ETV Bharat / bharat

ಜ್ಞಾನವಾಪಿ ಮಸೀದಿ: ಶಿವಲಿಂಗದ ASI ಸಮೀಕ್ಷೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

author img

By PTI

Published : Jan 31, 2024, 9:36 AM IST

ಜ್ಞಾನವಾಪಿ ಮಸೀದಿ ಆವರಣದಲ್ಲಿ ಪತ್ತೆಯಾಗಿರುವ ಶಿವಲಿಂಗದ ಸಮೀಕ್ಷೆ ನಡೆಸಿದ ಬಳಿಕ ವರದಿಯನ್ನು ನಿಗದಿತ ಸಮಯದೊಳಗೆ ಸಲ್ಲಿಸಲು ಎಎಸ್​ಐಗೆ ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿದೆ.

Gyanvapi Masjid and Supreme Court
ಜ್ಞಾನವಾಪಿ ಮಸೀದಿ ಹಾಗೂ ಸುಪ್ರೀಂ ಕೋರ್ಟ್​

ನವದೆಹಲಿ: ಉತ್ತರ ಪ್ರದೇಶದ ವಾರಾಣಸಿಯ ಜ್ಞಾನವಾಪಿ ಮಸೀದಿ ಆವರಣದಲ್ಲಿ ಪತ್ತೆಯಾಗಿರುವ ಶಿವಲಿಂಗದ ಸ್ವರೂಪ ಹಾಗೂ ಲಕ್ಷಣಗಳನ್ನು ನಿರ್ಧರಿಸಲು ಸಮೀಕ್ಷೆ ನಡೆಸುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ(ಎಎಸ್‌ಐ) ನಿರ್ದೇಶನ ನೀಡುವಂತೆ ಕೋರಿ ನಾಲ್ವರು ಹಿಂದೂ ಮಹಿಳೆಯರು ಸುಪ್ರೀಂ ಕೋರ್ಟ್​ಗೆ ಮಂಗಳವಾರ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದಾರೆ.

ಈ ಅರ್ಜಿಯಲ್ಲಿ, ಮಸೀದಿ ಆವರಣದ ವೈಜ್ಞಾನಿಕ ಸಮೀಕ್ಷೆಯನ್ನು ರದ್ದುಗೊಳಿಸಿ 2023ರ ಮೇ 13 ರಂದು ನೀಡಿದ್ದ ಆದೇಶ ಹಾಗೂ ಶಿವಲಿಂಗದ ಕಾಲಮಾನವನ್ನು ಪತ್ತೆ ಹಚ್ಚಲು ಕಾರ್ಬನ್​ ಡೇಟಿಂಗ್​ ನಡೆಸುವಂತೆ 2023ರ ಮೇ 12ರಂದು ಅಲಹಬಾದ್​ ಹೈಕೋರ್ಟ್​ ನೀಡಿದ್ದ ನಿರ್ದೇಶನವನ್ನು ಮುಂದೂಡಿರುವ ತನ್ನ ಆದೇಶವನ್ನು ರದ್ದುಗೊಳಿಸುವಂತೆ ಕೋರಲಾಗಿದೆ.

ಶಿವಲಿಂಗದ ಮೂಲ ರಚನೆ ಹಾಗೂ ಅದರ ವೈಶಿಷ್ಟ್ಯವನ್ನು ಕಂಡುಹಿಡಿಯಲು ಉತ್ಖನನ ಹಾಗೂ ಸಮೀಕ್ಷೆಯ ಅಗತ್ಯವಿದೆ. ಸರಿಯಾದ ಹಾಗೂ ಪರಿಣಾಮಕಾರಿ ತನಿಖೆಗಾಗಿ ಅಗತ್ಯ ಉತ್ಖನನ ಕಾರ್ಯ ಕೈಗೊಂಡು, ವೈಜ್ಞಾನಿಕ ವಿಧಾನಗಳನ್ನು ಬಳಸಿ ಶಿವಲಿಂಗದ ಸ್ವರೂಪವನ್ನು ನಿರ್ಧರಿಸಬೇಕು. ಅದಕ್ಕಾಗಿ ಮಸೀದಿ ಕೃತಕ/ಆಧುನಿಕ ಮಹಡಿ/ಗೋಡೆಗಳನ್ನು ತೆರವುಗೊಳಿಸಿ, ಈಗ ಮುಚ್ಚಲಾಗಿರುವ ಸಂಪೂರ್ಣ ಪ್ರದೇಶದ ಸಮೀಕ್ಷೆ ಕೈಗೊಳ್ಳಬೇಕು. ಇದರೊಂದಿಗೆ ಇತರ ವೈಜ್ಞಾನಿಕ ವಿಧಾನಗಳನ್ನು ಬಳಸಿ ಶಿವಲಿಂಗದ ನಿಖರ ಸ್ವರೂಪವನ್ನು ನಿರ್ಧರಿಸಬೇಕು ಎಂದು ಅರ್ಜಿಯಲ್ಲಿ ಒತ್ತಾಯಿಸಲಾಗಿದೆ.

ವಕೀಲ ವಿಷ್ಣು ಶಂಕರ್​​ ಜೈನ್​ ಅವರ ಮೂಲಕ ಸಲ್ಲಿಸಲಾದ ಈ ಅರ್ಜಿಯಲ್ಲಿ, ಸಮೀಕ್ಷೆಗಾಗಿ ಗೋಡೆ, ಮಹಡಿಗಳನ್ನು ತೆರವುಗೊಳಿಸುವ ವೇಳೆ ಯಾವುದೇ ವಸ್ತುಗಳಿಗೆ ಹಾನಿಯಾಗದಂತೆ ನೋಡಿಕೊಳ್ಳುವಂತೆ ಎಎಸ್​ಐಗೆ ನಿರ್ದೇಶನ ನೀಡಬೇಕು. ನ್ಯಾಯಾಲಯ ಒದಗಿಸುವ ಸಮಯದೊಳಗೆ ವರದಿ ಸಲ್ಲಿಸುವಂತೆಯೂ ಎಎಸ್​ಐಗೆ ನಿರ್ದೇಶನ ನೀಡುವಂತೆ ಮನವಿ ಮಾಡಲಾಗಿದೆ.

ಎಎಸ್​ಐ, ಮುಚ್ಚಲಾಗಿರುವ ಪ್ರದೇಶವನ್ನು ಹೊರತುಪಡಿಸಿ ಇಡೀ ಪ್ರದೇಶದ ಸಮೀಕ್ಷೆ ನಡೆಸಿದೆ. ಆದರೆ ಈಗ ಮುಚ್ಚಲಾಗಿರುವ ಪ್ರದೇಶದಲ್ಲೂ ಕೂಡ ಎಎಸ್​ಐ ವೈಜ್ಞಾನಿಕ ಸಮೀಕ್ಷೆ ಕೈಗೊಳ್ಳಬೇಕು. ಮುಚ್ಚಲಾಗಿರುವ ಪ್ರದೇಶದ ಬಗ್ಗೆ ಎಎಸ್​ಐ ವರದಿ ಇಲ್ಲವಾದಲ್ಲಿ ಸಮೀಕ್ಷೆಯ ಉದ್ದೇಶ ಅಪೂರ್ಣವಾಗುತ್ತದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ವಾರಾಣಸಿಯ ಕಾಶಿ ದೇವಾಲಯಕ್ಕೆ ಹೊಂದಿಕೊಂಡಿರುವ ಜ್ಞಾನವಾಪಿ ಮಸೀದಿ ಸಂಕೀರ್ಣದ ಎಎಸ್​ಐ ಸಮೀಕ್ಷಾ ವರದಿಯಲ್ಲಿರುವ ಮಾಹಿತಿ ಬಹಿರಂಗವಾಗಬೇಕಿದೆ. ವರದಿಯ ಹಾರ್ಡ್​ ಕಾಪಿಯನ್ನು ಹಿಂದೂ ಹಾಗೂ ಮುಸ್ಲಿಂ ಎರಡೂ ಕಡೆಯವರಿಗೂ ನೀಡಬೇಕು ಎಂದು ವಾರಣಾಸಿ ನ್ಯಾಯಾಲಯ ಆದೇಶ ನೀಡಿತ್ತು. ಇದಾದ ಕೆಲವು ದಿನಗಳಲ್ಲಿ ಹಿಂದೂ ಮಹಿಳೆಯರು ಸುಪ್ರೀಂ ಕೋರ್ಟ್​ಗೆ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಎಎಸ್​ಐ ನೀಡಿರುವ ವೈಜ್ಞಾನಿಕ ಸಮೀಕ್ಷೆಯ ವರದಿ, ಮಸೀದಿಯನ್ನು ಮೊದಲೇ ಅಸ್ತಿತ್ವದಲ್ಲಿದ್ದ ದೇವಾಲಯದ ಅವಶೇಷಗಳ ಮೇಲೆ ನಿರ್ಮಿಸಲಾಗಿದೆ ಎಂಬ ಅಂಶವನ್ನು ಹಿಂದೂಪರ ವಕೀಲರಾದ ಜೈನ್​ ಇತ್ತೀಚೆಗೆ ಬಹಿರಂಗಗೊಳಿಸಿದ್ದರು.

ಇದನ್ನೂ ಓದಿ: 'ಜ್ಞಾನವಾಪಿ ಮಸೀದಿ ಬೃಹತ್‌ ದೇಗುಲದ ಅವಶೇಷಗಳ ಮೇಲೆ ನಿರ್ಮಾಣ': ASI ಸರ್ವೇ ವರದಿ ಬಹಿರಂಗಪಡಿಸಿದ ಹಿಂದೂ ಅರ್ಜಿದಾರರ ಪರ ವಕೀಲ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.