ETV Bharat / bharat

ಭೂ ಹಗರಣ: ಜಾರ್ಖಂಡ್‌ ಮಾಜಿ ಸಿಎಂ ಹೇಮಂತ್ ಸೊರೇನ್ 5 ದಿನ ಇಡಿ ವಶಕ್ಕೆ

author img

By ETV Bharat Karnataka Team

Published : Feb 2, 2024, 2:21 PM IST

ಭೂ ಹಗರಣದಲ್ಲಿ ನಡೆದ ಅಕ್ರಮ ಹಣ ವರ್ಗಾವಣೆಗೆ ಸಂಬಂಧಪಟ್ಟಂತೆ ಬಂಧಿತರಾಗಿರುವ ಜಾರ್ಖಂಡ್‌ನ ಮಾಜಿ ಸಿಎಂ ಹೇಮಂತ್ ಸೊರೇನ್ ಅವರನ್ನು ವಿಶೇಷ ನ್ಯಾಯಾಲಯವು ಮುಂದಿನ ಐದು ದಿನಗಳ ಕಾಲ ಜಾರಿ ನಿರ್ದೇಶನಾಲಯದ ವಶಕ್ಕೆ ಒಪ್ಪಿಸಿದೆ.

ಹೇಮಂತ್ ಸೊರೇನ್ ಐದು ದಿನ ಇಡಿ ವಶಕ್ಕೆ
ಹೇಮಂತ್ ಸೊರೇನ್ ಐದು ದಿನ ಇಡಿ ವಶಕ್ಕೆ

ರಾಂಚಿ: ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಮತ್ತು ಜೆಎಂಎಂ ಕಾರ್ಯಕಾರಿ ಅಧ್ಯಕ್ಷ ಹೇಮಂತ್ ಸೊರೇನ್ ಅವರನ್ನು 5 ದಿನಗಳ ಇಡಿ ಕಸ್ಟಡಿಗೆ ಒಪ್ಪಿಸಲಾಗಿದೆ. ಜನವರಿ 31ರಂದು ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸೊರೇನ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿತ್ತು. ಇಂದು ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ವಿಶೇಷ ನ್ಯಾಯಾಲಯವು ಐದು ದಿನಗಳ ಕಸ್ಟಡಿಗೆ ನೀಡಿದೆ.

ಗುರುವಾರ ಮಧ್ಯಾಹ್ನ ಸೊರೇನ್‌ರನ್ನು ಇಡಿ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಮುಂದಿನ ವಿಚಾರಣೆಗಾಗಿ 10 ದಿನಗಳ ಕಾಲ ನೀಡುವಂತೆ ಇಡಿ ಅಧಿಕಾರಿಗಳು ಕೇಳಿಕೊಂಡಿದ್ದರು. ಆದರೆ, ನ್ಯಾಯಾಲಯ ಇಂದು ಐದು ದಿನಗಳ ಕಸ್ಟಡಿಗೆ ನೀಡಿ ಆದೇಶಿಸಿದೆ.

ಇದಕ್ಕೂ ಮುನ್ನ ಪ್ರಕರಣ ಸಂಬಂಧ ತನಿಖೆಗೆ ಸಹಕರಿಸುವಂತೆ ಹಲವು ಬಾರಿ ಸಮನ್ಸ್ ನೀಡಲಾಗಿತ್ತು. ಹಲವು ನಾಟಕೀಯ ಬೆಳವಣಿಗೆಗಳ ಬಳಿಕ ಬುಧವಾರ ರಾತ್ರಿ ಬಂಧಿಸಿದ್ದ ಇಡಿ ಅಧಿಕಾರಿಗಳು, ಕೆಲವು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದರು.

ಈ ಬೆಳವಣಿಗೆಗೂ ಮುನ್ನ ಸೊರೇನ್ ಅವರಿಂದ 36 ಲಕ್ಷ ರೂ.ಗೂ ಅಧಿಕ ಮೌಲ್ಯದ ನಗದನ್ನು ವಶಪಡಿಸಿಕೊಂಡಿರುವುದಾಗಿ ಇಡಿ ತಿಳಿಸಿತ್ತು. ‘ಮೋಸದ ಮಾರ್ಗದಲ್ಲಿ’ ಸೇನೆಯ ಭೂಮಿಯನ್ನು ಸ್ವಾಧೀನಪಡಿಸಿಕೊಂಡ ಆರೋಪದ ಕುರಿತು ನಡೆಯುತ್ತಿರುವ ತನಿಖೆಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಲಾಗಿದೆ. 8.5 ಎಕರೆ ವಿಸ್ತೀರ್ಣದ ಜಮೀನುಗಳು ಮಾಜಿ ಸಿಎಂ ಗಳಿಸಿದ ಕ್ರಿಮಿನಲ್ ಆದಾಯದ ಭಾಗವಾಗಿದೆ ಎಂದು ತನಿಖಾ ಸಂಸ್ಥೆ ಹೇಳಿದೆ.

ಏಪ್ರಿಲ್ 13, 2023ರಂದು ನಡೆಸಿದ ದಾಳಿಯಲ್ಲಿ, ಕಂದಾಯ ಉಪನಿರೀಕ್ಷಕ ಭಾನು ಪ್ರತಾಪ್ ಪ್ರಸಾದ್ ಅವರ ಬಳಿಯಿದ್ದ ಆಸ್ತಿ ಸಂಬಂಧಿತ ದಾಖಲೆಗಳು ಮತ್ತು ರಿಜಿಸ್ಟರ್‌ಗಳು ಪತ್ತೆಯಾಗಿರುವುದಾಗಿಯೂ ಇಡಿ ತಿಳಿಸಿದೆ.

ಇದನ್ನೂ ಓದಿ: ಸೊರೇನ್ ಅರ್ಜಿ ವಿಚಾರಣೆಗೆ ನಕಾರ: ಹೈಕೋರ್ಟ್​ಗೆ ಹೋಗಿ ಎಂದ ಸುಪ್ರೀಂ ಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.