ETV Bharat / bharat

ಅಮರಾವತಿಯ ಪಕ್ಷೇತರ ಸಂಸದೆ ನಟಿ ನವನೀತ್​ ಕೌರ್​ ರಾಣಾ ಬಿಜೆಪಿಗೆ ಸೇರ್ಪಡೆ - Lok Sabha Election 2024

author img

By ETV Bharat Karnataka Team

Published : Mar 28, 2024, 5:51 PM IST

2019ರ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದ, ಸಂಸದೆ ನವನೀತ್​ ಕೌರ್​ ರಾಣಾ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.

Amaravati Independent MP Navneet Kaur Rana joins BJP
ಅಮರಾವತಿ ಸ್ವತಂತ್ರ ಸಂಸದೆ ನವನೀತ್​ ಕೌರ್​ ರಾಣಾ ಬಿಜೆಪಿ ಸೇರ್ಪಡೆ

ಮುಂಬೈ (ಮಹಾರಾಷ್ಟ್ರ): ನಟಿ ಹಾಗೂ ರಾಜಕಾರಣಿಯಾಗಿರುವ ಸ್ವತಂತ್ರ ಸಂಸದೆ ನವನೀತ್​ ರಾಣಾ ಅವರು ಬುಧವಾರ ರಾತ್ರಿ ನಾಗ್ಪುರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಶೇಖರ್​ ಬವಾಂಕುಲೆ ಅವರ ಸಮ್ಮುಖದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

Amaravati Independent MP Navneet Kaur Rana joins BJP
ಅಮರಾವತಿ ಸ್ವತಂತ್ರ ಸಂಸದೆ ನವನೀತ್​ ಕೌರ್​ ರಾಣಾ ಬಿಜೆಪಿ ಸೇರ್ಪಡೆ

ಸ್ವತಂತ್ರ ಸಂಸದೆಯಾಗಿದ್ದ ನವನೀತ್​ ಅವರ ಈ ಹಠಾತ್​ ನಡೆ ರಾಜಕೀಯ ವಲಯದಲ್ಲಿ ಹಲವರ ಹುಬ್ಬು ಗಂಟಿಕ್ಕುವಂತೆ ಮಾಡಿದೆ. ಇನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಣಾ ಅವರ ಗೆಲುವಿನ ವಿಶ್ವಾಸ ದುಪ್ಪಟ್ಟಾಗಿದೆ.

ಬಿಜೆಪಿಗೆ ಸೇರ್ಪಡೆಯಾದ ಬಳಿಕ ಮಾತನಾಡಿದ ನವನೀತ್​, "ಕಳೆದ ಐದು ವರ್ಷಗಳಿಂದ ನಾನು ಪ್ರಧಾನಿ ನರೇಂದ್ರ ಮೋದಿಯವರ ಆಲೋಚನೆಗಳ ಮೇಲೆ ಕೆಲಸ ಮಾಡುತ್ತಿದ್ದೇನೆ. ಮತ್ತು ನನ್ನ ಸಿದ್ಧಾಂತವೂ ಅವುಗಳಿಂದ ಹೊರತಾಗಿರಲಿಲ್ಲ. ನನ್ನ ಪತಿ ಶಾಸಕ ರವಿ ರಾಣಾ ಅವರು ಕೂಡಾ ಮಹಾರಾಷ್ಟ್ರದ ಬಿಜೆಪಿ ಸರ್ಕಾರವನ್ನು ಬೆಂಬಲಿಸಿದ್ದಾರೆ. ಪ್ರಧಾನಿ ಮೋದಿ ಅವರು ತಳಮಟ್ಟದಲ್ಲಿ ಕೆಲಸ ಮಾಡುವವರನ್ನು ಬೆಂಬಲಿಸುತ್ತಾರೆ. ಹಾಗಾಗಿ ನನಗೆ ಟಿಕೆಟ್​ ಕೊಟ್ಟರು. ಬಿಜೆಪಿ ನನ್ನ ಶ್ರಮವನ್ನು ಗೌರವಿಸಿದೆ. ಚುನಾವಣೆಯಲ್ಲಿ ಗೆಲ್ಲುವ ಮೂಲಕ 400 ಸ್ಥಾನಗಳನ್ನು ದಾಟುವ ನಮ್ಮ ಸಂಕಲ್ಪವನ್ನು ಈಡೇರಿಸುತ್ತೇವೆ. ಬಿಜೆಪಿಗೆ ಸಮರ್ಥ ಕಾರ್ಯಕರ್ತೆಯಾಗಿ ದುಡಿಯುತ್ತೇನೆ" ಎಂದು ಹೇಳಿದರು.

ನವನೀತ್​ ರಾಣಾ ಅವರು 2019ರ ಲೋಕಸಭಾ ಚುನಾವಣೆಯಲ್ಲಿ ಅಮರಾವತಿಯಿಂದ ಶಿವಸೇನಾ ಅಭ್ಯರ್ಥಿ ಮತ್ತು ಮಾಜಿ ಕೇಂದ್ರ ಸಚಿವ ಆನಂದ ರಾವ್​ ಅಡ್ಸುಲ್​ ಅವರನ್ನು ಸೋಲಿಸಿ ಗೆಲುವು ಸಾಧಿಸಿದ್ದರು.

ಮಹಾರಾಷ್ಟ್ರದ ಆಡಳಿತ ಪಕ್ಷದ ಕೆಲವು ಮಿತ್ರಪಕ್ಷಗಳು, ಸಂಸದೆ ನವನೀತ್​ ರಾಣಾ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿರುವ ಹಾಗೂ ಅವರನ್ನು ಅಮರಾವತಿ ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿಸುವ ಬಿಜೆಪಿ ಯೋಜನೆ ವಿರುದ್ಧ ಧ್ವನಿ ಎತ್ತಿವೆ. ಇದು 'ರಾಜಕೀಯ ಆತ್ಮಹತ್ಯೆ' ಹಾಗೂ 'ಪ್ರಜಾಪ್ರಭುತ್ವದ ಅವನತಿ' ಎಂದು ಟೀಕಿಸಿವೆ. ಪ್ರತಿಪಕ್ಷ ಕಾಂಗ್ರೆಸ್​ ಮಾತ್ರವಲ್ಲದೇ, ಆಡಳಿತ ಪಕ್ಷದ ಮಿತ್ರಪಕ್ಷ, ಸ್ವತಂತ್ರ ಶಾಸಕ ಬಚ್ಚು ಕಾಡು ಮತ್ತು ಮುಖ್ಯಮಂತ್ರಿ ಏಕನಾಥ ಶಿಂಧೆ ನೇತೃತ್ವದ ಶಿವಸೇನೆಯ ಸದಸ್ಯ ಮಾಜಿ ಸಂಸದ ಆನಂದರಾವ್​ ಅಡ್ಸುಲ್​ ಕೂಡ ಬಿಜೆಪಿಯ ಈ ಹೆಜ್ಜೆಯನ್ನು ಟೀಕಿಸಿದ್ದಾರೆ.

ರಾಣಾ ಅವರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿರುವುದನ್ನು ಪ್ರಜಾಪ್ರಭುತ್ವದ ಅವನತಿ ಎಂದು ಶಾಸಕ ಬಚ್ಚು ಕಾಡು ಟೀಕಿಸಿದ್ದಾರೆ. ಅಮರಾವತಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್​ ತನ್ನ ಹಾಲಿ ಶಾಸಕ ಬಲವಂತ ವಾಂಖೆಡೆ ಅವರನ್ನು ಕಣಕ್ಕಿಳಿಸಿದೆ.

ನವನಿತ್​ ರಾಣಾ ಅವರ ಹಿನ್ನೆಲೆ: ನಟನೆಯಿಂದ ರಾಜಕಾರಣಿಯಾದ ನವನೀತ್​ ಕೌರ್​ ರಾಣಾ ಅವರು ಮಹಾರಾಷ್ಟ್ರದ ಮುಂಬೈ ಮೂಲದವರು. ಸೇನಾಧಿಕಾರಿಯ ಮಗಳಾಗಿರುವ ನವನೀತ್​ ಆರಂಭದಲ್ಲಿ ಮಾಡೆಲಿಂಗ್​ ಮಾಡುತ್ತಿದ್ದರು. ನಂತರ ದಕ್ಷಿಣ ಭಾರತದ ಸಿನಿಮಾ ಕ್ಷೇತ್ರಕ್ಕೆ ಕಾಲಿಡುವುದಕ್ಕೂ ಮುನ್ನ ಅವರು ಸುಮಾರು ಮ್ಯೂಸಿಕ್​ ವಿಡಿಯೋಗಳಲ್ಲಿ ಅಭಿನಯಿಸಿದ್ದರು.

ರವಿ ರಾಣಾ ಅವರನ್ನು ಮದುವೆಯಾದ ಬಳಿಕ ಅವರ ರಾಜಕೀಯಕ್ಕೆ ಪ್ರವೇಶ ಮಾಡಿದರು. 2014ರಲ್ಲಿ ಅಮರಾವತಿಯಿಂದ ಎನ್​ಸಿಪಿ ಅಡಿಯಲ್ಲಿ ಚುನಾವಣೆ ಎದುರಿಸಿ ಸೋಲು ಕಂಡರು. 2019ರಲ್ಲಿ ಯಾವುದೇ ಪಕ್ಷಗಳ ಅಡಿಯಲ್ಲಿ ನಿಲ್ಲದೆ, ಅಮರಾವತಿ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದು, ಜಯ ಗಳಿಸಿದ್ದರು.

ರಾಜಕೀಯದಲ್ಲಿ ಮೊದಲ ಹೆಜ್ಜೆ ಹಾಗೂ ವಿವಾದಗಳು: ನವನೀತ್​ ಅವರ ರಾಜಕೀಯ ಪ್ರಯಾಣ 2014ರಲ್ಲಿ ಸೋಲಿನ ಜೊತೆಗೆ ಆರಂಭಗೊಂಡರೂ 2019ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದರು. ಅವರ ಅಧಿಕಾರಾವಧಿ ಅವೇಕ ವಿವಾದಗಳಿಂದಲೇ ಗುರುತಿಸಲ್ಪಟ್ಟಿದೆ. ನಕಲಿ ಜಾತಿ ಪ್ರಮಾಣಪತ್ರ ಸಲ್ಲಿಸಿದ ಆರೋಪ, ಅದಕ್ಕಾಗಿ ಬಾಂಬೆ ಹೈಕೋರ್ಟ್​ ದಂಡ ಕೂಡಾ ವಿಧಿಸಿತ್ತು. ಅಲ್ಲದೇ ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್​ ಠಾಕ್ರೆ ಅವರ ನಿವಾಸದ ಹೊರಗೆ ಹನುಮಾನ್​ ಚಾಲೀಸಾ ಪಠಿಸಲು ಪ್ರಯತ್ನಿಸಿದಂತಹ ಸಾರ್ವಜನಿಕ ವಾಗ್ದಾದಗಳಲ್ಲಿ ಭಾಗಿಯಾಗಿ ನವನೀತ್​ ಗಮನ ಸೆಳೆದಿದ್ದರು.

ಇದನ್ನೂ ಓದಿ: ಲೋಕಸಭೆ ಚುನಾವಣೆ ಹೊತ್ತಲ್ಲೇ ಆಪ್​ಗೆ ಬಿಗ್​ ಶಾಕ್​: ಪಂಜಾಬ್​ನ ಏಕೈಕ ಸಂಸದ ರಿಂಕು ಬಿಜೆಪಿ ಸೇರ್ಪಡೆ - AAP MP join BJP

ETV Bharat Logo

Copyright © 2024 Ushodaya Enterprises Pvt. Ltd., All Rights Reserved.