ETV Bharat / bharat

ಹರಿಯಾಣ: 10ನೇ ಕ್ಲಾಸ್​ ಬೋರ್ಡ್​ ಪರೀಕ್ಷೆಯಲ್ಲಿ ಭಾರಿ ನಕಲು ಬಯಲು

author img

By ETV Bharat Karnataka Team

Published : Mar 7, 2024, 4:10 PM IST

Updated : Mar 7, 2024, 8:31 PM IST

ಪರೀಕ್ಷೆಯಲ್ಲಿ ಭಾರೀ ನಕಲು ಬಯಲು
ಪರೀಕ್ಷೆಯಲ್ಲಿ ಭಾರೀ ನಕಲು ಬಯಲು

ಹರಿಯಾಣದ ನುಹ್​ ಜಿಲ್ಲೆಯಲ್ಲಿ ನಡೆದ 10ನೇ ತರಗತಿಯ ಬೋರ್ಡ್​ ಪರೀಕ್ಷೆಯಲ್ಲಿ ಭಾರಿ ನಕಲು ನಡೆದಿರುವುದು ಬಹಿರಂಗವಾಗಿದೆ.

ವಿದ್ಯಾರ್ಥಿಗಳಿಗೆ ಚೀಟಿ ನೀಡಲು ಶಾಲಾ ಕಟ್ಟಡ ಹತ್ತಿದ ಯುವಕರು

ನುಹ್ (ಹರಿಯಾಣ): ರಾಜ್ಯದಲ್ಲಿ ನಡೆದ ಮಂಗಳವಾರ 10ನೇ ತರಗತಿಯ ಬೋರ್ಡ್​ ಪರೀಕ್ಷೆಯಲ್ಲಿ ಭಾರೀ ನಕಲು ಕಂಡು ಬಂದಿದೆ. ನುಹ್​ ಜಿಲ್ಲೆಯಲ್ಲಿ ಪರೀಕ್ಷೆ ಆರಂಭವಾದ ಕೆಲವೇ ನಿಮಿಷಗಳಲ್ಲಿ ಪರೀಕ್ಷಾ ಕೇಂದ್ರದ ಶಾಲಾ ಕಟ್ಟಡವನ್ನು ಹತ್ತಿಕೊಂಡು ಹೋಗಿ ವಿದ್ಯಾರ್ಥಿಗಳಿಗೆ ಚೀಟಿ ನೀಡಲಾಗಿದೆ. ಇದರ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಶಿಕ್ಷಣ ಇಲಾಖೆ ಅಧಿಕಾರಿಕಾರಿಗಳು ತಿಳಿಸಿದ್ದಾರೆ.

ರಾಜ್ಯದ ಹಲವೆಡೆ ಇಂತಹ ಪರೀಕ್ಷಾ ನಕಲು ಘಟನೆಗಳು ನಡೆದಿವೆ ಎಂದು ಹೇಳಲಾಗಿದೆ. ಅದರಲ್ಲೂ ನುಹ್​ ಜಿಲ್ಲೆಯ ಪರೀಕ್ಷಾ ಕೇಂದ್ರದಲ್ಲಿ ರಾಜಾರೋಷವಾಗಿ ಅವ್ಯವಹಾರ ನಡೆಸಲಾಗಿದೆ. ದೃಶ್ಯದಲ್ಲಿ ಕಾಣುವಂತೆ, ಯುವಕರು ಗುಂಪುಗಳು ಶಾಲೆಯ ಕಟ್ಟಡದ ಮೇಲೆ ಹಗ್ಗ ಕಟ್ಟಿ ಅದರ ನೆರವಿನಿಂದ ಎತ್ತರದ ಕಟ್ಟಡವನ್ನು ಅಪಾಯಕಾರಿಯಾಗಿ ಹತ್ತಿಕೊಂಡು ಹೋಗಿ, ಒಳಗಿದ್ದ ಮಕ್ಕಳಿಗೆ ಉತ್ತರ ಇರುವ ಚೀಟಿಗಳನ್ನು ಎಸೆದಿದ್ದಾರೆ.

ಮಕ್ಕಳಿಗಿಂತ ಹೊರಗೆ ಜನರೇ ಹೆಚ್ಚು: ಶಾಲೆಯ ಹೊರಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ನಿಂತಿರುವುದು ಕೂಡ ಕಂಡು ಬಂದಿದೆ. ಇಷ್ಟೆಲ್ಲ ಅವ್ಯವಹಾರ ನಡೆದರೂ ಭದ್ರತೆ ನೀಡಬೇಕಿದ್ದ ಪೊಲೀಸರು ಎಲ್ಲೂ ಕಾಣಿಸಿಕೊಂಡಿಲ್ಲ. ಇದನ್ನು ಅಲ್ಲಿದ್ದ ಕೆಲವರು ತಮ್ಮ ಮೊಬೈಲ್​ನಲ್ಲಿ ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ. ಸರ್ಕಾರ ಕಟ್ಟುನಿಟ್ಟಿನ ಪರೀಕ್ಷಾ ನಿಯಮಗಳನ್ನು ಪಾಲಿಸುವಲ್ಲಿ ವಿಫಲವಾಗಿದೆ ಎಂದು ಸಾರ್ವಜನಿಕರು ಟೀಕಿಸಿದ್ದಾರೆ.

ತಮ್ಮ ಪ್ರಾಣವನ್ನು ಲೆಕ್ಕಿಸದೇ ಅಸುರಕ್ಷಿತ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಚೀಟಿಗಳನ್ನು ತಲುಪಿಸಲು ಕಟ್ಟಡದ ಮೇಲೆ ಹತ್ತಿದ ಘಟನೆಯ ಬಗ್ಗೆ ಜಿಲ್ಲಾ ಶಿಕ್ಷಣಾಧಿಕಾರಿ ಪರಮಜೀತ್ ಚಹಲ್ ಮಾತನಾಡಿ, ಈ ವಂಚನೆಗೆ ಕಡಿವಾಣ ಹಾಕಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುತ್ತಿದೆ. ಆದರೂ ಇಂತಹ ಘಟನೆಗಳು ನಡೆಯುತ್ತಿವೆ. ನುಹ್​ ನಡೆದ ಪರೀಕ್ಷಾ ನಕಲಿನ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದರು.

ಯಾವುದೇ ಕಾರಣಕ್ಕೂ ಇಂತಹ ವಂಚನೆಗೆ ಅವಕಾಶ ನೀಡುವುದಿಲ್ಲ. ರಾಜ್ಯದ ಯಾವುದೇ ಕೇಂದ್ರದಲ್ಲಿ ಇಂತಹ ಘಟನೆಗಳು ಕಂಡು ಬಂದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಶಿಕ್ಷಣ ಮಂಡಳಿಗೆ ಮಾಹಿತಿ ರವಾನಿಸಲಾಗುವುದು. ಪರೀಕ್ಷೆಯ ಸಮಯದಲ್ಲಿ ಪೊಲೀಸ್ ಸಿಬ್ಬಂದಿಯ ನಿಯೋಜನೆಯನ್ನು ಹೆಚ್ಚಿಸಲು ಪೊಲೀಸ್ ಇಲಾಖೆ ಜೊತೆ ಮಾತುಕತೆ ನಡೆಸಲಾಗುವುದು ಎಂದು ಶಿಕ್ಷಣಾಧಿಕಾರಿ ತಿಳಿಸಿದರು.

ಪ್ರಶ್ನೆಪತ್ರಿಕೆ ಸೋರಿಕೆ ಅಕ್ರಮಕ್ಕೆ ಶಿಕ್ಷೆ: ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆಯಂಥ ಅಕ್ರಮಗಳನ್ನು ತಡೆಯಲು ಕೇಂದ್ರ ಸರ್ಕಾರ ಸಾರ್ವಜನಿಕ ಪರೀಕ್ಷೆ (ಅನ್ಯಾಯದ ವಿಧಾನಗಳ ತಡೆಗಟ್ಟುವಿಕೆ) ಮಸೂದೆಯನ್ನು ಲೋಕಸಭೆಯಲ್ಲಿ ಅಂಗೀಕರಿಸಿದೆ. ಇದು ಕಾಯ್ದೆ ರೂಪ ಪಡೆದಲ್ಲಿ, ಅಕ್ರಮಗಳಲ್ಲಿ ತೊಡಗಿದವರಿಗೆ ಕನಿಷ್ಠ 3 ವರ್ಷಗಳ ಜೈಲು ಶಿಕ್ಷೆ ಮತ್ತು 1 ಕೋಟಿ ರೂಪಾಯಿ ದಂಡವನ್ನೂ ವಿಧಿಸಬಹುದು.

ಇದನ್ನೂ ಓದಿ: ಮತ್ತೆ ಸೋರಿಕೆ ಆಯ್ತೇ ಪ್ರಶ್ನೆಪತ್ರಿಕೆ?: ಪೊಲೀಸ್ ಠಾಣೆ ಮುಂದೆ ಅಭ್ಯರ್ಥಿಗಳ ಪ್ರತಿಭಟನೆ

Last Updated :Mar 7, 2024, 8:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.