ETV Bharat / bharat

Live Updates: ಲೋಕ ಅಖಾಡದಲ್ಲಿ ಘಟಾನುಘಟಿಗಳು, ಎಂಕೆ ಸ್ಟಾಲಿನ್, ಅಣ್ಣಾಮಲೈ, ಧಾಮಿ, ಸದ್ಗುರು ಜಗ್ಗಿ ವಾಸುದೇವ ಸೇರಿ ಹಲವರಿಂದ ವೋಟಿಂಗ್​ - Lok Sabha election 2024

author img

By ANI

Published : Apr 19, 2024, 7:11 AM IST

Updated : Apr 19, 2024, 9:59 AM IST

ಲೋಕಸಭೆ ಚುನಾವಣೆ 2024ರ ಮೊದಲ ಹಂತದ ಮತದಾನ ಆರಂಭವಾಗಿದೆ. ಚುನಾವಣಾ ಅಖಾಡದಲ್ಲಿ ಘಟಾನುಘಟಿ ನಾಯಕರು ಮುಖಾಮುಖಿಯಾಗಿದ್ದಾರೆ.

First Phase Voting Lok Sabha election 2024 K Annamalai  Nitin Gadkari  Jitin Prasad
ಲೋಕಸಭೆ ಚುನಾವಣೆ 2024: ಮೊದಲ ಹಂತದ ಮತದಾನ ಆರಂಭ, ಅಖಾಡದಲ್ಲಿ ಘಟಾನುಗಟಿ ನಾಯಕರು ಮುಖಾಮುಖಿ

ನವದೆಹಲಿ: ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಇಂದು ಬೆಳಗ್ಗೆಯಿಂದಲೇ ಆರಂಭವಾಗಿದೆ. 18 ರಾಜ್ಯಗಳು 3 ಕೇಂದ್ರಾಡಳಿತ ಪ್ರದೇಶಗಳ 102 ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ಪ್ರಾರಂಭವಾಗಿದೆ. ಮತದಾನ ಕೇಂದ್ರಗಳತ್ತ ಬೆಳಗ್ಗೆಯಿಂದಲೇ ವೋಟ್​ ಮಾಡಲು ಮತದಾರರು ಬರುತ್ತಿರುವುದು ಕಂಡು ಬಂತು.

ಪಿಲಿಭಿತ್‌ನ ಬಿಜೆಪಿಯ ಲೋಕಸಭಾ ಅಭ್ಯರ್ಥಿ ಜಿತಿನ್ ಪ್ರಸಾದ್, ಚೆನ್ನೈ ದಕ್ಷಿಣ ಕ್ಷೇತ್ರದ ಅಭ್ಯರ್ಥಿ, ಮಾಜಿ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಹಾಗೂ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಸೇರಿದಂತೆ ಹಲವು ನಾಯಕರು ಬೆಳಗ್ಗೆ ಮತದಾನ ಮಾಡಿದರು.

ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್​, ಬಿಜೆಪಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ, ಉತ್ತರಾಖಂಡ ಸಿಎಂ ಧಾಮಿ, ಸದ್ಗುರು ಜಗ್ಗಿ ವಾಸುದೇವ್ ಮಣಿಪುರ ಸಿಎಂ ಬಿರೇನ್​ ಸಿಂಗ್​​​​​​ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡಿದರು.

18 ರಾಜ್ಯ, 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾನ ಆರಂಭ: ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್‌ಗಢ, ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರ, ಮಧ್ಯಪ್ರದೇಶ, ಮಣಿಪುರ, ರಾಜಸ್ಥಾನ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ತಮಿಳುನಾಡು, ತ್ರಿಪುರಾ, ಉತ್ತರಾಖಂಡ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ರಾಜ್ಯಗಳು ಸೇರಿದಂತೆ ಕೇಂದ್ರಾಡಳಿತ ಪ್ರದೇಶಗಳಾದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ, ಲಕ್ಷದ್ವೀಪ, ಪುದುಚೇರಿಯಲ್ಲಿ ಮತದಾನ ಆರಂಭವಾಗಿದೆ.

ಕಣದಲ್ಲಿ ಮಾಜಿ ಸಿಎಂಗಳು: ಮೊದಲ ಹಂತದ ಲೋಕಸಭಾ ಚುನಾವಣಾ ಕಣದಲ್ಲಿ 8 ಕೇಂದ್ರ ಸಚಿವರು, ಐವರು ಮಾಜಿ ಮುಖ್ಯಮಂತ್ರಿಗಳು, ಓರ್ವ ರಾಜ್ಯಪಾಲರು ಇದ್ದಾರೆ. ಒಟ್ಟಾರೆ 1,625 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಅದರಲ್ಲಿ 1,490 ಪುರುಷರು, 135 ಮಹಿಳಾ ಅಭ್ಯರ್ಥಿಗಳು ಅಖಾಡಲ್ಲಿದ್ದಾರೆ. ತಮಿಳುನಾಡಿನ ಕರೂರ್​ನಲ್ಲಿ 54 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕರೂರ್​ ಅತಿ ಹೆಚ್ಚು ಅಭ್ಯರ್ಥಿಗಳಿರುವ ಲೋಕಸಭಾ ಕ್ಷೇತ್ರವಾಗಿದೆ. ನಾಗಾಲ್ಯಾಂಡ್​ನ ದಿಬ್ರಗಢದಲ್ಲಿ ಮೂವರು ಅಭ್ಯರ್ಥಿಗಳು ಮಾತ್ರ ಸ್ಪರ್ಧಿಸಿದ್ದಾರೆ.

ಕಣದಲ್ಲಿರುವ ಘಟಾನುಘಟಿ ನಾಯಕರು: ಮೊದಲ ಹಂತದ ಚುನಾವಣಾ ಕಣದಲ್ಲಿರುವ ಘಟನಾಘಟಿ ನಾಯಕರು ಅಂದ್ರೆ, ಜಿತೇಂದ್ರ ಸಿಂಗ್ (ಉಧಂಪುರ), ಕೇಂದ್ರ ಸಚಿವ ನಿತಿನ್ ಗಡ್ಕರಿ (ನಾಗ್ಪುರ), ನಕುಲ್ ನಾಥ್ (ಚಿಂದ್ವಾರ), ಚಿರಾಗ್ ಪಾಸ್ವಾನ್ (ಜಮುಯಿ), ತಮಿಳುನಾಡಿನ ಸೆನ್ಸೇಷನ್​ ಕೆ ಅಣ್ಣಾಮಲೈ (ಕೊಯಮತ್ತೂರು), ಮಾಜಿ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ (ಚೆನ್ನೈ ದಕ್ಷಿಣ), ಎಲ್. ಮುರುಗನ್ (ನೀಲಗಿರಿ), ಪೊನ್ ರಾಧಾಕೃಷ್ಣನ್ (ಕನ್ಯಾಕುಮಾರಿ), ಕನಿಮೊಳಿ ಕರುಣಾನಿಧಿ (ತೂತುಕುಡಿ), ವಿ. ವೈತಿಲಿಂಗಂ (ಪುದುಚೇರಿ), ಹರೇಂದ್ರ ಸಿಂಗ್ ಮಲಿಕ್ (ಮುಜಾಫರ್‌ನಗರ), ಕಾರ್ತಿ ಚಿದಂಬರಂ (ಶಿವಗಂಗಾ), ಸಂಜೀವ್ ಬಲ್ಯಾನ್ (ಪಿಲಿತ್ ಪ್ರಸಾದನಗರ), ನಿಸಿತ್ ಪ್ರಮಾಣಿಕ್ (ಕೂಚ್‌ಬೆಹರ್) ಮತ್ತು ಮನೋಜ್ ತಿಗ್ಗಾ (ಅಲಿಪುರ್ದುವಾರ್ಸ್).

ಬಿಜೆಪಿ ನೇತೃತ್ವದ ಎನ್‌ಡಿಎ ವಿರುದ್ಧ ಪ್ರತಿಪಕ್ಷಗಳ ಇಂಡಿಯಾ ಮೈತ್ರಿ ಕೂಟವು ದೊಡ್ಡ ಮುಖಗಳನ್ನು ಕಣಕ್ಕಿಳಿಸಿದೆ. ತಮಿಳುನಾಡಿನ ಕೊಯಮತ್ತೂರು ಲೋಕಸಭಾ ಕ್ಷೇತ್ರವು ಹೆಚ್ಚಿನ ಪೈಪೋಟಿಗೆ ಸಾಕ್ಷಿಯಾಗಲಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ, ಡಿಎಂಕೆ ನಾಯಕ ಗಣಪತಿ ಪಿ. ರಾಜ್‌ಕುಮಾರ್ ಮತ್ತು ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಸಿಂಗೈ ರಾಮಚಂದ್ರನ್ ನಡುವೆ ಭಾರಿ ಪೈಪೋಟಿ ಏರ್ಪಟ್ಟಿದೆ. ಅಣ್ಣಾಮಲೈ ಅವರು ತಮ್ಮ ಸಮರ್ಪಿತ ಬೆಂಬಲಿಗರೊಂದಿಗೆ ತಮಿಳುನಾಡಿನಲ್ಲಿ ಪ್ರಮುಖ ಪ್ರಾಮುಖ್ಯತೆ ಹೊಂದಿರುವ ಡಿಎಂಕೆ ಮತ್ತು ಎಐಎಡಿಎಂಕೆಯಂತಹ ಪಕ್ಷಗಳಿಂದ ಪ್ರಬಲ ಸ್ಪರ್ಧೆಯನ್ನು ಎದುರಿಸುತ್ತಿದ್ದಾರೆ.

ಸಾಮಾಜಿಕ ಜಾಲತಾಣವಾದ ಎಕ್ಸ್‌ ಖಾತೆಯ ಪೋಸ್ಟ್‌ನಲ್ಲಿ ಅಣ್ಣಾಮಲೈ ಅವರು, "ತಮಿಳುನಾಡಿನಲ್ಲಿ ಪ್ರಾಮಾಣಿಕ ರಾಜಕೀಯ ಬದಲಾವಣೆಯಾಗಲು, ಯುವ ರಾಜಕೀಯ ಹುಟ್ಟಲು, ಎಲ್ಲರಿಗೂ ಸಮಾನ ಅವಕಾಶಗಳು ಅರಳಲು, ಕೊಂಗು ನೆಲದ ಹೆಮ್ಮೆಯನ್ನು ಇಡೀ ದೇಶಕ್ಕೆ ತಿಳಿಯಪಡಿಸಲು ಹಾಗೂ ಕೊಯಮತ್ತೂರು ಅಭಿವೃದ್ಧಿ ಪಥದಲ್ಲಿ ಸಾಗಲು, ಕೊಯಮತ್ತೂರು ಸಂಸತ್ತಿನ ಎಲ್ಲ ಮತದಾರರು ಕಮಲದ ಚಿಹ್ನೆಗೆ ಮತ ನೀಡುವಂತೆ ನಾನು ಶ್ರದ್ಧೆಯಿಂದ ವಿನಂತಿಸುತ್ತೇನೆ" ಎಂದು ಬರೆದುಕೊಂಡಿದ್ದಾರೆ.

ಮೂರನೇ ಗೆಲುವು ಸಾಧಿಸುವ ಹುಮ್ಮಸ್ಸಿನಲ್ಲಿ ನಿತಿನ್ ಗಡ್ಕರಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಮಹಾರಾಷ್ಟ್ರದ ನಾಗ್ಪುರ ಎಂಪಿ ಸ್ಥಾನದಿಂದ ಮೂರನೇ ಬಾರಿ ಗೆಲುವು ಸಾಧಿಸುವ ಹುಮ್ಮಸ್ಸಿನಲ್ಲಿದ್ದಾರೆ. ಈ ಕ್ಷೇತ್ರದಲ್ಲಿ ಹಿರಿಯ ಬಿಜೆಪಿ ನಾಯಕ ನಿತಿನ್ ಗಡ್ಕರಿ ಮತ್ತು ಪ್ರಸ್ತುತ ನಾಗ್ಪುರ ಪಶ್ಚಿಮ ಶಾಸಕರಾಗಿರುವ ಕಾಂಗ್ರೆಸ್ ಅಭ್ಯರ್ಥಿ ವಿಕಾಸ್ ಠಾಕ್ರೆ ನಡುವಿನ ಸ್ಪರ್ಧೆಗೆ ಸಾಕ್ಷಿಯಾಗಲಿದೆ.

ಇತ್ತೀಚೆಗೆ, ನಿತಿನ್ ಗಡ್ಕರಿ ಅವರು ನಾಗ್ಪುರ ಲೋಕಸಭಾ ಕ್ಷೇತ್ರಕ್ಕೆ 'ವಚನ ನಾಮ' (ಪ್ರಣಾಳಿಕೆ) ಬಿಡುಗಡೆ ಮಾಡಿದ್ದರು. 2019ರ ಲೋಕಸಭೆ ಚುನಾವಣೆಯಲ್ಲಿ ನಿತಿನ್ ಗಡ್ಕರಿ ಅವರು, ಶೇಕಡಾ 55.7 ರಷ್ಟು ಬೃಹತ್ ಮತಗಳ ಪಡೆದು ಜಯ ಗಳಿಸಿದ್ದರು.

2021ರಲ್ಲಿ ಕಾಂಗ್ರೆಸ್ ತೊರೆದಿದ್ದ ಜಿತಿನ್ ಪ್ರಸಾದ್ ಅವರು, ಪಿಲಿಭಿತ್‌ನಿಂದ ಎರಡು ಬಾರಿ ಸಂಸದರಾಗಿದ್ದ ವರುಣ್ ಗಾಂಧಿ ಅವರ ಬದಲಾಗಿ ಈ ಬಾರಿ ಲೋಕಸಭೆ ಚುನಾವಣೆಯ ಮೊದಲ ಹಂತದ ಪ್ರಮುಖ ಮುಖಗಳಲ್ಲಿ ಒಬ್ಬರಾಗಿದ್ದಾರೆ. ಹಿಂದಿನ ಎರಡು ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ಯುಪಿಯಲ್ಲಿ ಬಹುಪಾಲು ಸ್ಥಾನಗಳನ್ನು ಗಳಿಸಿತ್ತು. ಯುಪಿಯ 80 ಲೋಕಸಭಾ ಕ್ಷೇತ್ರಗಳಲ್ಲಿ ಒಂದಾದ ಪಿಲಿಭಿತ್ ಕ್ಷೇತ್ರದಲ್ಲಿ ಇಂದು ಮತದಾನ ಆರಂಭವಾಗಿದೆ. 2019ರ ಚುನಾವಣೆಯಲ್ಲಿ ಬಿಜೆಪಿಯ ಬಿಜೆಪಿ ನಾಯಕ ಫಿರೋಜ್ ವರುಣ್ ಗಾಂಧಿ ಪಿಲಿಭಿತ್‌ನಲ್ಲಿ ವಿಜಯಶಾಲಿಯಾಗಿ ಹೊರಹೊಮ್ಮಿದ್ದರು. ಶೇಕಡಾ 59.4ರಷ್ಟು ಮತ (704,549 ಮತಗಳು) ಪಡೆಯುವ ಮೂಲಕ ಗಮನಸೆಳೆದಿದ್ದರು.

ಬಿಹಾರದಲ್ಲಿ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಅವರು ಗಯಾ ಕ್ಷೇತ್ರದಿಂದ ಸ್ಪರ್ಧೆಗೆ ಇಳಿದಿದ್ದಾರೆ. ಈ ಚುನಾವಣೆಯು 79 ವರ್ಷ ವಯಸ್ಸಿನ ಮಾಂಝಿ ಅವರಿಗೆ ರಾಜಕೀಯವಾಗಿ ಭಾರಿ ಮಹತ್ವ ಪಡೆದಿದೆ.

ಇದನ್ನೂ ಓದಿ: ಇಂದು ಮೊದಲ ಹಂತದ ಮತದಾನ: ಐವರು ಮಾಜಿ ಸಿಎಂಗಳು, ಎಂಟು ಕೇಂದ್ರ ಸಚಿವರ ಹಣೆಬರಹ ಇಂದು ನಿರ್ಧಾರ - Election Notification Released

Last Updated : Apr 19, 2024, 9:59 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.