ನವದೆಹಲಿ: ದೇಶದ ಆರ್ಥಿಕತೆಯ ಕುರಿತ 74 ಪುಟಗಳ ಸಮಗ್ರ ವಿಮರ್ಶೆಯನ್ನು ಹಣಕಾಸು ಸಚಿವಾಲಯ ಬಿಡುಗಡೆ ಮಾಡಿದೆ. ಇದು ದಶಕದ ದೇಶದ ಆರ್ಥಿಕತೆ ಪಥದ ಕುರಿತು ಮೌಲ್ಯಮಾಪನ ಮಾಡಿದೆ. 'ದಿ ಇಂಡಿಯನ್ ಎಕಾನಮಿ; ಎ ರಿವ್ಯೂ' (ಭಾರತದ ಆರ್ಥಿಕತೆ; ಒಂದು ವಿಮರ್ಶೆ) ಎಂಬ ಶೀರ್ಷಿಕೆಯಲ್ಲಿ ಇಲಾಖೆ ವಿಮರ್ಶೆ ಬಿಡುಗಡೆ ಮಾಡಿದೆ.
ವರದಿಯು 2023ರ ಸೆಪ್ಟೆಂಬರ್ನಲ್ಲಿ ಅಂಗೀಕಾರವಾದ ಮಹಿಳಾ ಮೀಸಲಾತಿ ಮಸೂದೆ- ನಾರಿ ಶಕ್ತಿ ವಂದನಾ ಅಧಿನಿಯಮಕ್ಕೆ (ಎನ್ಎಸ್ವಿಎ) ಹೆಚ್ಚು ಒತ್ತು ನೀಡಿದೆ. ಇದರೊಂದಿಗೆ ಭಾರತದ ಸಾರಥ್ಯದಲ್ಲಿ ನಡೆದ ಜಿ20 ಶೃಂಗಸಭೆ ಕೂಡಾ ಮಹಿಳಾ ನೇತೃತ್ವದ ಅಭಿವೃದ್ಧಿಯನ್ನು ಆದ್ಯತೆಯಾಗಿಸಿದೆ ಎಂದು ತಿಳಿಸಿದೆ.
ಪಿಎಂ ಜನ್ಧನ್ ಯೋಜನೆಯಂತಹ ಕ್ರಮಗಳಿಂದಾಗಿ ಮಹಿಳೆಯರು ಬ್ಯಾಂಕ್ ಖಾತೆ ಹೊಂದುವ ಪ್ರಮಾಣ ಹೆಚ್ಚಾಗಿದೆ. ಮಹಿಳಾ ನೇತೃತ್ವದ ಸ್ವಸಹಾಯ ಗುಂಪುಗಳು ಮಹಿಳೆಯರ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸಬಲೀಕರಣದಲ್ಲಿ ಸಕಾರಾತ್ಮಕ ಪರಿಣಾಮ ಬೀರಿದೆ. ಇದರಿಂದ ಅವರು ಆರ್ಥಿಕ ನಿರ್ಧಾರ ತೆಗೆದುಕೊಳ್ಳುವ, ಸಾಮಾಜಿಕ ಸಂಪರ್ಕ ಸುಧಾರಿಸುವ ಮತ್ತು ಜೀವನೋಪಾಯ ವೈವಿಧ್ಯದಂತಹ ಹಲವು ಅಂಶಗಳಲ್ಲಿ ಅವರನ್ನು ಸಬಲೀಕರಣಗೊಳಿಸಿದೆ.
ದೀನ್ದಯಾಳ್ ಅಂತ್ಯೋದಯ ಯೋಜನಾ- ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನಾ (ಡಿಎವೈ-ಎನ್ಆರ್ಎಲ್ಎಂ)ನಂತಹ ಯೋಜನೆಗಳು ಮಹಿಳಾ ಸಬಲೀಕರಣದೊಂದಿಗೆ ಸಂಬಂಧ ಹೊಂದಿವೆ. ಇವು ಸ್ವಾಭಿಮಾನ ವೃದ್ಧಿಸಿದ್ದು, ಗ್ರಾಮದ ಸಂಸ್ಥೆಗಳಲ್ಲಿ ಭಾಗವಹಿಸುವಂತೆ ಅವಕಾಶ ನೀಡುತ್ತದೆ. ಕೌಶಲ್ಯ ಭಾರತ ಯೋಜನೆ ಮತ್ತು ಸ್ಟಾರ್ಟಪ್ ಮತ್ತು ಸ್ಟಾಂಡಪ್ ಇಂಡಿಯಾಗಳು ಮಹಿಳಾ ಭಾಗೀದಾರರಿಗೆ ಪ್ರೋತ್ಸಾಹ ನೀಡುತ್ತಿದ್ದು, ಮಾನವ ಬಂಡವಾಳ ರಚನೆಗೆ ಕೊಡುಗೆ ನೀಡುತ್ತದೆ.
ಸ್ವಚ್ಛ ಭಾರತ್ ಮಿಷನ್, ಉಜ್ವಲ್ ಯೋಜನಾ ಮತ್ತು ಜಲ್ ಜೀವನ್ ಮಿಷನ್ಗಳು ಮಹಿಳೆಯರ ಜೀವನವನ್ನು ಉತ್ತಮಗೊಳಿಸಿವೆ. ಪಿಎಂ ಆವಾಸ್ ಯೋಜನೆ (ಗ್ರಾಮಾಂತರ) ಸಂಪೂರ್ಣ ಮನೆಯು ಮಹಿಳಾ ಕೇಂದ್ರಿಕ ಮಾಲೀಕತ್ವ ಕಂಡಿದೆ. ಇದು ಮಹಿಳೆಯರ ನಿರ್ಧಾರ ತೆಗೆದುಕೊಳ್ಳುವಿಕೆ ಮತ್ತು ಆರೋಗ್ಯ ಫಲಿತಾಂಶಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.
ಬೇಟಿ ಬಚಾವೊ ಬೇಟಿ ಪಡಾವೋ ಕ್ರಮಗಳು ಮಾಧ್ಯಮಿಕ ಶಾಲೆಗಳಲ್ಲಿ ಬಾಲಕಿಯರ ಒಟ್ಟಾರೆ ದಾಖಲಾತಿ ದರ ಮತ್ತ ಹೆಣ್ಣು ಮಗವುನ್ನು ಉಳಿಸುವ, ಶಿಕ್ಷಣ ನೀಡುವ ಜಾಗೃತಿಗೆ ಒತ್ತು ನೀಡುತ್ತದೆ. ಮಹಿಳಾ ಕಾರ್ಮಿಕರು ಭಾಗಿಯಾಗುವ ದರ ಕೂಡ 2017-18ಕ್ಕೆ ಹೋಲಿಕೆ ಮಾಡಿದಾಗ 2022-23ರಲ್ಲಿ ಶೇ 37ರಷ್ಟು ಹೆಚ್ಚಾಗಿದೆ. ಲಿಂಗಾಧಾರಿತ ದರವು 2014-15ರಲ್ಲಿ 918 ಇದ್ದರೆ, 2022-23ರಲ್ಲಿ 933 ಇದೆ. ತಾಯಂದಿರ ಸಾವಿನ ದರವೂ ಕಡಿಮೆಯಾಗಿದ್ದು, 2014-16ಲ್ಲಿ ಲಕ್ಷಕ್ಕೆ 130 ಇದ್ದ ಈ ಸಾವಿನ ದರ 2018-20ರಲ್ಲಿ ಲಕ್ಷಕ್ಕೆ 97ರಷ್ಟಾಗಿದೆ. (ಐಎಎನ್ಎಸ್)
ಇದನ್ನೂ ಓದಿ: ಮಹಿಳಾ ಮೀಸಲಾತಿ ಮಸೂದೆಗೆ ಸಹಿ ಹಾಕಿದ ಉಪರಾಷ್ಟ್ರಪತಿ ಜಗದೀಪ್ ಧನಕರ್