆ. ಮಾತಿಗೆ ಮಾತು ಬೆಳೆದು, ಜಗಳ ತಾರಕಕ್ಕೇರಿದೆ. ಈ ವೇಳೆ ಯೋಧ ರಾಜೇಶ್​ ಅಲ್ಲೇ ಗೇಟ್​ ಬಳಿ ನಿಂತಿದ್ದ ಕಾವಲುಗಾರನ ರೈಪಲ್​ ತೆಗೆದುಕೊಂಡು ಕಮಲ್​ ಜೋಶಿಗೆ ಗುಂಡು ಹಾರಿಸಿದ್ದಾನೆ. ಇದರಿಂದಾಗಿ ಕಮಲ್​ ಜೋಶಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಘಟನೆ ಬಗ್ಗೆ ಮಾಹಿತಿ ಪಡೆದ ತಕ್ಷಣ ಕ್ಯಾಂಟ್​ ಪೊಲೀಸ್​ ಠಾಣೆ ಸಿಒ ಥರ್ಡ್​ ಅನಿತಾ ಚೌಹಾಣ್​, ಸಿಒ ಸಿಟಿ ಸಂದೀಪ್​ ಸಿಂಗ್​, ಎಸ್ಪಿ ಸಿಟಿ ರಾಹುಲ್​ ಭಾಟಿ ಸ್ಥಳಕ್ಕೆ ಧಾವಿಸಿ ಬಂದಿದ್ದಾರೆ. ಕಮಲ್​ ಜೋಶಿ ಅವರ ಮೃತದೇಹವನ್ನು ವಶಕ್ಕೆ ಪಡೆದ ಅಧಿಕಾರಿಗಳು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ. ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡ ಅಧಿಕಾರಿಗಳು ಘಟನೆಗೆ ಕಾರಣವಾಗಿದ್ದ ಆರೋಪಿ ಸೈನಿಕ ರಾಜೇಶ್​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಗುಂಡಿಕ್ಕಿದ್ದು ಏಕೆ ಎಂದು ಪ್ರಶ್ನೆ ಮಾಡಲಾಗುತ್ತಿದೆ.

"ಕಾನ್ಸ್​ಟೇಬಲ್​​​ ಮೇಲೆ ಗುಂಡಿಕ್ಕಿ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂದಿರುವ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ವಿಚಾರಣೆ ಬಳಿಕವಷ್ಟೇ ಘಟನೆಗೆ ಸ್ಪಷ್ಟ ಕಾರಣ ತಿಳಿದು ಬರಲಿದೆ " ಎಂದು ಸಿಒ ಸಿಟಿ ಸಂದೀಪ್​ ಸಿಂಗ್​ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಚಾಮರಾಜನಗರದಲ್ಲಿ ಪ್ರತ್ಯೇಕ ಕೊಲೆ: ಮೈದುನನ್ನು ಕೊಂದ ಬಾವ - ಅಳಿಯನ ಹತ್ಯೆ ಮಾಡಿದ ಮಾವ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.