ETV Bharat / bharat

ಅಮೇಥಿ, ರಾಯ್​ಬರೇಲಿಯಲ್ಲಿ ದ್ವೇಷ ಬಿತ್ತಲು ಬಿಜೆಪಿ ಷಡ್ಯಂತ್ರ: ಈ ಬಾರಿ ಕೇಸರಿ ಪಕ್ಷ 100 ಸ್ಥಾನಗಳಲ್ಲೂ ಗೆಲ್ಲೋದಿಲ್ಲ ಎಂದ ಖರ್ಗೆ

author img

By ETV Bharat Karnataka Team

Published : Feb 20, 2024, 6:33 AM IST

ಈ ಬಾರಿ ಬಿಜೆಪಿ 100 ಸ್ಥಾನಗಳನ್ನೂ ಗೆಲ್ಲುವುದಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ.

"BJP conspiring to sow enmity with Rae Bareli, Amethi...": Mallikarjun Kharge
ಅಮೇಥಿ, ರಾಯ್​ಬರೇಲಿಯಲ್ಲಿ ದ್ವೇಷ ಬಿತ್ತಲು ಬಿಜೆಪಿ ಷಡ್ಯಂತ್ರ: ಮಲ್ಲಿಕಾರ್ಜುನ್ ಖರ್ಗೆ

ಅಮೇಥಿ (ಉತ್ತರ ಪ್ರದೇಶ): ಕೋಟ್ಯಂತರ ಮೌಲ್ಯದ ಯೋಜನೆಗಳನ್ನು ಸ್ಥಗಿತಗೊಳಿಸುವ ಮೂಲಕ ರಾಯ್ ಬರೇಲಿ ಮತ್ತು ಅಮೇಥಿ ಜನರಲ್ಲಿ ದ್ವೇಷ ಬಿತ್ತಲು ಭಾರತೀಯ ಜನತಾ ಪಕ್ಷವು ಪಿತೂರಿ ನಡೆಸುತ್ತಿದೆ ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಆರೋಪಿಸಿದ್ದಾರೆ. ಕಾಂಗ್ರೆಸ್​​​ನ ಗಟ್ಟಿ ನೆಲೆ ಹೊಂದಿರುವ ಈ ಎರಡು ಪ್ರಮುಖ ನಗರಗಳ ಅಭಿವೃದ್ಧಿಯನ್ನು ನಿರ್ಲಕ್ಷಿಸಲಾಗಿದೆ ಎಂದು ಅವರು ಸಿಟ್ಟು ಹೊರಹಾಕಿದ್ದಾರೆ.

ಪಕ್ಷದ 'ಭಾರತ್ ಜೋಡೋ ನ್ಯಾಯ್ ಯಾತ್ರೆ' ಸಂದರ್ಭದಲ್ಲಿ ಉತ್ತರ ಪ್ರದೇಶದ ಅಮೇಥಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಖರ್ಗೆ ಮಾತನಾಡಿದರು. ಕಾಂಗ್ರೆಸ್ ಅಧಿಕಾರಾವಧಿಯಲ್ಲಿ, ಅಮೇಥಿಯಲ್ಲಿ ಕೋಟ್ಯಂತರ ಮೌಲ್ಯದ ಯೋಜನೆಗಳಿಗೆ ಅನುಮೋದನೆ ನೀಡಲಾಯಿತು. ಆದರೆ, ಅವುಗಳಲ್ಲಿ ಹೆಚ್ಚಿನವು ಹಾಗೆ ಉಳಿದುಕೊಂಡವು. ಹಿಂದಿನ ಅನೇಕ ಯೋಜನೆಗಳು ಇನ್ನೂ ಏಕೆ ಅಪೂರ್ಣವಾಗಿವೆ ಎಂದು ಕೇಂದ್ರ ಸರ್ಕಾರವನ್ನು ಕೇಳಲು ಬಯಸುತ್ತೇನೆ ಎಂದ ಖರ್ಗೆ, ಅವರೆಲ್ಲ ಅಮೇಥಿ ಮತ್ತು ರಾಯ್ ಬರೇಲಿಯಲ್ಲಿ ಕೆಲಸ ಮಾಡಲು ಬಯಸುವುದಿಲ್ಲ ಎಂದು ಹರಿಹಾಯ್ದರು.

ಪ್ರಧಾನಿ ನರೇಂದ್ರ ಮೋದಿಯವರ ‘ಅಬ್​ ಕಿ ಬಾರ್, 400 ಪಾರ್’ ಘೋಷಣೆಯನ್ನು ಟೀಕಿಸಿದ ಎಐಸಿಸಿ ಅಧ್ಯಕ್ಷರು ಮುಂಬರುವ ಚುನಾವಣೆಯಲ್ಲಿ ಬಿಜೆಪಿ 100 ಸ್ಥಾನಗಳನ್ನೂ ಗೆಲ್ಲುವುದಿಲ್ಲ ಎಂದು ಭವಿಷ್ಯ ನುಡಿದರು. 400ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸುವುದಾಗಿ ಬಿಜೆಪಿ ಹೇಳಿಕೊಂಡರೂ 100 ಸೀಟುಗಳನ್ನು ದಾಟುವುದು ಕಷ್ಟವಿದೆ ಎಂದರು. ಅಬ್​​​​​ ಕಿ ಬಾರ್, ಸತ್ತಾ ಸೆ ಬಾಹರ್ ಎಂದು ಖರ್ಗೆ ಹೇಳಿದರು.

ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್​ ಅಧ್ಯಕ್ಷರು, ಮೋದಿಜಿ ಕಾಂಗ್ರೆಸ್ ಪಕ್ಷದ ಯೋಜನೆಗಳನ್ನು ಸ್ಥಗಿತಗೊಳಿಸಿದ್ದಾರೆ. ಇದಕ್ಕೆ ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ ಎಂದು ಎಚ್ಚರಿಕೆ ಕೂಡಾ ನೀಡಿದರು. ಪಕ್ಷದ ವರಿಷ್ಠೆ ಸೋನಿಯಾ ಗಾಂಧಿ, ರಾಯ್ ಬರೇಲಿಯಿಂದ ಪ್ರಸ್ತುತ ಲೋಕಸಭಾ ಸಂಸದರಾಗಿದ್ದಾರೆ. ಅವರು ಮುಂದಿನ ಬಾರಿ ಲೋಕಸಭೆಗೆ ಸ್ಪರ್ಧೆ ಮಾಡುತ್ತಿಲ್ಲ. ರಾಜಸ್ಥಾನದಿಂದ ರಾಜ್ಯಸಭೆಗೆ ಈಗಾಗಲೇ ಅವರು ನಾಮಪತ್ರ ಸಲ್ಲಿಸಿದ್ದಾರೆ. ಸೋನಿಯಾ ಗಾಂಧಿ ಅವರು 2019 ರ ಲೋಕಸಭೆ ಚುನಾವಣೆಯಲ್ಲಿ ರಾಯ್ ಬರೇಲಿಯಿಂದ ಗೆಲುವು ಸಾಧಿಸಿದ್ದರು.

ಇನ್ನು 2004 ಮತ್ತು 2019 ರ ನಡುವಣ ಅವಧಿಯಲ್ಲಿ ರಾಹುಲ್​ ಗಾಂಧಿ ಅಮೇಥಿಯಲ್ಲಿ ಜಯ ಸಾಧಿಸಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಸಚಿವೆ ಸ್ಮೃತಿ ಇರಾನಿ ವಿರುದ್ಧ ಸುಮಾರು 55,000 ಮತಗಳಿಂದ ಸೋಲು ಅನುಭವಿಸಿದ್ದರು. ಇದೇ ಪ್ರದೇಶದಲ್ಲಿ ರ್ಯಾಲಿ ಉದ್ದೇಶಿಸಿ ಮಾತನಾಡಿದ ಖರ್ಗೆ, ಇದು ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಜಿ ಅವರು ಶ್ರಮಿಸಿದ ಭೂಮಿ. ನೀವು ಗಾಂಧಿ ಕುಟುಂಬದೊಂದಿಗೆ ಆಳವಾದ ಸಂಬಂಧವನ್ನು ಹೊಂದಿದ್ದೀರಿ ಎಂದು ಭಾವನಾತ್ಮಕವಾಗಿ ಹೇಳಿದರು.

ಸೋಮವಾರ ಬೆಳಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಭಾರತ್ ಜೋಡೋ ನ್ಯಾಯ್ ಯಾತ್ರೆಯನ್ನು ಉತ್ತರ ಪ್ರದೇಶದ ಅಮೇಥಿಯಿಂದ ಪುನರಾರಂಭಿಸಿದ್ದರು.

ಇದನ್ನು ಓದಿ:10 ಲಕ್ಷ ಕೋಟಿ ರೂ.ಗೂ ಹೆಚ್ಚು ಮೌಲ್ಯದ 14 ಸಾವಿರ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.