ETV Bharat / bharat

ಅಯೋಧ್ಯೆಯಲ್ಲಿ ಆರ್ಥಿಕತೆ ಉತ್ತೇಜಿಸಲಿದೆಯೇ ರಾಮಮಂದಿರ?: ಇಲ್ಲಿದೆ ಮಾಹಿತಿ

author img

By ETV Bharat Karnataka Team

Published : Jan 22, 2024, 10:16 PM IST

ಅಯೋಧ್ಯೆಯಲ್ಲಿ ಸಂಪರ್ಕ ಮತ್ತು ಧಾರ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸಲು 85,000 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ.

Etv Bharatayodhya-turns-a-new-leaf-with-massive-boost-in-pilgrim-infrastructure
Etv Bharatಅಯೋಧ್ಯೆಯಲ್ಲಿ ಆರ್ಥಿಕತೆಯನ್ನು ಉತ್ತೇಜಿಸಲಿದೆಯೇ ರಾಮಮಂದಿರ?: ಇಲ್ಲಿದೆ ಮಾಹಿತಿ

ಅಯೋಧ್ಯೆ (ಉತ್ತರ ಪ್ರದೇಶ): ಭಗವಾನ್ ರಾಮನ ಜನ್ಮಸ್ಥಳ ಪರಿವರ್ತನೆಗೆ ಸಜ್ಜಾಗಿದೆ. ಅಯೋಧ್ಯೆಯೂ ದೇಶ ಮತ್ತು ವಿದೇಶಗಳಿಂದ ಆಗಮಿಸುವ ಲಕ್ಷಾಂತರ ಹಿಂದೂ ಯಾತ್ರಾರ್ಥಿಗಳಿಗೆ ಪ್ರಮುಖ ತೀರ್ಥಕ್ಷೇತ್ರವಾಗುವ ನಿರೀಕ್ಷೆ ಇದೆ. ಇಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿದ ಐತಿಹಾಸಿಕ ಘಟನೆಯು ಅಯೋಧ್ಯೆಯನ್ನು ಜಾಗತಿಕ ಪ್ರವಾಸೋದ್ಯಮ ಪಟ್ಟಿಗೆ ಸೇರಿಸಿದೆ ಎಂದು ಅಂತಾರಾಷ್ಟ್ರೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಭವ್ಯ ರಾಮಮಂದಿರ ನಿರ್ಮಾಣ ಮತ್ತು ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರದ ಮೂಲಸೌಕರ್ಯ ಅಭಿವೃದ್ಧಿಯೂ ಅಯೋಧ್ಯೆಯಲ್ಲಿ ಆರ್ಥಿಕತೆ ವೃದ್ಧಿಗೆ ಸಹಕಾರಿಯಾಗುವ ಸಾಧ್ಯತೆ ಇದೆ. ಸಂಪರ್ಕ ಮತ್ತು ಧಾರ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸಲು 85,000 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಇಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ ಕೆಲವು ಅಭಿವೃದ್ಧಿಕಾರ್ಯಗಳು ಪೂರ್ಣಗೊಂಡಿವೆ.

ಒಂದು ಕಾಲದಲ್ಲಿ ಅತ್ಯಂತ ಸುಸಜ್ಜಿತ ನಗರವಾಗಿದ್ದ ಅಯೋಧ್ಯೆ ಈಗ ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಪುನರಾಭಿವೃದ್ಧಿ ಹೊಂದಿದ ರೈಲ್ವೆ ನಿಲ್ದಾಣ, ಸುಸಜ್ಜಿತ ರಸ್ತೆಗಳು, ಅಭಿವೃದ್ಧಿ ಹೊಂದಿದ ಟೌನ್‌ಶಿಪ್‌ಗಳು ಮತ್ತು ಸುಸಜ್ಜಿತ ನಾಗರಿಕ ಸೌಲಭ್ಯಗಳನ್ನು ಒಳಗೊಂಡಿದೆ. ಭವಿಷ್ಯದಲ್ಲಿ ಪ್ರವಾಸಿಗರ ಬೇಡಿಕೆಗಳನ್ನು ಪೂರೈಸಲು ಹೋಟೆಲ್​ಗಳು ಮತ್ತು ಶಾಪಿಂಗ್ ಮಾಲ್​ಗಳು ತಲೆ ಎತ್ತಲು ಸಿದ್ಧವಾಗಿವೆ. ಇದು ಖಾಸಗಿ ಮೂಲಸೌಕರ್ಯ ಅಭಿವೃದ್ಧಿಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.

ಜಾಗತಿಕ ಬ್ರೋಕರೇಜ್ ಸಂಸ್ಥೆ ಜೆಫ್ರೀಸ್ ತನ್ನ ವರದಿಯಲ್ಲಿ, ಅಯೋಧ್ಯೆ ರಾಮಮಂದಿರವು ದಿನಕ್ಕೆ 1 ರಿಂದ 1.5 ಲಕ್ಷ ದಂತೆ ವಾರ್ಷಿಕವಾಗಿ 50 ದಶಲಕ್ಷಕ್ಕೂ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಬಹುದು ಎಂದು ತಿಳಿಸಿದೆ. ಮುಂಬರುವ ದಿನಗಳಲ್ಲಿ ಆತಿಥ್ಯ ಮತ್ತು ರಿಯಲ್ ಎಸ್ಟೇಟ್ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಹೆಚ್ಚಾಗುವ ವಾಣಿಜ್ಯ ಮತ್ತು ವ್ಯಾಪಾರ ಅವಕಾಶಗಳಿಂದ ಅಯೋಧ್ಯೆಗೆ ಭಾರಿ ಪ್ರಮಾಣದಲ್ಲಿ ವಲಸೆ ಹೆಚ್ಚಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಈ ಹಿಂದೆ ರಾಮ ಜನ್ಮಭೂಮಿ - ಬಾಬರಿ ಮಸೀದಿ ವಿವಾದದಿಂದ ಅಯೋಧ್ಯೆ ಸುದ್ದಿಯಲ್ಲಿತ್ತು. ಇಂದು ರಾಮಮಂದಿರದ ಉದ್ಘಾಟನೆಯಿಂದ ಅಯೋಧ್ಯೆಯ ದಿಕ್ಕು ಬದಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇಂದು 7,000ಕ್ಕೂ ಹೆಚ್ಚು ವಿವಿಐಪಿ ಭಕ್ತರ ಸಮ್ಮುಖದಲ್ಲಿ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿದರೊಂದಿಗೆ ಬದಲಾವಣೆಗೆ ನಾಂದಿ ಹಾಡಿದರು. ಇನ್ನು ರಾಮಮಂದಿರವು 161 ಅಡಿ ಎತ್ತರ, 250 ಅಡಿ ಅಗಲ ಮತ್ತು 380 ಅಡಿ ಉದ್ದ ಹಾಗೂ ಮೂರು ಅಂತಸ್ತನ್ನು ಹೊಂದಿದ್ದು, 44 ದ್ವಾರಗಳು ಮತ್ತು 392 ಸ್ತಂಭಗಳನ್ನು ಒಳಗೊಂಡಿದೆ.

ಇದನ್ನೂ ಓದಿ: ಕೋಟ್ಯಂತರ ಜನರ ಕನಸು ಸಾಕಾರ; ಅಯೋಧ್ಯೆದಲ್ಲಿ ಪ್ರತಿಷ್ಠಾಪನೆಯಾದ ಶ್ರೀರಾಮ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.