ETV Bharat / bharat

ಭೀಕರ ಘಟನೆ: ಗಂಗಾ ಸ್ನಾನಕ್ಕೆ ತೆರಳುತ್ತಿದ್ದ ಟ್ರ್ಯಾಕ್ಟರ್​ ಪಲ್ಟಿ, 8 ಮಕ್ಕಳು, 13 ಮಹಿಳೆಯರು ಸೇರಿ 24 ಜನರ ಸಾವು

author img

By ETV Bharat Karnataka Team

Published : Feb 24, 2024, 12:57 PM IST

Updated : Feb 24, 2024, 5:33 PM IST

Accident in Kasganj: ಹುಣ್ಣಿಮೆಯ ನಿಮಿತ್ತ ಗಂಗಾ ಸ್ನಾನಕ್ಕೆ ತೆರಳುತ್ತಿದ್ದ ಟ್ರ್ಯಾಕ್ಟರ್​ ಪಲ್ಟಿಯಾಗಿ 8 ಮಕ್ಕಳು ಹಾಗೂ 13 ಮಹಿಳೆಯರು ಸೇರಿದಂತೆ ಸುಮಾರು 24 ಜನರು ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದ ಕಾಸ್‌ಗಂಜ್‌ನಲ್ಲಿ ಶನಿವಾರ ನಡೆದಿದೆ.

Kasganj News  Accident in Kasganj  Tractor Trolley Fell in Pond  ಟ್ರ್ಯಾಕ್ಟರ್​ ಪಲ್ಟಿಯಾಗಿ 15 ಜನ ಸಾವು  ಟ್ರ್ಯಾಕ್ಟರ್​ ಪಲ್ಟಿ
ಉತ್ತರಪ್ರದೇಶ: ಗಂಗಾ ಸ್ನಾನಕ್ಕೆ ತೆರಳುತ್ತಿದ್ದ ಟ್ರ್ಯಾಕ್ಟರ್​ ಪಲ್ಟಿಯಾಗಿ 15 ಜನ ಸಾವು

ಕಾಸ್‌ಗಂಜ್ (ಉತ್ತರಪ್ರದೇಶ): ಉತ್ತರಪ್ರದೇಶದ ಕಾಸ್‌ಗಂಜ್‌ನಲ್ಲಿ ಹುಣ್ಣಿಮೆಯ ನಿಮಿತ್ತ ಗಂಗಾಸ್ನಾನಕ್ಕೆ ತೆರಳುತ್ತಿದ್ದ ಟ್ರ್ಯಾಕ್ಟರ್​ವೊಂದು ಪಲ್ಟಿಯಾಗಿ ಹೊಂಡದಲ್ಲಿ ಬಿದ್ದಿದೆ. ಪರಿಣಾಮ 8 ಮಕ್ಕಳು ಹಾಗೂ 13 ಮಹಿಳೆಯರು ಸೇರಿದಂತೆ 24 ಜನ ಮೃತಪಟ್ಟಿದ್ದಾರೆ. ಟ್ರ್ಯಾಕ್ಟರ್​ನಲ್ಲಿ ಒಟ್ಟು 35 ಜನರು ಪ್ರಯಾಣಿಸುತ್ತಿದ್ದರು. ಹೊಂಡದಲ್ಲಿ ಬಿದ್ದವರ ರಕ್ಷಣೆಗೆ ಸ್ಥಳೀಯರು ಮುಂದಾಗಿದ್ದರು. ಈ ವೇಳೆ ಟ್ರಾಲಿಯಲ್ಲಿದ್ದ ಕೆಲವರು ಈಜಿಕೊಂಡು ಬಂದು ದಡ ಸೇರಿದ್ದಾರೆ.

ಸ್ಥಳೀಯರ ನೆರವಿನೊಂದಿಗೆ ಪೊಲೀಸರು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಅಷ್ಟರಲ್ಲಾಗಲೇ ಅಪಘಾತದಲ್ಲಿ 24 ಜನರು ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ನಾಲ್ವರು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿಯೇ ಉಳಿದ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಕಾಸ್ಗಂಜ್ ಜಿಲ್ಲೆಯ ಪಟಿಯಾಲಿ ಕೊತ್ವಾಲಿ ಪ್ರದೇಶದ ದರಿಯಾಗಂಜ್​ ಪಟಿಯಾಲಿ ರಸ್ತೆಯ ನಡುವೆ ಇರುವ ಗಧೈಯಾ ಗ್ರಾಮದ ಬಳಿ ಈ ಘಟನೆ ನಡೆದಿದೆ. ಇಟಾಹ್ ಜಿಲ್ಲೆಯ ಜೈತ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ಛೋಟೆ ಕಾಸ್ ಗ್ರಾಮದಲ್ಲಿ ವಾಸಿಸುವ ಜನರು ಹುಣ್ಣಿಮೆಯ ದಿನದಂದು ಗಂಗಾ ಸ್ನಾನ ಮಾಡಲು ಕಾಸ್​ಗಂಜ್‌ನ ಪಟಿಯಾಲಿ ತಹಸೀಲ್ ಪ್ರದೇಶದ ಕದರ್‌ಗಂಜ್ ಗಂಗಾ ಘಾಟ್‌ಗೆ ಹೋಗುತ್ತಿದ್ದರು.

ನಂತರ, ದರಿಯಾವ್‌ಗಂಜ್ ಪ್ರದೇಶದ ಗಾಧಿಯಾ ಗ್ರಾಮದ ಬಳಿ ವಾಹನಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸಲು ಪ್ರಯತ್ನಿಸುತ್ತಿದ್ದಾಗ, ಟ್ರ್ಯಾಕ್ಟರ್​ ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಹೊಂಡಕ್ಕೆ ಉರುಳಿ ಬಿದ್ದು ಈ ಮಹಾ ದುರಂತ ಸಂಭವಿಸಿದೆ.

ಸಂತಾಪ ಸೂಚಿಸಿದ ಮುಖ್ಯಮಂತ್ರಿ ಯೋಗಿ: ಅಪಘಾತದಲ್ಲಿ ಮೃತಪಟ್ಟವರಿಗೆ ಮುಖ್ಯಮಂತ್ರಿ ಯೋಗಿ ಅವರು ಸಂತಾಪ ಸೂಚಿಸಿದರು. ''ಕಾಸ್‌ಗಂಜ್ ಜಿಲ್ಲೆಯ ರಸ್ತೆ ಅಪಘಾತದ ಘಟನೆಯು ಅತ್ಯಂತ ಹೃದಯ ವಿದ್ರಾವಕವಾಗಿದೆ. ಮೃತರಿಗೆ ಸಂತಾಪ ಸೂಚಿಸುತ್ತೇನೆ. ಮೃತರ ಕುಟುಂಬದ ಸದಸ್ಯರಿಗೆ ದುಃಖ ಭರಿಸುವ ಶಕ್ತಿಯನ್ನು ಆ ದೇವರು ನೀಡಲಿ. ಗಾಯಾಳುಗಳಿಗೆ ಸೂಕ್ತ ಉಚಿತ ಚಿಕಿತ್ಸೆ ನೀಡುವಂತೆ ಜಿಲ್ಲಾಡಳಿತದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಅಂತ ಭಗವಾನ್ ಶ್ರೀರಾಮನಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಿಎಂ ಯೋಗಿ ಅವರು, ಸಾಮಾಜಿಕ ಜಾಲತಾಣವಾದ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಮೃತರ ಕುಟುಂಬಕ್ಕೆ ಪರಿಹಾರ ನೀಡುವಂತೆ ಅಖಿಲೇಶ್ ಒತ್ತಾಯ: ಸಮಾಜವಾದಿ ಪಕ್ಷದ ವರಿಷ್ಠ ಅಖಿಲೇಶ್ ಯಾದವ್ ಅವರು ಅಪಘಾತದ ಬಗ್ಗೆ ದುಃಖ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣವಾದ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ''ಕಾಸ್​ಗಂಜ್‌ನಲ್ಲಿ ಗಂಗಾ ಸ್ನಾನಕ್ಕೆ ತೆರಳುತ್ತಿದ್ದ ಭಕ್ತರಿದ್ದ ಟ್ರ್ಯಾಕ್ಟರ್​ನ ಟ್ರಾಲಿಯು ಹೊಂಡಕ್ಕೆ ಉರುಳಿಬಿದ್ದು, ಹೆಚ್ಚಿನ ಸಂಖ್ಯೆಯ ಜನರು ಮೃತಪಟ್ಟಿರುವುದು ತುಂಬಾ ದುಃಖಕರವಾಗಿದೆ. ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ವೇಗಗೊಳಿಸಬೇಕು. ಗಾಯಗೊಂಡವರು ಬೇಗನೇ ಗುಣಮುಖರಾಗಲಿ. ಮೃತರ ಕುಟುಂಬಕ್ಕೆ ಸರಕಾರ ಸೂಕ್ತ ಪರಿಹಾರ ನೀಡಬೇಕು'' ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಅತಿ ವೇಗ, ಅಜಾಗರೂಕತೆಯೇ ಒಆರ್​ಆರ್​ನಲ್ಲಿ ಅಪಘಾತ ಹೆಚ್ಚಳಕ್ಕೆ ಕಾರಣ: ಈ ಸ್ಪೀಡೇ ಯುವ ಶಾಸಕಿ ಜೀವಕ್ಕೆ ಎರವಾಯ್ತೇ?

Last Updated : Feb 24, 2024, 5:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.