ETV Bharat / bharat

ಬಿಹಾರದಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ: ಆರ್​ಜೆಡಿ- ಜೆಡಿಯು ಸಭೆ, ವಿವಾದ ಸೃಷ್ಟಿಸಿದ ಲಾಲು ಪುತ್ರಿ

author img

By ETV Bharat Karnataka Team

Published : Jan 25, 2024, 9:17 PM IST

ಬಿಹಾರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಮೈತ್ರಿ ಸರ್ಕಾರದಲ್ಲಿ ಬಿರುಕು ಕಾಣಿಸಿಕೊಂಡಿವೆ ಎಂಬ ವದಂತಿ ಹಬ್ಬಿದೆ. ಇತ್ತ ಲಾಲು ಪುತ್ರಿ ರೋಹಿಣಿ ಆಚಾರ್ಯ ಮಾಡಿರುವ ಎಕ್ಸ್​ ಪೋಸ್ಟ್ ವಿವಾದಕ್ಕೆ ಕಾರಣವಾಗಿದೆ.

ಬಿಹಾರ ರಾಜಕೀಯ
ಬಿಹಾರ ರಾಜಕೀಯ

ಪಾಟ್ನಾ (ಬಿಹಾರ) : ಬಿಹಾರ ರಾಜಕೀಯದಲ್ಲಿ ಮಹತ್ತರ ಬೆಳವಣಿಗೆಗಳು ಶುರುವಾಗಿವೆ. ಆರ್​ಜೆಡಿ ಮತ್ತು ಜೆಡಿಯು ಮೈತ್ರಿಯಲ್ಲಿ ಬಿರುಕು ಕಾಣಿಸಿಕೊಂಡ ಲಕ್ಷಣಗಳು ಗೋಚರಿಸುತ್ತಿವೆ. ಸಿಎಂ ನಿತೀಶ್​ಕುಮಾರ್​ ಇಂದು ಜೆಡಿಯು ನಾಯಕರ ತುರ್ತು ಸಭೆ ನಡೆಸಿದ್ದರೆ, ಬಿಜೆಪಿ ನಾಯಕರು ದೆಹಲಿಗೆ ದೌಡಾಯಿಸಿದ್ದಾರೆ. ಎಲ್ಲದರ ಮಧ್ಯೆ ಲಾಲು ಪ್ರಸಾದ್​ ಯಾದವ್​ ಅವರ ಪುತ್ರಿ ಮಾಡಿರುವ ಎಕ್ಸ್​ ಪೋಸ್ಟ್ ತೀವ್ರ ವಿವಾದಕ್ಕೆ ಕಾರಣವಾಗಿದೆ.

ತುರ್ತು ಸಭೆ ಕರೆದ ಸಿಎಂ ನಿತೀಶ್​: ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಜೆಡಿಯು ಹಿರಿಯ ನಾಯಕರೊಂದಿಗೆ ಇಂದು ತುರ್ತು ಸಭೆ ನಡೆಸಿದ್ದಾರೆ. ಸಿಎಂ ಸೇರಿದಂತೆ ಪಕ್ಷದ ರಾಜ್ಯಾಧ್ಯಕ್ಷ ಉಮೇಶ್ ಕುಶ್ವಾಹ, ಹಣಕಾಸು ಸಚಿವ ವಿಜಯ್ ಕುಮಾರ್ ಚೌಧರಿ, ಜಲಸಂಪನ್ಮೂಲ ಸಚಿವ ಸಂಜಯ್ ಝಾ ಮತ್ತು ಮಾಜಿ ರಾಷ್ಟ್ರೀಯ ಅಧ್ಯಕ್ಷ ಲಾಲನ್ ಸಿಂಗ್ ಅವರು ಮುಖ್ಯಮಂತ್ರಿ ನಿವಾಸದಲ್ಲಿ ಸಭೆ ನಡೆಸಿದ್ದಾರೆ.

ಸುದೀರ್ಘ ಸಭೆಯ ಬಳಿಕ ಜೆಡಿಯು ನಾಯಕರು ಹೊರ ಬಂದಾಗ, ವಿತ್ತ ಸಚಿವ ವಿಜಯ್ ಚೌಧರಿ ಅವರು ಮಾಧ್ಯಮಗಳ ಜತೆ ಮಾತನಾಡಿ, ಸಭೆ ನಡೆಸುವುದು ಪಕ್ಷಗಳ ಕೆಲಸ. ನಳಂದಾದಲ್ಲಿ ನಾಳೆ ಗಣರಾಜ್ಯೋತ್ಸವ ಧ್ವಜಾರೋಹಣ ಮಾಡಲಿದ್ದೇವೆ ಎಂದು ಹೇಳಿದರು. ರಾಜಕೀಯ ಬೆಳವಣಿಗೆಗಳ ಬಗ್ಗೆ ಪ್ರಶ್ನಿಸಿದಾಗ ಮುಗುಳ್ನಕ್ಕು ಹೊರಟರು. ಸಿಎಂ ನಿವಾಸ ಸೇರಿದಂತೆ ಸಚಿವರ ನಿವಾಸಗಳಿಗೆ ಭದ್ರತೆ ಹೆಚ್ಚಿಸಿದ್ದು, ಕುತೂಹಲದ ಗೂಡಾಗಿದೆ.

ಲಾಲು ನಿವಾಸದಲ್ಲೂ ಚಟುವಟಿಕೆ: ಬದಲಾಗುತ್ತಿರುವ ರಾಜಕೀಯ ಬೆಳವಣಿಗೆಗಳ ನಡುವೆ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಅವರು ಕೂಡ ತಮ್ಮ ನಿವಾಸದಲ್ಲಿ ಮುಖಂಡರ ಸಭೆ ನಡೆಸಿದ್ದಾರೆ. ಪಕ್ಷದ ಹಿರಿಯ ನಾಯಕರು ರಾಬ್ರಿ ನಿವಾಸಕ್ಕೆ ಆಗಮಿಸಿದ್ದರು. ಈ ಕುರಿತು ಮಾಧ್ಯಮಗಳು ಪ್ರಶ್ನಿಸಿದಾಗ, ಯಾವುದೇ ಸಭೆ ನಡೆದಿಲ್ಲ. ಲಾಲು ಯಾದವ್ ಪ್ರತಿ ದಿನ ಕಾರ್ಯಕರ್ತರನ್ನು ಭೇಟಿಯಾಗುತ್ತಾರೆ. ಸರ್ಕಾರ ಉತ್ತಮವಾಗಿ ಕೆಲಸ ಮಾಡುತ್ತಿದೆ. ಸರ್ಕಾರದ ಜೊತೆಗೆ ಆರ್​ಜೆಡಿ ಬೆಂಬಲವಾಗಿ ನಿಂತಿದೆ. ಬಿಜೆಪಿ ಇಲ್ಲದ ವದಂತಿ ಹಬ್ಬಿಸುತ್ತಿದೆ ಎಂದು ಆರ್‌ಜೆಡಿ ನಾಯಕ ಶಕ್ತಿ ಯಾದವ್ ಅವರು ಹೇಳಿದರು.

ದೆಹಲಿಗೆ ಬಿಜೆಪಿ ನಾಯಕರು: ಸರ್ಕಾರದಲ್ಲಿ ಏನೋ ಸರಿ ಇಲ್ಲ ಎಂಬ ಸುದ್ದಿ ಹರಿದಾಡುತ್ತಿದ್ದಂತೆ, ಇಲ್ಲಿನ ರಾಜ್ಯ ನಾಯಕರು ದೆಹಲಿಗೆ ದೌಡಾಯಿಸಿದ್ದಾರೆ. ರಾಜ್ಯಾಧ್ಯಕ್ಷ ಸಾಮ್ರಾಟ್ ಚೌಧರಿ, ಮಾಜಿ ಉಪಮುಖ್ಯಮಂತ್ರಿ ರೇಣುದೇವಿ, ಪ್ರತಿಪಕ್ಷ ನಾಯಕ ವಿಜಯ್ ಸಿನ್ಹಾ ದೆಹಲಿಗೆ ಬಂದಿದ್ದಾರೆ. ಗೃಹ ಸಚಿವ ಅಮಿತ್ ಶಾ ಅವರು ಬಿಹಾರ ರಾಜಕೀಯದ ಕುರಿತು ನಾಯಕರ ಜೊತೆ ಸಭೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪಕ್ಷದ ರಾಜ್ಯ ಉಸ್ತುವಾರಿ ವಿನೋದ್ ತಾವ್ಡೆ, ಸಂಸದ ಸುಶೀಲ್ ಮೋದಿ ಸೇರಿದಂತೆ ಹಲವು ಹಿರಿಯ ನಾಯಕರೂ ಸಭೆಗೆ ಬರಲಿದ್ದಾರೆ ಎಂದು ತಿಳಿದು ಬಂದಿದೆ.

ಇದರ ಜೊತೆಗೆ ಜೆಡಿಯುನ ಹಿರಿಯ ನಾಯಕ ಕೆಸಿ ತ್ಯಾಗಿ, ಬಿಜೆಪಿಯ ಅಶ್ವಿನಿ ಚೌಬೆ ಅವರು ಒಂದೇ ವಿಮಾನದಲ್ಲಿ ಒಟ್ಟಿಗೆ ದೆಹಲಿಗೆ ತೆರಳಿದ್ದಾರೆ. ಇದು ನಿತೀಶ್​ಕುಮಾರ್​ ಅವರು ಮತ್ತೆ ಎನ್​ಡಿಎ ಕೂಟಕ್ಕೆ ಸೇರುವ ಸಾಧ್ಯತೆ ಇದೆ ಎಂಬುದರ ಅನುಮಾನ ಮೂಡಿಸಿದೆ.

ವಿವಾದ ಸೃಷ್ಟಿಸಿದ ಲಾಲು ಪುತ್ರಿ ಪೋಸ್ಟ್​: ಈ ಬೆಳವಣಿಗೆಗಳ ಮಧ್ಯೆ ಲಾಲು ಪ್ರಸಾದ್​ ಅವರ ಪುತ್ರಿ ರೋಹಿಣಿ ಆಚಾರ್ಯ ಅವರು ಮಾಡಿದ ಎಕ್ಸ್​ ಪೋಸ್ಟ್ ಭಾರೀ ವಿವಾದದ ಬೆಂಕಿಯನ್ನು ಹೊತ್ತಿಸಿದೆ. ಸಿಎಂ ನಿತೀಶ್​ಕುಮಾರ್​ ಅವರನ್ನು ಪರೋಕ್ಷವಾಗಿ ಟೀಕಿಸುವ ಮಾದರಿ ರೋಹಿಣಿ ಅವರು ಪೋಸ್ಟ್​ ಮಾಡಿದ್ದರು. ಇದು ವಿವಾದ ಸೃಷ್ಟಿಸುತ್ತಿದ್ದಂತೆ ಅಳಿಸಿ ಹಾಕಿದ್ದಾರೆ.

ಇದನ್ನೂ ಓದಿ: ಬಿಹಾರ ಸಿಎಂ ನಿತೀಶ್​ಕುಮಾರ್​ ಮತ್ತೆ ಎನ್​ಡಿಎ ಸೇರುವ ವದಂತಿ: ವಿಪಕ್ಷಗಳ I.N.D.I.A ಕೂಟದಲ್ಲಿ ತಳಮಳ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.