ETV Bharat / bharat

ಪಟಾಕಿ ಕಾರ್ಖಾನೆಯಲ್ಲಿ ಭಾರಿ ಸ್ಫೋಟ: 50ಕ್ಕೂ ಹೆಚ್ಚು ಮನೆಗಳು ಭಸ್ಮ, ಏಳು ಜನ ಸಾವು, 60ಕ್ಕೂ ಹೆಚ್ಚು ಜನರಿಗೆ ಗಾಯ

author img

By ETV Bharat Karnataka Team

Published : Feb 6, 2024, 1:41 PM IST

Updated : Feb 6, 2024, 2:20 PM IST

ಮಧ್ಯಪ್ರದೇಶದ ಹರ್ದಾ ಜಿಲ್ಲೆಯ ಪಟಾಕಿ ಕಾರ್ಖಾನೆಯಲ್ಲಿ ಭಾರಿ ಪ್ರಮಾಣದ ಗನ್ ಪೌಡರ್ ಇಡಲಾಗಿದ್ದು,ದೊಡ್ಡ ಸ್ಫೋಟ ಹಾಗೂ ದೊಡ್ಡ ಮಟ್ಟದ ಅಗ್ನಿ ಅವಘಡ ಸಂಭವಿಸಿದೆ. ಈ ದುರಂತದಲ್ಲಿ ಏಳು ಜನ ಸಾವನ್ನಪ್ಪಿದ್ದು, 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.

Fire incident in Madya Pradesh  massive explosion in harda  ಪಟಾಕಿ ಕಾರ್ಖಾನೆಯಲ್ಲಿ ಭಾರೀ ಸ್ಫೋಟ  ಮನೆಗಳು ಬೆಂಕಿಗಾಹುತಿ  ಗನ್​ ಪೌಡರ್​
ಪಟಾಕಿ ಕಾರ್ಖಾನೆಯಲ್ಲಿ ಭಾರೀ ಸ್ಫೋಟ

ಹರ್ದಾ, ಮಧ್ಯಪ್ರದೇಶ: ಜಿಲ್ಲೆಯಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ (ಹರ್ದಾ ಪಟಾಕಿ ಕಾರ್ಖಾನೆ) ಹಠಾತ್ ಸ್ಫೋಟದಿಂದಾಗಿ ಭಾರಿ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ. ಸಮೀಪದ ಹಲವು ಮನೆಗಳು ಬೆಂಕಿಗೆ ಆಹುತಿಯಾಗಿರುವ ಬಗ್ಗೆಯೂ ವರದಿಯಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಇದು ನಗರದ ಮಗರ್ಧಾ ರಸ್ತೆಯಲ್ಲಿರುವ ಅಕ್ರಮ ಪಟಾಕಿ ಕಾರ್ಖಾನೆ ಆಗಿದೆ. ಕಾರ್ಖಾನೆಯಲ್ಲಿ ಪಟಾಕಿ ತಯಾರಿಸಲು ದೊಡ್ಡ ಪ್ರಮಾಣದ ಗನ್ ಪೌಡರ್ ಸಂಗ್ರಹಿಸಲಾಗಿತ್ತು. ಆದರೆ ಸ್ಫೋಟ ಸಂಭವಿಸಿದ್ದು, ಏಳು ಸಾವನ್ನಪ್ಪಿದ್ದು, 60ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ಹಲವಾರು ಕಿಲೋಮೀಟರ್ ದೂರದಿಂದ ಕಾಣಿಸುತ್ತಿರುವ ಹೊಗೆ: ಬೆಂಕಿ ಎಷ್ಟರ ಮಟ್ಟಿಗೆ ಹರಡಿತ್ತೆಂದ್ರೆ ಅದರ ಹೊಗೆ ಹಲವಾರು ಕಿಲೋಮೀಟರ್ ದೂರದಿಂದ ಗೋಚರಿಸುತ್ತಿತ್ತು. ಕಾರ್ಖಾನೆ ಸ್ಫೋಟದಿಂದಾಗಿ ಉರಿಯುತ್ತಿರುವ ಜ್ವಾಲೆ ಎಲ್ಲರನ್ನೂ ಆತಂಕಕ್ಕೆ ದೂಡಿದೆ. ಬೆಂಕಿಗೆ ಕಾರಣ ಸದ್ಯಕ್ಕೆ ತಿಳಿದು ಬಂದಿಲ್ಲ. ಸ್ಫೋಟದ ಬಗ್ಗೆ ಮಾಹಿತಿ ದೊರೆತ ತಕ್ಷಣ ಅಗ್ನಿಶಾಮಕ ದಳದ ಹಲವು ವಾಹನಗಳು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿವೆ.

ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಭಾರೀ ಸ್ಫೋಟ: ಹರ್ದದ ಮಗರ್ಧಾ ರಸ್ತೆಯಲ್ಲಿರುವ ಬೈರಾಗರ್ ಗ್ರಾಮದಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದ ನಂತರ ಆ ಪ್ರದೇಶದಲ್ಲಿ ಆತಂಕ ಮನೆ ಮಾಡಿದೆ. ಬೆಂಕಿ ಎಷ್ಟು ತೀವ್ರವಾಗಿತ್ತು ಎಂದರೆ ರಸ್ತೆಯಲ್ಲಿ ಸಾಗುತ್ತಿದ್ದವರೂ ಬೆಂಕಿ ಕೆನ್ನಾಲಗೆಯಿಂದ ತತ್ತರಿಸಿದ್ದಾರೆ. 60ಕ್ಕೂ ಹೆಚ್ಚು ಜನರು ಗಾಯಗೊಂಡಿರುವುದರ ಬಗ್ಗೆ ವರದಿಗಳಿವೆ. ಅಲ್ಲದೆ, ಸಮೀಪದ 50ಕ್ಕೂ ಹೆಚ್ಚು ನಿವಾಸಿಗಳ ಮನೆಗಳಿಗೂ ಬೆಂಕಿ ವ್ಯಾಪಿಸಿದ್ದು, ಮನೆಯ ವಸ್ತುಗಳು ಸುಟ್ಟು ಕರಕಲಾಗಿವೆ. ಅಷ್ಟೇ ಅಲ್ಲ ಏಳು ಜನ ಮೃತಪಟ್ಟಿದ್ದು, ಮೃತದೇಹಗಳು ರಸ್ತೆಯ ಮೇಲೆ ಛಿದ್ರವಾಗಿ ಬಿದ್ದಿದ್ದವು ಎಂದು ಪ್ರತ್ಯೇಕ್ಷ ದರ್ಶಿಗಳ ಮಾತಾಗಿದೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಬೆಂಕಿ ಹಬ್ಬಿರುವ ಪ್ರದೇಶದಲ್ಲಿ ಕೆಲವರು ಶವಗಳನ್ನು ಸಹ ನೋಡಿದ್ದಾರಂತೆ. ರಕ್ಷಣಾ ಕಾರ್ಯ ಇನ್ನೂ ನಡೆಯುತ್ತಿದೆ. ಎಲ್ಲ ಗಾಯಾಳುಗಳನ್ನು ಜಿಲ್ಲೆಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುತ್ತಮುತ್ತಲಿನ ಜನರಿಗೆ ಮನೆ ಖಾಲಿ ಮಾಡುವಂತೆ ಸೂಚನೆ ನೀಡಲಾಗಿದೆ.

ಸ್ಥಳಕ್ಕೆ 7 ಜಿಲ್ಲೆಗಳಿಂದ ದೌಡಾಯಿಸಿದ ಅಗ್ನಿಶಾಮಕ ವಾಹನಗಳು: ಈ ಕಾರ್ಖಾನೆಯಲ್ಲಿ ಗನ್ ಪೌಡರ್ ಮತ್ತು ಪಟಾಕಿಗಳಲ್ಲಿ ಬಳಸುವ ಸ್ಫೋಟಕ ವಸ್ತುಗಳನ್ನು ಇಡಲಾಗಿತ್ತು. ಬೆಂಕಿಯ ಸುದ್ದಿ ತಿಳಿಯುತ್ತಿದ್ದಂತೆ ಸುಮಾರು 7 ವಿವಿಧ ಜಿಲ್ಲೆಗಳಿಂದ ಅಗ್ನಿಶಾಮಕ ದಳದ ತಂಡಗಳನ್ನು ಸ್ಥಳಕ್ಕೆ ಕರೆಸಲಾಗಿದ್ದು, ಸುಮಾರು 40 ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ತಲುಪಿವೆ ಎಂದು ತಿಳಿದು ಬಂದಿದೆ.

ಪ್ರಾಣ ಉಳಿಸಿಕೊಳ್ಳಲು ಹರಸಾಹಸಪಟ್ಟ ಜನ: ಈ ಭೀಕರ ಅಪಘಾತದ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್​ ಆಗಿವೆ. ಭಾರಿ ಸ್ಫೋಟಗಳ ನಡುವೆ ಜನರು ತಮ್ಮ ಪ್ರಾಣ ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡುತ್ತಿರುವುದು ವೈರಲ್​ ವಿಡಿಯೋದಲ್ಲಿ ಸೆರೆಯಾಗಿದೆಯಂತೆ. ಇನ್ನು ಈ ಬೆಂಕಿ ಅವಘಡದಲ್ಲಿ ಗಾಯಗೊಂಡಿದ್ದ ಸಂತ್ರಸ್ತರನ್ನು ನಿರಂತರವಾಗಿ ಆಸ್ಪತ್ರೆಗೆ ಕರೆತರಲಾಗುತ್ತಿದೆ. ಸದ್ಯ, ಅಧಿಕೃತ ದೃಢೀಕರಣದ ನಂತರವಷ್ಟೇ ಆಸ್ತಿಪಾಸ್ತಿ ನಷ್ಟದ ಪ್ರಮಾಣ ತಿಳಿಯಲಿದೆ.

ಓದಿ: ಚಿಕ್ಕಮಗಳೂರು ಮಸಗಲಿ ಬೆಟ್ಟ ಹತ್ತಿದ 25 ಕಾಡಾನೆಗಳ ಬೀಟಮ್ಮ ಗ್ಯಾಂಗ್​

Last Updated : Feb 6, 2024, 2:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.