ETV Bharat / bharat

ರಸ್ತೆ ಮೇಲೆ ನಮಾಜ್​ ಮಾಡುತ್ತಿದ್ದ ವ್ಯಕ್ತಿಗೆ ಥಳಿಸಿದ ಪೊಲೀಸ್​ ಅಮಾನತು

author img

By ETV Bharat Karnataka Team

Published : Mar 9, 2024, 7:06 AM IST

Updated : Mar 9, 2024, 12:19 PM IST

ರಸ್ತೆಯ ಮೇಲೆ ನಮಾಜ್ ಮಾಡುವಾಗ ಹಲ್ಲೆ ನಡೆಸಿದ ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.

ವಾಹನದಟ್ಟಣೆ ಇದ್ದ ರಸ್ತೆಯ ಮೇಲೆ ನಮಾಜ್​
ವಾಹನದಟ್ಟಣೆ ಇದ್ದ ರಸ್ತೆಯ ಮೇಲೆ ನಮಾಜ್​

ವೈರಲ್​ ವಿಡಿಯೋ

ನವದೆಹಲಿ: ರಸ್ತೆಯ ಮೇಲೆ ಪ್ರಾರ್ಥನೆ (ನಮಾಜ್​) ಸಲ್ಲಿಸುತ್ತಿದ್ದ ವ್ಯಕ್ತಿಯನ್ನು ಮೇಲೆ ಹಲ್ಲೆ ನಡೆಸಿದ ಪೊಲೀಸ್​ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಜೊತೆಗೆ ಘಟನೆಯ ತನಿಖೆ ನಡೆಸಲು ಹಿರಿಯ ಪೊಲೀಸ್ ಅಧಿಕಾರಿಗಳು ಸೂಚಿಸಿದ್ದಾರೆ.

ಇಲ್ಲಿನ ಇಂದರ್​ಲೋಕ ಪ್ರದೇಶದಲ್ಲಿ ಈ ಘಟನೆ ನಡೆದಿರುವ ಬಗ್ಗೆ ವರದಿಯಾಗಿದೆ. ಘಟನೆಯ ಬಳಿಕ ಪೊಲೀಸರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿ, ಕೆಲ ಜನರು ಪ್ರತಿಭಟನೆ ನಡೆಸಿದರು. ಪ್ರದೇಶದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾದ ಕಾರಣ ಇಂಟರ್ನೆಟ್​ ಸೇವೆಯನ್ನು ಬಂದ್​ ಮಾಡಲಾಗಿದೆ. ಬಿಗಿ ಪೊಲೀಸ್ ಬಂದೋಬಸ್ತ್​ ಮಾಡಲಾಗಿದೆ.

ಏನಾಯ್ತು?: ವಾಹನ, ಜನಸಂಚಾರ ದಟ್ಟವಾಗಿದ್ದರೂ ಮುಸ್ಲಿಮರ ಗುಂಪೊಂದು ರಸ್ತೆ ಮೇಲೆಯೇ ಮಧ್ಯಾಹ್ನ ನಮಾಜ್​ಗೆ ಕುಳಿತಿದ್ದಾರೆ ಎನ್ನಲಾಗಿದೆ. ಅಲ್ಲೇ ಭದ್ರತೆಗೆ ಇದ್ದ ಪೊಲೀಸ್​ ಸಿಬ್ಬಂದಿ ಜನರಿಗೆ ತೊಂದರೆ ಉಂಟಾಗದಿರಲು ಅವರನ್ನು ತೆರವು ಮಾಡಲು ಮುಂದಾಗಿದ್ದಾರೆ. ಆದರೆ, ಅವರು ನಮಾಜ್​ ಮುಂದುವರಿಸಿದ್ದರಿಂದ ಬಲಪ್ರಯೋಗ ಮಾಡಿದ್ದಾರೆ. ಈ ವೇಳೆ ಪೊಲೀಸ್​ ಕಾನ್​ಸ್ಟೇಬಲ್​ವೊಬ್ಬರು ವ್ಯಕ್ತಿಯೊಬ್ಬರಿಗೆ ಒದ್ದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಇದು ಸ್ಥಳದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಯಿತು. ನಮಾಜ್​ ಮಾಡುತ್ತಿದ್ದವರನ್ನು ಅಲ್ಲಿಂದ ತೆರಳಲು ಪೊಲೀಸರು ಸೂಚಿಸಿದ್ದರ ವಿರುದ್ಧ ಪ್ರತಿಭಟನೆ ನಡೆಸಲಾಯಿತು. ಅಲ್ಲದೇ, ಪೊಲೀಸರು ತಮ್ಮನ್ನು ಒದ್ದಿದ್ದಾರೆ ಎಂದು ನಮಾಜ್​ ಮಾಡುತ್ತಿದ್ದವರು ಆರೋಪಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಸ್ಥಳದಲ್ಲಿ ಮುಸ್ಲಿಂ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಪೊಲೀಸರ ವಿರುದ್ಧ ಘೋಷಣೆ ಕೂಗಿದರು. ಇದರಿಂದ ಸಂಚಾರ ಅಸ್ತವ್ಯಸ್ತವಾಯಿತು. ಹಿರಿಯ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಪ್ರತಿಭಟನಾಕಾರರ ಜೊತೆ ಮಾತನಾಡಿ ಘಟನೆಯ ಬಗ್ಗೆ ತನಿಖೆ ನಡೆಸಲಾಗುವುದು. ಘಟನೆಗೆ ಜವಾಬ್ದಾರರಾಗಿರುವ ಪೊಲೀಸರನ್ನು ಅಮಾನತುಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ಇಂದರ್​ಲೋಕ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದ ಜನರು ವಾಸಿಸುತ್ತಿದ್ದಾರೆ. ಶುಕ್ರವಾರ ನಮಾಜ್ ಮಾಡಲು ಸ್ಥಳಾವಕಾಶ ಕಡಿಮೆ ಇದ್ದ ಕಾರಣ ಈ ಜನರು ಮುಖ್ಯರಸ್ತೆಯ ಮೇಲೆಯೇ ಕುಳಿತು ನಮಾಜ್ ಮಾಡಲು ಆರಂಭಿಸಿದ್ದರು. ಡಿಸಿಪಿ ಮನೋಜ್ ಮೀನಾ ಅವರು ಪ್ರಕರಣದ ತನಿಖೆಗಾಗಿ ತನಿಖಾ ತಂಡವನ್ನು ರಚಿಸಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ರಷ್ಯಾ ಯುದ್ಧಕ್ಕೆ ಭಾರತೀಯ ಪ್ರಜೆಗಳ ರವಾನೆ: ಹಲವೆಡೆ ಸಿಬಿಐ ದಾಳಿ, ಮಾನವ ಕಳ್ಳಸಾಗಣೆ ಕೇಸ್​ ದಾಖಲು

Last Updated : Mar 9, 2024, 12:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.